Monday, June 17, 2024

ಸತ್ಯ | ನ್ಯಾಯ |ಧರ್ಮ

MCD ಚುನಾವಣೆಯಲ್ಲಿ ಸೋಲು: BL ಸಂತೋಷ್‌ಗೆ ಹಿನ್ನೆಡೆ?

ದೆಹಲಿ ಚುನಾವಣೆಯ ಟಿಕೆಟ್ ಹಂಚಿಕೆಯಿಂದ ಹಲವರು ಅತೃಪ್ತರಾಗಿದ್ದರು ಮತ್ತು ಅವರು ಇದನ್ನು ನಾಯಕತ್ವಕ್ಕೆ ತಿಳಿಸಿದ್ದರೂ ನಿರ್ಲಕ್ಷಿಸಲಾಗಿತ್ತು ಎಂದು ಬಿಜೆಪಿ ಒಳಗಿನ ನಾಯಕರು ಹೇಳುತ್ತಾರೆ. ಆದರೆ ಇನ್ನೊಂದು ಗುಂಪು ಪಕ್ಷವು ಅಲ್ಲಿ ಭಾರೀ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದುದೇ ಸೋಲಿಗೆ ಕಾರಣ ಎಂದು ಪ್ರತಿಪಾದಿಸುತ್ತದೆ

ಹೊಸದಿಲ್ಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆಗಳಲ್ಲಿ ನಿರತರಾಗಿದ್ದ ಇತರ ಹಿರಿಯ ನಾಯಕರ ಅನುಪಸ್ಥಿತಿಯಲ್ಲಿ ಪಕ್ಷದ ಚುನಾವಣಾ ಸಿದ್ಧತೆ ಮತ್ತು ಕಾರ್ಯತಂತ್ರದ ನೇತೃತ್ವ ವಹಿಸಿದ್ದ ಬಿ.ಎಲ್.ಸಂತೋಷ್‌ಗೆ ದಿಲ್ಲಿ ದಿಲ್ಲಿ ನಗರಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸೋಲು ವೈಯಕ್ತಿಕ ಹಿನ್ನಡೆಯಾಗಿದೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ಸಂತೋಷ್ ಸಾಮಾನ್ಯವಾಗಿ ಎಲ್ಲಾ ಚುನಾವಣೆಗಳಲ್ಲಿಯೂ ಭಾಗಿಯಾಗುತ್ತಾರೆ ಆದರೆ ದೆಹಲಿಯಲ್ಲಿ ಪಕ್ಷದ ಪ್ರಚಾರ ಕಾರ್ಯತಂತ್ರದಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿರುವುದು ಇದೇ ಮೊದಲು.

ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ನಿಗೆ ನಡೆದ ಚುನಾವಣೆಯಲ್ಲಿ 15 ವರ್ಷಗಳ ನಂತರ ಬಿಜೆಪಿ ತನ್ನ ಅಧಿಕಾರ ಗದ್ದುಗೆಯನ್ನು ಕಳೆದುಕೊಂಡಿತು, ಈ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಆಪ್) ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಒಟ್ಟು 250 ವಾರ್ಡ್‌ಗಳಲ್ಲಿ 134 ವಾರ್ಡುಗಳನ್ನು ಗೆದ್ದುಕೊಂಡಿತು, ಬಿಜೆಪಿ 104ರಲ್ಲಿ ಗೆದ್ದಿದೆ. ಕಾಂಗ್ರೆಸ್ ಒಂಬತ್ತು ಕಡೆ ಗೆದ್ದರೆ ಮತ್ತು ಸ್ವತಂತ್ರರು ಮೂರು ಕಡೆಗಳಲ್ಲಿ ಗೆದ್ದಿದ್ದಾರೆ.

ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ ಅವರೊಡನೆ ಸಂಘರ್ಷ ಹೊಂದಿದ್ದ ಸಂತೋಷ್‌ ಕೊನೆಗೂ ಅವರನ್ನು ಅಧಿಕಾರದಿಂದ ಇಳಿಸುವಲ್ಲಿ ಯಶಸ್ವಿಯಾಗಿದ್ದರು. ಕೊನೆಗೆ ಪಕ್ಷದೊಳಗೆ ಸಂಘರ್ಷವನ್ನು ತಪ್ಪಿಸುವ ಸಲುವಾಗಿ ಜುಲೈ 2019ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸ್ಥಾನಕ್ಕೆ ನೇಮಿಸಲಾಯಿತು. ಮತ್ತು ಈ ಮೂಲಕ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಗೆ ಹತ್ತಿರವಾಗಿದ್ದರು.

ಸಂತೋಷ್‌ ತಮ್ಮ ಹಿಂದಿನವರಂತಲ್ಲದೆ, ಬಿಜೆಪಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ವ್ಯಕ್ತಿಯಾಗಿ ಸಂತೋಷ್ ಬಹಳ ದೊಡ್ಡ ಹೆಸರನ್ನೇ ಹೊಂದಿದ್ದಾರೆ, ಸಾಮಾಜಿಕ ಮಾಧ್ಯಮದಲ್ಲಿನ ಸಮಸ್ಯೆಗಳ ಬಗ್ಗೆ ಆಕ್ರಮಣಕಾರಿ ನಿಲುವುಗಳನ್ನು ತೆಗೆದುಕೊಳ್ಳುತ್ತಾರೆ – ಇದು ಸಂಘದ ಒಂದು ವಿಭಾಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಫಲಿತಾಂಶಗಳು ಹೊರಬೀಳಲು ಪ್ರಾರಂಭಿಸಿದ ಕೂಡಲೇ, ಸಂತೋಷ್ ಬಿಜೆಪಿಯ ದೆಹಲಿ ಕಚೇರಿಗೆ ಧಾವಿಸಿ, ದೆಹಲಿಯ ಉಸ್ತುವಾರಿ ಬೈಜಯಂತ್ ಪಾಂಡಾ ಸೇರಿದಂತೆ ರಾಜ್ಯ ನಾಯಕರೊಂದಿಗೆ ಮುಚ್ಚಿದ ಬಾಗಿಲಿನ ಹಿಂದೆ ಸಭೆ ನಡೆಸಿದರು. ಸಭಯ ಉದ್ದೇಶ ಮೇಯರ್‌ ಆಯ್ಕೆಯಾಗಿತ್ತು.

ಆಪ್‌ ಕನಿಷ್ಟ ಬಹುಮತ ಹೊಂದಿರುವುದು ಬಿಜೆಪಿಗೆ ಈಗಲೂ ಫಲಿತಾಂಶವನ್ನು ತಮ್ಮತ್ತ ತಿರುಗಿಸಿಕೊಳ್ಳಲು ಸಿಕ್ಕಿರುವ ಅವಕಾಶವಾಗಿದೆ. ಮುನ್ಸಿಪಲ್ ಕೌನ್ಸಿಲರ್‌ಗಳಿಗೆ ಯಾವುದೇ ಪಕ್ಷಾಂತರ ವಿರೋಧಿ ಕಾನೂನುಗಳು ಅನ್ವಯವಾಗದ ಕಾರಣ ಬಿಜೆಪಿ ಈಗಲೂ ಮೇಯರ್‌ ಪಟ್ಟದ ಕನಸಿಗೆ ಎಳ್ಳುನೀರು ಬಿಟ್ಟಿಲ್ಲ.

ಬಿಜೆಪಿಯ ಹಿರಿಯ ನಾಯಕರೊಬ್ಬರ ಪ್ರಕಾರ, ಸಂತೋಷ್ ಸಂಪೂರ್ಣ ಸಿದ್ಧತೆಯನ್ನು ಪರಿಶೀಲಿಸುತ್ತಿದ್ದರು ಮತ್ತು ಚುನಾವಣೆಯ ಪೂರ್ವದಲ್ಲಿ ಅನೇಕ ಸಭೆಗಳನ್ನು ನಡೆಸುತ್ತಿದ್ದರು. “ಸಂತೋಷ್ ಜಿ ದೆಹಲಿ ಚುನಾವಣಾ ವಿಷಯಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು ಮತ್ತು ಪಕ್ಷದ ಕಾರ್ಯತಂತ್ರದಲ್ಲಿನ ಹೆಚ್ಚಿನ ಬದಲಾವಣೆಗಳನ್ನು ಅವರು ಅನುಮೋದಿಸುತ್ತಿದ್ದರು. ಕೇಂದ್ರ ಗೃಹ ಸಚಿವರು ಮತ್ತು ಪಕ್ಷದ ಅಧ್ಯಕ್ಷರು ಕೂಡ ವಿಧಾನಸಭಾ ಚುನಾವಣೆಯಲ್ಲಿ ನಿರತರಾಗಿದ್ದರಿಂದ ಸಂತೋಷ್ ಜಿ ದೆಹಲಿಗೆ ಸಾಕಷ್ಟು ಸಮಯವನ್ನು ನೀಡಿದರು ಮತ್ತು ಚುನಾವಣಾ ಕಾರ್ಯತಂತ್ರವನ್ನು ಸೂಕ್ಷ್ಮವಾಗಿ ಗಮನಿಸಿದರು,” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದರು.

‘ಚುನಾವಣಾ ತಂತ್ರದಲ್ಲಿನ ದೋಷಗಳು’

ThePrint ಜೊತೆ ಮಾತನಾಡಿದ ದೆಹಲಿಯ ಹಲವು ಬಿಜೆಪಿ ನಾಯಕರು ಸಂತೋಷ್ ರೂಪಿಸಿದ ತಂತ್ರಗಳಲ್ಲಿದ್ದ ದೋಷಗಳನ್ನು ಎತ್ತಿ ತೋರಿಸಿದ್ದಾರೆ. ಸಂತೋಷ್ ಸೇರಿದಂತೆ ಕೇಂದ್ರದ ವರಿಷ್ಠರೊಂದಿಗಿನ ಸಭೆಯೊಂದರಲ್ಲಿ ಬಿಜೆಪಿ ಸಂಸದರು ಬಿಜೆಪಿ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಸೂಚಿಸಿದ್ದಾರೆ ಎಂದು ಹಿರಿಯ ನಾಯಕರೊಬ್ಬರು ಹೇಳಿದರು. ”ಕೆಲವರು ಟಿಕೆಟ್ ಹಂಚಿಕೆ ವಿಷಯದಲ್ಲಿ ಅತೃಪ್ತಿ ಹೊಂದಿದ್ದರು ಮತ್ತು ಅವರು ಅದನ್ನು ನಾಯಕತ್ವದ ಗಮನಕ್ಕೆ ತಂದಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ” ಎಂದು ನಾಯಕ ಹೇಳಿದರು.

ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಸೇರಿದಂತೆ ಕೇಜ್ರಿವಾಲ್ ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳ ವೈಫಲ್ಯವನ್ನು ಎತ್ತಿ ತೋರಿಸುವುದರ ಮೇಲೆಯೇ ಇಡೀ ಪ್ರಚಾರ ಕಾರ್ಯತಂತ್ರವನ್ನು ರೂಪಿಸಲಾಗಿತ್ತು ಎಂದು ಪಕ್ಷದ ಮತ್ತೊಬ್ಬ ಪದಾಧಿಕಾರಿ ಹೇಳಿದ್ದಾರೆ.

“ಇದು ಜೈನ್‌ ಅವರ ವ್ಯಾಪ್ತಿಯಲ್ಲಿ ಬರುವ ವಾರ್ಡುಗಳಲ್ಲಿ ಗೆಲ್ಲಲು ಸಹಾಯ ಮಾಡಿತಾದರೂ ನಿರೀಕ್ಷಿತ ಪರಿಣಾಮವನ್ನು ಈ ತಂತ್ರ ಬೀರಿಲ್ಲ.” ಎಂದು ಮುಖಂಡರು ಹೇಳಿದರು. “ಜೈನ್‌ಗೆ ಜೈಲಿನಲ್ಲಿ ಸಿಗುತ್ತಿರುವ ವಿಶೇಷ ಸವಲತ್ತುಗಳ ಕುರಿತಾದ ವಿಡಿಯೋಗಳು ಒಂದಷ್ಟು ಪರಿಣಾಮ ಬೀರಿದೆಯಾದರೂ, ನಾವು ನಮ್ಮದೇ ಆಡಳಿತ ವಿಷಯಗಳ ಮೇಲೆ ಹೆಚ್ಚು ಗಮನಹರಿಸಬೇಕಿತ್ತು” ಎನ್ನುವುದು ಪಕ್ಷದ ಕಾರ್ಯಕಾರಿಯೊಬ್ಬರ ಅಭಿಪ್ರಾಯ.

ಭ್ರಷ್ಟಾಚಾರದ ವಿಷಯವು ಈಗ ಜನರ ಮನಸಿನಲ್ಲಿ ಬೇರೂರಿದ್ದು ಅದರ ಮೇಲೆಯೇ ಹೆಚ್ಚು ಗಮನಹಸರಿಸುವಂತೆ ಸಂತೋಷ್‌ ಮತ್ತು ಇತರ ನಾಯಕರು ರಾಜ್ಯ ಘಟಕಕ್ಕೆ ತಿಳಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇದರ ಜೊತೆಗೆ ಟಿಕೆಟ್‌ ಹಂಚಿಕೆಯಲ್ಲಿ ಎಡವಿದ್ದು ಕೂಡಾ ಬಿಜೆಪಿ ಸೋಲಿಗೆ ಕಾರಣವೆಂದು ಪಕ್ಷದೊಳಗಿನವರು ಹೇಳುತ್ತಾರೆ. ಅಲ್ಲದೆ ಆಪ್‌ ನೀಡುತ್ತಿರುವ ಉಚಿತ ಸವಲತ್ತುಗಳನ್ನು ಸರಿಯಾಗಿ ಕೌಂಟರ್‌ ಮಾಡಲು ಸಾಧ್ಯವಾಗದೆ ಹೋಗಿದ್ದು ಕೂಡಾ ಸೋಲಿಗೆ ಕಾರಣವೆನ್ನಲಾಗುತ್ತಿದೆ.

ಆದರೆ ಸಂತೋಷ್‌ ಅವರ ಬೆಂಬಲಕ್ಕೆ ನಿಂತಿರುವ ಕೆಲವರ ಪ್ರಕಾರ ಪಕ್ಷದ ಸೋಲಿಗೆ ಮುಖ್ಯ ಕಾರಣವೆಂದರೆ ಹದಿನೈದು ವರ್ಷಗಳ ಅಧಿಕಾರ ವಿರೋಧಿ ಅಲೆ.

“ಆರಂಭಿಕ ಸಮೀಕ್ಷೆಗಳಲ್ಲಿ ನಾವು ಆಪ್‌ ಪಕ್ಷಕ್ಕಿಂತಲೂ ಹಿಂದಿದ್ದೆವು. ಕೇಂದ್ರ ನಾಯಕತ್ವದ ದೊಡ್ಡ ಮಟ್ಟದ ಪ್ರಚಾರವು ನಮ್ಮ ಸೋಲಿನ ಅಂತರ ಕಡಿಮೆ ಮಾಡುವಲ್ಲಿ ನಿಜಕ್ಕೂ ಸಹಾಯ ಮಾಡಿದೆ” ಎಂದು ಪಕ್ಷದ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಚುನಾವಣೆಯಲ್ಲಿ ನಿಕಟ ಸ್ಪರ್ಧೆ ಸಾಧ್ಯವಾಯಿತು. 104 ಎನ್ನುವುದು ತೀರಾ ಸಣ್ಣ ಮೊತ್ತವೇನೂ ಅಲ್ಲ. ಅಲ್ಲದೆ 2017ಕ್ಕಿಂತಲೂ ಈ ಬಾರಿ ನಮ್ಮ ಮತ ಹಂಚಿಕೆ ಸುಧಾರಿಸಿದೆ. ಇದು ಬಿಜೆಪಿಯ ಮೂಲ ಮತಗಳು ಹಾಗೇ ಉಳಿದಿರುವುದನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

2017ರ ಎಂಸಿಡಿ ಚುನಾವಣೆಯಲ್ಲಿ ಶೇಕಡಾ 36ರಷ್ಟಿದ್ದ ಬಿಜೆಪಿಯ ಮತ ಹಂಚಿಕೆ ಈ ಬಾರಿ ಶೇಕಡಾ 39ಕ್ಕೆ ಏರಿದೆ.

ಇದಕ್ಕೆ ಪ್ರಧಾನಿ ಮೋದಿಯವರ ಜನಪ್ರಿಯತೆ ಮತ್ತು ಕೇಂದ್ರದ ಯೋಜನೆಗಳೇ ಕಾರಣ ಎಂದು ಬಿಜೆಪಿಯ ಹಲವರು ಹೇಳುತ್ತಾರೆ. ಅವರ ಪ್ರಕಾರ “ಇಡಬ್ಲ್ಯೂಎಸ್ ಫ್ಲಾಟ್‌ಗಳ ಹಂಚಿಕೆ, ಮತ್ತು ಅದರ ಪ್ರಚಾರ ಕೆಲವು ತಿಂಗಳ ಹಿಂದೆಯೇ ಆಗಬೇಕಿತ್ತು. ಅದರ ವಿಳಂಬಕ್ಕೆ ನಾವು ಬೆಲೆ ತೆತ್ತಂತೆ ತೋರುತ್ತಿದೆ. ಹಾಗೆಯೇ ಅದೇ ಸಮಯಕ್ಕೆ ದೊಡ್ಡ ಮಟ್ಟದ ಪ್ರಚಾರವು ನಮ್ಮ ಕೈ ಹಿಡಿದಿದೆ. ಆಪ್‌ ಕ್ಲೀನ್‌ ಸ್ವೀಪ್‌ ಮಾಡುತ್ತದೆ ಎನ್ನುವ ಎಕ್ಸಿಟ್‌ ಪೋಲ್‌ಗಳನ್ನು ನಾವು ಸುಳ್ಳಾಗಿಸಿದ್ದೇವೆ ಎಂದು ಬಿಜೆಪಿಯ ಇನ್ನೊಬ್ಬ ನಾಯಕ ಅಭಿಪ್ರಾಯಪಡುತ್ತಾರೆ.

– ನೀಲಮ್‌ ಪಾಂಡೆ

Related Articles

ಇತ್ತೀಚಿನ ಸುದ್ದಿಗಳು