Saturday, June 15, 2024

ಸತ್ಯ | ನ್ಯಾಯ |ಧರ್ಮ

ದಾವೂದ್ ಇಬ್ರಾಹಿಂ ಸಹಚರನೂ ಕಂಬಳದ ಅತಿಥಿ!!! ; ವಿವಾದದ ಕೇಂದ್ರಬಿಂದು ಆಗುತ್ತಿದೆ ‘ಬೆಂಗಳೂರು ಕಂಬಳ’

ಇದೇ ನವೆಂಬರ್ 25 ಮತ್ತು 26 ರಂದು ನಡೆಯಲಿರುವ ಬೆಂಗಳೂರು ಕಂಬಳ ಒಂದಿಲ್ಲೊಂದು ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ವಿವಾದಿತ ವ್ಯಕ್ತಿಗಳನ್ನು ಬೆಂಗಳೂರು ಕಂಬಳಕ್ಕೆ ಆಹ್ವಾನಿಸಿ ‘ಬೆಂಗಳೂರು ಕಂಬಳ ಸಮಿತಿ’ ಸಾರ್ವಜನಿಕ ವಲಯದಲ್ಲಿ ಹೆಚ್ಚು ಟೀಕೆಗೆ ಗುರಿಯಾಗುತ್ತಿದೆ. ಅತ್ಯಾಚಾರ ಆರೋಪಿ ಬ್ರಿಜ್ ಭೂಷಣ್ ಸಿಂಗ್ ನಂತರ ಇದೇ ಆಹ್ವಾನ ಪತ್ರಿಕೆಯಲ್ಲಿ ಇರುವ ಮತ್ತೊಂದು ಹೆಸರು ಕೂಡಾ ವಿವಾದದ ಕೇಂದ್ರಬಿಂದು ಆಗಿದೆ. ಅದು ಬೇರಾರೂ ಅಲ್ಲ, ಶ್ಯಾಮ್ ಕಿಶೋರ್ ಗರಿಕಪಟ್ಟಿ.

ಹಲವು ಜನರಿಗೆ ಶ್ಯಾಮ್ ಕಿಶೋರ್ ಗರಿಕಪಟ್ಟಿ ಅಪರಿಚಿತ ಹೆಸರಾಗಿರಬಹುದು. ಆದರೆ ಭಾರತದ ಕ್ರೈಂ ಹಿನ್ನೆಲೆಯಲ್ಲಿ ಇದೊಂದು ತೀರಾ ಪರಿಚಿತ ಹೆಸರು. ಎಲ್ಲಕ್ಕಿಂತ ಹೆಚ್ಚಾಗಿ ಈತ ದಾವೂದ್ ಇಬ್ರಾಹಿಂ ಗ್ಯಾಂಗ್ ಮೂಲಕವೇ ಗುರುತಿಸಿಕೊಂಡಿರುವ ಸುಪಾರಿ ಶಾರ್ಪ್ ಶೂಟರ್ ಆಗಿದ್ದಾನೆ. ಬೇರಾವುದೇ ಸಮಾಜ ಸೇವೆ ಅಥವಾ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಹೆಸರು ಇಲ್ಲದ ದೇಶದ್ರೋಹಿ ಚಟುವಟಿಕೆಗಳ ಮೂಲಕವೇ ಗುರುತಿಸಿಕೊಂಡು ಬಂದ ಈ ವ್ಯಕ್ತಿಯ ಹೆಸರು ಬೆಂಗಳೂರು ಕಂಬಳದ ಆಹ್ವಾನ ಪತ್ರಿಕೆಯಲ್ಲಿ ಇರುವುದು ‘ಸಮಿತಿ’ಯ ನಡೆಯ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಿರುವ ಉದ್ದೇಶದ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ.

