ದೇಶದಲ್ಲಿ ಜನರು ಇಂಗ್ಲಿಷ್ ಮಾತನಾಡಲು ನಾಚಿಕೊಳ್ಳುವ ದಿನಗಳು ಬರಲಿವೆ. ಅಂತಹ ಸಮಾಜ ರಚನೆಯಾಗುವ ದಿನಗಳು ದೂರದಲ್ಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಭಾರತೀಯ ಭಾಷೆಗಳು ದೇಶದ ಮುಖ್ಯ ಗುರುತು, ಅವುಗಳಿಗೆ ಇಂಗ್ಲಿಷ್ ಬಾಷೆಗಿಂತ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, “ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಇಂಗ್ಲಿಷ್ ಭಾಷೆಯನ್ನು ಗುಲಾಮಗಿರಿಯ ಸಂಕೇತವಾಗಿ ನೋಡಲಾಗುತ್ತಿತ್ತು. ಭಾರತೀಯ ಭಾಷೆಗಳು ನಮ್ಮ ಸಂಸ್ಕೃತಿಯ ರತ್ನಗಳಂತೆ. ನಮ್ಮ ಭಾಷೆಗಳಿಲ್ಲದೆ, ನಾವು ನಿಜವಾದ ಭಾರತೀಯರಾಗಿ ಉಳಿಯುವುದಿಲ್ಲ. ಭಾರತದ ಭಾಷಾ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಗಳನ್ನು ಮಾಡಬೇಕಾಗಿದೆ. ನಮ್ಮ ದೇಶ, ಸಂಸ್ಕೃತಿ ಮತ್ತು ಧರ್ಮಕ್ಕೆ ಯಾವುದೇ ವಿದೇಶಿ ಭಾಷೆ ಸೂಕ್ತವಲ್ಲ ಎಂದು ಅವರು ಹೇಳಿದರು.
ಅಪೂರ್ಣ ವಿದೇಶಿ ಭಾಷೆಗಳನ್ನು ಹೊಂದಿರುವ ಸಂಪೂರ್ಣ ಭಾರತವನ್ನು ನಾವು ಊಹಿಸಲು ಸಾಧ್ಯವಿಲ್ಲ. ಈ ಯುದ್ಧ ಎಷ್ಟು ಸಂಕೀರ್ಣವಾಗಿದೆ ಎನ್ನುವುದು ನನಗೆ ತಿಳಿದಿದೆ. ಆದರೆ ಭಾರತೀಯ ಸಮಾಜವು ಇದರಲ್ಲಿ ಮೇಲುಗೈ ಸಾಧಿಸುತ್ತದೆ ಮತ್ತು ಮತ್ತೊಮ್ಮೆ ಆತ್ಮವಿಶ್ವಾಸದಿಂದ, ನಾವು ನಮ್ಮ ಭಾಷೆಗಳೊಂದಿಗೆ ದೇಶವನ್ನು ಮುನ್ನಡೆಸಬಹುದು ಮತ್ತು ಜಗತ್ತನ್ನು ಮುನ್ನಡೆಸಬಹುದು ಎಂದು ನಾನು ನಂಬುತ್ತೇನೆ” ಎಂದು ಶಾ ಹೇಳಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಯ ನೆಪದಲ್ಲಿ ತ್ರಿಭಾಷಾ ತತ್ವದ ಮೂಲಕ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಹಲವಾರು ರಾಜ್ಯಗಳು ವ್ಯಕ್ತಪಡಿಸಿದ ಕಳವಳಗಳ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಹೇಳಿಕೆಗಳು ಮಹತ್ವ ಪಡೆದಿವೆ.