Home ವಿಶೇಷ ‘ದೇವರಾಜ ಅರಸು’ ಎಂಬ  ತಬ್ಬಲಿ ಜಾತಿಗಳ ತಂದೆ

‘ದೇವರಾಜ ಅರಸು’ ಎಂಬ  ತಬ್ಬಲಿ ಜಾತಿಗಳ ತಂದೆ

0

ದೇವರಾಜ ಅರಸು ಅವರ 107ನೆಯ ಜನ್ಮದಿನದ  ಈ ಸಂದರ್ಭದಲ್ಲಿ ಅರಸು ಅವರು ಕಟ್ಟಿಕೊಟ್ಟ ಬಹುಜನ ರಾಜಕಾರಣವನ್ನು , ಸೌಹಾರ್ದ ಕರ್ನಾಟಕವನ್ನು ಉಳಿಸಿಕೊಳ್ಳುವ , ಮುನ್ನಡೆಸುವ ದೊಡ್ಡ  ಸವಾಲು ಮತ್ತು ಹೊಣೆಗಾರಿಕೆ ಈ ನಾಡಿನ  ದಲಿತ, ದಮನಿತ  ಮತೀಯ ಅಲ್ಪಸಂಖ್ಯಾತ  ಸಮುದಾಯಗಳ ಮುಂದಿದೆ. ಅದನ್ನು ಸಾಕಾರಗೊಳಿಸಿದ್ದೇ  ಅದರೆ ಅದುವೇ ದೇವರಾಜ ಅರಸು ಎಂಬ ತಬ್ಬಲಿ ಜಾತಿಗಳ ತಂದೆಗೆ ಸಲ್ಲಿಸಬಹುದಾದ ನಿಜ  ಗೌರವ ಎನ್ನುತ್ತಾ ತಮ್ಮ ಭಾವಲೋಕಕ್ಕೆ ದಕ್ಕಿದ   ಅರಸು ಅವರ ರಾಜಕೀಯ ಬದುಕಿನ ಈಜುಗಾರಿಕೆಯನ್ನು ಸೊಗಸಾಗಿ  ಕಟ್ಟಿಕೊಟ್ಟಿದ್ದಾರೆ ಎನ್ ರವಿಕುಮಾರ್.

ಬಲಾಢ್ಯ ಜಾತಿಗಳ ವಿಕೃತ ಹರಿವಿನ ಉಸುಕಿನಲ್ಲಿ ಹುದುಗಿ ಹೋದ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಬಗೆದು  ಈ ನಾಡಿನ ಬಹುಸಂಖ್ಯಾತ ದುರ್ಬಲ ಜಾತಿಗಳ ನ್ಯಾಯದ ಹಕ್ಕು ಮತ್ತು ಅನ್ನವನ್ನಾಗಿ ಮಾಡಿದವರು ದೇವರಾಜ ಅರಸು. ಅರಸು ಬಲಾಢ್ಯ ಜಾತಿಗಳ ಜಾತಿಕೋರರ ಕಣ್ಣಿಗೆ ಕೆಂಡದುಂಡೆಯಂತೆ ಕಂಡರೆ, ಇದೇ ಅರಸು ಅನಾಥ ಜಾತಿಗಳ ಪಾಲಿಗೆ ಅಂತಃಕರಣ ತುಂಬಿದ ತಂದೆಯಂತೆ ಸದಾ ಕಾಣುತ್ತಾರೆ. ಇಂತಹ  ತಂದೆಯ ಕುರಿತು ಮಾತಾಡುವುದು ಎಂದರೆ ಈ ನಾಡಿನ ತಬ್ಬಲಿ ಜಾತಿಗಳ ಹಸಿವು, ಅವಮಾನ, ರಾಜಕಾರಣ, ಸಾಮಾಜಿಕ ಸಂಘರ್ಷಗಳ ಬದುಕಿನ ಕುರಿತು ಮಾತಾಡಿದಂತೆಯೇ.

1915 ಆಗಸ್ಟ್ 20 ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಳ್ಳಿಯಲ್ಲಿ ಜನಿಸಿದ ದೇವರಾಜ ಅರಸು(ತಂದೆ ದೇವರಾಜ ಅರಸು, ತಾಯಿ ದೇವಿರಮ್ಮಣ್ಣಿ) ಅಂತಹ ಸ್ಥಿತಿವಂತರಲ್ಲದ ಅಪ್ಪಟ ರೈತಾಪಿ ಕುಟುಂಬದವರು. 1941 ರಿಂದ ಆರಂಭಗೊಂಡ ಅರಸು ಅವರ ರಾಜಕೀಯ ಹೋರಾಟದ ಬದುಕು ನಿರಂತರ ಸಂಘರ್ಷಗಳಿಂದಲೇ 1982 ರಂದು ಅಕಾಲಿಕವಾಗಿ ಕೊನೆಗೊಂಡಿತು (1942 ಜೂನ್ 6). ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಈ ನಾಡನ್ನು ಆಳಿದ ಅರಸು ಅವರು ಕರ್ನಾಟಕ ರಾಜಕೀಯ ಚರಿತ್ರೆ ಮತ್ತು ವರ್ತಮಾನ ಎಂದೆಂದಿಗೂ ಕೃತಜ್ಞತೆಯಿಂದ ನೆನಪಿಸಿಕೊಳ್ಳುವ, ಮಾದರಿ ಆದರ್ಶ  ರಾಜಕಾರಣ ಅಳವಡಿಸಿಕೊಳ್ಳಬಹುದಾದ  ಹತ್ತಾರು ಜನಕಲ್ಯಾಣ ಯೋಜನೆಗಳನ್ನು ಬಿಟ್ಟು ಹೋಗಿದ್ದಾರೆ. ಸಮಸಮಾಜದ ದಾರಿಯನ್ನು  ಹಾಕಿಕೊಟ್ಟಿದ್ದಾರೆ.

ಕರ್ನಾಟಕದ ರಾಜಕಾರಣ ಬಲಾಢ್ಯ ಜಾತಿಗಳ ಹಿಡಿತದಲ್ಲಿ ವಿಜೃಂಭಿಸುತ್ತಿದ್ದ ಕಾಲಘಟ್ಟದಲ್ಲಿ ಸಾಮಾನ್ಯ ರೈತ ಕುಟುಂಬದಿಂದ ಬಂದ ಸಣ್ಣ ಜಾತಿಯೊಂದರ ದೇವರಾಜ ಅರಸು ಅವರು ಈ ರಾಜ್ಯದ ರಾಜಕಾರಣದ ಮುಂಚೂಣಿ ನಾಯಕನಾಗಿ ಬೆಳೆದು ನಿಂತದ್ದು ಅಷ್ಟು ಸುಲಭದ ಮಾತಲ್ಲ. ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಆ ದಿನಗಳು ನಾಡಿನ ಅನಾಥ ಜನಜಾತಿಗಳ ಪಾಲಿಗೆ ಸುವರ್ಣ ಯುಗವೇ ಆಗಿತ್ತು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಸೂತ್ರವನ್ನು ಅತ್ಯಂತ ಕರಾರುವಕ್ಕಾಗಿ ಅನುಷ್ಠಾನಗೊಳಿಸುವಲ್ಲಿ ಅರಸು ತೋರಿದ ದಾರ್ಷ್ಟ್ಯತೆ ಗೆ ಸರಿಸಾಟಿ ಇಲ್ಲ. ಈ ಸಮಾಜ ಜಾತಿ, ಧರ್ಮದ ಕೇಡಿನಲ್ಲಿ  ತನ್ನಂತೆ ಇರುವ ಜನಸಮುದಾಯವೊಂದರಲ್ಲಿ ಮಲಹೊರುವಂತಹ ಅಸಹ್ಯ ನರಕವನ್ನು ಸೃಷ್ಟಿಸಿತ್ತು. ಅರಸು  1977 ರಲ್ಲಿ “ಮಲಹೊರುವ ಪದ್ಧತಿ ನಿಷೇಧ ಶಾಸನ” ತರುವ ಮೂಲಕ ದಲಿತರ ಬದುಕನ್ನು  ಜಾತಿ ನಿರ್ಮಿತ ಕ್ರೌರ್ಯದಿಂದ ಬಿಡುಗಡೆಗೊಳಿಸಿ  ಮಹಾ ವಿಮೋಚಕನಂತೆ ಕಂಡರು.

ಬಸವಲಿಂಗಪ್ಪ ಎಂಬ ಇನ್ನೋರ್ವ ಜನನಾಯಕ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಅರಸು ಅವರ ಬೆನ್ನಿಗೆ ನಿಂತಿದ್ದರು. 1972 ರಿಂದ 1977 ರವರೆಗಿನ ಕರ್ನಾಟಕ ಕಂಡ ಅರಸು ಯುಗ ಸಾಮಾಜಿಕ ಪರಿವರ್ತನೆ ಯುಗವಾಗಿ ಜನದನಿ ಮೊಳಗಿಸಿತ್ತು. ಹಿಂದುಳಿದ ವರ್ಗಗಳಿಗೆ ಉದ್ಯೋಗ, ಶೈಕ್ಷಣಿಕ ಮೀಸಲಾತಿಗೆ ಹಾವನೂರು ಆಯೋಗ ರಚಿಸುವ ಮೂಲಕ ಹಿಂದುಳಿದ ಜಾತಿಗಳಲ್ಲಿ ಹಕ್ಕಿನ ಎಚ್ಚರವನ್ನು ಬಿತ್ತಿದವರು ಅರಸು. ‘ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಯೋಜನೆ’, ‘ಜೀತಪದ್ಧತಿ ನಿಷೇಧ ಕಾಯ್ದೆ’, ಶ್ರೀಮಂತರ ಸಾಲದ ಶೂಲದಲ್ಲಿ ಸಿಲುಕಿ ನರಳುತ್ತಿದ್ದ ಬಡವರ ಸಾಲ ಮನ್ನಕ್ಕಾಗಿ ‘ಋಣ ಪರಿಹಾರ ಕಾಯ್ದೆ’, ‘ಕನಿಷ್ಟ ಕೂಲಿ ನಿಗದಿ ಕಾಯ್ದೆ’, ‘ ಭಾಗ್ಯಜ್ಯೋತಿ ಯೋಜನೆ’, ಇಂದಿರಾ ಗಾಂಧಿ ಅವರ ಮಹತ್ವಾಕಾಂಕ್ಷೆಯ 20 ಅಂಶಗಳ ಕಾರ್ಯಕ್ರಮಗಳನ್ನು ಬದ್ಧತೆಯಿಂದ ಅನುಷ್ಠಾನ , ‘ಆಹಾರ ದಂಗೆ’ ಯನ್ನು ಹತ್ತಿಕ್ಕಿದ್ದಲ್ಲದೆ ಅದಕ್ಕೆ ಕಾರಣವಾದ ನಿರುದ್ಯೋಗ ಸಮಸ್ಯೆಯ ನಿವಾರಣೆಗೆ  ‘ಸ್ಟೈಫಂಡ್ ಯೋಜನೆ’ ಹೀಗೆ.. ಒಂದು ನಾಡಿನ ಬಹುಜನರ ಏಳಿಗೆಗಾಗಿ ಹತ್ತಾರು ಯೋಜನೆಗಳನ್ನು ತಪಸ್ಸಿನಂತೆ ಜಾರಿಗೊಳಿಸಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ.

ಜನರಿಗೆ ಶಿಕ್ಷಣ ಮತ್ತು ಭೂಮಿಯ ಹಕ್ಕನ್ನು ಕೊಟ್ಟಾಗ ಮಾತ್ರ ಅವರ ಮತ್ತು ಈ ನಾಡಿನ ಅಭ್ಯುದಯ ಮತ್ತು ಸಾಮಾಜಿಕ ಅಸಮಾನತೆ ನಿವಾರಣೆ ಸಾಧ್ಯ ಎಂಬ ಸತ್ಯವನ್ನು ಮನಗಂಡ ಅರಸು ಅವರು ತಂದ ಕ್ರಾಂತಿಕಾರಿ ಕಾಯ್ದೆಯೆಂದರೆ ಅದು ‘ಭೂ ಸುಧಾರಣ ಕಾಯ್ದೆ’ (1974). ಇದುವರೆಗೂ ಇದ್ದ ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವಿನ ಸಾಮಾಜಿಕ ಸಂಘರ್ಷವನ್ನು ಆರ್ಥಿಕ ಸಂಘರ್ಷಕ್ಕೆ ತಂದು ನಿಲ್ಲಿಸಿದರು ಅರಸು. ಇದು ಭೂಮಾಲೀಕರೇ ಆಗಿದ್ದ ಬಲಾಢ್ಯ ಜಾತಿಗಳನ್ನು ಕೆರಳಿಸಿದರೂ ಅದಾವುದಕ್ಕೂ ಸೊಪ್ಪು ಹಾಕದೆ ನಿರ್ಗತಿಕ ಜಾತಿಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಬಲವನ್ನು ತುಂಬುವ ಕೆಲಸವನ್ನು ತಪಸ್ಸಿನಂತೆ, ರಾಜಧರ್ಮದಂತೆ ಪರಿಪಾಲಿಸುತ್ತಾ ನಡೆದರು.

ದೇವರಾಜ ಅರಸು

ಜಾತಿ ಶ್ರೇಷ್ಠತೆಯ ಮಲವನ್ನೇ ಮೆದುಳಲ್ಲಿ ತುಂಬಿಕೊಂಡ ಪತ್ರಕರ್ತರಿಗೆ ಎಂದಿಗೂ ಅರಸು ಓರ್ವ ಜನನಾಯಕ, ಪರಿವರ್ತನೆಯ ಹರಿಕಾರ, ಅಸಂಖ್ಯಾತ ದುರ್ಬಲ ಜಾತಿಗಳನ್ನು ಪರಂಪರಾಗತ ದುಃಖ ಮತ್ತು ದೌರ್ಜನ್ಯ-ಅವಮಾನಗಳಿಂದ ಬಿಡುಗಡೆ ಗೊಳಿಸಿದ ವಿಮೋಚಕ ಎಂದು ಅನ್ನಿಸಲೇ ಇಲ್ಲ. ಬದಲಾಗಿ ಅವರನ್ನು ಭ್ರಷ್ಟ, ದುರಹಂಕಾರಿ ಎಂದು ಬಿಂಬಿಸಿದವು. ಅವತ್ತಿನ ಪತ್ರಿಕಾ ಕ್ಷೇತ್ರದಲ್ಲಿ ಮೇಲ್ಜಾತಿಗಳವರೆ ಪತ್ರಕರ್ತರಾಗಿ ಇದ್ದಿದ್ದರಿಂದ ಅರಸು ಅವರ ಜನಕಲ್ಯಾಣ ಕೆಲಸಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳೇ ಇಲ್ಲವಾಗಿ ಹೋಗಿ ಬಿಟ್ಟವು. (ಹಾಗಂತ ಅವರು ಪತ್ರಿಕೆಗಳ ವಿರುದ್ದ ಸೇಡಿಗೆ ಇಳಿಯಲಿಲ್ಲ. ಬ್ರಾಹ್ಮಣರೇ ತುಂಬಿದ್ದ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ಉಳಿಸಿದ್ದು ಅವರ ಉದಾತ್ತತೆಗೆ ನಿದರ್ಶನ) ಅರಸು ಅವರ ತೇಜೋವಧೆಯ ಹನನ ನಡೆಯಿತು.

ಬಲಾಢ್ಯ ಜಾತಿಗಳ ಸೊಕ್ಕು ಮುರಿದು ದುರ್ಬಲ ಮತ್ತು ಮತೀಯ ಅಲ್ಪಸಂಖ್ಯಾತ ಜಾತಿಗಳ ಬೆನ್ನುಮೂಳೆ  ಬಲಪಡಿಸಿದ ಅರಸು 1972 ರ ವಿಧಾನಸಭಾ ಚುನಾವಣೆಯಲ್ಲಿ ದನಿಸತ್ತ ದುರ್ಬಲ ಜಾತಿಗಳಿಗೆ ಮಣೆ ಹಾಕಿ ಹೊಸ ರಾಜಕೀಯ ಕ್ರಾಂತಿಯನ್ನೆ ಮಾಡಿದರು. ಅದುವರೆಗೂ ಕಾಂಗ್ರೆಸ್ 223 ವಿಧಾನಸಭಾ ಕ್ಷೇತ್ರಗಳಲ್ಲಿ, 150 ಕ್ಷೇತ್ರಗಳಲ್ಲಿ  ಲಿಂಗಾಯಿತರು, ಒಕ್ಕಲಿಗರು, ಬ್ರಾಹ್ಮಣರಿಗೆ ಟಿಕೆಟ್ ನೀಡುತ್ತಿದ್ದರೆ, ಉಳಿದ 73 ಸ್ಥಾನಗಳನ್ನು ದಲಿತರು, ಶೂದ್ರರು, ಅಲ್ಪಸಂಖ್ಯಾತರಿಗೆ ಹಂಚಿ ತಮ್ಮ ಉದಾರತೆಯನ್ನು ತೋರುತ್ತಿತ್ತು. 1972 ರಲ್ಲಿ ಇಂತಹ ಕಣ್ಕಟ್ಟು ‘ಉದಾರತೆ’ಯನ್ನು ಧಿಕ್ಕರಿಸಿದ ಅರಸು ಅವರು 223 ಕ್ಷೇತ್ರಗಳ ಪೈಕಿ 133 ಕ್ಷೇತ್ರಗಳಲ್ಲಿ  ದಲಿತರು, ಹಿಂದುಳಿದ ವರ್ಗಗಳು, ಮತೀಯ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಸಾಮಾಜಿಕ ನ್ಯಾಯದ ದಿಟ್ಟತನವನ್ನು ತೋರಿದರು. 163 ಕ್ಷೇತ್ರಗಳಲ್ಲಿ ಜಯ ಸಾಧಿಸಿದ ಕಾಂಗ್ರೆಸ್ ನಲ್ಲಿ  92 ಜನ ದುರ್ಬಲ ಜಾತಿಗಳ ಅಪ್ರತಿಷ್ಠರನ್ನು ನೆಲೆಗೊಳಿಸುವ ಮೂಲಕ ಅಹಿಂದ ರಾಜಕಾರಣಕ್ಕೆ ಭಾಷ್ಯವನ್ನೆ ಬರೆದರು!

ಸಂಘಟಿತ ಜಾತಿಗಳ ಮತ ಬ್ಯಾಂಕುಗಳ ಮುಂದೆ ತಮಗೆ ‘ಅದೃಶ್ಯ ಮತದಾರರೇ’ ಅಗಿದ್ದ ಅಸಂಘಟಿತ ತಬ್ಬಲಿ ಜಾತಿಗಳಲ್ಲಿ ಆತ್ಮವಿಶ್ವಾಸವನ್ನು ಬಿತ್ತಿ ಅದರ ಬಲದಿಂದಲೇ ಪರ‍್ಯಾಯ ರಾಜಕಾರಣವನ್ನು ಕಟ್ಟಿದರು.  ರಾಜಕೀಯ ಗೆಲುವು ಸಾಧಿಸುತ್ತಾ ಬಂದ ಅರಸು ಚಿಕ್ಕಮಗಳೂರಿನಲ್ಲಿ ಚುನಾವಣೆಗೆ ನಿಲ್ಲಿಸಿ ಇಂದಿರಾಗಾಂಧಿ ಎಂಬ ದೈತ್ಯ ನಾಯಕಿಗೆ ರಾಜಕೀಯ ಮರುಹುಟ್ಟು ಕೊಡುವ ಮೂಲಕ ಭಾರತದ ರಾಜಕಾರಣದಲ್ಲಿ ತನಗಿದ್ದ ಜನಶಕ್ತಿಯನ್ನು ಸಾಬೀತು ಪಡಿಸಿದರು.  ಇಂದಿರಾಗಾಂಧಿ ಅವರ ವಿರೋಚಿತ ಗೆಲುವಿನ ಹಿಂದಿದ್ದ ಅರಸು ಅವರ ಖ್ಯಾತಿ ಇಮ್ಮಡಿಸಿತು. ಆದರೆ ಸಂಚುಗಳನ್ನು ಅರಿಯದ ಮುಗ್ಧ ಅರಸು ಅವರು ಇಂದಿರಾಗಾಂಧಿ ಕೂಟದ ಸಂಚಿಗೆ ಬಲಿಯಾಗಿ ಪಕ್ಷದಿಂದಲೇ ಹೊರಬಿದ್ದರು.

“ಬಡವರಿಗಾಗಿ ನಾವು ಏನೂ ಮಾಡದೆ ಹೋದರೆ ಅವರ ಬಿಸಿಯುಸಿರಿನಲ್ಲಿ ಸುಟ್ಟು ಹೋಗುತ್ತೇವೆ. ಶೇ. 10 ರಷ್ಟು ಇರುವ ಮೇಲ್ವರ್ಗದ ಜನ ಕೈ ಕಟ್ಟಿ ಕುಳಿತರೆ ಯಾವ ಅನಾಹುತವೂ ಆಗುವುದಿಲ್ಲ. ಆದರೆ ಈ ದುಡಿಮೆಗಾರರೆಲ್ಲ ಒಂದು ವರ್ಷ ಕೈ ಕಟ್ಟಿ ಕುಳಿತರೆ ಇಡೀ ಸಮಾಜ ಸತ್ತು ಹೋಗುತ್ತದೆ. ಆದುದರಿಂದ ದುಡಿಯುವ ವರ್ಗಕ್ಕೆ ಸಲ್ಲಬೇಕಾದ ಗೌರವ, ಪ್ರತಿಫಲ, ನೆಮ್ಮದಿಯನ್ನು ಒದಗಿಸಿಕೊಡದಿದ್ದರೆ ಸರಕಾರಗಳು ಯಾತಕ್ಕಾದರೂ ಇರಬೇಕು”

~ ಡಿ. ದೇವರಾಜ ಅರಸು

ಅಪ್ಪಟ ಸ್ವಾಭಿಮಾನಿ ಅರಸು ಕಾಂಗ್ರೆಸ್ ತೊರೆದು  ಸಮಾಜವಾದಿ ಚಳವಳಿಯ ತಾತ್ವಿಕ ನಿಲುವುಗಳನ್ನು ಬೆಂಬಲಿಸುವ ಮೂಲಕ ಕ್ರಾಂತಿರಂಗವನ್ನು ಬಲಪಡಿಸುವ ಕೆಲಸಕ್ಕೆ ಕೈ ಹಾಕಿದ್ದು ಒಂದು ಸಾಹಸ.  ಯಾವ ಅರಸು ತಮ್ಮೊಳಗಿನ ಆತ್ಮ ಬಲ, ಛಲ ಅದಕ್ಕೂ ಮಿಗಿಲಾದ ಬಹುಜನರ ಬಗೆಗಿನ ಬದ್ಧತೆಯಿಂದ  ದಲಿತ-ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಅಸ್ಮಿತೆಯ ಬೀಜ ಬಿತ್ತಿದರೋ, ಸಾಮಾಜಿಕ ನ್ಯಾಯದ ಹಕ್ಕುದಾರಿಕೆಯನ್ನು ಹೆಪ್ಪುಗಟ್ಟಿಸಿದರೋ ಅದೇ ದಲಿತ-ಹಿಂದುಳಿದ ವರ್ಗಗಳ ರಾಜಕೀಯ ನಾಯಕರುಗಳಾದ ವೀರಪ್ಪ ಮೊಯ್ಲಿ, ಧರಂ ಸಿಂಗ್, ಬಂಗಾರಪ್ಪ, ಖರ್ಗೆ ಸೇರಿದಂತೆ 35 ಕ್ಕೂ ಹೆಚ್ಚು ಶಾಸಕರುಗಳು ಅರಸು ಅವರನ್ನು ಹೊತ್ತಲ್ಲದ ಹೊತ್ತಲ್ಲಿ ಇರಿದು ಹೋದರು.

ಬಲಾಢ್ಯ ಜಾತಿಗಳು  ಅರಸು ವಿರುದ್ದ ಪಿತೂರಿಗಿಳಿದವು.  ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಅರಸು ಅವರು ಪ್ರವಾಹದ ವಿರುದ್ಧ ಈಜುವಂತೆ ರಾಜಕೀಯ ಬದುಕಿನಲ್ಲಿ ಈಜುತ್ತಲೆ ಇದ್ದರು. ಕೊನೆಗಾಲದಲ್ಲಿ ರಾಜಕೀಯ ಕಾರಣಕ್ಕಾಗಿ ದೆಹಲಿಗೆ ಹೋಗಲು ವಿಮಾನದ ಟಿಕೆಟ್ ಗೂ ಅವರಲ್ಲಿ ದುಡ್ಡಿರಲಿಲ್ಲ ಎಂದರೆ ನಂಬಲಾದೀತಾ? ಇದುವರೆಗೂ ವಿಮಾನ ಬುಕ್ ಮಾಡುತ್ತಿದ್ದ ಏಜೆನ್ಸಿ ಸಾಲ ಜಾಸ್ತಿಯಾಗಿದೆ ಎಂದು ಎಂಟು ವರ್ಷ ಈ ನಾಡಿನ ಸುಭಿಕ್ಷೆಗಾಗಿ ಆಳಿದ, ಅಸಂಖ್ಯಾತ ಜನರ ಬದುಕನ್ನು ಬೆಳಕಾಗಿಸಿದ ಅರಸು ಎಂಬ ನಾಯಕನಿಗೆ ಒಂದು ವಿಮಾನದ ಟಿಕೆಟ್ ಬುಕ್ ಮಾಡಲು ನಿರಾಕರಿಸಿತು. ಜೇಬಿನಲ್ಲಿ ದುಡ್ಡು, ಹೊಲ, ಗದ್ದೆ, ಮಹಲುಗಳಿಲ್ಲದೆ ಅರಸು ಬದುಕಿರುವಾಗ ಅವರು ಕರ್ನಾಟಕವನ್ನು ಲೂಟಿ ಹೊಡೆದ ಭ್ರಷ್ಟಾಚಾರಿ ಎಂದು ಮನುವ್ಯಾಧಿ ಪತ್ರಕರ್ತರು, ಪತ್ರಿಕೆಗಳು ಅವರ ವಿರುದ್ಧ ಜಾತಿಯ ಸೇಡು ಬಗೆಯುತ್ತಿದ್ದವು. ಇದು ಕರ್ನಾಟಕದ ಪತ್ರಿಕೋದ್ಯಮ ಈ ನಾಡಿನ ಜನನಾಯಕನೊಬ್ಬನಿಗೆ ಬಗೆದ ದ್ರೋಹವೇ ಆಗಿತ್ತು.

ಅರಸು ಕೂಡ ಕಲ್ಯಾಣದ ಬಸವಣ್ಣನಂತೆ ವಿದ್ರೋಹಗಳಿಗೆ ತುತ್ತಾಗಿ ನಲುಗಿದರು. ಅದು 1982ನೇ ಇಸವಿ. ಅರಸು ಯುಗ ಪುನರುತ್ಥಾನಗೊಳ್ಳುವ ಕಾಲಘಟ್ಟ. ರಾಷ್ಟ್ರ ರಾಜಕಾರಣವೂ ಅರಸು ಇದ್ದ ಕರ್ನಾಟಕದತ್ತ ನೋಡುತ್ತಿತ್ತು. ಈ ನಾಡಿನ ಸಾಮಾಜಿಕ ಮತ್ತು ರಾಜಕೀಯದ ಮತ್ತೊಂದು ಅಭಿವೃದ್ಧಿ ಪರ್ವ ಎದ್ದುನಿಲ್ಲುವ ಸಂದರ್ಭದಲ್ಲಿ ಯುಗ ಪುರುಷ ದೇವರಾಜ ಅರಸು ಎಂಬ ‘ತಂದೆಯನ್ನು’ ಕಳೆದು ಕೊಂಡ ತಬ್ಬಲಿ ಜಾತಿಗಳು  ಕಣ್ಣೀರಿನ ಮಡುವಿಗೆ ಬಿದ್ದವು.

ಅರಸು ಅವರ ದಿಟ್ಟ ಸೈದ್ಧಾಂತಿಕತೆ ಕಾರಣದಿಂದಲೇ ಜಾತಿ ವ್ಯವಸ್ಥೆಯ ಗುಲಾಮಗಿರಿಯಿಂದ ಮುಕ್ತಿಗೊಂಡು ಸುಖವುಂಡ ಜನಜಾತಿ ಸಮುದಾಯಗಳು ಮತ್ತು ಅರಸು ಹೆಸರೇಳಿಕೊಂಡೆ ರಾಜಕೀಯ ಅಸ್ತಿತ್ವ ಉಳಿಸಿಕೊಂಡ ಹಿಂದುಳಿದ- ದಮನಿತ ಸಮುದಾಯಗಳ ಸೋಕಾಲ್ಡ್ ನಾಯಕರುಗಳು ವರ್ತಮಾನದ ರಾಜಕಾರಣದಲ್ಲಿ ಅರಸು ವಿಚಾರಧಾರೆಯ ವಿರೋಧಿ ರಾಜಕೀಯ ಚಕ್ರಾಧಿಪತ್ಯಕ್ಕೆ, ಜಾತಿ ವ್ಯವಸ್ಥೆ ಮತ್ತು ಧರ್ಮ ರಕ್ಷಕರ ಪರಿವಾರಕ್ಕೆ ಸೇರುತ್ತಾ , ನೀರೆರೆಯುತ್ತಾ ಕೃತಘ್ನರಂತೆ ವರ್ತಿಸುತ್ತಿರುವುದು ಘೋರ ವಿಪರ್ಯಾಸ.

 ‘ದೇವರಾಜ ಅರಸು’ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಬದುಕಿನ ದೊಡ್ಡ ಪರಿವರ್ತಕ ಶಕ್ತಿ. ಅರಸು ಅವರ 107ನೆಯ ಜನ್ಮದಿನದ ಈ ಸಂದರ್ಭದಲ್ಲಿ ದೇವರಾಜ ಅರಸು ಅವರು ಕಟ್ಟಿಕೊಟ್ಟ  ಬಹುಜನ ರಾಜಕಾರಣವನ್ನು , ಸೌಹಾರ್ದ ಕರ್ನಾಟಕವನ್ನು ಉಳಿಸಿಕೊಳ್ಳುವ , ಮುನ್ನಡೆಸುವ ದೊಡ್ಡ  ಸವಾಲು ಮತ್ತು ಹೊಣೆಗಾರಿಕೆ ಈ ನಾಡಿನ  ದಲಿತ, ದಮನಿತ ಮತೀಯ ಅಲ್ಪಸಂಖ್ಯಾತ ಸಮುದಾಯಗಳ ಮುಂದಿದೆ. ಅದನ್ನು ಸಾಕಾರಗೊಳಿಸಿದ್ದೇ ಅದರೆ ಅದುವೇ ದೇವರಾಜ ಅರಸು ಎಂಬ ತಬ್ಬಲಿ ಜಾತಿಗಳ ತಂದೆಗೆ ಸಲ್ಲಿಸಬಹುದಾದ ನಿಜ ಗೌರವ. ದೇವರಾಜ ಅರಸು ಅವರ ತ್ಯಾಗ, ಹೋರಾಟದ ಮುಂಬೆಳಕಲ್ಲಿ ಕರ್ನಾಟಕವನ್ನು ಮುನ್ನಡೆಸಲು ಸಂಕಲ್ಪ ಮಾಡಬೇಕಿದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಎನ್.ರವಿಕುಮಾರ್
ಕಳೆದ 28‍ ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರು. ಕವಿ, ಸಾಮಾಜಿಕ ಹೋರಾಟಗಾರ ಹಾಗೂ ‘ಶಿವಮೊಗ್ಗ ಟೆಲೆಕ್ಸ್’ ಕನ್ನಡ ದಿನಪತ್ರಿಕೆಯ ಸಂಪಾದಕ.

You cannot copy content of this page

Exit mobile version