Saturday, June 15, 2024

ಸತ್ಯ | ನ್ಯಾಯ |ಧರ್ಮ

ಮಾನವ -ಪ್ರಾಣಿ ಸಂಘರ್ಷಕ್ಕೆ ಅಣೆಕಟ್ಟುಗಳು ಮತ್ತು ಮಂಗಳೂರು ರೈಲು ಯೋಜನೆಯ ಕೊಡುಗೆ

ಹಾಸನ ಮಂಗಳೂರು ರೈಲ್ವೆ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗುವಾಗ ಖರ್ಚು ಏಳು ಸಾವಿರ ಕೋಟಿಗಳನ್ನು ದಾಟಿತ್ತು. ಇದರಿಂದಾದ ಪರಿಸರ ಮತ್ತು ಪ್ರಾಣಿಗಳ ಮೇಲಿನ ಪರಿಣಾಮವನ್ನು ಸರ್ಕಾರಗಳು ಮುಚ್ಚಿಟ್ಟವು. ಪೂರ್ಣ ವಿವರಗಳಿಗೆ ಓದಿ ಪ್ರಸಾದ್‌ ರಕ್ಷಿದಿಯವರ ಅಂಕಣ.

ಕರ್ನಾಟಕದ ವಿಚಾರಕ್ಕೆ ಸೀಮಿತವಾಗಿ ಹೇಳುವುದಾದರೆ  ನಮ್ಮಲ್ಲಿನ ಆನೆಗಳ ವಾಸಸ್ಥಾನಗಳು ಹಾಗೂ ಆನೆದಾರಿಗಳು ಮೊದಲು ಪಲ್ಲಟವಾದದ್ದು ನಮ್ಮ ಅಣೆಕಟ್ಟುಗಳಿಂದ. ಮೊದಲಿಗೆ ಕೊಡಗಿನಲ್ಲಿ ಕುಶಾಲನಗರದ ಬಳಿ ಹಾರಂಗಿ ಅಣೆಕಟ್ಟನ್ನು ಕಟ್ಟಿದರು. ಆಗ  ಆ ದಾರಿಯಾಗಿ ಕೊಡಗಿನಿಂದ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿಗೆ ಬಂದು ಹೋಗುತ್ತಿದ್ದ ಆನೆಗಳ ಪರಂಪರಾಗತ ದಾರಿ ಸ್ವಲ್ಪ ಮುಳುಗಡೆಯಾಯ್ತು. ಆದರೆ ಅದು ಬಹುದೊಡ್ಡ ಅಡಚಣೆ ಆಗಿರಲಿಲ್ಲ. ಯಾವಾಗ ಹೇಮಾವತಿ ಜಲಾಶಯದ ಕೆಲಸ ಪ್ರಾರಂಭವಾಯಿತೋ ಅಂದಿನಿಂದ ಆಲೂರು ತಾಲ್ಲೂಕಿನಲ್ಲಿ ಆನೆಗಳ ಚಲನೆ ಮತ್ತು ಹಾವಳಿ ಪ್ರಾರಂಭವಾಯಿತು. ಇದಕ್ಕೆ ಕಾರಣವೆಂದರೆ ಕೊಡಗಿನಿಂದ ಬಂದು ವಾಪಸ್ ಹೋಗುತ್ತಿದ್ದ ಹಲವು ಆನೆಗಳ ದಾರಿ ಯಾವಾಗ ಗೊರೂರಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿತೋ ಕೆಲವು ಆನೆಗಳು ಕೊಡಗಿಗೆ ವಾಪಸ್ ಹೋಗಲಾರದೆ ಅಲ್ಲೇ ನೆಲೆನಿಂತವು.

ಕೊಡಗಿನಲ್ಲಿ ಅದಕ್ಕೂ ಮೊದಲೇ ಒಂದು ಅಣೆಕಟ್ಟು ಕಟ್ಟುವ ಪ್ರಸ್ತಾಪವಿತ್ತು. ಅದು ದಕ್ಷಿಣ ಕೊಡಗಿನ ಕಂಬದಕಡ  ಎನ್ನುವ ಜಾಗದಲ್ಲಿ ಕಟ್ಟಲು ಯೋಜಿಸಿದ್ದ ಅಣೆಕಟ್ಟು. 1972-73 ರಲ್ಲಿ ಇಡೀ ಕೊಡಗು ಜಿಲ್ಲೆಯೇ ಆ ಯೋಜನೆಯ ವಿರುದ್ಧ ಒಟ್ಟಾಗಿ ನಿಂತು ಹೋರಾಟ ಮಾಡಿದ್ದರಿಂದ ಅದು ನಿಂತುಹೋಯಿತು.

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಮಗ್ಗೆ ಪ್ರದೇಶದ ಮಗನ ತಿಂದ ಮಾರಾಯನ ಬೆಟ್ಟ ಮತ್ತು ಪಾರ್ವತಮ್ಮನ  ಬೆಟ್ಟಗಳ ಬಳಿ ಇರುವ ಒಂದು ಸಣ್ಣ ಅರಣ್ಯದಲ್ಲಿ ನೆಲೆನಿಂತ ಸುಮಾರು ಇಪ್ಪತ್ತು ಆನೆಗಳು ಅಲ್ಲೇ ಸುತ್ತ ಮುತ್ತ ತಿರುಗಾಡುತ್ತ ಸುತ್ತ ಇರುವ ಕಾಫಿ ತೋಟಗಳಲ್ಲಿ ಆಹಾರ ಸಂಪಾದಿಸಿಕೊಂಡು ಬದುಕಿದ್ದವು. ಕೆಲವು ಸಲ ದಾಂಧಲೆಯನ್ನು ಮಾಡುತ್ತಿದ್ದವು. ಅವುಗಳು ಜೀವ ಹಾನಿ ಮಾಡಿದ್ದು ಕಡಿಮೆ. ಆದರೆ ಆನಂತರದ ವರ್ಷಗಳಲ್ಲಿ ಅವುಗಳು ಸಂತಾನ ಹೆಚ್ಚಿಸಿ ಕೊಂಡವು, ಅವುಗಳ ಸಂಖ್ಯೆ  ಏರಿತು.  ಈ ಆನೆಗಳು ಈ ಪ್ರದೇಶಕ್ಕೇ ಒಗ್ಗಿಕೊಂಡವು. ಒಂದರಡು ಸಲ ಅವುಗಳನ್ನು ಹಿಡಿದು ಸ್ಥಳಾಂತರಿಸಿದರೂ  ಅವು ಕೆಲವೇ ದಿನಗಳಲ್ಲಿ ಅಲ್ಲಿಗೇ ಮರಳಿದವು.

ಹಾಸನ ಮಂಗಳೂರು ರೈಲು ಯೋಜನೆ

ಸಕಲೇಶಪುರ ವಿಭಾಗದಲ್ಲಿ ಅರುವತ್ತರ ದಶಕದಲ್ಲಿಯೇ ಹಾಸನ ಮಂಗಳೂರು ರೈಲು ಯೋಜನೆ ಪ್ರಾರಂಭವಾಗಿತ್ತು. ಅದರಲ್ಲಿ ಕೂಡಾ ಒಂದು ದೊಡ್ಡ ಪ್ರಮಾದವಡಗಿತ್ತು. ಮೊದಲಿಗೆ ಆ ರೈಲುದಾರಿ ಸಕಲೇಶಪುರದಿಂದ,  ಹಾನುಬಾಳು, ದೇವರುಂದ ಬಳಿಯ ಬೈರಾಪುರ-ಶಿಶಿಲ ಮಾರ್ಗವಾಗಿ, ಬಿ.ಸಿ.ರೋಡ್ ಮೂಲಕ ಮಂಗಳೂರು ತಲಪುವ ಯೋಜನೆ ಇತ್ತು. ಆನಂತರ ಅದು ಈಗಿರುವ ಸಕಲೇಶಪುರ -ಯಡಕುಮೆರಿ, ಸುಬ್ರಹ್ಮಣ್ಯ, ಪುತ್ತೂರು ಮಾರ್ಗವಾಗಿ ಮಂಗಳೂರು ಸೇರುವಂತೆ ಬದಲಾಯಿಸಲಾಯಿತು. ಇದರಿಂದ ರೈಲು ಮಾರ್ಗ ಸುಮಾರು ನಲುವತ್ತು  ಕಿ.ಮೀ.ಗಳಷ್ಟು ಹೆಚ್ಚಾಯಿತು.  ಸುರಂಗಗಳ ಮತ್ತು ಸೇತುವೆಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಯಿತು. ಅಂದಿನ ಕಾಲದಲ್ಲೇ ಸುಮಾರು ಕೋಟಿಗಳಲ್ಲಿ ಇದ್ದ  ಖರ್ಚು, ಸಾವಿರದ ಇನ್ನೂರು ಕೋಟಿಗಳಿಗೆ ಏರಿತು.

ಅಂದಿನ ರೈಲ್ವೆ ಮಂತ್ರಿಯೊಬ್ಬರು ಖಾಸಗಿಯಾಗಿ ಹೇಳಿದ ಮಾತು ಗಮನಾರ್ಹವಾದುದು. “ಈ ಯೋಜನೆಯ ಸ್ಥಳಾಂತರ ಒಂದು ಅಪರಾಧ, ಇದರಿಂದಾಗಿ  ಖರ್ಚು ಹೆಚ್ಚಾದುದು ಮಾತ್ರವಲ್ಲ ಲಕ್ಷಾಂತರ ಮರಗಳೂ ನಾಶವಾದವು. ಅರ್ಧ ಕೆಲಸ ಆಗಿಹೋಗಿದೆ ಈಗ ನಾನು ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದೇನೆ”.

ಕೊನೆಗೆ ಈ ಹಾಸನ ಮಂಗಳೂರು ರೈಲ್ವೆ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗುವಾಗ ಖರ್ಚು ಏಳು ಸಾವಿರ ಕೋಟಿಗಳನ್ನು ದಾಟಿತ್ತು. ಇದರಿಂದಾದ ಪರಿಸರ ಮತ್ತು ಪ್ರಾಣಿಗಳ ಮೇಲಿನ ಪರಿಣಾಮವನ್ನು ಸರ್ಕಾರಗಳು ಮುಚ್ಚಿಟ್ಟವು. ಈ ರೈಲು ಮಾರ್ಗದಿಂದ  ಸಕಲೇಶಪುರ ತಾಲ್ಲೂಕಿನ ಕಾಗಿನಹರೆ, ಮತ್ತು ಬಿಸಲೆ ಹೊಂಗಡಹಳ್ಳ ರಕ್ಷಿತಾರಣ್ಯಗಳು ವಿಭಾಗಿಸಲ್ಪಟ್ಟವು. ಈಗ ಸರ್ಕಾರ ಮತ್ತೆ ಶಿಶಿಲ ಬೈರಾಪುರ ದಾರಿಯನ್ನು ಹೆದ್ದಾರಿ ಮಾಡುವ ಮಾತಾಡುತ್ತಿದೆ. ಪರಿಸರಾಸಕ್ತರ ಹೋರಾಟಗಳಿಂದ ಸದ್ಯಕ್ಕೆ ಅದು ಮುಂದೂಡಲ್ಪಟ್ಟಿದೆ ಅಷ್ಟೇ.

ಹೀಗೆ ಮಲೆನಾಡಿನಲ್ಲಿ ಅಭಿವೃದ್ಧಿ ಕಾರ್ಯಗಳು ಈ ರೀತಿ ಮಾನವ ಪ್ರಾಣಿ ಸಂಘರ್ಷಕ್ಕೆ ಮುನ್ನುಡಿ ಬರೆದವು.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

Related Articles

ಇತ್ತೀಚಿನ ಸುದ್ದಿಗಳು