Wednesday, June 18, 2025

ಸತ್ಯ | ನ್ಯಾಯ |ಧರ್ಮ

ಇಸ್ರೇಲಿನ ಮಾನವ ಹತ್ಯಾಕಾಂಡ ಖಂಡಿಸಿ ಸಿಪಿಐ-ಸಿಪಿಐಎಂ ಘೋಷಣೆ

ಹಾಸನ : ಗಾಜಾದಲ್ಲಿ ಇಸ್ರೇಲಿನ ಮಾನವ ಹತ್ಯಾಕಾಂಡವನ್ನು ಖಂಡಿಸಿ, ಪ್ಯಾಲೆಸ್ತೀನಿಗೆ ಬೆಂಬಲವನ್ನು ವ್ಯಕ್ತಪಡಿಸಿ ಎಡಪಕ್ಷಗಳಿಂದ ರಾಷ್ಟ್ರೀಯ ಸೌಹಾರ್ಧತಾ ದಿನ ಆಚರಣೆಯಲ್ಲಿ ಸಿಪಿಐ ಮತ್ತು ಸಿಪಿಐಎಂ ನೇತೃತ್ವದಲ್ಲಿ ನಗರದ ಮಹಾವೀರ ವೃತ್ತದಲ್ಲಿ ಘೋಷಣೆ ಕೂಗಿದರು. ಇದೆ ವೇಳೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್ ಮಾತನಾಡಿ, ಎರಡು ವರ್ಷಗಳಿಂದ ಸತತವಾಗಿ ಇಸ್ರೇಲ್ ನಡೆಸುತ್ತಿರುವ ಅನಾಗರಿಕ ಬಾಂಬುಗಳ ದಾಳಿ, ಮಿಲಿಟರಿ ಆಕ್ರಮಣದಿಂದ 55,000 ಸಾವಿರಕ್ಕೂ ಹೆಚ್ಚಿನ ಪ್ಯಾಲೆಸ್ತೀನಿಯರು ಕೊಲ್ಲಲ್ಪಟ್ಟಿದ್ದಾರೆ. ಲಕ್ಷಾಂತರ ಜನರು ಗಾಯಾಳುಗಳಾಗಿದ್ದಾರೆ. ಅಗತ್ಯ ಆಸ್ಪತ್ರೆಗಳು, ಶಾಲೆಗಳು ಮತ್ತು ನಿರಾಶ್ರಿತ ವಸತಿ ಕೇಂದ್ರಗಳನ್ನು ಗುರಿಯಿಟ್ಟು ದಾಳಿ ಮಾಡಲಾಗುತ್ತಿದೆ. ಇದರಿಂದಾಗಿ ಪ್ಯಾಲೆಸ್ತೀನಿಯರು ಹಿಂದೆಂದೂ ಕಂಡರಿಯದ ಮಾನವ ದುರಂತವನ್ನು ಅನುಭವಿಸುವಂತಾಗಿದೆ. ಇದು ಜನಾಂಗ ಹತ್ಯೆಯಲ್ಲದೆ ಬೇರೇನೂ ಅಲ್ಲ. ಇಂತಹ ಸಂದರ್ಭದಲ್ಲಿ ಗಾಜಾ ಪ್ರದೇಶಕ್ಕೆ ಆಹಾರ ಪದಾರ್ಥಗಳನ್ನೂ ಇಸ್ರೇಲ್ ಬಿಡುತ್ತಿಲ್ಲ ಎಂಬುದು ಆತಂಕಕಾರಿಯಾಗಿದೆ ಎಂದರು.


ಮೊದಲ ಹಂತದ ಕದನ ವಿರಾಮ ಪೂರ್ಣಗೊಂಡ ಕೂಡಲೇ ಇಸ್ರೇಲಾ ಗಾಝಾ ಮೇಲಿನ ದಾಳಿಯನ್ನು ಪುನರಾರಂಭಿಸಿದೆ ಅಂದಿನಿಂದ, ಗಾಜಾಗೆ ಆಹಾರ, ನೀರು, ಇಂಧನ, ನೆರವು ಮತ್ತು ಇತರ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯನ್ನು ಕಡಿತಗೊಳಿಸಿದೆ. ಗಾಝಾವನ್ನು ಕತ್ತು ಹಿಸುಕಿ ಹಸಿವಿನಿಂದ ಸಾಯುವಂತೆ ಮಾಡಲು ಇಸ್ರೇಲ್ ಉದ್ದೇಶಿಸಿದೆ. ಇದು ಆಸ್ಪತ್ರೆಗಳು, ಸಹಾಯ ಬೆಂಗಾವಲುಗಳು, ವಿಶ್ವಸಂಸ್ಥೆಯ ನಿರಾಶ್ರಿತರ ಆಶ್ರಯ ತಾಣಗಳು, ಶಾಲೆಗಳು, ಮಸೀದಿಗಳು ಮತ್ತು ಚರ್ಚುಗಳ ಮೇಲೆ ದಾಳಿ ನಡೆಸುತ್ತಿದೆ. ಇಸ್ರೇಲ್ ದಾಳಿಯಲ್ಲಿ ಮೃತಪಟ್ಟವರಲ್ಲಿ ಶೇ.60ರಷ್ಟು ಮಹಿಳೆಯರು ಮತ್ತು ಮಕ್ಕಳು. ಪತ್ರಕರ್ತರು ಮತ್ತು ವಿಶ್ವಸಂಸ್ಥೆಯ ಸಹಾಯ ಕಾರ್ಯಕರ್ತರನ್ನು ಸಹಗುರಿಯಾಗಿಸಿ ಕೊಲ್ಲಲಾಗುತ್ತಿದೆ. ಬೆಳೆಗಳು ನಾಶವಾಗುತ್ತಿವೆ. ಈ ಎಲ್ಲಾ ದಾಳಿಗಳು ಇಸ್ರೇಲಿ ಪ್ರಭುತ್ವದ ನರಮೇಧದ ಗುಣವನ್ನು ತೆರೆದಿಟ್ಟಿದೆ ಎಂದು ದೂರಿದರು. ಇದನ್ನೆಲ್ಲಾ ಗಮನಿಸಿ ಅಂತರರಾಷ್ಟ್ರೀಯ ನ್ಯಾಯಾಲಯವು (ಐಸಿಜೆ), ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಮತ್ತು ಇತರ ಇಸ್ರೇಲಿ ನಾಯಕರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿದೆ.
ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿ ಪ್ರದೇಶವನ್ನು ಆಕ್ರಮಿಸಲು ಮತ್ತು ಯೆಹೂದಿ ವಸತಿಗಳನ್ನು ಸ್ಥಾಪಿಸಲು ಜಿಯೋನಿಸ್ಟ್ ಆಕ್ರಮಣಕಾರರಿಗೆ ಇಸ್ರೇಲ್ ಎಲ್ಲ ರೀತಿಯ ಪ್ರೇರಣೆ ನೀಡುತ್ತಿದೆ. ಕ್ರಮೇಣವಾಗಿ ಪ್ಯಾಲೆಸ್ತೀನ್ ಭೂಪ್ರದೇಶವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಬೃಹತ್ ಇಸ್ರೇಲ್ ಸ್ಥಾಪನೆಯ ತನ್ನ ಉದ್ದೇಶವನ್ನು ಜಾರಿ ಮಾಡಿಕೊಳ್ಳುವ ಭಾಗವಾಗಿ, ಪ್ಯಾಲೆಸ್ತೀನಿಯರನ್ನು ತಮ್ಮ ತಾಯ್ನೆಲದಿಂದ ಹೊರಗೆ ಓಡಿಸಿ, ಪ್ಯಾಲೆಸ್ತೇನನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯಗಳನ್ನು ನಡೆಸಲಾಗುತ್ತಿದೆ.


ಅಮೇರಿಕ ಮತ್ತು ಪಶ್ಚಿಮ ಯೂರೋಪಿನ ಅದರ ಮಿತ್ರ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಇಸ್ರೇಲಿನ ಈ ದಾಳಿಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿವೆ. ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿವೆ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಇಸ್ರೇಲಿಗೆ ಬೆಂಬಲ ನೀಡುತ್ತಿವೆ. ಗಾಜಾ ಪ್ರದೇಶವನ್ನು ಪ್ರವಾಸೋದ್ಯಮದ ಸ್ವರ್ಗವಾಗಿ ಮಾರ್ಪಡಿಸಲು ಅಲ್ಲಿ ವಾಸಿಸುತ್ತಿರುವ ಎಲ್ಲಾ ಪ್ಯಾಲೆಸ್ತೀನಿಯರನ್ನು ಓಡಿಸಬೇಕೆಂಬ ಟ್ರಂಪ್?ನ ಘೋಷಣೆಯು, ಇಸ್ರೇಲಿನ ಹಿತಾಸಕ್ತಿಗಳಿಗೆ ಪೂರಕವಾದದ್ದೇ ಆಗಿದೆ ಎಂದು ಹೇಳಿದರು. ಅಂತರರಾಷ್ಟ್ರೀಯ ನೀರು ಗಡಿಯಲ್ಲಿ ಗಾಜಾಕ್ಕೆ ಆಹಾರ ಸಹಾಯವನ್ನು ಮಾಡಲು ತೆರಳುತ್ತಿದ್ದ ?ಮೆಡ್ಲೀನ್ ಆಫ್ ದಿ ಫ್ರೀಡಂ ಫ್ಲಾಟಿಲ್ಲಾ ಗಾಜಾ ? ಹಡಗಿನ ಮೇಲೆ ಇಸ್ರೇಲ್ ದಾಳಿ ಮಾಡಿರುವುದು ಅತ್ಯಂತ ಹೇಯ ಮತ್ತು ಖಂಡನೀಯವಾಗಿದೆ. ಅಮೇರಿಕ ಮತ್ತು ಅದರ ಮಿತ್ರ ರಾಷ್ಷ್ಟಗಳ ಬೆಂಬಲದಿಂದ ವಿಶ್ವಸಂಸ್ಥೆ ಮತ್ತು ಜಾಗತಿಕ ಸಮುದಾಯದ ಯಾವ ಎಚ್ಚರಿಕೆಗಳನ್ನೂ ಗೌರವಿಸದೆ ಇಸ್ರೇಲ್ ಮಾನವ ಹತ್ಯೆಗಳ ಚಟುವಟಿಕೆಗಳಲ್ಲಿ ತೊಡಗಿದೆ ಎಂದರು.


ಬಿಜೆಪಿ ಕೇಂದ್ರ ಸರ್ಕಾರವು ಪ್ಯಾಲೆಸ್ತೀನ್ ಕುರಿತು ಭಾರತದ ಧೀರ್ಘಕಾಲೀನ ಅಧಿಕೃತ ನಿಲುವಿಗೆ ಎಳ್ಳು ನೀರು ಬಿಟ್ಟಿದೆ. ಭಾರತ ಸರ್ಕಾರವು ತನ್ನ ಚಾರಿತ್ರಿಕವಾದ – ಪ್ಯಾಲೆಸ್ತೀನ್ಜನರ ಜೊತೆಗೆ ನಿರ್ಣಾಯಕವಾಗಿ ನಿಲ್ಲುವ – ಧೋರಣೆಯನ್ನು ಕೈಬಿಟ್ಟು ಇಸ್ರೇಲನ್ನು ಓಲೈಸುವ ಕೆಲಸವನ್ನು ಮಾಡುತ್ತಿದೆ. ಮತ್ತು ಭಾರತವನ್ನು ಇಸ್ರೇಲ್ ಮತ್ತು ಅಮೇರಿಕದ ಮಿತ್ರ ದೇಶಗಳಾಗಿ ನೋಡುವಂತೆ ಮಾಡಿದೆ.
ತನ್ನ ನಿಲುವನ್ನು ಸಮರ್ಥಿಸಿಕೊಳ್ಳುವ ಕಾರಣಕ್ಕಾಗಿ ಬಿಜೆಪಿ, ಸಂಘ ಪರಿವಾರದ ಜೊತೆಯಲ್ಲಿ ಸೇರಿಕೊಂಡು, ಗಾಜಾ ಮೇಲಿನ ಇಸ್ರೇಲಿ ಆಕ್ರಮಣವನ್ನು ಧಾರ್ಮಿಕ ಯುದ್ಧ ಎಂಬಂತೆ ಬಿಂಬಿಸುತ್ತಿದೆ. ಮತಧರ್ಮದ ಜೊತೆಯಲ್ಲಿ ರಾಷ್ಟ್ರೀಯತೆಯನ್ನು ಗುರುತಿಸುವ ಮತ್ತು ಮುಸ್ಲಿಮರನ್ನು ದ್ವೇಷಿಸುವ ಗುಣದಿಂದಾಗಿ ಇಸ್ರೇಲಿನ ಜಿಯೋನಿಸ್ಟರೊಂದಿಗೆ ಆರ್.ಎಸ್.ಎಸ್. ಸೈದ್ಧಾಂತಿಕ ಸಹಮತವನ್ನು ಹೊಂದಿದೆ. ನಮ್ಮ ದೇಶದ ಆಳುವ ವರ್ಗದ ಹಿತಕ್ಕೆ ಅನುಗುಣವಾಗಿರುವ ಈ ಸೈದ್ಧಾಂತಿಕ ಸಖ್ಯತೆಯಲ್ಲಿಯೇ ಇಸ್ರೇಲಿಗೆ ಬೆಂಬಲ ನೀಡುವ ಬಿಜೆಪಿ ಸರ್ಕಾರದ ಪ್ರಸಕ್ತ ನಿಲುವು ಇದೆ ಎಂಬದುನ್ನು ಗಮನಿಸಬೇಕಿದೆ.

ಇದು ಭಾರತದ ಅಂತರರಾಷ್ಟ್ರೀಯ ಸಂಬಂಧಗಳಿಗೆ ಮಾರಕವಾಗಲಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಗಾಜಾ ಮೇಲಿನ ಆಕ್ರಮಣ ಮತ್ತು ದಾಳಿಯನ್ನು ಇಸ್ರೇಲ್ ನಿಲ್ಲಿಸಬೇಕು. ಅದು ನಡೆಸಿರುವ ಜನಾಂಗೀಯ ದ್ವೇಷ ಮತ್ತು ಯುದ್ಧ ಅಪರಾಧಗಳನ್ನು ಖಂಡಿಸಿ, ಇಸ್ರೇಲನ್ನು ಜನಾಂಗೀಯ ದ್ವೇಷದ ಪ್ರಭುತ್ವವೆಂದು ಘೋಷಿಸಿ ಕ್ರಮ ಕೈಗೊಳ್ಳಬೇಕು. ತಮ್ಮ ರಾಷ್ಟç, ಗೌರವ ಮತ್ತು ಸ್ವಾತಂತ್ರಂತ್ರ್ಯಕ್ಕಾಗಿ ಪ್ಯಾಲೆಸ್ಟೀನಿ ಜನತೆ ನಡೆಸುತ್ತಿರುವ ನ್ಯಾಯಯುತ ಹೋರಾಟವನ್ನು ಬೆಂಬಲಿಸಬೇಕು. ಭಾರತ ದೇಶದ ಜನರ ಸಾಮ್ರಾಜ್ಯಶಾಹಿ-ವಿರೋಧಿ ಆಶೋತ್ತರಗಳಿಗೆ ಅನುಗುಣವಾಗಿ ಪ್ಯಾಲೆಸ್ತೀನಿಯರ ಆಶಯಗಳನ್ನು ಬೆಂಬಲಿಸುತ್ತ ಬಂದಿರುವ ನೆಲೆಯಲ್ಲೇ ಭಾರತ ಸರ್ಕಾರವು ನೀತಿಬದ್ಧ ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಇಸ್ರೇಲಿನೊಂದಿಗೆ ಮಿಲಿಟರಿ ಮತ್ತು ಭದ್ರತಾ ಸಹಕಾರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಂ.ಸಿ.ಡೋಂಗ್ರೆ, ಹಿರಿಯ ದಲಿತ ಮುಖಂಡರಾದ ಎಚ್.ಕೆ.ಸಂದೇಶ್, ಧರ್ಮೇಶ್, ಎಂ.ಜಿ.ಪೃಥ್ವಿ, ಅನ್‌ಸರ್, ಸಮೀರ್, ಇರ್ಶಾದ್ ಅಹಮದ್ ದೇಸಾಯಿ, ಧರ್ಮರಾಜ್, ಅರವಿಂದ್, ರಮೇಶ್ ಮುಂದಾದವರು ಇದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page