Sunday, June 16, 2024

ಸತ್ಯ | ನ್ಯಾಯ |ಧರ್ಮ

ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರನ್ನು ಪರಿಷತ್ ಗೆ ಆಯ್ಕೆ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ

ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಂತರ ಖಾಲಿ ಉಳಿದ ವಿಧಾನ ಪರಿಷತ್ ಚುನಾವಣೆಯ ಕಾವು ರಂಗೇರಿದೆ. ಈ ನಡುವೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತಿನ ನಡುವೆ ಕಾಂಗ್ರೆಸ್ ಪಕ್ಷದಿಂದ ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರನ್ನು ಆಯ್ಕೆ ಮಾಡುವಂತೆ ದನಿ ಕೇಳಿ ಬಂದಿದೆ.

ಕಾಂಗ್ರೆಸ್ ಪಕ್ಷದಲ್ಲಿ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಹಂತದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೆಸರು ಮುನ್ನೆಲೆಗೆ ಬಂದಿದೆ. ಸೋಮವಾರ ಸಂಜೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ದಿನೇಶ್ ಅಮಿನ್ ಮಟ್ಟು ಅವರ ಬಗ್ಗೆ ಹೆಚ್ಚಿನದಾಗಿ ದನಿ ಕೇಳಿ ಬರುತ್ತಿದೆ.

‘ಪರಿಷತ್ ನಲ್ಲಿ ದನಿ ಇಲ್ಲದವರ ದನಿಯಾಗಿ ಕೇವಲ ಬಿಲ್ಲವರು ಮಾತ್ರವಲ್ಲದೇ ದಲಿತ, ದಮನಿತ ಅಲ್ಪಸಂಖ್ಯಾತ, ಶೋಷಿತರ ದನಿಯಾಗಬಲ್ಲ ದಕ್ಷಿಣ ಕನ್ನಡ ಭಾಗದಿಂದ ಏಕೈಕ ಆಯ್ಕೆ ದಿನೇಶ್ ಅಮಿನ್ ಮಟ್ಟು’ ಎಂಬಂತೆ ಪೋಸ್ಟರ್ ಗಳು ಓಡಾಡುತ್ತಿವೆ.

ಸುಮಾರು ಮೂರರಿಂದ ನಾಲ್ಕು ದಶಕಗಳ ಕಾಲ ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ದಿನೇಶ್ ಅಮಿನ್ ಮಟ್ಟು ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರೂ ಆಗಿರುವ ದಿನೇಶ್ ಅಮಿನ್ ಹೊಸ ತಲೆಮಾರಿನ ಅನೇಕ ಪತ್ರಕರ್ತರಿಗೆ ಮಾದರಿ ಎನ್ನಿಸಿಕೊಂಡವರು.

ಅಷ್ಟೆ ಅಲ್ಲದೇ ನಾಡಿನ ಜನಪರ ಚಳುವಳಿಗಳಲ್ಲಿ ವಿಶೇಷ ಪಾತ್ರ ವಹಿಸಿರುವ ದಿನೇಶ್ ಅವಕಾಶ ಸಿಕ್ಕಾಗೆಲ್ಲ ದಲಿತ ದಮನಿತರ ಪರವಾಗಿ ದನಿ ಎತ್ತಿದವರು‌. ಕರಾವಳಿ ಮಾತ್ರವಲ್ಲದೇ, ನಾಡಿನ ಹಲವು ಕಡೆ ತಮ್ಮ ಅಭಿಮಾನಿಗಳನ್ನು ಹೊಂದಿರುವ ದಿನೇಶ್ ಅವರ ಪರವಾಗಿ ಪರಿಷತ್ ಗೆ ಆಯ್ಕೆ ಮಾಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಾಯ ಹೆಚ್ಚಾಗುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು