ಬೆಂಗಳೂರು: ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗಾಗಿ ಮಂಗಳವಾರವಷ್ಟೇ ದೆಹಲಿಯಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಚುನಾವಣಾ ಸಮಿತಿಯು ಬಾಕಿಯಿದ್ದ 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮಗೊಳಿಸುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.
ಪಟ್ಟಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದ್ದು, ಐವರು ಸಚಿವರ ಮಕ್ಕಳಿಗೆ ಟಿಕೇಟ್ ನೀಡಲು ನಿರ್ಧರಿಸಲಾಗಿದೆ. ಇಂದು (ಬುಧವಾರ) ಬುಧವಾರ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ.
ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳಕ್ಕರ್ ಪುತ್ರ ಮೃಣಾಲ್ಗೆ ಹಾಗೂ ಚಿಕ್ಕೋಡಿಯಿಂದ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾಗೆ ಅವಕಾಶ ನೀಡಲಾಗಿದ್ದು, ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ಗೆ ಬಾಗಲಕೋಟೆಯಿಂದ ಟಿಕೆಟ್ ನೀಡಲಾಗಿದೆ. ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನಗೆ ದಾವಣಗೆರೆಯಿಂದ ಹಾಗೂ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಬೆಂಗಳೂರು ದಕ್ಷಿಣದಿಂದ ಟಿಕೆಟ್ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 21 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಿತು. ಆದರೆ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಈ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ ಎಂದು ತಿಳಿದುಬಂದಿದೆ.
ಎಐಸಿಸಿ ನಾಯಕಿ ಸೋನಿಯಾ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದ ಸಿಇಸಿ ಸಭೆಯಲ್ಲಿ ಒಟ್ಟು 17 ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸಲಾಗಿದೆ. ಇನ್ನು ರಾಜ್ಯದ 7 ಕ್ಷೇತ್ರಗಳಿಗೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಈಗಾಗಲೇ ಟಿಕೆಟ್ ಘೋಷಣೆಯಾಗಿತ್ತು.
ಬಿಜೆಪಿ ಪಕ್ಷದಲ್ಲೂ ಕುಟುಂಬ ರಾಜಕಾರಣ: ಬಿಜೆಪಿ ಪಕ್ಷದಿಂದ ಯಡಿಯೂರಪ್ಪನವರ ಮಗ ಬಿ.ವೈ ವಿಜಯೇಂದ್ರ ಅವರಿಗೆ ಮತ್ತು ಡಾವಣಗೆರೆ ಕ್ಷೇತ್ರದ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೇಟ್ ನೀಡಿರುವುದಕ್ಕೂ ವಿರೋಧ ಕೇಳಿ ಬಂದಿತ್ತು. ಅಪ್ಪ ಮಕ್ಕಳು ಇಬ್ಬರೇ ಸೇರಿಕೊಂಡು ಮನಸೋ ಇಚ್ಚೆ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಕ್ಷದ ಒಳಗಡೆಯಿಂದಲೇ ವಿರೋಧ ಬುಗಿಲೆದ್ದಿತ್ತು. ಈಶ್ವರಪ್ಪನವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದರೆ, ಕೆಲವರು ಕಾಂಗ್ರೆಸ್ಸಿನತ್ತ ಮುಖ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ಸಿನಲ್ಲಿ ಇಷ್ಟೊಂದು ಅಭ್ಯರ್ಥಿಗಳಿಗೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವುದರಿಂದ ಈ ಪಕ್ಷದಲ್ಲೂ ವಿರೋಧ ದಟ್ಟವಾಗಿ ಕೇಳಿ ಬರಬಹುದು ಎನ್ನಲಾಗುತ್ತಿದೆ.
ವಲಸಿಗರಿಗೆ ಮಣೆ: ಬಿಜೆಪಿ ಪಕ್ಷದಿಂದ ಟಿಕೇಟ್ ವಂಚಿತರಾಗಿ ಅಸಮಾದಾನಿತರಾಗಿವ ಮಾಜಿ ಸಿಎಂ ಸದಾನಂದಗೌಡರಿಗೆ ಹಾಗೂ ಮಾಜಿ ಸಚಿವ ಜಿ.ಸಿ. ಮಾಧುಸ್ವಾಮಿಯವರಿಗೆ 3ನೇ ಪಟ್ಟಿಯಲ್ಲಿ ಟಿಕೇಟ್ ನೀಡುವ ಸಾದ್ಯತೆ ಇದೆ. ಈ ಕಾರಣಕ್ಕಾಗಿಯೇ ಕೆಲವು ಕ್ಷೇತ್ರಗಳಿಗೆ ಇನ್ನು ಟಿಕೇಟ್ ಘೋಷಿಸದೇ ಉಳಿಸಿಕೊಳ್ಳಲಾಗಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇಂದು ಘೋಷಣೆಯಾಗಲಿರುವ ಸಂಭಾವ್ಯ ಅಭ್ಯರ್ಥಿಗಳ ವಿವರ
- ಚಿತ್ರದುರ್ಗ -ಬಿ.ಎನ್.ಚಂದ್ರಪ್ಪ
- ಬೆಳಗಾವಿ – ಮೃಣಾಲ್ ಹೆಬ್ಬಾಳಕರ್
- ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ
- ಬಾಗಲಕೋಟೆ – ಸಂಯುಕ್ತಾ ಪಾಟೀಲ್
- ಧಾರವಾಡ – ವಿನೋದ್ ಅಸುಟಿ
- ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ
- ಕೊಪ್ಪಳ – ರಾಜಶೇಖರ ಹಿಟ್ನಾಳ್
- ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ
- ಬೀದರ್ – ರಾಜಶೇಖರ್ ಪಾಟೀಲ್
- ದಕ್ಷಿಣ ಕನ್ನಡ – ಪದ್ಮರಾಜ್
- ಉಡುಪಿ -ಚಿಕ್ಕಮಗಳೂರು -ಜಯಪ್ರಕಾಶ್ ಹೆಗ್ಡೆ
- ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ
- ಬೆಂಗಳೂರು ಸೆಂಟ್ರಲ್ -ಮನ್ಸೂರ್ ಅಲಿಖಾನ್
- ಬೆಂಗಳೂರು ಉತ್ತರ -ಪ್ರೊ.ರಾಜೀವ್ ಗೌಡ
- ಮೈಸೂರು -ಎಂ.ಲಕ್ಷ್ಮಣ್
- ರಾಯಚೂರು -ಜಿ.ಕುಮಾರ ನಾಯಕ್
- ಉತ್ತರ ಕನ್ನಡ -ಡಾ.ಅಂಜಲಿ ನಿಂಬಾಳ್ಕರ್