ಬೆಂಗಳೂರು : ಅಧಿಕಾರಿಗಳು ರಸ್ತೆಯಲ್ಲಿ (Road) ಕಣ್ಣು ಮುಚ್ಚಿಕೊಂಡು ಓಡಾಡ್ತೀರಾ? ರಸ್ತೆಗೆ ತ್ಯಾಜ್ಯ (Waste) ಸುರಿದಿರುವುದನ್ನು ಗಮನಿಸೋಕೆ ಆಗೋದಿಲ್ಲವಾ ಎಂದು ಬಿಬಿಎಂಪಿ (BBMP), ಬಿಡಿಎ (BDA) ಮತ್ತು ಟ್ರಾಫಿಕ್ ಪೊಲೀಸರನ್ನು (Traffic Police) ಸಿಎಂ ಸಿದ್ದರಾಮಯ್ಯ (Siddaramaiah) ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಇಂದು ಸಿಎಂ ಸಿಟಿ ರೌಂಡ್ಸ್ ವೇಳೆ ಈ ಘಟನೆ ನಡೆದಿದೆ. ಮಾರ್ಗ ಮಧ್ಯದಲ್ಲಿ ರಿಂಗ್ ರಸ್ತೆಯ ಬದಿಯಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವ ಜಾಗದಲ್ಲಿ ಹಳೆ ಕಟ್ಟಡ ತ್ಯಾಜ್ಯ ಸುರಿದಿರುವುದನ್ನು ಸಿಎಂ ಗಮನಿಸಿದ್ದಾರೆ. ಕೂಡಲೇ ತಮ್ಮ ವಾಹನ ಚಾಲಕ ನವೀನ್ ಗೆ ಕಾರು ನಿಲ್ಲಿಸುವಂತೆ ಸೂಚಿಸಿದರು. ಕಾರಿನಿಂದ ಇಳಿದ ಸಿಎಂ ಈ ಜಾಗದಲ್ಲಿ ತ್ಯಾಜ್ಯ ಸುರಿದಿರುವವರನ್ನು ಪತ್ತೆ ಹಚ್ಚಿ ಅವರ ವಾಹನ ಸೀಜ್ ಮಾಡಿ ಕೇಸ್ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸೂಕ್ತ ಕ್ರಮಕ್ಕೆ ಸಿಎಂ ಸೂಚಿಸಿದರು.
ರಸ್ತೆ ಬದಿ ತ್ಯಾಜ್ಯ: ಹೆಣ್ಣೂರು ಫ್ಲೈಓವರ್ ಕೆಳಗೆ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿದಿದ್ದು, ಅದರೊಳಗೆ ತಲೆ ಎತ್ತರಕ್ಕೆ ಗಿಡಗಳು ಬೆಳೆದು ನಿಂತಿರುವುದಕ್ಕೆ ಸಿಎಂ ಗರಂ ಆದರು. ಇದು ತುಂಬಾ ಹಳೆ ತ್ಯಾಜ್ಯ…ಇಷ್ಟು ವರ್ಷ ಎಷ್ಟು ಜನ ಅಧಿಕಾರಿಗಳು ಇಲ್ಲಿ ಓಡಾಡಿರ್ತೀರಿ. ಯಾರಿಗೂ ಕಣ್ಣಿಗೇ ಬಿದ್ದಿಲ್ವಾ ಎಂದು ಸಿಎಂ ಪ್ರಶ್ನಿಸಿ 24 ಗಂಟೆಗಳ ಒಳಗೆ ತ್ಯಾಜ್ಯ ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿದರು.
