Sunday, June 23, 2024

ಸತ್ಯ | ನ್ಯಾಯ |ಧರ್ಮ

ಬಜರಂಗದಳ ಅಸ್ತಿತ್ವಕ್ಕೆ ಬಂದಿದ್ದು ಯಾವಾಗ? ಇದಕ್ಕೂ ಕಾಂಗ್ರೆಸ್ಸಿಗೂ ಇದೆಯಾ ಸಂಬಂಧ?

ಬಜರಂಗದಳ ಮತ್ತೆ ಚರ್ಚೆಯಲ್ಲಿದೆ. ಹರಿಯಾಣದ ನುಹ್ (ಮೇವಾತ್) ನಲ್ಲಿ ನೆಡದ ಹಿಂಸಾಚಾರದಲ್ಲಿ ಆರೋಪಿಯಾಗಿರುವ ಬಿಟ್ಟು ಬಜರಂಗಿ‌ ಅಲಿಯಾಸ್ ರಾಜ್‌ಕುಮಾರ್ ‌ಎನ್ನುವವನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಟ್ಟು ಸ್ವತಃ ತಾನು ಬಜರಂಗದಳದ ಸದಸ್ಯನೆಂದು ಘೋಷಿಸಿಕೊಂಡಿದ್ದರೂ, ಅವನಿಗೂ ಬಜರಂಗದಳಕ್ಕೂ ಯಾವುದೇ ಸಂಬಂಧವಿಲ್ಲವೆಂದು ವಿಶ್ವ ಹಿಂದೂ ಪರಿಷದ್‌ ಘೋಷಿಸಿದೆ. ಕರ್ನಾಟಕದ ಚುನಾವಣೆಯಲ್ಲೂ ಬಜರಂಗದಳ ನಿಷೇಧದ ಕುರಿತು ಮಾತುಗಳು ಕೇಳಿ ಬಂದಿದ್ದವು ಮತ್ತು ಹಲವೆಡೆ ಈ ಮಾತು ಚುನಾವಣೆಯ ಮೇಲೆ ಪ್ರಭಾವ ಬೀರಿತ್ತು ಎನ್ನುವ ಮಾತುಗಳೂ ಕೇಳಿ ಬಂದಿದ್ದವು.

ಈಗ ಅತ್ತ ಮಧ್ಯಪ್ರದೇಶದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದಂತೆ ಮತ್ತೆ ಅಲ್ಲಿಯೂ ಬಜರಂಗ ನಿಷೇಧದ ವಿಷಯ ಮುನ್ನೆಲೆಗೆ ಬಂದಿದೆ. ಆದರೆ ದಿಗ್ವಿಜಯ ಸಿಂಗ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬಜರಂಗದಳ ನಿಷೇಧಿಸುವ ಯಾವುದೇ ಯೋಚನೆಯಿಲ್ಲ, ಆದರೆ ಹಿಂಸಾತ್ಮಕ ಚಟುವಟಿಕೆಯಲ್ಲಿ ಯಾರು ಪಾಲ್ಗೊಂಡರೂ ಬಿಡುವುದಿಲ್ಲ ಎನ್ನುವ ಕರ್ನಾಟಕ ಕಾಂಗ್ರೆಸ್‌ ಮಾದರಿಯ ಹೇಳಿಕೆಯನ್ನೇ ನೀಡಿದ್ದಾರೆ.

ಇಂತಹ ಬಜರಂಗದಳ ಆರಂಭಗೊಂಡಿದ್ದು ಹೇಗೆ? ಅದರ ಹಿನ್ನೆಲೆ ಏನು ಎನ್ನುವ ಕುತೂಹಲ ನಿಮಗಿದೆಯೇ? ಹಾಗಿದ್ದರೆ ಮುಂದೆ ಓದಿ…

‘ಆಪರೇಷನ್ ಬ್ಲೂ ಸ್ಟಾರ್’….

ಅದು ಜುಲೈ 1984..’ಆಪರೇಷನ್ ಬ್ಲೂ ಸ್ಟಾರ್’ ಮುಗಿದ ಒಂದು ತಿಂಗಳಾಗಿತ್ತು. ಆದರೆ, ಪಂಜಾಬ್‌ನಲ್ಲಿ ಹಿಂದೂಗಳ ವಿರುದ್ಧ ಆಗಾಗ್ಗೆ ಹಿಂಸಾಚಾರದ ಘಟನೆಗಳು ನಡೆಯುತ್ತಲೇ ಇದ್ದವು. ಏತನ್ಮಧ್ಯೆ, ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ವಿಮೋಚನೆಗಾಗಿ ವಿಶ್ವ ಹಿಂದೂ ಪರಿಷತ್ ಸಮಿತಿಯೊಂದನ್ನು ರಚಿಸಿತು. ಸಮಿತಿಯ ನೇತೃತ್ವವನ್ನು ಗೋರಖನಾಥ ಮಠದ ಮುಖ್ಯಸ್ಥ ಮಹಂತ್ ವೈದ್ಯನಾಥ್ ವಹಿಸಿದ್ದರೆ, ಕಾಂಗ್ರೆಸ್ ನಾಯಕ ದೌ ದಯಾಳ್ ಖನ್ನಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸೆಪ್ಟೆಂಬರ್ 1984ರಲ್ಲಿ, ಸಮಿತಿಯು ಬಿಹಾರದ ಸೀತಾಮಡಿಯಿಂದ ಅಯೋಧ್ಯೆಗೆ 400 ಕಿಮೀ ದೂರದ ಯಾತ್ರೆಯನ್ನು ಪ್ರಾರಂಭಿಸಿತು.

ಕತೆಯನ್ನು ಮುಂದುವರೆಸುವ ಮೊದಲು ದೌ ದಯಾಳ್ ಖನ್ನಾ ಎನ್ನುವ ಕಾಂಗ್ರೆಸ್ ನೇತಾರನ ಕುರಿತು ಒಂದಷ್ಟು ತಳಿಯೋಣ ಬನ್ನಿ.

1935ರಲ್ಲಿ, ದೌ ದಯಾಳ್ ಖನ್ನಾ ಮೊರಾದಾಬಾದ್ ಪುರಸಭೆಯ ಸದಸ್ಯರಾಗಿ ಆಯ್ಕೆಯಾದರು. ದೌ ದಯಾಳ್ ಖನ್ನಾ ಅವರು 1937ರಲ್ಲಿ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. 1940ರಲ್ಲಿ, ಸತ್ಯಾಗ್ರಹ ಚಳವಳಿಯಲ್ಲಿ ಅವರಿಗೆ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು. 1942 ಲ್ಲಿ, ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಜೈಲಿಗೆ ಹೋದರು ಮತ್ತು ಅವರು ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸಿದರು.

ದೌ ದಯಾಳ್ ಖನ್ನಾ ಅವರ ಪ್ರಯತ್ನದಿಂದಾಗಿ, ಮೊರಾದಾಬಾದ್ ಪುರಸಭೆಯು ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಗೋಹತ್ಯೆಯನ್ನು ನಿಷೇಧಿಸಿತು. ಕಾಂಗ್ರೆಸ್ಸಿನ ಸಕ್ರಿಯ ಸದಸ್ಯರಾಗಿ, ಅವರು 1974 ರವರೆಗೆ ಉತ್ತರ ಪ್ರದೇಶ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಚುನಾಯಿತ ಸದಸ್ಯರಾಗಿದ್ದರು. 1962-1967ರಲ್ಲಿ ಅವರು ಉತ್ತರ ಪ್ರದೇಶ ಸರ್ಕಾರದ ಆರೋಗ್ಯ ಸಚಿವರಾಗಿದ್ದರು. 25 ವರ್ಷಗಳ ಕಾಲ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು.

ದೌ ದಯಾಳ್ ಖನ್ನಾ

ಸರಯೂ ದಡದಲ್ಲಿ ಅದ್ಧೂರಿ ಕಾರ್ಯಕ್ರಮ

ಯಾತ್ರೆಯ ಮೆರವಣಿಗೆಗೆ ಮುನ್ನ ಟ್ರಕ್‌ ಒಂದರಲ್ಲಿ ರಾಮ ಮತ್ತು ಸೀತೆಯ ವಿಗ್ರಹಗಳನ್ನು ಸ್ಥಾಪಿಸಲಾಗಿತ್ತು. ಹಿಂದೆ ವಾಹನಗಳಲ್ಲಿ ಸಾಧು ಸಂತರು, ಸಾವಿರಾರು ಜನ ಬರುತ್ತಿದ್ದರು. ಅಕ್ಟೋಬರ್ 6, 1984ರಂದು, ಯಾತ್ರೆಯು ಅಯೋಧ್ಯೆಯ ಸರಯೂ ಸೇತುವೆ ಬಳಿ ಕೊನೆಗೊಂಡಿತು. ಅಕ್ಟೋಬರ್ 7ರಂದು ಸರಯೂ ತೀರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 60 ಸಾವಿರ ಜನರು ಭಾಗವಹಿಸಿದ್ದರು ಎಂದು ಹಿರಿಯ ಪತ್ರಕರ್ತ ವಿನಯ್ ಸೀತಾಪತಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ರಾಮ ಜನ್ಮ ಭೂಮಿಯನ್ನು ಬೆಂಬಲಿಸುವವರಿಗೆ ಮತ ನೀಡಿ