1993ರ ಮುಂಬೈ ಸರಣಿ ಸ್ಫೋಟ ಪ್ರಕರಣ ಮತ್ತು ಜೆಜೆ ಆಸ್ಪತ್ರೆ ಶೂಟೌಟ್ ಸೇರಿದಂತೆ 18 ಪ್ರಮುಖ ಅಪರಾಧಗಳಲ್ಲಿ ಭಾಗಿಯಾಗಿದ್ದ ಶ್ಯಾಮ್ ಕಿಶೋರ್ ಗರಿಕಪಟ್ಟಿ ಪೊಲೀಸರಿಗೆ ಯಾಮಾರಿಸಿ ಈ ಹಿಂದೆ ತಲೆಮರೆಸಿಕೊಂಡಿದ್ದ. ಪುಣೆ ಮೂಲದ ಶ್ಯಾಮ್ ಕಿಶೋರ್ ಗರಿಕಾಪಟ್ಟಿ, ಕಳೆದ ಮೂರು ದಶಕಗಳಿಂದ ಡಿ-ಗ್ಯಾಂಗ್‌ (ದಾವೂದ್ ಇಬ್ರಾಹಿಂ ಗ್ಯಾಂಗ್)ನೊಂದಿಗೆ ಸಂಬಂಧ ಹೊಂದಿದ್ದು, ಮೇಲ್ಕಾಣಿಸಿದ ಅಪರಾಧಗಳ ಹಿನ್ನೆಲೆಯಲ್ಲಿ 2015 ರಲ್ಲಿ ಗೋವಾದಲ್ಲಿ ಪೊಲೀಸರು ಬಂಧಿಸಿದ್ದರು.

ಆ ನಂತರದ ದಿನಗಳಲ್ಲಿ ಈತನ ಪ್ರಕರಣದ ಬಗ್ಗೆ ಹೆಚ್ಚು ಚರ್ಚೆ ಆಗಿರಲಿಲ್ಲ. ಆದರೆ ಜಾಮೀನಿನ ಮೇಲೆ ಹೊರಬಂದ ಶ್ಯಾಮ್ ಕಿಶೋರ್ ಗರಿಕಪಟ್ಟಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮೂಲಗಳ ಪ್ರಕಾರ ಹಿಂದಿನ ಎರಡು ಅವಧಿಯಲ್ಲೂ ದಾವೂದ್ ಗ್ಯಾಂಗ್ ಬಿಜೆಪಿ ಪರ ಕೆಲಸ ಮಾಡಿದೆ ಎನ್ನುವುದಕ್ಕೆ ಇದೇ ಶ್ಯಾಮ್ ಕಿಶೋರ್ ಗರಿಕಪಟ್ಟಿ ಸಾಕ್ಷಿ ಆಗಿದ್ದಾನೆ. ಅಷ್ಟಕ್ಕೂ ಮುಂಬೈ ಸರಣಿ ಸ್ಫೋಟ ಪ್ರಕರಣ ಸೇರಿದಂತೆ ಸುಮಾರು 18 ಅಪರಾಧ ಕೃತ್ಯಗಳಲ್ಲಿ ಭಾಗಿ ಆಗಿದ್ದ ವ್ಯಕ್ತಿ ಬಿಜೆಪಿ ಪರ ಕೆಲಸ ಮಾಡಿದ್ದಾನೆ ಎಂದರೆ ದೇಶದ ಆಡಳಿತ ವ್ಯವಸ್ಥೆ ಯಾರ ಪರ ನಿಂತಿದೆ ಎಂಬ ಅನುಮಾನ ಕಾಡದಿರದು.

2012 ರಲ್ಲಿ ದಾವೂದ್ ಇಬ್ರಾಹಿಂ ವಿರುದ್ಧ ಮಾತನಾಡಿದ್ದ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷದ ಸಿಂಡಿಕೇಟ್, ಬಳಿಕ ಸೈಲೆಂಟ್ ಆಗಿತ್ತು. ಪ್ರತೀ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ದಾವೂದ್ ಹೆಸರು ಮುನ್ನೆಲೆಗೆ ತಂದು ನಂತರ ಸದ್ದಿಲ್ಲದೆ ಸುದ್ದಿ ತಣ್ಣಗಾಗುತ್ತಿತ್ತು. ಮುಖ್ಯವಾಗಿ ಭಾರತದಲ್ಲಿ ಇರುವ ಬಹುತೇಕ ಬಂದರು ಪ್ರದೇಶಗಳು ಈಗಲೂ ದಾವೂದ್ ಇಬ್ರಾಹಿಂ ಗ್ಯಾಂಗ್ ನ ಹಿಡಿತದಲ್ಲಿದೆ ಎನ್ನಲಾಗಿದೆ. ಅಸ್ಥಿತ್ವವೇ ಇಲ್ಲದ ಪಶ್ಚಿಮ ಬಂಗಾಳದ ಬಂದರು ಪ್ರದೇಶಗಳಲ್ಲಿ ಬಿಜೆಪಿ ಲೋಕಸಭೆ ಚುನಾವಣೆ ಗೆಲ್ಲಲು ಸಹಕಾರಿಯಾಗಿದ್ದು ಇದೇ ದಾವೂದ್ ಇಬ್ರಾಹಿಂ ನೆಟ್ವರ್ಕ್ ಎಂದು ಹೇಳಲಾಗಿದೆ.

ಶ್ಯಾಮ್ ಕಿಶೋರ್ ಗರಿಕಪಟ್ಟಿಯ ಹಿನ್ನೆಲೆ ಮತ್ತು ಆತನ ಜೈಲು ಶಿಕ್ಷೆಯ ನಂತರದ ದಿನಗಳಲ್ಲಿ ಆತ ತೊಡಗಿಸಿಕೊಂಡ ರಾಜಕೀಯ ಪಕ್ಷಗಳ ಹಿನ್ನೆಲೆಯಲ್ಲಿ ನೋಡಿದರೆ ಮೇಲೆ ಸೂಚಿಸಲಾದ ಕೆಲವು ಮಾಹಿತಿಗಳ ಬಗ್ಗೆ ಅನುಮಾನ ಮೂಡದಿರದು. ಇಂತಹ ವ್ಯಕ್ತಿಯನ್ನು ಬೆಂಗಳೂರು ಕಂಬಳ ಸಮಿತಿ ಯಾವ ಆಧಾರದಲ್ಲಿ ಆಹ್ವಾನಿಸಿದೆ ಎಂಬುದನ್ನು ಸ್ಪಷ್ಟಪಡಿಸಬೇಕು.

ಸಿದ್ದಿ ಜನಾಂಗದ ಕೋರಿಕೆ ಮೇರೆಗೆ ಅತ್ಯಾಚಾರ ಆರೋಪಿ, ಸಂಸದ ಬ್ರಿಜ್ ಭೂಷಣ್ ಸಿಂಗ್ ರನ್ನು ಆಹ್ವಾನಿಸಿದ್ದು ಎಂಬ ಸಬೂಬು ಕೊಟ್ಟ ಕಂಬಳ ಸಮಿತಿ, ಮುಂಬೈ ಸರಣಿ ಸ್ಪೋಟ ಸೇರಿದಂತೆ 18 ಅಪರಾಧ ಪ್ರಕರಣದಲ್ಲಿ ಗುರುತಿಸಿಕೊಂಡ, ದಾವೂದ್ ಇಬ್ರಾಹಿಂ ಸಹಚರನನ್ನು ಆಹ್ವಾನಿಸಲು ಯಾವ ಮಾನದಂಡ ಬಳಸಿದೆ ಎಂಬುದನ್ನು ಬೆಂಗಳೂರು ಕಂಬಳ ಸಮಿತಿ ಸ್ಪಷ್ಟಪಡಿಸಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು