Sunday, June 16, 2024

ಸತ್ಯ | ನ್ಯಾಯ |ಧರ್ಮ

ಚಾಲನೆ ಪಡೆದ ಕಾಂಗ್ರೆಸ್ ಪಕ್ಷದ ಮಹತ್ವದ “ಭಾರತ್ ಜೋಡೋ” ಯಾತ್ರೆ

ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಕಾರ್ಯಕ್ರಮ “ಭಾರತ್ ಜೋಡೋ’ಗೆ ಇಂದು ಅಧಿಕೃತವಾಗಿ ಚಾಲನೆ ಸಿಗಲಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಯವರು ಇಂದು ಬೆಳಿಗ್ಗೆ ಕನ್ಯಾಕುಮಾರಿಯಲ್ಲಿ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡುವ ಮೊದಲು ಕಾಂಚೀಪುರಂ ಜಿಲ್ಲೆಯ ಶ್ರೀ ಪೆರಂಬದೂರಿನಲ್ಲಿ ತಮ್ಮ ತಂದೆಯವರಾದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಸ್ಮಾರಕಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು.

ಆ ನಂತರ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿಯವರ ಜೊತೆಗೆ ಕರ್ನಾಟಕದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಸೇರಿದಂತೆ ತಮಿಳುನಾಡು, ಕರ್ನಾಟಕ ಮತ್ತು ಕೇರಳ ಭಾಗದ ಪ್ರಮುಖ ಕಾಂಗ್ರೆಸ್ ನಾಯಕರು ಜೊತೆಗಿದ್ದರು.

ಇಂದು ಬೆಳಿಗ್ಗೆ 10.30 ರ ಸುಮಾರಿಗೆ ಕನ್ಯಾಕುಮಾರಿಯಿಂದ ಹೊರಡುವ ಈ ಯಾತ್ರೆ 150 ದಿನ, ಒಟ್ಟು 3500 ಕಿಲೋಮೀಟರ್ ನಡೆಯಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ನಡೆಯುವ ಈ ಪಾದಯಾತ್ರೆ ಒಟ್ಟು 12 ರಾಜ್ಯಗಳನ್ನು ತನ್ನ ವ್ಯಾಪ್ತಿಗೆ ಬಳಸಿಕೊಳ್ಳಲಿದೆ. ಕರ್ನಾಟಕಕ್ಕೆ ಸೆಪ್ಟೆಂಬರ್ 30 ರಂದು ಈ ಯಾತ್ರೆ ತಲುಪಲಿದೆ.

ಸುಮಾರು 80 ವರ್ಷಗಳ ಹಿಂದೆ ಮಹಾತ್ಮಾ ಗಾಂಧೀಜಿಯವರು ಈ ರೀತಿಯ ಒಂದು ಐತಿಹಾಸಿಕ ಪಾದಯಾತ್ರೆಯ ನಂತರ ಭಾರತಕ್ಕೆ ಸ್ವಾತಂತ್ರ್ಯ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅದೇ ಮಾದರಿ ಅನುಸರಿಸುವ ಮೂಲಕ ಏಕಕಾಲಕ್ಕೆ ಪಕ್ಷಸಂಘಟನೆ ಮತ್ತು ಬಿಜೆಪಿ ಪಕ್ಷದ ಜನವಿರೋಧಿ ನೀತಿಗಳನ್ನು ಜನತೆಯ ಮುಂದೆ ತೆರೆದಿಡುವ ಪ್ರಯತ್ನಕ್ಕೆ ಮುಂದಾಗಿದೆ.

Related Articles

ಇತ್ತೀಚಿನ ಸುದ್ದಿಗಳು