ಅಂದು ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ದೊಡ್ಡ ಚಿತ್ರವೊಂದನ್ನು ಇರಿಸಲಾಗಿತ್ತು. ಈ ಚಿತ್ರದಲ್ಲಿ ನಿರಾಯುಧ ಸಂತರ ಮುಂದೆ ಖಡ್ಗಗಳನ್ನು ಹಿಡಿದು ನಿಂತಿರುವ ಮುಸ್ಲಿಮರನ್ನು ತೋರಿಸಲಾಗಿತ್ತು. ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗಾಗಿ ಮುಸ್ಲಿಮರು ಈ ವಿವಾದಿತ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕೆಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಒತ್ತಾಯಿಸಿದರು. ಈ ಭೂಮಿ ಹಾಗೂ ಉಳಿದ ಎರಡು ಪುಣ್ಯ ಕ್ಷೇತ್ರಗಳನ್ನು (ಕಾಶಿ, ಮಥುರಾ) ಮುಕ್ತಿಗೊಳಿಸಲು ಯಾರೇ ಪ್ರಯತ್ನಿಸಿದರೂ ಮುಂದಿನ ಚುನಾವಣೆಯಲ್ಲಿ ಅವರಿಗೆ ಹಿಂದೂಗಳು ಮತ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ನಿರ್ಣಯಿಸಲಾಯಿತು.

ವಾನರಸೇನೆಯಿಂದ ಪ್ರೇರಿತವಾಗಿರುವ ಬಜರಂಗದಳ

ಅಕ್ಟೋಬರ್ 8, 1984ರಂದು, ವಿಶ್ವ ಹಿಂದೂ ಪರಿಷತ್ತು ವಾನರಸೇನೆಯಿಂದ ಪ್ರೇರಿತ ಬಜರಂಗದಳದ ರಚನೆಯನ್ನು ಘೋಷಿಸಿತು. ವಾನರಸೇನೆಯು ಸೀತಾಮಾತೆಯನ್ನು ಉಳಿಸಲು ರಾಮನಿಗೆ ಸಹಾಯ ಮಾಡಿತ್ತು. ರಾಮನ ಜನ್ಮಸ್ಥಳವನ್ನು ಮರಳಿ ಪಡೆಯುವುದು ಇದರ ಉದ್ದೇಶವಾಗಿತ್ತು. ಅದರ ನಂತರ, ಬಜರಂಗದಳವು ಕೆಲವು ವರ್ಷಗಳ ಕಾಲ ರಾಮಜನ್ಮಭೂಮಿ ಚಳವಳಿಯ ಪ್ರಮುಖ ಭೂಮಿಕೆಯಲ್ಲಿತ್ತು. ಡಿಸೆಂಬರ್ 6, 1992ರಂದು ಭಜರಂಗದಳ ನೇತೃತ್ವದ ಕರಸೇವಕರು ಅಯೋಧ್ಯೆಯಲ್ಲಿ ವಿವಾದಾತ್ಮಕ ಕಟ್ಟಡವನ್ನು ಕೆಡವಿದರು. ಅದರ ನಂತರ ಸರ್ಕಾರ ಬಜರಂಗದಳವನ್ನು ನಿಷೇಧಿಸಿತು.

ವಿಎಚ್‌ಪಿ ವೆಬ್‌ಸೈಟ್‌ನಲ್ಲಿ..

ವಿಶ್ವ ಹಿಂದೂ ಪರಿಷತ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಬಜರಂಗದಳ ಯಾರ ವಿರುದ್ಧವೂ ಪ್ರತಿಭಟಿಸಲು ಹುಟ್ಟಿಕೊಂಡಿಲ್ಲ. ಹಿಂದೂಗಳನ್ನು ಸವಾಲು ಮಾಡುವ ಕೋಮು ವಿರೋಧಿ ಶಕ್ತಿಗಳಿಂದ ರಕ್ಷಿಸಲು ಇದನ್ನು ಸ್ಥಾಪಿಸಲಾಗಿತ್ತು. ಆ ಸಮಯದಲ್ಲಿ ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಸ್ಥಳೀಯ ಯುವಕರಿಗೆ ಭಜರಂಗದಳವನ್ನು ವಹಿಸಲಾಯಿತು. ನಂತರ, ದೇಶಾದ್ಯಂತದ ಯುವಕರು ಈ ಸಂಸ್ಥೆಗೆ ಸೇರಿದರು. 1993ರಲ್ಲಿ, ಮೊದಲ ಬಾರಿಗೆ, ಭಜರಂಗದಳದ ಅಖಿಲ ಭಾರತ ಸಾಂಸ್ಥಿಕ ರೂಪವನ್ನು ನೀಡಲು ನಿರ್ಧರಿಸಲಾಯಿತು. ಎಲ್ಲಾ ರಾಜ್ಯಗಳಲ್ಲಿ ಬಜರಂಗದಳ ಶಾಖೆಗಳನ್ನು ರಚಿಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು