Friday, May 9, 2025

ಸತ್ಯ | ನ್ಯಾಯ |ಧರ್ಮ

ತಹಸೀಲ್ದಾರ್ ನವೀನ್ ಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪ, ಅಮಾನತ್ತು ಮಾಡಿ ತನಿಖೆ ನಡೆಸಿ: ಧರ್ಮೇಶ್ ಆಗ್ರಹ

ಹಾಸನ : ಭ್ರಷ್ಟಾಚಾರಕ್ಕೆ ನಾಯಕತ್ವ ನೀಡುತ್ತಿರುವ ಚನ್ನರಾಯಪಟ್ಟಣ ತಾಲ್ಲೂಕಿನ ತಹಸಿಲ್ದಾರ್ ವಿ.ಎಸ್. ನವೀನ್ ಕುಮಾರ್‌ರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಿ ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ತೀವ್ರವಾದ ಬೃಹತ್ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಹಾಗೂ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಕೆ ಸಂಚಾಲಕ ಹೆಚ್.ಎಸ್. ಮಂಜುನಾಥ್ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ತಹಸೀಲ್ದಾರ್ ಕಛೇರಿಯು ಒಳಗೊಂಡು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿನ ಭ್ರಷ್ಟಚಾರ ಮಿತಿ ಮೀರಿ ನಡೆಯುತ್ತಿದೆ. ರೈತರು, ಜನಸಾಮಾನ್ಯರು ನಲುಗಿಹೊಗಿದ್ದಾರೆ. ಭ್ರಷ್ಟಚಾರವನ್ನು ನಿಯಂತ್ರಣಕ್ಕೆ ತರಬೇಕು ಹಾಗೂ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ ನಡೆಸಬೇಕೆಂದು ಚನ್ನರಾಯಪಟ್ಟಣ ತಹಸಿಲ್ದಾರ್ ಕಛೇರಿ ಎದುರು ಭ್ರಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ವತಿಯಿಂದ ಕಳೆದ 7 ದಿನಗಳಿಂದ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಹಾಸನ ಜಿಲ್ಲಾ ರೈತ, ಕಾರ್ಮಿಕ, ದಲಿತ, ಜನಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತವೆ ಮತ್ತು ಭ್ರಷ್ಟಾಚಾರಕ್ಕೆ ನಾಯಕತ್ವ ನೀಡುತ್ತಿರುವ ತಹಸಿಲ್ದಾರ್ ವಿ.ಎಸ್. ನವೀನ್ ಕುಮಾರ್‌ರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುವುದು. ಜನತೆಗೆ ಉತ್ತಮ ಆಡಳಿತ ವ್ಯವಸ್ಥೆ ಇರಬೇಕು. ತಹಶೀಲ್ದಾರ್ ಕಛೇರಿ ಮೊದಲು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಮುಂದಾಗಲು ಶುದ್ದೀಕರಣ ಇಲ್ಲಿಂದಲೇ ಪ್ರಾರಂಭ ಆಗಬೇಕೆಂದು ಸಾರ್ವಜನಿಕರ ಒತ್ತಾಸೆಯಾಗಿತ್ತು.

ಹಲವು ಸಮಸ್ಯೆಗಳ ಕುರಿತು ತಾಲ್ಲೂಕಿನ ಹಲವು ನೊಂದ ರೈತರು ಅರ್ಜಿಗಳನ್ನು ನೀಡಿದ್ದರು. ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೆರೆ ಗೇಟ್ (ಕಟ್ಟೆಮನೆ) ಸರ್ವೆ ನಂ 154 ರಲ್ಲಿ ಸುಮಾರು 60 ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ 2021-22 ಸಾಲಿನಲ್ಲಿ ಸರ್ಕಾರದ ಆದೇಶದ ಮೇರೆಗೆ ಕಂದಾಯ ಇಲಾಖೆಯ 94ಸಿ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಲ್ಲಿನ ನಿವಾಸಿಗಳು ಹತ್ತಾರು ಬಾರಿ ತಾಲ್ಲೂಕು ಕಛೇರಿಗೆ ಸುತ್ತಾಡಿದ್ದಾರೆ. ಕಾನೂನಿನನ್ವಯ ಹಕ್ಕುಪತ್ರ ನೀಡಬೇಕೆಂದು ನಾವುಗಳು ಹಕ್ಕೊತ್ತಾಯ ಮಾಡಿದ್ದೆವು. ಆದರೆ ತಹಶೀಲ್ದಾರ್ ಈ ಬಗ್ಗೆ ಯಾವುದೇ ರೀತಿಯ ಗಮನ ಹರಿಸಿಲ್ಲ ಎಂದು ದೂರಿದರು.
ಶ್ರೀಮತಿ ಲಕ್ಷ್ಮಮ್ಮ ಲೇ|| ರಂಗೇಗೌಡ, ಶೆಟ್ಟಿಹಳ್ಳಿ ಗ್ರಾಮ, ಕಸಬಾ ಹೋಬಳಿ 35 ಗುಂಟೆ ಜಮೀನಿನ ಸರ್ವೆಮಾಡಿ 194 ಹೊಸ ನಂಬರ್ ನೀಡಿದ್ದಾರೆ ಇದರ ಇಂಡೀಕರಣ ಮಾಡಲು ಆಗಸ್ಟ್ 2024 ರಂದು ತಹಶೀಲ್ದಾರ್ ರವರಿಗೆ ಸರ್ವೆಯವರು ನೀಡಿದ್ದಾರೆ. ಹಣ ನೀಡದ ಕಾರಣ ಇಲ್ಲಿಯವರೆಗೂ ಇಂಡೀಕರಣ ಮಾಡಿಲ್ಲ. ತಹಸಿಲ್ದಾರ್ ವಿ.ಎಸ್ ನವೀನ್ ಕುಮಾರ್ ಇವರು ಪಟ್ಟಣ ನಗರದ ಸುತ್ತ ಮುತ್ತ ಹಳ್ಳಿಗಳಲ್ಲಿ ಜಮೀನು ದುರಸ್ತು ಮಾಡಲು ಎಕರೆಗೆ ಲಕ್ಷಾಂತರ ರೂಪಾಯಿಗಳನ್ನು ರೈತರು ನೀಡಬೇಕೆಂದು ಕೇಳುತ್ತಾರೆ. ಈ ಮೂಲಕ ನೇರವಾಗಿ ಸುಲಿಗೆಗೆ ಇಳಿದಿದ್ದಾರೆ. ಲಂಚ ನೀಡದೆ ರೈತರ ಜಮೀನು ದುರಸ್ತು ಆಗೋದಿಲ್ಲ.

ತಾಲ್ಲೂಕು ಕಛೇರಿಯಲ್ಲಿ ಭ್ರಷ್ಟಚಾರ, ಅವ್ಯವಹಾರದ ಮೂಲ ಕೇಂದ್ರವಾಗಿದೆ. ಈ ಸರ್ಕಾರದ ಕುರಿತು ಅತ್ಯಂತ ಅವಾಚ್ಯಶಬ್ದಗಳಿಂದ ಮಾತನಾಡಿರುವ ತಹಶೀಲ್ದಾರ್ ಹಾಗೂ ದಂಢಾಧಿಕಾರಿ ಹುದ್ದೆಯನ್ನು ಅಪಮಾನಕ್ಕೆ ಈಡುಮಾಡಿದ್ದಾರೆ. ಕರ್ನಾಟಕ ಆಡಳಿತ ಸೇವೆ ಅಧಿಕಾರಿ ಈ ರೀತಿ ಮಾತನಾಡಿದರೆ ಅದೇ ಸರ್ಕಾರದ ಆದೇಶಗಳನ್ನು, ನೀತಿ ನಿಯಮಗಳನ್ನು ಯಾವ ರೀತಿ ಪಾಲಿಸಬಹುದು ತಾಲ್ಲೂಕಿನ ರೈತರನ್ನು, ಜನತೆಯನ್ನು ಯಾವ ರೀತಿಯಲ್ಲಿ ಕಾಣಬಹುದು. ಈ ರೀತಿಯ ಹೇಳಿಕೆಗಳು ಮಹಿಳೆಯರ ಘನತೆಗೂ ಕುಂದುಂಟುಮಾಡಿದೆ ಎಂದರು. ತಹಸಿಲ್ದಾರ ನವೀನ್‌ಕುಮಾರ್ ಅವರ ಭ್ರಷ್ಟಚಾರ ಮತ್ತು ದುರ್ವರ್ತನೆ ಕುರಿತು ಬಹಿರಂಗ ದಾಖಲೆಗಳು ಇದ್ದರೂ ತಾಲ್ಲೂಕಿನ ಶಾಸಕರು, ಸಂಸದರು ಮತ್ತು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಯವರು ಇನ್ನೂ ಏಕೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದೇ ನಮ್ಮ ಪ್ರಶ್ನೆಯಾಗಿದೆ ಎಂದು ಹೇಳಿದರು. ತಾಲ್ಲೂಕಿನ ರೈತರಿಗೆ ಬಗರ್‌ಹುಕುಂ ಭೂಮಿಯನ್ನು ಮಂಜೂರು ಮಾಡಲಾಗಿದೆ. ಕಳೆದ 50-60 ವರ್ಷಗಳಿಂದ ಮಂಜೂರಾತಿ ಜಮೀನನ್ನು ಸರ್ವೆ ನಡೆಸಿ ದುರಸ್ತು ಮಾಡಿಲ್ಲ, ಈಗ ಸರ್ಕಾರ ಪೋಡಿ ಮುಕ್ತ ಗ್ರಾಮ ಮಾಡಲು ಘೋಷಿಸಿದೆ. ಪೋಡಿ ಮುಕ್ತ ಗ್ರಾಮಗಳನ್ನಾಗಿಸಲು ತಾಲ್ಲೂಕು ತಹಶೀಲ್ದಾರ್ ಕಛೇರಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ತಾಲ್ಲೂಕಿನಾದ್ಯಂತ ರೈತರು ತಮ್ಮ ಜಮೀನನ್ನು ದುರಸ್ತು ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಅಲೆದಾಡಿ ಸುಸ್ತಾಗಿದ್ದಾರೆ. ಕಛೇರಿಯಲ್ಲಿ ದಾಖಲೆ ಪಡೆಯಲು ಸುತ್ತಾಡಬೇಕು. ಕೆಲವು ಮುಖ್ಯ ದಾಖಲೆಗಳೇ ನಾಪತ್ತೆಯಾಗಿರುತ್ತದೆ. ಕೃಷಿ, ತೋಟಗಾರಿಕೆ, ಅರಣ್ಯ, ಪುರಸಭೆ, ತಾಲ್ಲೂಕು ಪಂಚಾಯಿತಿ, ನೀರಾವರಿ, ಆಸ್ಪತ್ರೆ ಮುಂತಾದ ಕಡೆಗಳಲ್ಲಿಯೂ ಗಂಭೀರ ಸಮಸ್ಯೆಗಳಿವೆ. ತಾಲ್ಲೂಕಿನ ರೈತರು, ಜನತೆಯನ್ನು ಲಂಚಕ್ಕಾಗಿ ಪೀಡಿಸಲಾಗುತ್ತಿದೆ. ಇಂತಹ ಹತ್ತಾರು ಸಮಸ್ಯೆಗಳಿಗೆ ಪರಿಹಾರ ದೊರಕಬೇಕು. ತಹಸಿಲ್ದಾರ್ ನವೀನ್‌ಕುಮಾರ್ ಅವರನ್ನು ಕೂಡಲೇ ತಹಸಿಲ್ದಾರ್ ಸೇವೆಯಿಂದ ಅಮಾನತು ಮಾಡಿ ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ತೀವ್ರವಾದ ಬೃಹತ್ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಈ ಮೂಲಕ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ತಿಳಿಸುತ್ತಿದ್ದೇವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ದಲಿತ ಹಿರಿಯ ಮುಖಂಡ ಹೆಚ್.ಕೆ. ಸಂದೇಶ್, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್, ಡಿವೈಎಫೈ ಎಂ.ಜಿ. ಪೃಥ್ವಿ, ತೆಂಗು ಬೆಳೆಗಾರರ ಹೋರಾಟ ಸಮಿತಿಯ ರಾಮಚಂದ್ರ ಹಳಗೇರಳ್ಳಿ, ದೊರೆ ಕಬ್ಬಳಿ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page