ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಹಾಗೂ ಧರ್ಮ, ಜಾತಿ ನಿಂದನೆ ಮಾಡಿದ್ದ ಆರೋಪದ ಅಡಿಯಲ್ಲಿ ದಾಂಧಲೆಕೋರ ಪುನೀತ್ ಕೆರೆಹಳ್ಳಿ ಎಂಬ ವ್ಯಕ್ತಿಯನ್ನು ಚಾಮರಾಜಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಗತ್ಯ ಬಿದ್ದರೆ ಬಂಧಿಸಲಾಗುವುದು ಎಂದೂ ಹೇಳಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಅವರ ದೇಹದ ಬಣ್ಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಮಾತನಾಡಿದ ಪುನೀತ್ ಕೆರೆಹಳ್ಳಿ ‘ಲೇ ಅರೇಬಿಕ್ ತಳಿ, ತುರ್ಕಾ ಜಮೀರ್ ಅಹ್ಮದ್ ಖಾನ್, ನಮ್ಮದೇ ನಾಡಿನಲ್ಲಿ ನಿಂತು ನಮ್ಮದೇ ನಾಡಿನ ನಾಯಕನೊಬ್ಬನ ಬಗ್ಗೆ ನಮ್ಮದೇ ನಾಡಿನ ಜನರ ಎದುರಿಗೆ ಅವರ ಬಣ್ಣವನ್ನು ಹಂಗಿಸಿ ಕರಿಯ ಕುಮಾರಸ್ವಾಮಿ.. ಕಾಲಾ ಕುಮಾರಸ್ವಾಮಿ ಎಂದು ಹಂಗಿಸುವಷ್ಟು ನಿನಗೆ ದುರಹಂಕಾರವೇ ಎಂದು ಬಾಯಿ ಹರಿಬಿಟ್ಟಿದ್ದಾನೆ.
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಸಹಾಯಕ ಬಿ. ಎಸ್.ಅಶೋಕ್ ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಅಗತ್ಯ ಬಿದ್ದರೆ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 11 ರಂದು ಪುನೀತ್ ಕೆರೆ ಹಳ್ಳಿ ಯಾವುದೋ ಸ್ಥಳದಲ್ಲಿ ತಮ್ಮ ಸಾಮಾಜಿಕ ಜಾಲ ತಾಣದ ಫೇಸ್ ಬುಕ್ ಲಿಂಕ್ ನಲ್ಲಿ ಸಚಿವರಾದ ಜಮೀರ್ ಅಹಮದ್ ಖಾನ್ ಅವರ ಕುರಿತು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಿಂದನೆ ಮಾಡಿರುತ್ತಾನೆ. ಧರ್ಮ -ಧರ್ಮ ಗಳ ನಡುವೆ ದ್ವೇಷ ಬಿತ್ತುವ ಪ್ರಚೋದನಕಾರಿ ಹೇಳಿಕೆ ನೀಡಿರುತ್ತಾನೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.