Friday, June 14, 2024

ಸತ್ಯ | ನ್ಯಾಯ |ಧರ್ಮ

ದೇವರ ಮೂರ್ತಿ

ಇಲ್ಲೊಬ್ಬ ಶಿಲ್ಪಿ ಮೌನದಲಿ ಧ್ಯಾನಿಸಿದ ಆಕಾರವನ್ನು
ಪುರೋಹಿತರು ಹೊಗೆ ಹಾಕಿ ಸ್ಥಾಪಿಸಿದರು;
ಗರ್ಭಪ್ರಾಣ ತೆಗೆದು ಗುಡಿಯಲ್ಲಿ……
ಯಾರು ಮಕ್ಕಳನ್ನು ಗುಡಿಗೊಯ್ಯಬೇಡಿ
ಅಲ್ಲಿ ಕಟ್ಟುವ ಯಂತ್ರ ಧರ್ಮದ ಜೈಲು

ಕತ್ತಲೆಯಷ್ಟೇ ಊಟವಿಲ್ಲಿ….
ಕಡೆದವನು ಎಲ್ಲಿಯೂ ಇಲ್ಲ
ಇತಿಹಾಸ ಹೊತ್ತಗೆಯಲ್ಲಿ ಅಂಕವಾಗಿ ಮರೆತುಹೋದ…
ಬರೆದವನು ಕಾಲಸವೆಸಿ ಎಲ್ಲವನ್ನೂ ತಿರುಚಿದ…..
ಏಕತೆಯ ಹೆಸರಲ್ಲಿ ನಿತ್ಯ ಹತ್ಯೆ
ಶಾಂತಿ ಅಹಿಂಸೆಯ ಮೇಲೆ
ಅಸ್ತ್ರಗಳು ಮಲಗಿವೆ…

ನಿದ್ರಿಸುತ್ತಿಲ್ಲ ಬಲಿಗಾಗಿ ಕಾದಿವೆ..
ಆಗಲೇ ಬಸವ ಬೆವರಿದ್ದು
ಬೆತ್ತ ನಮ್ಮಲ್ಲಿ ಮಕ್ಕಳನ್ನು ಮುಟ್ಟಿ ಹರಸಿ ಅಮ್ಮನನ್ನು 
ದೇವರು ನನ್ನವನು ಎಂದು ಬೀಗುವಂತೆ ಮಾಡಿದ್ದು….
ಅಪ್ಪ, ಅಜ್ಜ, ಅಜ್ಜಿ ಮಂದೆ ಕಾಯಿಸಿದ ಜಾಗ ಕೆಂಪಗೆ ಕಾದಿದೆ,
ಹೇಗೆ ಸುಟ್ಟುಕೊಳ್ಳುವುದು  ಒಣಗಲಿ ಈ ಪ್ರಾಂಗಣ…

ಇರುವಂತಿಗೆ, ಕಣಗಿಲೆ, ಕರ್ಬಿಪಷ್ಟಿ, ಪ್ರಭೆ ಹೊತ್ತು ಗುಡಿಗೆ ಬಂದವು
ಇಂಥಾ ಕೋಮಲದಸ್ಮಿತೆ 
ಮಗುವಿನಂತೆ ಕಾಣಲಿಲ್ಲವೇ?
ಧರ್ಮದೇಟು, ಜಾತಿಯೇಟು
ದಂಧೆಯಾದ ಕಾಲದಿಂದಲೂ
ದೇಶ ಸಾಯುತ್ತಲೇ ಇದೆ.
ಮನೆಮನೆಯ ಮೇಲೆ ರಕ್ತಧ್ವಜ ಬೇಕಾ? ಶಂಖ ಸದ್ದು ಬೇಡ
ಮಕ್ಕಳ ಕೇಕೆ ಕಿವಿಗಿಳಿಯಲಿ…

ಮಗುವನ್ನೇ ಬಡಿದ ಕೀಳು ಪ್ರಜ್ಞೆಗಳಿಗೆ “ಮಗು”
ಮತ್ತೊಂದು ಹೂವೆಂದು ಗೊತ್ತಾಗಿಸುವುದು ಹೇಗೆ???
ಜಾತಿ ಹಗ್ಗದಲ್ಲಿ ನೇಣು ಬಿಗಿದುಕೊಂಡರೂ ವಿಷದಾಹಿಗಳು ಸತ್ತಿಲ್ಲ!!!
ಸ್ಥಾವರದ ಮುಂದೆ ಜೀವಹತ್ಯೆ…
ಶರಣರ ಬಿಕ್ಕುವಿಕೆ ನಿಂತಿಲ್ಲ

ಛಲ, ಅಭಿಮಾನ ಕುಲವಾದ ಪಂಪ,
ಕುಲದ ಗಲಭೆ ನಿರಾಕರಿಸಿದ ದಾಸರು

ಆತ್ಮದ ಬೆಳಕಿಗೆ ಹೊರನಡೆದ ಸಿದ್ಧ ಶಕ್ತಿಗಳನ್ನು
ಅದೃಶ್ಯ ಮಾಡಿದವರು ಯಾರು?
ಗುಡಿಯ ಅಂಗಳದ ಹೂಗಳಲ್ಲಿ ರಕುತದ ಗುರುತುಗಳು……
ಗಾಂಧಿ ಬಸವ ತಥಾಗತನೂ ಬೇಕು ಈಗ.

ಜಂಗಮರಿಲ್ಲದೆ ಎಲ್ಲವೂ
ಸೋಲುತ್ತಿವೆ ಇಲ್ಲಿ
ದೇವರ ಮೂರ್ತಿಗೆ
ಆರ್ಕಿಯಾಲಜಿಯವರು ಸುಂದರವೆಂದು ಬಹುಮಾನ ಕೊಟ್ಟರಂತೆ!
ಅಂದಿನಿಂದಲೂ
ಕೊಲೆ ನಿಂತಿಲ್ಲ….
ಕಟ್ಟಿದ ಧ್ವಜಗಳ ಕಡೆಗೆ
ಗಾಳಿ ಸಾಗದಿರಲಿ…..
ದೇಶ ಮಹಾಮಾನವತೆಯಾಗಿ
ನಮ್ಮೆಲ್ಲರೊಳಗೆ ಹಿಗ್ಗಲಿ…

ಗೀತಾ ಎನ್ ಸ್ವಾಮಿ
ತಿಪಟೂರಿನ ಕಲ್ಪತರು ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ.

Related Articles

ಇತ್ತೀಚಿನ ಸುದ್ದಿಗಳು