Thursday, June 20, 2024

ಸತ್ಯ | ನ್ಯಾಯ |ಧರ್ಮ

ಮುದುಡಿದ ಕಮಲ ; ಅರಳಿದ ಕೈ : ಯತ್ನಾಳ್ ಗೆ ಮುಖಭಂಗ

ಭಾರಿ ನಾಟಕೀಯತೆಯ ನಡುವೆ ಮಂಗಳವಾರ ನಡೆದ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ವಿಜಯಪುರ ನಗರ ಪಾಲಿಕೆಯಲ್ಲಿ ಏಕೈಕ ದೊಡ್ಡ ಪಕ್ಷವಾಗದಿದ್ದರೂ ಕಾಂಗ್ರೆಸ್ ತನ್ನ ಹಿಡಿತ ಸಾಧಿಸಿದೆ.

ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಬಿಜೆಪಿ ಚುನಾವಣಾಧಿಕಾರಿ ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಚುನಾವಣೆ ಸಭೆಯಿಂದ ಹೊರ ನಡೆದ ಘಟನೆ ಜರುಗಿತು. ಆ ನಂತರ ಬಿಜೆಪಿ ಒಳಗೇ ರಾಜಕೀಯ ಜಿದ್ದಾಜಿದ್ದಿಗೆ ಬಿದ್ದ ಪರಿಣಾಮ ಅಗತ್ಯ ಸಂಖ್ಯಾಬಲ ಇದ್ದರೂ ಬಿಜೆಪಿ ಸೋಲುಣ್ಣಬೇಕಾಯಿತು.

ಜ.9 ರಂದು ಮೇಯರ್-ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸುವ ಕುರಿತು ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತರು 2023 ಡಿಸೆಂಬರ್ 28 ರಂದು ಅಧಿಸೂಚನೆ ಹೊರಡಿಸಿದ್ದರು. ಪರಿಣಾಮ ಮಂಗಳವಾರ ಮೇಯರ್-ಉಪ ಮೇಯರ್ ಸ್ಥಾನಕ್ಕೆ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಚುನಾವಣೆ ಪ್ರಕ್ರಿಯೆ ನಡೆಸಿದರು.

ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, 35 ಸದಸ್ಯರಲ್ಲಿ ಪಂಗಡದ ಏಕೈಕ ಸದಸ್ಯ ಕಾಂಗ್ರೆಸ್‍ನ ದಿನೇಶ ಹಳ್ಳಿ ಉಮೇದುವಾರಿಕೆ ಸಲ್ಲಿಸಿ ಅವಿರೋಧ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ. 34 ರ ಸದಸ್ಯೆ ಮೆಹಜಬಿನ್ ಹೊರ್ತಿ ಹಾಗೂ ಬಿಜೆಪಿ ಪಕ್ಷದಿಂದ ವಾರ್ಡ್ ನಂ.12 ರಿಂದ ಗೆದ್ದಿರುವ ರಶ್ಮಿ ಕೋರಿ ಉಮೇದುವಾರಿಕೆ ಸಲ್ಲಿಸಿದ್ದರು.

ಬಿಜೆಪಿ ಸದಸ್ಯರು ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಲೇ ಮೇಯರ್-ಉಪ ಮೇಯರ್ ಚುನಾವಣೆ ಪ್ರಕ್ರಿಯೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಧಿಕ್ಕಾರ ಕೂಗುತ್ತಾ ಸಭೆಯಿಂದ ಹೊರ ನಡೆದರು. ಸಭೆ ಬಹಿಷ್ಕರಿಸಿ ಹೊರ ಬಂದ ಬಿಜೆಪಿ ಸದಸ್ಯರಲ್ಲಿ ಕೆಲವರು ಚುನಾವಣಾಧಿಕಾರಿಕಾರಿ ವಿರುದ್ಧ ಧಿಕ್ಕಾರ ಕೂಗುವ ಜತೆಗೆ ಕಪ್ಪು ಪಟ್ಟಿಯನ್ನೂ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆಯಲ್ಲಿ ಬಿಜೆಪಿ 17 ಸದಸ್ಯರ ಬಲ ಹೊಂದಿದ್ದರೂ ಓರ್ವ ಸದಸ್ಯರ ನಿಧನದಿಂದ 16ಕ್ಕೆ ಇಳಿದಿದ್ದು, ಶಾಸಕ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಅವರ ಮತಗಳು ಸೇರಿದಂತೆ 18 ಮತಗಳನ್ನು ಮಾತ್ರ ಹೊಂದಿತ್ತು. ಪಾಲಿಕೆಯ 10 ಸದಸ್ಯರು, ಇಬ್ಬರು ಎಮ್ಮೆಲ್ಸಿ, ಇಬ್ಬರು ಎಂಎಲ್‍ಎ ಹೊಂದಿದ್ದ ಕಾಂಗ್ರೆಸ್ 14 ಮತಗಳನ್ನು ಹೊಂದಿದ್ದರೂ ಐವರು ಪಕ್ಷೇತರರು, ಎಂಐಎಂ ಪಕ್ಷದ ಇಬ್ಬರು ಹಾಗೂ ಓರ್ವ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಸಧ್ಯ ರಾಜ್ಯ ರಾಜಕಾರಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಸ್ವಪಕ್ಷೀಯರೇ ಮಸಲತ್ತು ನಡೆಸಿದ್ದು, ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿನ ಬಿಜೆಪಿ ಸೋಲು ಈಗ ಯತ್ನಾಳ್ ರನ್ನು ಮತ್ತೆ ಕುಗ್ಗುವಂತೆ ಮಾಡಿದೆ. ಇತ್ತ ಇಂತಹ ನಾಟಕೀಯ ಬೆಳವಣಿಗೆ ಬಗ್ಗೆ ಅರಿವಿದ್ದ ಕಾಂಗ್ರೆಸ್ ಗೆ ಎಲ್ಲವೂ ನಿರೀಕ್ಷಿತ ಎಂಬಂತೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು