Saturday, June 15, 2024

ಸತ್ಯ | ನ್ಯಾಯ |ಧರ್ಮ

ಡಿನೋಟಿಫಿಕೇಶನ್‌ ಆರೋಪ: ಬಿಜೆಪಿ ಮುಖಂಡನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಡಿನೋಟಿಫಿಕೇಷನ್‌ ಆರೋಪದ ಮೇಲೆ ಲೋಕಯುಕ್ತಕ್ಕೆ ದೂರು ನೀಡಿದ್ದ ಬಿಜೆಪಿ ಮುಖಂಡ ಎನ್‌.ಆರ್.‌ ರಮೇಶ್‌ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಲಾಲ್‌ಬಾಗ್ ಸಿದ್ಧಾಪುರದ ಜಮೀನುಗಳ ಕುರಿತ ಸುಳ್ಳಿನ ಕಂತೆಗಳ ಮೂಲಕ ನನ್ನ ಚಾರಿತ್ರ್ಯಹರಣ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿಯ ಮರಿನಾಯಕನ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ರಾಜ್ಯ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಭೂ ಹಗರಣಗಳನ್ನು ಬಯಲಿಗೆಳೆಯುವ ಪ್ರಾಮಾಣಿಕವಾದ ಉದ್ದೇಶವನ್ನು ರಾಜ್ಯ ಬಿಜೆಪಿ ಸರ್ಕಾರ ಹೊಂದಿದ್ದರೆ, 2008 ರಿಂದ ಇದುವರೆಗೆ ಬೆಂಗಳೂರು ಮತ್ತು ರಾಜ್ಯದ ಬೇರೆ ನಗರಗಳಲ್ಲಿನ ಜಮೀನು ಉಪಯೋಗ ಬದಲಾವಣೆಯ ಪ್ರತಿ ಪ್ರಕರಣದ ಮಾಹಿತಿಯನ್ನೂ ಬಿಡುಗಡೆ ಮಾಡಬೇಕು ಎಂದರು.

ಲಾಲ್‌ಬಾಗ್ ಸಿದ್ಧಾಪುರ ಗ್ರಾಮದ ಸರ್ವೆನಂ 27/1, 28/4, 5,6 ರಲ್ಲಿನ 2 ಎಕರೆ 39.5 ಗುಂಟೆ ಜಮೀನನ್ನು ನಾನು ಡಿನೋಟಿಫಿಕೇಷನ್/ರೀಡೂ ಮಾಡಿದ್ದೇನೆ ಎಂಬ ಬಿಜೆಪಿ ಅವರ ಆರೋಪ ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತವಾಗಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ನನ್ನ ವಿರುದ್ಧದ ಆರೋಪದಲ್ಲಿ ಉಲ್ಲೇಖಿಸಿರುವ ಜಮೀನುಗಳನ್ನು ಭೂ ಸ್ವಾಧೀನ ಪಡಿಸಿಕೊಂಡಿದ್ದು 1948 ರಲ್ಲಿ. ಆ ಜಮೀನುಗಳನ್ನು ಭೂಸ್ವಾಧೀನದಿಂದ ಕೈ ಬಿಟ್ಟು ‘ದಿ ಮೈಸೂರು ಗೆಜೆಟ್’ ನಲ್ಲಿ ಪ್ರಕಟವಾಗಿದ್ದು 11/2/1954 ಮತ್ತು 28/12/1954ರಲ್ಲಿ. ಇದರಲ್ಲಿ ನಮ್ಮ ಸರ್ಕಾರದ ಪಾತ್ರ ಏನಿದೆ? ಎಂದು ಪ್ರಶ್ನಿಸಿದ್ದಾರೆ.

1954 ರಲ್ಲಿ ಡಿನೋಟಿಫಿಕೇಷನ್ ಮಾಡಿದ್ದ ಈ ಜಮೀನುಗಳನ್ನು 2007 ರಲ್ಲಿ ನಗರದ ಮಾಸ್ಟರ್ ಪ್ಲಾನ್ ಮಾಡುವಾಗ ಭೂ ಸ್ವಾಧೀನ ಮಾಡಿಕೊಂಡು ಭೂಮಾಲೀಕರಿಗೆ ಪರಿಹಾರ ಕೊಡದೆ ಪಾರ್ಕ್‌ಗೆಂದು ಗುರುತಿಸಲಾಗಿದೆ. ಆಗದರೆ 2007ರಲ್ಲಿ ಯಾವ ಪಕ್ಷದ ಸರ್ಕಾರ ಇತ್ತು?, ಸದರಿ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡು ಪಾರ್ಕ್ ಮಾಡದೆ ವಸತಿ ಉದ್ದೇಶಕ್ಕಾಗಿ ಪರಿವರ್ತನೆ ಮಾಡಬಹುದೆಂದು 18/01/2013 ರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳ ಲಾಗಿತ್ತು. ಆಗ ಯಾವ ಪಕ್ಷದ ಸರ್ಕಾರ ಇತ್ತು? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕಾಮಗ್ರೆಸ್‌ ಸರ್ಕಾರವು ಈ ಜಮೀನುಗಳಿಗೆ ನೀಡಿರುವ ಭೂ ಉಪಯೋಗವನ್ನು ಬದಲಾಯಿಸಿ ಕೊಟ್ಟಿದ್ದರ ಬಗ್ಗೆ ಕೆಲವರು ಅಪಸ್ವರ ಎತ್ತಿದ ಕಾರಣಕ್ಕೆ ಮತ್ತೊಮ್ಮೆ ಮರುಪರಿಶೀಲಿಸಿ ದಿನಾಂಕ 13/3/2015 ರಂದು ವಸತಿ ಉದ್ದೇಶಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲಾಗಿತ್ತು. ಸರ್ಕಾರ ಭೂಬಳಕೆ ಬದಲಾವಣೆಯನ್ನು ಹಿಂಪಡೆದ ಕಾರಣಕ್ಕೆ ಸಲ್ಲಿಸಲಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಭೂಬಳಕೆ ಬದಲಾವಣೆಯ ತೀರ್ಮಾನವನ್ನು ರದ್ದು ಮಾಡಿತ್ತು. ಇದಕ್ಕೆ ಸಂಬಂಧಿಸಿದ ರಿಟ್ ಮೇಲ್ಮನವಿಯನ್ನೂ ವಜಾ ಮಾಡಿತ್ತು. ಈಗ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಇದರಲ್ಲಿ ನನ್ನ ಪಾತ್ರ ಏನಿದೆ? ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ 3 ತಿಂಗಳಾಯಿತು. ಆದರೆ ಇದುವರೆಗೂ ಕೂಡ ಸಿ.ಡಿ.ಪಿ ಗೆ ಅನುಮೋದನೆ ನೀಡಿಲ್ಲ. ಸಿ.ಡಿ.ಪಿ ಯನ್ನು ಅಂತಿಮಗೊಳಿಸದ ಕಾರಣ ನಗರದ ಬೆಳವಣಿಗೆ ಅಡ್ಡಾದಿಡ್ಡಿಯಾಗಿದೆ. ಆದ್ದರಿಂದ ಕೂಡಲೆ ಸಿ.ಡಿ.ಪಿ ಯನ್ನು ಅಂತಿಮಗೊಳಿಸಿ ಗೆಜೆಟ್ ಹೊರಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು