Sunday, June 23, 2024

ಸತ್ಯ | ನ್ಯಾಯ |ಧರ್ಮ

ಪ್ರಜಾತಂತ್ರ : ಸಂಸತ್ತಿನೊಳಗೂ ಅತಂತ್ರ!

ಸಂಸತ್‍ನ ಇತಿಹಾಸದಲ್ಲಿ ಮೊದಲ ಬಾರಿಗೆ ಆಡಳಿತ ಪಕ್ಷವೇ ವಾರದಿಂದ ಕಲಾಪ ನಡೆಯದಂತೆ ನೋಡಿಕೊಂಡಿದೆ! ಸಂಸತ್ ನಲ್ಲಿ ಅದಾನಿ ಹಗರಣ ಚರ್ಚೆಯಾಗುವುದು ಬಿಜೆಪಿಗೆ ಇಷ್ಟವಿಲ್ಲ. ಹಾಗಾಗಿಯೇ ಸದನ ಕಲಾಪ ನಡೆಯದಂತೆ ನೋಡಿಕೊಳ್ಳಲಾಗುತ್ತಿದೆ. ಬಿಜೆಪಿ ಸರಕಾರವು ಸಂಸತ್ತಿನ ಘನತೆಯನ್ನು ಹೇಗೆಲ್ಲ ವಿರೂಪ ಗೊಳಿಸಿದೆ ಎಂಬುದರ ಝಲಕ್‌ ಶ್ರೀನಿ ಕಾಲಂ ನಲ್ಲಿ.

ಮಾರ್ಚ್ 13, 2023. ತಿಂಗಳ ಕಾಲದ ಬಿಡುವಿನ ಬಳಿಕ, ಏರುಹಗಲಿನ 11 ಗಂಟೆಗೆ ಮತ್ತೆ ಶುರುವಾಗುತ್ತದೆ ದೇಶದ ಸಂಸತ್ ನ ಬಜೆಟ್ ಅಧಿವೇಶನ. ಕಲಾಪ ನಡೆಯುವುದು ಕೇವಲ ಹದಿಮೂರು ನಿಮಿಷ. ಕಾರಣ- ಲಂಡನ್ ನಲ್ಲಿ ರಾಹುಲ್ ಗಾಂಧಿ ಆಡಿದ ಮಾತುಗಳಿಗೆ ಕ್ಷಮೆ ಕೇಳಬೇಕು ಎಂದು ಆಳುವ ಪಕ್ಷದವರೇ ಕೋಲಾಹಲ ಎಬ್ಬಿಸುತ್ತಾರೆ; ಕಲಾಪ ಮುಂದುವರಿಯಲು ಅವಕಾಶವನ್ನೇ ನೀಡುವುದಿಲ್ಲ.

ಮಾರ್ಚ್ 14. ಈವತ್ತು ಹಿಂದಿನ ದಿನದಷ್ಟು ಕಾಲವೂ ಕಲಾಪ ನಡೆಯುವುದಿಲ್ಲ; ನಡೆಯುವುದು ಕೇವಲ ಮೂರು ನಿಮಿಷ. ಮಾರ್ಚ್ 15 ರಂದು ಕೇವಲ ಎರಡು ನಿಮಿಷ ಮತ್ತು ಮಾರ್ಚ್ 16 ರಂದು ಕೇವಲ ಎರಡು ನಿಮಿಷ. ಮಾರ್ಚ್ 17 ರಂದು ಕೂಡಾ ಗದ್ದಲ ಮುಂದುವರಿದ ಕಾರಣ ಕಲಾಪವನ್ನು ಮುಂದಿನ ಸೋಮವಾರಕ್ಕೆ ಅಂದರೆ ಮಾರ್ಚ್ 20 ಕ್ಕೆ ಮುಂದೂಡಲಾಗುತ್ತದೆ.

ಈವತ್ತು ಮಾರ್ಚ್ 20. ಈವತ್ತು ಕೂಡಾ ಕಲಾಪವನ್ನು ನಡೆಯಗೊಟ್ಟಿಲ್ಲ. ವಿಪಕ್ಷದವರಲ್ಲ, ಆಳುವ ಪಕ್ಷದವರೇ! ನಿಮಗೆಲ್ಲ ಗೊತ್ತಿರಬಹುದು, ಒಂದು  ನಿಮಿಷಗಳ ಸಂಸತ್ ಅಧಿವೇಶನಕ್ಕೆ ಸುಮಾರು 2.5 ಲಕ್ಷ ರುಪಾಯಿ ವೆಚ್ಚ ತಗಲುತ್ತದೆ. ಅಂದರೆ ಒಂದು ದಿನಕ್ಕೆ ಎಷ್ಟು ಮತ್ತು ದಿನಗಟ್ಟಲೆ ಕಲಾಪ ನಷ್ಟವಾದರೆ ದೇಶಕ್ಕೆ ಆಗುವ ನಷ್ಟ ಎಷ್ಟು ಎನ್ನುವುದನ್ನು ನೀವೇ ಲೆಕ್ಕ ಹಾಕಿ.

ಅದೆಲ್ಲ ಸರಿ, ಸಂಸತ್ ಕಲಾಪ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವುದು ಯಾರ ಹೊಣೆ? ಎಲ್ಲ ಸಂಸದರದ್ದೂ ಎಂದು ಒಟ್ಟಾರೆಯಾಗಿ ಹೇಳಬಹುದು. ಆದರೆ ಬಹಳ ಮುಖ್ಯ ಹೊಣೆ ಸರಕಾರದ್ದು ಮತ್ತು ವಿಶೇಷವಾಗಿ ಲೋಕಸಭಾ ಅಧ್ಯಕ್ಷರದ್ದು. ಲೋಕಸಭಾ ಅಧ್ಯಕ್ಷರಿಗೆ ಅಪಾರ ಅಧಿಕಾರವಿರುತ್ತದೆ. ಕಲಾಪಕ್ಕೆ ಅಡ್ಡಿ ಪಡಿಸುವವರನ್ನು ಕರೆದು ಮಾತಾಡಿಸಿ ಮನವೊಲಿಸಬಹುದು. ಆಗಲೂ ಕೇಳದಿದ್ದರೆ ಅವರನ್ನು ಹೊರಹಾಕಬಹುದು. ಕಲಾಪ ನಡೆಸಲೇ ಬೇಕೆಂದಿದ್ದರೆ ಇಂತಹ ನೂರಾರು ದಾರಿಗಳಿರುತ್ತವೆ. ಕಲಾಪ ಮುಂದೂಡುವುದು ಕಟ್ಟಕಡೆಯ ದಾರಿಯಾಗಬೇಕೇ ಹೊರತು, ಮೊಟ್ಟ ಮೊದಲ ದಾರಿಯಾಗಬಾರದು.

ಇದು ಆಗಬೇಕಾದರೆ ಒಂದು ಇಚ್ಛಾಶಕ್ತಿ ಇರಬೇಕು. ಆದರೆ ಕಳೆದ ಸುಮಾರು ಒಂಬತ್ತು ವರ್ಷಗಳಿಂದ ಸಂಸತ್ ಕಲಾಪಗಳು ನಡೆಯುತ್ತಿರುವ ರೀತಿ ನೋಡಿದರೆ ಯಾರಿಗೂ ಸಂಸದೀಯ ಕಲಾಪದ ಮೇಲಾಗಲಿ, ಭಾರತದ ಪ್ರಜಾತಂತ್ರದ ಮೇಲಾಗಲಿ ಭರವಸೆ ಮೂಡದು. ಲೋಕಸಭೆಯ ಸಭಾಪತಿ ಎನಿಸಿಕೊಂಡವರು ಒಮ್ಮೆ ಆ ಕುರ್ಚಿಯ ಮೇಲೆ ಕುಳಿತ ಮೇಲೆ ಅವರು ಯಾವ ಪಕ್ಷದ ಸದಸ್ಯರೂ ಆಗಿರಬಾರದು. ಅವರು ತಟಸ್ಥರಾಗಿರಬೇಕು ಮತ್ತು ಎಲ್ಲರನ್ನೂ ಸಮಾನವಾಗಿ ನೋಡಬೇಕು. ಸಂಸತ್ ನ ಒಳಗೆ ಅರೋಗ್ಯಕರ ಚರ್ಚೆ ನಡೆಯಲು ಎಲ್ಲ ಅವಕಾಶವನ್ನೂ ಮಾಡಿಕೊಡಬೇಕು.

ಮಾದರಿ ಲೋಕಸಭಾಧ‍್ಯಕ್ಷ ಸೋಮನಾಥ ಚಟರ್ಜಿ

ಇಂತಹ ಒಬ್ಬ ಆದರ್ಶ ಲೋಕಸಭಾಪತಿಯ ಉಲ್ಲೇಖವಾದಾಗಲೆಲ್ಲ ನೆನಪಾಗುವುದು ಸೋಮನಾಥ ಚಟರ್ಜಿ. ಅವರು 2004-2009 ರ ನಡುವಿನ ತಮ್ಮ ಅಧಿಕಾರಾವಧಿಯಲ್ಲಿ ಆ ಸ್ಥಾನಕ್ಕೆ ಘನತೆ ತಂದುಕೊಟ್ಟವರು. ಎಡಪಕ್ಷದಿಂದ ಬಂದ ಅವರು ಲೋಕಸಭಾಪತಿಯಾಗಿದ್ದಾಗ ಆ ಪಕ್ಷದಿಂದ ಎಲ್ಲ ರೀತಿಯಲ್ಲಿಯೂ ಅಂತರ ಕಾಯ್ದುಕೊಂಡರು. ಎಲ್ಲಿಯ ತನಕ, ಎಂದರೆ ಭಾರತ ಅಮೆರಿಕ ಅಣು ಒಪ್ಪಂದಕ್ಕೆ ಭಾರತದ ಎಡಪಕ್ಷಗಳು ತೀವ್ರ ವಿರುದ್ಧವಾಗಿದ್ದು ಅವು ಸರಕಾರದ ವಿರುದ್ಧವೇ ನಿಂತವು. ಇದೇ ಕಾರಣಕ್ಕೆ ಸೋಮನಾಥ ಚಟರ್ಜಿ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಅವರ ಪಕ್ಷ ಆಗ್ರಹಿಸಿತು. ಆದರೆ ಚಟರ್ಜಿ ರಾಜಿನಾಮೆ ನೀಡಲಿಲ್ಲ. ಮಾತ್ರವಲ್ಲ, ತಟಸ್ಥವಾಗಿದ್ದು ಅಧಿಕಾರಾವಧಿ ಮುಗಿಯುವ ವರೆಗೂ ನಿರ್ಲಿಪ್ತರಾಗಿ ಮತ್ತು ಪ್ರಾಮಾಣಿಕವಾಗಿ ತನ್ನ ಕೆಲಸ ಮುಂದುವರಿಸಿಕೊಂಡು ಹೋದರು. ಇದೇ ಕಾರಣಕ್ಕೆ ಪಕ್ಷದಿಂದ ಅವರು ಹೊರಹಾಕಲ್ಪಟ್ಟರು.

ಸಂಸತ್ತು ಎಂದರೆ ದೇಶದ ಬಗ್ಗೆ, ದೇಶದ ಕಾನೂನುಗಳ ಬಗ್ಗೆ ಆರೋಗ್ಯಕರ ಮತ್ತು ಗಂಭೀರ ಚರ್ಚೆಯ ತಾಣವಾಗಿದ್ದ ಆ ದಿನಗಳೆಲ್ಲ ಈಗ ಎಲ್ಲಿಹೋದವು? ಸಂಸದೀಯ ಪ್ರಜಾತಂತ್ರದಲ್ಲಿ ವಿಪಕ್ಷಗಳು ಕೋಲಾಹಲ ಎಬ್ಬಿಸುವುದು, ಕಲಾಪಕ್ಕೆ ತಡೆ ಒಡ್ಡುವುದು ಸಹಜ. ಆದರೆ ಈಗ ಆಡಳಿತಪಕ್ಷದವರೇ ಗದ್ದಲ ಎಬ್ಬಿಸಿ ದಿನಗಟ್ಟಲೆ ಕಲಾಪ ನಡೆಯದಂತೆ ನೋಡಿಕೊಳ್ಳುವುದನ್ನು ನೋಡುತ್ತಿದ್ದೇವೆ. ಆಡಳಿತ ಪಕ್ಷದವರನ್ನು ನಿಯಂತ್ರಿಸಬೇಕಾದ ಸಭಾಪತಿ ಓಂ ಬಿರ್ಲಾ ತಾನು ಈಗಲೂ ಬಿಜೆಪಿ ಕಾರ್ಯಕರ್ತ ಎಂಬಂತೆ ನಡೆದುಕೊಳ್ಳುತ್ತಾ, ಆಡಳಿತ ಪಕ್ಷದ ಪರ ನಿಂತುಕೊಂಡು ವಿಪಕ್ಷದವರಿಗೆ ಮಾತನಾಡಲು ಅವಕಾಶವನ್ನೇ ಕೊಡುತ್ತಿಲ್ಲ! ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ರಾಜನಾಥ್ ಸಿಂಗ್ ಮತ್ತು ಪೀಯುಷ್ ಗೋಯಲ್ ಗೆ ದೀರ್ಘ ಭಾಷಣ ಮಾಡಲು ಅವಕಾಶ ನೀಡುವ ಸಭಾಪತಿಗಳು ಇದಕ್ಕೆ ಪ್ರತಿಕ್ರಿಯಿಸಲು ವಿಪಕ್ಷಗಳಿಗೆ ಅವಕಾಶವೇ ನೀಡದೆ ಕಲಾಪ ಮುಂದೂಡುತ್ತಿದ್ದಾರೆ!

ಸಂಸದೀಯ ವ್ಯವಹಾರಗಳ ಮಂತ್ರಿಯ ಹೊಣೆ

ಸಂಸತ್ ನ ಸುಗಮ ಕಲಾಪಗಳ ಹೊಣೆ ಸಭಾಪತಿ ಮಾತ್ರವಲ್ಲ, ಸಂಸದೀಯ ವ್ಯವಹಾರಗಳ ಮಂತ್ರಿಯದ್ದು ಕೂಡಾ. ಕಲಾಪ ಸಮಿತಿಯನ್ನು ಕರೆದು ಕಲಾಪದ ಕಾರ್ಯಸೂಚಿಯನ್ನು ನಿಗದಿಪಡಿಸುವುದು ಮತ್ತು ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಹೊಣೆ ಈ ಮಂತ್ರಿಯದ್ದು. ಇದು ಆಗಬೇಕಾದರೆ ಸಂಸದೀಯ ಮಂತ್ರಿ ವಿಪಕ್ಷದವರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿರಬೇಕು.

ಈಗ ಪರಿಸ್ಥಿತಿ ಎಷ್ಟು ದ್ವೇಷಮಯವಾಗಿದೆ ಎಂದರೆ, ಆಡಳಿತ ಪಕ್ಷದವರು ಮತ್ತು ವಿಪಕ್ಷದವರು ಮುಖಕ್ಕೆ ಮುಖ ಕೊಟ್ಟು ಮಾತಾಡದಂತಾಗಿದೆ. ವಿಪಕ್ಷದ ಪ್ರಮುಖ ನಾಯಕ ರಾಹುಲ್ ಗಾಂಧಿಯನ್ನು ವೈಯಕ್ತಿಕ ನಿಂದನೆ ಮಾಡುವ ಮಂತ್ರಿ ಪ್ರಹ್ಲಾದ ಜೋಷಿಯವರು ರಾಹುಲ್ ಗಾಂಧಿಯೊಂದಿಗೆ ಆತ್ಮೀಯವಾಗಿ ಮಾತನಾಡುವುದು ಹೇಗೆ ಸಾಧ್ಯ? ಪ್ರಹ್ಲಾದ ಜೋಷಿಯವರು ಹಿಂದೆ ಸಂಸದೀಯ ವ್ಯವಹಾರಗಳ ಮಂತ್ರಿಗಳಾಗಿದ್ದ ಪ್ರಮೋದ್ ಮಹಾಜನ್, ಗುಲಾಂ ನಬಿ ಆಜಾದ್ ಮೊದಲಾದವರ ನಡೆವಳಿಕೆಯಿಂದ ಕಲಿಯಬೇಕಾದುದು ಬಹಳವಿದೆ.

ಇನ್ನು ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ಧನಕರ್ ಅವರ ವರ್ತನೆಗಳು ಮುಂದಿನ ದಿನಗಳಲ್ಲಿ ರಾಜ್ಯಸಭೆಯ ಘನತೆಯನ್ನು ಇನ್ನಷ್ಟು ಪಾತಾಳಕ್ಕೆ ತಳ್ಳುವುದರಲ್ಲಿ ಅನುಮಾನವಿಲ್ಲ. ತನ್ನ ಸ್ಥಾನದ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ಹೊರಗಡೆ ಮಾತುಗಳನ್ನಾಡುತ್ತಾ, ಅವರು ನಡೆದುಕೊಳ್ಳುತ್ತಿರುವ ರೀತಿ ಆತಂಕಕಾರಿಯಾದುದು. ಸಂವಿಧಾನವೇ ಪರಮೋಚ್ಚವಾದ ದೇಶದಲ್ಲಿ, ‘ಸಂಸತ್ತೇ ಪರಮೋಚ್ಚ’ ಎಂಬ ಅಪಾಯಕಾರಿ ಹೇಳಿಕೆ ನೀಡಿದ್ದು ಮತ್ತು ರಾಹುಲ್ ಗಾಂಧಿಯ ಹೇಳಿಕೆಗೆ ಯಾವುದೋ ಸಾರ್ವಜನಿಕ ಸಭೆಯಲ್ಲಿ ಔಚಿತ್ಯವಲ್ಲದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದು ಇದೇ ಧನಕರ್.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿಯೇ ಲಂಡನ್ ನಲ್ಲಿ ರಾಹುಲ್ ಗಾಂಧಿ ‘ಭಾರತದ ಪ್ರಜಾತಂತ್ರ ಅಪಾಯದಲ್ಲಿದೆ’ ಎಂದುದು. ಅವರ ಮಾತುಗಳನ್ನು ತಿರುಚಿದ ಬಿಜೆಪಿ ಮತ್ತು ಅವರ ಬೆಂಬಲಿಗರು ರಾಹುಲ್ ಗಾಂಧಿ ದೇಶವನ್ನು ಅವಮಾನಿಸಿದ್ದಾರೆ, ಬೇರೆ ದೇಶಗಳು ಮಧ‍್ಯಪ್ರವೇಶಿಸಲು ಕರೆ ನೀಡಿದ್ದಾರೆ ಎಂದೆಲ್ಲ ಹೇಳಿ ಅವರು ಕ್ಷಮೆ ಯಾಚಿಸಲು ಆಗ್ರಹಿಸಿದವು. ಇದೇ ಕಾರಣಕ್ಕೆ ಸಂಸತ್‍ ನ ಇತಿಹಾಸದಲ್ಲಿ ಮೊದಲಬಾರಿಗೆ ಆಡಳಿತಪಕ್ಷವೇ ವಾರ ಕಾಲದಿಂದ ಕಲಾಪ ನಡೆಯದಂತೆ ನೋಡಿಕೊಂಡಿದೆ!

ಇಷ್ಟಕ್ಕೂ ರಾಹುಲ್ ಗಾಂಧಿ ಲಂಡನ್ ನಲ್ಲಿ ಏನು ಹೇಳಿದರು? ಅವರ ಭಾಷಣದ ಧ್ವನಿಮುದ್ರಣ ಎಲ್ಲೆಡೆ ಲಭ್ಯವಿದೆ. ‘ಭಾರತದಲ್ಲಿ ಸರಕಾರಿ ಏಜನ್ಸಿಗಳು, ಮಾಧ‍್ಯಮ, ನ್ಯಾಯಾಂಗ ಎಲ್ಲವನ್ನೂ ಕೈವಶ ಮಾಡಿಕೊಳ್ಳಲಾಗುತ್ತಿದೆ, ಭಿನ್ನ ದನಿಗೆ ಅವಕಾಶವಿಲ್ಲವಾಗಿದೆ, ಸಂಸತ್ ನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ, ಮಾತನಾಡುವಾಗಲೂ ಮೈಕ್ ಆಫ್ ಮಾಡಲಾಗುತ್ತಿದೆ, ಇಷ್ಟಾಗಿಯೂ ಇವೆಲ್ಲ ನಮ್ಮ ಒಳಗಿನ ಸಮಸ್ಯೆ, ಅದನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ’ ಎಂದು ಅವರು ಹೇಳಿದರು. ಇದರಲ್ಲಿ ದೇಶವನ್ನು ಅವಮಾನಿಸುವ ಮಾತು ಎಲ್ಲಿದೆ?

ಪ್ರಜಾತಂತ್ರ ಅಪಾಯದಲ್ಲಿರುವುದು ನಿಜವಲ್ಲವೇ?

ರಾಹುಲ್ ಏನನ್ನು ಹೇಳಿದರೋ ಅದರಲ್ಲಿ ಹೊಸ ವಿಷಯವೇನೂ ಇಲ್ಲ. ದೇಶದಲ್ಲಿ ಈಗ ಭಿನ್ನ ದನಿಯನ್ನು ಹತ್ತಿಕ್ಕುವ ಫ್ಯಾಸಿಸ್ಟ್ ಮನಸ್ಥಿತಿಯನ್ನು ಮತ್ತು ಇದಕ್ಕೆ ಪ್ರಭುತ್ವದ ಸಂಪೂರ್ಣ ಕೃಪಾಶೀರ್ವಾದ ಇರುವುದನ್ನು ನಾವು ನೋಡುತ್ತಲೇ ಇಲ್ಲವೇ? ಸ್ಟಾಂಡ್ ಅಪ್ ಕಾಮಿಡಿಯನ್ ಗಳೂ ತಮ್ಮ ಕಾರ್ಯಕ್ರಮ ನಡೆಸದಂತಾಗಿದೆ. ಸರಕಾರ ಎಂದರೆ ದೇಶ ಎಂದಾಗಿದೆ! ಸರಕಾರವನ್ನು ಪ್ರಶ್ನಿಸುವುದು ಎಂದರೆ ದೇಶವನ್ನು ಪ್ರಶ್ನಿಸುವುದು ಎಂದಾಗಿದೆ! ಪ್ರಧಾನಿಯನ್ನೂ ದೇಶಕ್ಕೆ ಸಮಾನ ಮಾಡಲಾಗಿದೆ! ಹಾಗಾಗಿ ಪ್ರಧಾನಿಯನ್ನು, ಸರಕಾರವನ್ನು ಟೀಕಿಸುವುದು ಎಂದರೆ ದೇಶದ್ರೋಹದ ಕೆಲಸಕ್ಕೆ ಸಮಾನಾಗಿದೆ! ಇದೇ ಕಾರಣದಿಂದ ಅನೇಕ ವಿದ್ಯಾರ್ಥಿಗಳು, ವಿದ್ವಾಂಸರು, ಪತ್ರಕರ್ತರು, ಮಾನವಹಕ್ಕುಗಳ ಹೋರಾಟಗಾರರು ಕೋರ್ಟ್ ಕೇಸುಗಳನ್ನು ಎದುರಿಸುತ್ತಿದ್ದಾರೆ, ಕೆಲವರು ಜಾಮೀನಿನಲ್ಲಿದ್ದಾರೆ, ಇನ್ನು ಕೆಲವರು ಈಗಲೂ ಜೈಲಿನಲ್ಲಿದ್ದಾರೆ.

ಸರಕಾರದ ಏಜನ್ಸಿಗಳಾದ ಸಿಬಿಐ, ಐಟಿ, ಈಡಿಗಳೆಲ್ಲ ವಿರೋಧದ ದನಿಗಳ ಮೇಲೆ ಮುಗಿಬಿದ್ದಿವೆ. ‘ಗೌತಮ ದಾಸ್ ಮೋದಿ’ ಎಂದು ಬಾಯಿ ತಪ್ಪಿ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಕ್ಕೆ ಅವರನ್ನು ವಿಮಾನದಿಂದ ಇಳಿಸಲಾಗುತ್ತದೆ, ಅವರನ್ನು ಬಂಧಿಸಲು ಅಸ್ಸಾಂ ನಿಂದ ಪೊಲೀಸರು ಧಾವಿಸಿ ಬರುತ್ತಾರೆ. ‘ಭಾರತ್ ಜೋಡೋ’ ಸಮಯದಲ್ಲಿ ಹೇಳಿದ ಒಂದು ವಿಷಯ ಹಿಡಿದುಕೊಂಡು ಯಾತ್ರೆ ಮುಗಿದ ನಲವತ್ತೈದು ದಿನಗಳ ಬಳಿಕ ಪೊಲೀಸರು ರಾಹುಲ್ ಗಾಂಧಿಯ ಮನೆಗೆ ಲಗ್ಗೆ ಹಾಕುತ್ತಾರೆ!

ಹೋಗಲಿ, ಇವೆಲ್ಲ ಹೊರಗಡೆ ಅಂದುಕೊಳ್ಳೋಣ. ಸಂಸತ್ ನ ಒಳಗಡೆ ಏನಾಗುತ್ತಿದೆ? ಲೋಕಸಭಾ ಅಧ್ಯಕ್ಷರ ಜತೆಯಲ್ಲಿ ಉಪಾಧ್ಯಕ್ಷರೂ ಇರುವುದು ಕ್ರಮ ಮತ್ತು ಇದನ್ನು ವಿಪಕ್ಷಗಳಿಗೆ ಬಿಟ್ಟುಕೊಡುವುದು ಒಂದು ಪ್ರಜಾತಂತ್ರೀಯ ಸತ್ ಸಂಪ್ರದಾಯ. ಆದರೆ ಕಳೆದ ನಾಲ್ಕು ವರ್ಷಗಳಿಂದ ಆ ಉಪಾಧ್ಯಕ್ಷ ಸ್ಥಾನ ಖಾಲಿ ಬಿದ್ದಿದೆ. ಚರ್ಚೆಯೇ ಇಲ್ಲದೆ ಮಸೂದೆಗಳನ್ನು ಪಾಸು ಮಾಡಲಾಗುತ್ತಿದೆ. ಮಸೂದೆಗಳನ್ನು ಸದನ ಸಮಿತಿಗೆ ಕಳುಹಿಸುವ ಕ್ರಮವನ್ನು ಬಹುತೇಕ  ಕೈಬಿಡಲಾಗಿದೆ.

ಅದಾನಿ ಹಗರಣ ಹಲವು ಲಕ್ಷಕೋಟಿಗಳದ್ದು ಮತ್ತು ದೇಶದ ಇಮೇಜಿಗೆ ಮಸಿ ಬಳಿದ ಹಗರಣ. ಅದರ ಬಗ್ಗೆ ರಾಹುಲ್ ಗಾಂಧಿಯವರು ಸದನದಲ್ಲಿ ಪ್ರಸ್ತಾಪಿಸಿದರೆ ಅವರಿಗೆ ಮಾತನಾಡಲು ಬಿಡುವುದಿಲ್ಲ. ಅವರ ಮಾತುಗಳನ್ನು ಕಡತದಿಂದ ಕಿತ್ತು ಹಾಕಲಾಗುತ್ತದೆ. ಮೈಕ್ ಬಂದ್ ಮಾಡಲಾಗುತ್ತದೆ. ಕ್ಯಾಮರಾ ಬೇರೆ ಕಡೆ ತಿರುಗಿಸಲಾಗುತ್ತದೆ. ಆಡಿಯೇ ಇರದ ಮಾತಿಗೆ ಮಾಡಿಯೇ ಇರದ ತಪ್ಪಿಗೆ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು, ಅವರ ಸದಸ್ಯತನವನ್ನೇ ರದ್ದು ಮಾಡಬೇಕು ಎಂದೆಲ್ಲ ಆಗ್ರಹಿಸಲಾಗುತ್ತದೆ.

ಸಂಸತ್ತು ಇರುವುದು ಚರ್ಚೆಗೆ. ಇಡೀ ದೇಶವನ್ನು ಪ್ರತಿನಿಧಿಸುವ ಪ್ರತಿನಿಧಿಗಳಿರುವ ಅದು ಇಡೀ ದೇಶದ ಪ್ರತಿಬಿಂಬದಂತಿರಬೇಕು. ಪ್ರಜಾತಂತ್ರದ ದೇಗುಲ ಎನ್ನಲಾಗುವ ಸಂಸತ್ ನ ಒಳಗಡೆಯೇ ಪ್ರಜಾತಾಂತ್ರಿಕ ನಡೆವಳಿಕೆ ಮತ್ತು ಸಂಪ್ರದಾಯಗಳಿಗೆ ಅವಕಾಶವಿಲ್ಲವಾದರೆ ಇನ್ನು ಹೊರಗಡೆ ಹೇಗೆ ಇದ್ದೀತು? ಈಗ ಹಲವು ಸಾವಿರ ಕೋಟಿ ವ್ಯಯಿಸಿ ಹೊಸದೊಂದು ಪಾರ್ಲಿಮೆಂಟ್ ಕಟ್ಟಡ ತಲೆ ಎತ್ತುತ್ತಿದೆ. ಪ್ರಜಾತಂತ್ರವನ್ನೇ ನಾಶ ಮಾಡಿದ ಮೇಲೆ ಹೊಸ ಪಾರ್ಲಿಮೆಂಟ್ ಕಟ್ಟಡ ಕಟ್ಟಿ ಏನು ಪ್ರಯೋಜನ? ಅದು ದೇವರಿ‍ಲ್ಲದ ಗುಡಿಯಂತಾಗುವುದಿಲ್ಲವೇ?

ಈಗ ಮೂಲ ವಿಷಯಕ್ಕೆ ಬರೋಣ. ಸಂಸತ್ ನಲ್ಲಿ ಅದಾನಿ ಹಗರಣ ಚರ್ಚೆಯಾಗುವುದು ಬಿಜೆಪಿಗೆ ಇಷ್ಟವಿಲ್ಲ. ಹಾಗಾಗಿಯೇ ಸದನ ಕಲಾಪ ನಡೆಯದಂತೆ ನೋಡಿಕೊಳ್ಳಲಾಗುತ್ತಿದೆ ಎನ್ನುವುದು ಗುಟ್ಟಿನ ಸಂಗತಿಯೇನಲ್ಲ. ಆದರೆ, ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನಿರಾಕರಿಸುವ ಮೂಲಕ, ರಾಹುಲ್ ಗಾಂಧಿ ‘ದೇಶದ ಪ್ರಜಾತಂತ್ರ ಅಪಾಯದಲ್ಲಿದೆ’ ಎಂದು ಹೇಳಿದ್ದನ್ನು ಬಿಜೆಪಿಯವರು ಪರೋಕ್ಷವಾಗಿ ಸಾಬೀತು ಪಡಿಸಿದಂತೆಯೇ ಆಗಲಿಲ್ಲವೇ?

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

Related Articles

ಇತ್ತೀಚಿನ ಸುದ್ದಿಗಳು