ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ (ಆಗಸ್ಟ್ 19, 2022) ಬೆಳಿಗ್ಗೆ ದಾಳಿ ನಡೆಸಿದೆ. ಟ್ವಿಟರ್ನಲ್ಲಿ ಸಿಬಿಐ ದಾಳಿಯನ್ನು ಪ್ರಕಟಿಸಿದ ಮನೀಶ್ ಸಿಸೋಡಿಯಾ, ಶೀಘ್ರದಲ್ಲೇ ಸತ್ಯ ಹೊರಬರಲು ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ. ಸಿಬಿಐ ತಂಡ ಬಂದಿದೆ. ನಾವು ಪ್ರಾಮಾಣಿಕರು, ಲಕ್ಷಗಟ್ಟಲೆ ಮಕ್ಕಳ ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ. ದುರದೃಷ್ಟಕರವೆಂದರೆ ಈ ದೇಶದಲ್ಲಿ, ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ತೊಂದರೆಯಾಗುತ್ತದೆ, ಅದಕ್ಕಾಗಿಯೇ ನಮ್ಮ ದೇಶವು ಇನ್ನೂ ನಂಬರ್ 1 ಆಗಿಲ್ಲ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸುದ್ದಿ-ಸಂಸ್ಥೆ ಎಎನ್ಐ, ಸಿಸೋಡಿಯಾ ಅವರ ನಿವಾಸ ಸೇರಿದಂತೆ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ-ಎನ್ಸಿಆರ್ನ 21 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸುತ್ತಿದೆ ಎಂದು ತಿಳಿಸಿದೆ.