ನೋಟಿಸ್ ಕೊಡಲು ಸಿಎಂ ಸೂಚನೆ: ಇನ್ನು ವಾರ್ಡ್ ನಂಬರ್ 23 ರ ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಒಳಗೆ ಇರಬೇಕಾದ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಹೊರಗೆ ಬಂದು ರಾಶಿ ಬಿದ್ದಿರುವುದನ್ನು ಗಮನಿಸಿದ ಸಿಎಂ ಸಿಟ್ಟಾದರು. ಸಂಗ್ರಹಣಾ ಕೇಂದ್ರದ ಒಳಗೆ ಸಾಕಷ್ಟು ಜಾಗ ಖಾಲಿ ಇರುವುದನ್ನು ಗಮನಿಸಿದ ಸಿಎಂ ಬಿ ಸ್ಮೈಲ್ ಚೀಫ್ ಎಂಜಿನಿಯರ್ ಪ್ರಹ್ಲಾದ್ ಅವರಿಗೆ ನೋಟಿಸ್ ನೀಡಲು ಸೂಚನೆ ನೀಡಿದರು.
ಬಳಿಕ ಅಲ್ಲಿಂದ ಕೆಲವೇ ದೂರದಲ್ಲಿ ರಸ್ತೆಯಲ್ಲಿ ಜೆಲ್ಲಿ ಕಲ್ಲುಗಳು ಬಿದ್ದಿರುವುದನ್ನು ಗಮನಿಸಿ ಇದಕ್ಕೆ ಕಾರಣರಾದ ಮತ್ತೋರ್ವ ಎಂಜಿನಿಯರ್ ಚೀಫ್ ರಾಘವೇಂದ್ರ ಪ್ರಸಾದ್ ಅವರಿಗೂ ನೋಟಿಸ್ ನೀಡಿ ಎಂದು ಸಿಎಂ ಸೂಚಿಸಿದರು.
ವೈಟ್ ಟಾಪಿಂಗ್ ರಸ್ತೆ ದುರಸ್ತಿಗೆ ಸೂಚನೆ: ಮೆಟ್ರೋ ಕಾಮಗಾರಿ ಆಗುವಾಗ ಮೆಟ್ರೋದವರು ಸರ್ವೀಸ್ ರಸ್ತೆಗಳ ನಿರ್ಲಕ್ಷ್ಯ ಮಾಡಿರುವುದು, ರಸ್ತೆ ಬದಿ ನೀರು ನಿಲ್ಲುವಂತೆ ಮಾಡಿರುವುದು, ನೀರು ಸರಾಗವಾಗಿ ಹರಿಯಲು ಇರುವ ವ್ಯವಸ್ಥೆಯನ್ನೂ ಮುಚ್ಚಿಸಿರುವ ಬಗ್ಗೆ ಹಾಗೂ ವೈಟ್ ಟಾಪಿಂಗ್ ರಸ್ತೆ ಹಾಳು ಮಾಡಿರುವ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಎಲ್ಲವನ್ನೂ ಗಮನಿಸಿದ ಸಿಎಂ ತಕ್ಷಣ ದುರಸ್ತಿಗೆ ಹಾಗೂ ಸರ್ವೀಸ್ ರಸ್ತೆಗಳ ನಿರ್ವಹಣೆಗೆ ಸೂಚನೆ ನೀಡಿದರು. ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಪ್ರಾಪರ್ ಡ್ರೈನೇಜ್ ಇಲ್ಲದ ಕಾರಣ ನೀರು ನಿಲ್ತಾ ಇದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ರಸ್ತೆಯಲ್ಲಿ ನೀರು ನಿಲ್ಲದಂತೆ ನೀರು ಸರಾಗವಾಗಿ ಹರಿದು ಡ್ರೈನೇಜ್ ಸೇರುವ ಹಾಗೆ ವ್ಯವಸ್ಥೆ ಮಾಡಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು. ವಿಡ್ಸಂರ್ ಮ್ಯಾನರ್ ವೃತ್ತದಲ್ಲಿನ ರಸ್ತೆ ಕಾರ್ಯ, ಮತ್ತೊಂದು ಬದಿ ರಾತ್ರಿ ಮುಗಿಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದರು.