Friday, June 27, 2025

ಸತ್ಯ | ನ್ಯಾಯ |ಧರ್ಮ

ನಾಳೆಯಿಂದ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿಸಿ ಪ್ರತಿ ದಿನವೂ ವಿಚಾರಗೋಷ್ಠಿ

ಬಲವಂತದ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಕಳೆದ ಮೂರೂವರೆ ವರ್ಷದಿಂದ (1180 ದಿನ) ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ‘ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ’ ಅಡಿಯಲ್ಲಿ, ಫಲವತ್ತಾದ ಕೃಷಿ ಭೂಮಿ ಉಳಿಸಲು ನಿರಂತರವಾಗಿ ಹೋರಾಡುತ್ತಾ ಬಂದಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು, ಇಂದಿನ ಕಾಂಗ್ರೆಸ್ ಸರ್ಕಾರ ಅದನ್ನು ರೈತರ ಪ್ರಬಲ ವಿರೋಧದ ನಡುವೆಯೂ 10 ಹಳ್ಳಿಗಳ ಭೂಸ್ವಾಧೀನಕ್ಕೆ 2025ರ ಏಪ್ರಿಲ್‌ನಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಮೂಲಕ ರೈತರು ಮತ್ತು ಸರ್ಕಾರದ ನಡುವಿನ ಸಂಘರ್ಷ ಅಂತಿಮ ಹಂತಕ್ಕೆ ತಲುಪಿದ್ದು, ಚನ್ನರಾಯಪಟ್ಟಣ ರೈತರ ಬೆಂಬಲಕ್ಕೆ ನಿಂತಿರುವ ದಲಿತ, ಕಾರ್ಮಿಕ, ಮಹಿಳಾ ಮತ್ತು ರೈತ  ಸಂಘಟನೆಗಳ ಐಕ್ಯ ಹೋರಾಟವಾದ ‘ಸಂಯುಕ್ತ ಹೋರಾಟ-ಕರ್ನಾಟಕ’ ದಿನಾಂಕ: 25-06-2025ರಂದು ‘ದೇವನಹಳ್ಳಿ ಚಲೋ’ ಪ್ರತಿಭಟನೆಗೆ ಕರೆ ನೀಡಿತ್ತು. ದೇವನಹಳ್ಳಿ ಪಟ್ಣಣದ ಸಂತೆ ಮೈದಾನದಲ್ಲಿ ನಡೆಯುತ್ತಿದ್ದ ರೈತರ ಶಾಂತಿಯುತ ಹೋರಾಟವನ್ನು ಸರ್ಕಾರವು ಪೊಲೀಸ್ ಬಲ ಬಳಸಿ ಹತ್ತಿಕ್ಕುವ ಪ್ರಯತ್ನಮಾಡಿದೆ. ಸಂವಿಧಾನನಾತ್ಮಕವಾಗಿ ಭೂಸ್ವಾಧೀನ ವಿರೋಧಿಸುತ್ತಿದ್ದ ಹೋರಾಟಗಾರರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿ ಬಂದಿಸಿರುವುದಕ್ಕೆ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗಿ ಸುದ್ದಿಗಳೆ ಸಾಕ್ಷಿಯಾಗಿವೆ.

ಭೂಸ್ವಾಧೀನ ವಿರೋಧಿಸಿದ ರೈತರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ರಾಜ್ಯದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ದಿ.26-06-2-25ರಂದು ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ವಿವಿಧ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಬಲವಂತದ ಭೂಸ್ವಾಧೀನ ಕೈಬಿಡಬೇಕು ಎಂದು ಒತ್ತಾಯಿಸಿವೆ.

ರೈತರ ಮೇಲಿನ ದೌರ್ಜನ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಹಠಮಾರಿ ಧೋರಣೆ ಖಂಡಿಸಿ ಚಿತ್ರನಟರಾದ ಪ್ರಕಾಶ್‌ ರಾಜ್, ಹಿರಿಯ ಪತ್ರಕರ್ತರು ಹಾಗೂ ಬರಹಗಾರರಾದ ಡಾ.ವಿಜಯಮ್ಮ, ರೈತರ ಸಂಘದ ವೀರಸಂಗಯ್ಯ ಸೇರಿದಂತೆ ಹಲವು ಪ್ರಗತಿಪರ ಚಿಂತಕರು ಮರುದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರೈತರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಕಠುಶಬ್ಧಗಳಲ್ಲಿ ಖಂಡಿಸಿದ್ದಾರೆ. ಕೂಡಲೇ ಬಲವಂತದ ಭೂಸ್ವಾಧೀನ ಕೈಬಿಡಬೇಕು ಎಂದು ಗಡುವು ನೀಡಿ ಬಂದಿದ್ದಾರೆ.

ಸರ್ಕಾರ ಅಂತಿಮ ತೀರ್ಮಾನಕ್ಕೆ ಬರುವವರೆಗೂ ಸಂಯುಕ್ತ ಹೋರಾಟ-ಕರ್ನಾಟಕ ಮತ್ತು ಚನ್ನರಾಯಪಟ್ಟಣ 13 ಹಳ್ಳಿಗಳ ರೈತರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ‘ಭೂಮಿ ಸತ್ಯಾಗ್ರಹ’ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಜುಲೈ-4 ರಂದು, ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡರು, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯವರೊಂದಿಗೆ ಸಮಗ್ರ ಸಭೆ ನಡೆಸಿ ತೀರ್ಮಾನಕ್ಕೆ ಬರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಜುಲೈ 3ರಂದು ಸಚಿವ ಸಂಪುಟದ ಸಭೆ ನಡೆಯಲಿದ್ದು, ಅಂದಿನ ಸಭೆಯಲ್ಲಿ, ಚನ್ನರಾಯಪಟ್ಟಣ ಹೋಬಳಿಯ ಬಲವಂತದ ಭೂಸ್ವಾಧೀನ ಹಿಂಪಡೆಯುವ ಜೊತೆಗೆ, ಕೆಐಎಡಿಬಿ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ಕೃಷಿ ಭೂಮಿ ದುರುಪಯೋಗಕ್ಕೆ ಶಾಶ್ವತವಾಗಿ ಪರಿಹಾರ ರೂಪಿಸಬೇಕು ಎಂದು ಸಂಯುಕ್ತ ಹೋರಾಟ-ಕರ್ನಾಟಕ ಒತ್ತಾಯಿಸಿದೆ.

‘ಭೂಮಿ ಸತ್ಯಾಗ್ರಹ’ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ ದಸಂಸ ಹಿರಿಯ ಮುಖಂಡರು, ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂಡವಾಳಶಾಹಿಗಳ ಪರ ನಿಲ್ಲದೆ, ಬಲವಂತದ ಭೂಸ್ವಾಧೀನ ಹಿಂಪಡೆಬೇಕು ಎಂದು ಆಗ್ರಹಿಸಿದರು. ಅವರ ಮಾತಿನ ಸಂಕ್ಷಿಪ್ತ ಬರಹರೂಪ ಹೀಗಿದೆ:

ನೆಲ ಜನ ಸಂಸ್ಕೃತಿಯನ್ನ ಉಳಿಸುವ ಹೋರಾಟವಿದು

ಚನ್ನರಾಯಪಟ್ಟಣ ರೈತ ಹೋರಾಟದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಈ ನಾಡಿನ ಭವಿಷ್ಯ ಕಟ್ಟಿಕೊಡುವ ರೈತರಪರ ಹೋರಾಟ ನಡೀತಿದೆ.

ಈ ಸಮಸ್ಯೆ ಹುಟ್ಟುಹಾಕಿರುವ ಸರ್ಕಾರ ಸಮಸ್ಯೆಯನ್ನು ಪರಿಹಾರ ಮಾಡುವ ಬದಲು ಸಮಸ್ಯೆಯನ್ನ ಹೆಚ್ಚು ಮಾಡ್ತಿದ್ದಾರೆ. ಇವತ್ತು ರೈತರ ವಿರುದ್ಧ ನಿಂತಿರುವ ಅದೇ ಸಿದ್ದರಾಮಯ್ಯ ಅವರು ಅವತ್ತು ರೈತರ ಪರ ಮಾತಾಡಿದ್ರು. ಪದೇ ಪದೇ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೀನಿ ಅಂತಾ ಹೇಳ್ತಿದ್ದೀರಿ, ಈ ಮಾತನ್ನು ಉಳಿಸಿಕೊಳ್ಳಿ ಕಾರ್ಪೊರೇಟ್ ಗಳ ಪರ ನಿಂತು, ಸಾವಿರಾರು ಎಕರೆ ರೈತ ಭೂಮಿಯನ್ನ ಲಾಭಕೋರರಿಗೆ ಕೊಡಬೇಡಿ. ನೀವು ಜನಪರವಾಗಿಯೇ ಇರಿ

ಈ ಕಾರ್ಪೊರೇಟ್ ಸೆಕ್ಟರ್ ಎಲ್ಲಾ ನೊಂದವರನ್ನ ಬಳಸಿಕೊಳ್ತಿದೆ. ಅಭಿವೃದ್ಧಿ ಅಂದ್ರೆ ಬರೀ ಕಾರ್ಖಾನೆಗಳನ್ನ ಕಟ್ಟೊದಲ್ಲ, ಎಲ್ಲ ಜನರ ನೆಮ್ಮದಿ..ಎಲ್ಲರ ಜೊತೆ ನ್ಯಾಯಯುತವಾಗಿ ನಡೆದುಕೊಳ್ಬೇಕು. ಅದು ಬಿಟ್ಟು ಸರ್ಕಾರ ಯಾಕೆ ಈ ದುಷ್ಟಕೂಟದ ಭಾಗವಾಗುತ್ತಿದೆ.

ಎಂ.ಬಿ ಪಾಟೀಲ್ ಗೆ ಹೇಳ್ತಿದ್ದಾರೆ ಕಾರ್ಪೊರೇಟ್ ಕಂಪನಿಗಳು ಒಳ್ಳೆ ಭೂಮಿಯನ್ನ ಕೇಳ್ತಾರೆ. ಅವರಿಗೆ ಅವರು ಕೇಳಿದ ಭೂಮಿ ಕೊಡಬೇಕು ಅಂತಾ ಅವರಿಗೆ ನಾನು ಕೇಳ್ತೀನಿ, ನಾಳೆ ಕಾರ್ಪೊರೇಟ್ ಗಳು ವಿಧಾನಸೌಧ ಕೇಳಿದ್ರೆ ಕೊಡ್ತೀರಾ,  ಯಾಕೆ ಮೂರ್ಖ ಹೇಳಿಕೆಗಳನ್ನ ಕೊಡ್ತಿದ್ದೀರಿ. ಇವತ್ತು ನೀವು ದುಷ್ಟಕೂಟದ ಭಾಗವಾಗಿ, ಕಾರ್ಪೊರೇಟ್ ಕಳ್ಳರ ಜೊತೆ ನಿಂತಿದ್ದೀರಾ..ನೀವು ನಿಜಕ್ಕೂ ಹೊಟ್ಟೆಗೆ ಅನ್ನ ತಿಂತೀರಾ..

ನಮ್ಮನ್ನ ಉಳ್ಳವರ ಮನೆಗೆ ಜೀತಗಾರರನ್ನಾಗಿಸಬೇಡಿ, ಅವರ ಬಾಗಿಲು ಕಾಯುವ ಹಾಳುಗಳನ್ನಾಗಿಸಬೇಡಿ. ನಿಮಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದ್ರೆ ಇದನ್ನ ಕೈ ಬಿಡಿ. ಅಭಿವೃದ್ಧಿ ಅಂದ್ರೆ ಎಲ್ಲಾ ಜನರ ಪರವಾಗಿರೋದು, ಕಾರ್ಖಾನೆಗಳ ಮಾಲೀಕರು ಯಾರಿಗೊ ಒಪ್ಪತ್ತಿನ ಅನ್ನ ಹಾಕಿದ್ದನ್ನ ನೋಡಿಲ್ಲ, ನೀವು ಈ ದುಷ್ಟಕೂಟದ ಭಾಗ ಆಗ್ಬೇಡಿ…

ಸಿದ್ದರಾಮಯ್ಯ ಅವರೇ ನೀವೆಲ್ಲರು ವಿವೇಚನೆ ಇರೋರು ಅಂತಾ ನಾವು ನಂಬಿದ್ದೇವೆ..ನೀವು ಎಲ್ಲರ ಒಳಿತು. ಈ ನೆಲ, ಜಲವನ್ನ ಉಳಿಸೋದು ಅನಿವಾರ್ಯ ನಿಮಗೆ ಒತ್ತಡ ಇದೆ ಅಂತಾ ಗೊತ್ತು, ನೀವು ನಿಮ್ಮ ಬದ್ಧತೆಯನ್ನು ಈ ಮೂಲಕ ತೋರಿಸಬೇಕು.

ಈ ಹೋರಾಟದ ಮೂಲಕ ನಾವು ಒಂದು ಎಚ್ಚರಿಕೆ ನೀಡುತ್ತಿದ್ದೇವೆ. ಎಲ್ಲಾ ಚಳವಳಿಗಳಿಗೂ ಪುನಃಚ್ಛೇತನ ಆಗುವಂತ ಹೋರಾಟಗಳ ಮೊಳಕೆ ಇವತ್ತು ಇಲ್ಲಿ ಚಿಗುರೊಡೆಯುತ್ತಿದೆ.

ನಿಮ್ಮೆಲ್ಲರನ್ನು ಕಿತ್ತು ಎಸೆಯುವ ಹೋರಾಟದ ಮೊಳಕೆ ಫ್ರೀಡಂ ಪಾರ್ಕಿನಲ್ಲಿ ಹುಟ್ಟುತ್ತಿದೆ. ದಲಿತ ಸಂಘಟನೆ, ಕಾರ್ಮಿಕ ಸಂಘಟನೆ, ರೈತ ಸಂಘಟನೆಗಳು ಇಲ್ಲಿ ಮೊಳಕೆ ಹೊಡೆಯುತ್ತಿವೆ

ಕರ್ನಾಟಕದ ಎಲ್ಲಾ ಚಳವಳಿಗಳು, ಕಾರ್ಮಿಕರು, ರೈತರು ಎಲ್ಲರೂ ಕರ್ನಾಟಕದ ಮೂಲೆ ಮೂಲೆಯಲ್ಲು ಈ ಹೋರಾಟಕ್ಕೆ ಜೊತೆಯಾಗ್ತಿದ್ದಾರೆ..ಇದು ಎಚ್ಚರಿಕೆ ಈ ವಿಚಾರದಲ್ಲಿ ನೀವು ರೈತಪರ ನಿಲುವನ್ನು ತೆಗೆದುಕೊಳ್ಳುತ್ತೀರಿ ಎಂದು ನಾವು ನಂಬಿದ್ದೇವೆ ಆ ನಂಬಿಕೆಯನ್ನು ಉಳಿಸಿಕೊಳ್ಳಿ ಒಳ್ಳೆ ತೀರ್ಮಾನವನ್ನು ತೆಗೆದುಕೊಂಡು ನಮಗೆ ಇಲ್ಲಿಂದ ಮುಕ್ತಿ ಕೊಡಿ…

ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿವಿಧ ಚಳುವಳಿಗಳ ಹಿರಿಯ ನಾಯಕರಾದ ಸಿದ್ಧನಗೌಡ ಪಾಟೀಲ್‌, ವಿ ನಾಗರಾಜ್‌, ಡಿ ಎಚ್‌ ಪೂಜಾರ್‌ ಮೊದಲಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಸಂಯುಕ್ತ ಹೋರಾಟದ ನೂರ್ ಶ್ರೀಧರ್, ದಸಂಸ ಹಿರಿಯ ನಾಯಕ ವಿ.ನಾಗರಾಜ, ಇಂದೂಧನ ಹೊನ್ನಾಪುರ, ಸಿದ್ದನಗೌಡ ಪಾಟೀಲ್, ಡಿ.ಎಚ್. ಪೂಜಾರ್, ವರಲಕ್ಷ್ಮಿ, ಬಡಗಲಪುರ ನಾಗೇಂದ್ರ, ಯಶವಂತ್, ತಾರಾ ರಾವ್, ಕುಮಾರ್‌ ಸಮತಳ, ಬಸವರಾಜ್ ಕೌತಾಳ್, ಶಿವಾನಂದ ಕುಗ್ವೆ, ಪ್ರಭಾ ಬೆಳವಂಗಲ, ಚನ್ನರಾಯಪಟ್ಟಣ ರೈತರಾದ ನಲ್ಲಪ್ಪನಹಳ್ಳಿ ನಂಜಪ್ಪ, ಲಕ್ಷ್ಮಮ್ಮ, ಜಯಮ್ಮ, ಮಾರೇಗೌಡ, ಚೀಮಾಚನಳ್ಳಿ ರಮೇಶ್, ನಾಗನಾಯಕನಹಳ್ಳಿ ರಘು, ನಲ್ಲೂರು ಗೋಪಿನಾಥ್, ಮುಕುಂದ್ ಚೀಮಾಚನಹಳ್ಳಿ ಸೇರಿದಂತೆ ಹಲವರಿದ್ದರು.

ನಾಳೆಯಿಂದ ನಡೆವ ಪ್ರತಿಭಟನೆಯು ಪ್ರತಿದಿನವೂ ರೈತರ ಭೂಮಿ ಮತ್ತು ಬದುಕಿಗೆ ಸಂಬಂಧಿಸಿದ ಗಹನವಾದ ವಿಷಯಗಳು, ಭೂಮಿ ಕುರಿತಾದ ಕಾಯ್ದೆಗಳು ಅವುಗಳಿಗೆ ಬಂದಿರುವ ತಿದ್ದುಪಡಿಗಳು, ಕೆಐಎಡಿಬಿ ಮೊದಲಾದ ಸರ್ಕಾರಿ ಅಂಗಗಳ ಮೂಲಕ ನಡೆಸುವ ಭೂಕಬಳಿಕೆಯ ಹುನ್ನಾರಗಳು ಮುಂತಾದ ಅನೇಕ ವಿಷಯಗಳ ಬಗ್ಗೆ ವಿಷಯತಜ್ಷರನ್ನು ಕರೆಸಿ ವಿಚಾರ ಗೋಷ್ಟಿಯ ರೂಪದಲ್ಲಿರುತ್ತದೆ. ಪ್ರತಿದಿನ ಪಾಲ್ಗೊಳ್ಳುವ ರೈತರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಈ ಚಿಂತನ-ಮಂಥನಗಳು ತಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ವೇದಿಕೆಗಳಾಗಲಿವೆ ಎಂದು ಇಂದಿನ ಪ್ರತಿಭಟನೆಯ ಸಮನ್ವಯ ನಡೆಸುತ್ತಿದ್ದ ಮುಂದಾಳುಗಳು ತಿಳಿಸಿದ್ದಾರೆ. ವಿವರಗಳು ಹೀಗಿವೆ:

ದಿನಾಂಕವಿಚಾರ
June 28ಬಿಜೆಪಿ ಮಾಡಿದ ಭೂ ಕಾಯ್ದೆಯ ತಿದ್ದುಪಡಿಯನ್ನು ಕಾಂಗ್ರೆಸ್‌ ಸಹ ಮುಂದುವರೆಸುತ್ತಿದೆ ಏಕೆ? ವಿಷಯ ತಜ್ಞರು: ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷರು, ವಿ.ಗಾಯತ್ರಿ, ಕೃಷಿ ತಜ್ಞರು ಮತ್ತು ಹೋರಾಟಗಾರರು.
June 29ಸರ್ಕಾರದ ಭೂ ನೀತಿ ಕಾಯುತ್ತಿರುವುದು ಯಾರ ಹಿತ?
June 30ಬಗರ್‌ ಹುಕುಂ ಸಮಸ್ಯೆ: ಬಗೆಹರಿಸಲಾಗದ ಸಮಸ್ಯೆಯೋ, ಬಗೆಹರಿಸಲು ಸಿದ್ಧವಿಲ್ಲದ ಸಮಸ್ಯೆಯೋ?
July 1ವಸತಿ ಸಮಸ್ಯೆ; ಸಾವಿರಾರು ಎಕರೆ ಪ್ರತಿಯೊಬ್ಬ ರಾಜಕಾರಣಿಗೇ ಇದ್ದರೂ ಕೋಟ್ಯಾಂತರ ಜನರ ತಲೆ ಮೇಲೆ ಒಂದು ಸ್ವಂತದ ಸೂರು ಇಲ್ಲ ಏಕೆ?
July 2ಅರಣ್ಯ ನೀತಿ; ಕಾಡಿನ ವಾಸಿಗಳು ತಬ್ಬಲಿಗಳಾಗಿರುವ ಕಥೆ,
July 3KIADB ಎಂಬ ಕಾರ್ಪರೇಟ್‌ ಭೂ ಮಾಫಿಯಾ

Related Articles

ಇತ್ತೀಚಿನ ಸುದ್ದಿಗಳು

You cannot copy content of this page