Tuesday, February 17, 2026

ಸತ್ಯ | ನ್ಯಾಯ |ಧರ್ಮ

ಮ್ಯಾನ್ಮಾರ್ ಭೂಕಂಪ: ಸಾವಿನ ಸಂಖ್ಯೆ 1,700 ಕ್ಕೆ ಏರಿಕೆ ; 30ಕ್ಕೂ ಹೆಚ್ಚು ಮಂದಿ ನಾಪತ್ತೆ

ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದ ಪರಿಣಾಮ ಜನಸಾಮಾನ್ಯರ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಬಗ್ಗೆ ಸ್ಥಳೀಯ ಆಡಳಿತ ಆತಂಕ ವ್ಯಕ್ತಪಡಿಸಿದೆ. ಶೋಧ ಕಾರ್ಯ ನಡೆಸುತ್ತಿರುವ ಶನಿವಾರದ ದಿನದ ಅಂತ್ಯಕ್ಕೆ ಬರೋಬ್ಬರಿ 1,700 ಕ್ಕೂ ಹೆಚ್ಚು ಮಂದಿ ಭೂಕಂಪದ ಹೊಡೆತಕ್ಕೆ ಸಿಲುಕಿ ಜೀವ ತೆತ್ತಿದ್ದಾರೆ ಎಂದು ತಿಳಿದು ಬಂದಿದೆ.

ದೇಶದ ಮಿಲಿಟರಿ ನೇತೃತ್ವದ ಸರ್ಕಾರ ಈವರೆಗೆ 1,700 ಜನರ ಮೃತದೇಹಗಳು ಸಿಕ್ಕ ಬಗ್ಗೆ ಮತ್ತು 3,400 ಕ್ಕೂ ಹೆಚ್ಚು ಜನರು ಗಾಯಗೊಂಡ ಬಗ್ಗೆ ಮತ್ತು 30 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ತಿಳಿಸಿದೆ. ವಿವರವಾದ ಅಂಕಿಅಂಶಗಳನ್ನು ಇನ್ನೂ ಸಂಗ್ರಹಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಶುಕ್ರವಾರ ಮಧ್ಯಾಹ್ನ ಭೂಕಂಪವು ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೇಯಿಂದ ಸ್ವಲ್ಪ ದೂರದಲ್ಲಿ ಕೇಂದ್ರಬಿಂದುವಾಗಿತ್ತು. ಸಾವಿನ ಸಂಖ್ಯೆ ಮತ್ತು ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮ್ಯಾನ್ಮಾರ್ ಮಿಲಿಟರಿ ಸರ್ಕಾರದ ಮುಖ್ಯಸ್ಥ, ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಹೇಳಿದ್ದಾರೆ.

ಮ್ಯಾನ್ಮಾರ್ ಮತ್ತು ಬ್ಯಾಂಕಾಕ್ ಎರಡರಲ್ಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ; ಹಲವಾರು ಶವಗಳು ಮತ್ತು ಗಾಯಗೊಂಡ ಜನರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ಬ್ಯಾಂಕಾಕ್‌ನ ಜನಪ್ರಿಯ ಚತುಚಕ್ ಮಾರುಕಟ್ಟೆಯ ಬಳಿ, ನಿರ್ಮಾಣ ಹಂತದಲ್ಲಿದ್ದ 33 ಅಂತಸ್ತಿನ ಕಟ್ಟಡ ಕುಸಿದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page