Friday, June 14, 2024

ಸತ್ಯ | ನ್ಯಾಯ |ಧರ್ಮ

ಒಂದಕ್ಕಿಂತಲೂ ಹೆಚ್ಚು ಬ್ಯಾಂಕ್‌ ಹೊಂದಿದ್ದೀರಾ? ಹಾಗಿದ್ದರೆ ಇದನ್ನು ಓದಿ!

ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಮೊಬೈಲ್‌ ಒಂದು ಎಷ್ಟು ಅವಶ್ಯಕವೋ ಬ್ಯಾಂಕ್‌ ಅಕೌಂಟ್‌ ಕೂಡಾ ಅವನ ಬದುಕಿಗೆ ಅನಿವಾರ್ಯ. ಇಂದು ನಾವು ದೂರದ ಊರುಗಳಿಂದ ನೆನೆದ ಕ್ಷಣದಲ್ಲಿ ಹಣ ಪಡೆಯಬಹುದು. ನಮ್ಮ ಪ್ರೀತಿ ಪಾತ್ರರಿಗೆ ನೆನದ ಕ್ಷಣದಲ್ಲಿ ಹಣ ತಲುಪಿಸಬಹುದು. ಇದೆಲ್ಲವೂ ಬ್ಯಾಂಕಿಂಗ್‌ ಮತ್ತು ಅದರ ವಿಸ್ತರಿತ ಸೇವೆಗಳ ಕೊಡುಗೆ.

ಬ್ಯಾಂಕಿಂಗ್‌ ಸೇವೆಯ ಅನಿವಾರ್ಯತೆಯನ್ನು ಅರಿತ ಬ್ಯಾಂಕಿಂಗ್‌ ಮಾರುಕಟ್ಟೆ ಇಂದು ನಮಗೆ ವಿವಿಧ ರೀತಿಯ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸುತ್ತಿದೆ. ಒಂದು ಬ್ಯಾಂಕಿಗಿಂತಲೂ ಇನ್ನೊಂದು ಬ್ಯಾಂಕ್‌ ಆಕರ್ಷಕ ಸೇವೆ ನೀಡುವುದರ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತವೆ.

ಇಂತಹದ್ದೇ ಮಾರುಕಟ್ಟೆ ತಂತ್ರದ ಭಾಗವಾಗಿ ನಿಮಗೆ ಒಂದು ಬ್ಯಾಂಕಿನ ಸೇಲ್ಸ್‌ ಪರ್ಸನ್‌ ಒಬ್ಬರು ಕಾಲ್‌ ಮಾಡಿ ನಿಮ್ಮ ಈ ಉಳಿತಾಯ ಖಾತೆಯಿರುವ ಬ್ಯಾಂಕಿಗಿಂತಲೂ ನಾವು ಎಷ್ಟು ಡಿಫರೆಂಟ್‌ ಎನ್ನುವುದನ್ನು ವಿವರಿಸುತ್ತಾ, ನಿಮ್ಮನ್ನು ಅವರ ಉತ್ಪನ್ನದ ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿರುತ್ತಾರೆ. ನಿಮಗೂ ಅವರು ಹೇಳುತ್ತಿರುವುದು ಸರಿಯೆನ್ನಿಸಿ ಅಕೌಂಟ್‌ ಒಂದನ್ನು ತೆರೆದೇ ಬಿಡೋಣ ಎಂದುಕೊಳ್ಳುತ್ತೀರಿ. ಕೆಲವು ಬ್ಯಾಂಕುಗಳಂತೂ ಝೀರೋ ಬ್ಯಾಲೆನ್ಸ್‌ ಅಕೌಂಟ್ ಕೊಡುವುದರ ಜೊತೆಗೆ ಸುಲಭ ಸಾಧ್ಯವಾದ ಆನ್ಲೈನ್‌ KYC ಪ್ರಕ್ರಿಯೆಗಳನ್ನು ಸಹ ಹೊಂದಿರುತ್ತವೆ.

ಇಷ್ಟೆಲ್ಲ ಇರುವಾಗ, ಯಾವುದೇ ಖರ್ಚೂ ಇಲ್ಲದೇ ಇರುವಾಗ ಇನ್ನೊಂದು ಅಕೌಂಟ್‌ ಓಪನ್‌ ಮಾಡಿದರೆ ತಪ್ಪೇನು ಎನ್ನುತ್ತೀರಾ? ಒಂದು ನಿಮಿಷ ನಿಲ್ಲಿ. ಇವುಗಳನ್ನೆಲ್ಲ ಒಮ್ಮೆ ಯೋಚಿಸಿ ನಂತರ ಮುಂದಿನ ಹೆಜ್ಜೆಯಿಡಿ.

ಒಂದು ಬ್ಯಾಂಕ್‌ ಅಕೌಂಟ್‌ ಓಪನ್‌ ಮಾಡುವುದು ಎಷ್ಟು ಸುಲಭವೋ ಅದನ್ನು ನಿರ್ವಹಿಸುವುದು ಅಷ್ಟೇ ಕಷ್ಟದ ಕೆಲಸ. ಯಾವುದೇ ವ್ಯಾಪಾರಿ ಉತ್ಪನ್ನ ನಿಮಗೆ ಉಚಿತವಾಗಿ ಸಿಗುವುದಿಲ್ಲ. ಅಷ್ಟಕ್ಕೂ ಲಾಭವಿಲ್ಲದೆ ಯಾರು ವ್ಯಾಪಾರ ಮಾಡುತ್ತಾರೆ ಹೇಳಿ?

ಈಗ ಒಂದು ಸೇವಿಂಗ್‌ ಅಕೌಂಟ್‌ ಮೇಂಟೇನ್‌ ಮಾಡೋದಕ್ಕೆ ವರ್ಷಕ್ಕೆ ಎಷ್ಟು ತಗಲುತ್ತೆ ಅಂತ ನೋಡುವ ಬನ್ನಿ.

ಇಂದು ಹೆಚ್ಚಿನ ಬ್ಯಾಂಕುಗಳು ನಿಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಟ ಮೊತ್ತವನ್ನು ಕಾಪಾಡಿಕೊಳ್ಳುವಂತೆ ಹೇಳುತ್ತವೆ. ನೀವು ಒಂದು ಅಕೌಂಟಿಗೆ 500 ರೂಪಾಯಿ ಹಾಕಿ ಮರೆತುಬಿಡುತ್ತೀರಿ. ಆದರೆ ಬ್ಯಾಂಕು ನಿಮ್ಮನ್ನು ಮರೆಯುವುದಿಲ್ಲ. ಅದು ಕಾಲ ಕಾಲಕ್ಕೆ SMS ಚಾರ್ಜ್‌ ಅಂತ ಒಂದಷ್ಟು ಹಣವನ್ನು ನೀವು ಹಾಕಿದ್ದ 500 ರೂಪಾಯಿಯಿಂದಲೇ ಕತ್ತರಿಸಿಕೊಳ್ಳುತ್ತದೆ. ಆದರೆ ನೀವು ಆ ಕಡೆ ಗಮನವನ್ನೇ ಕೊಟ್ಟಿರುವುದಿಲ್ಲ. ಇದರ ಜೊತೆಗೆ ವಾರ್ಷಿಕ ಡೆಬಿಟ್‌ ಕಾರ್ಡ್‌ ಚಾರ್ಜ್‌ ಕೂಡಾ ಇರುತ್ತದೆ. ನೀವು ಹಣ ತೆಗೆದರೂ, ತೆಗೆಯದಿದ್ದರೂ ಚಾರ್ಜ್‌ ಕಟ್ಟಲೇಬೇಕು!

ಬ್ಯಾಂಕ್‌ SMS ಮೊತ್ತವನ್ನು ವರ್ಷಕ್ಕೆ ಮೂರ್ನಾಲ್ಕು ಸಾರಿ ಕಡಿತ ಮಾಡಿಕೊಳ್ಳುವುದರ ಮೂಲಕ ನಿಮ್ಮ ಕನಿಷ್ಟ ಬ್ಯಾಲೆನ್ಸ್‌ ತೀರಾ ಕನಿಷ್ಟವಾಗಿರುತ್ತದೆ. ಮತ್ತು ನೀವು ಕನಿಷ್ಟ ಬ್ಯಾಲೆನ್ಸ್‌ ಮೇಂಟೇನ್‌ ಮಾಡಿಲ್ಲವೆನ್ನುವ ಕಾರಣಕ್ಕೆ ಇರುವ ಚಿಲ್ಲರೆ-ಪಲ್ಲರೆ ಹಣವನ್ನೂ ಪೆನಾಲ್ಟಿ ಹೆಸರಲ್ಲಿ ಅದು ನುಂಗಿ ನೀರು ಕುಡಿದು ನಿಮ್ಮ ಅಕೌಂಟನ್ನು ಮೈನಸ್‌ ಬ್ಯಾಲೆನ್ಸಿಗೆ ತಂದಿಟ್ಟು ನಿಮಗೆ ಇಷ್ಟು ಹಣ ಕಟ್ಟಿ ನಿಮ್ಮ ಖಾತೆಯನ್ನು ಮತ್ತೆ ಕಾರ್ಯಗತಗೊಳಿಸಿ ಎನ್ನುತ್ತದೆ.

ಇಷ್ಟೇ ತಾನೇ ಬಿಡು 500 ರೂಪಾಯಿ ಹೋದರೆ ಹೋಯ್ತು ಅಂತ ಅಂತೀರಾ? ಹಾಗಿದ್ರೆ ನಿಲ್ಲಿ… ಇನ್ನೂ ಒಂದು ವಿಷಯವಿದೆ.

ಮನುಷ್ಯನಿಗೆ ಬದುಕಿನಲ್ಲಿ ಶಿಸ್ತು ಎನ್ನುವುದು ಬಹಳ ಮುಖ್ಯ. ಹಾಗೆಯೇ ಬ್ಯಾಂಕುಗಳು ಕೂಡಾ ತಮ್ಮ ಗ್ರಾಹಕನು ಆರ್ಥಿಕ ಶಿಸ್ತಿನಿಂದ ಕೂಡಿರಬೇಕು ಎಂದು ಬಯಸುತ್ತವೆ. ಇಂದು ನಮ್ಮ ಪ್ರತಿಯೊಂದು ಬ್ಯಾಂಕಿಂಗ್‌ ವ್ಯವಹಾರಗಳು ಸಿಬಿಲ್‌ ಎನ್ನುವ ಸಾಫ್ಟ್‌ವೇರಿನಲ್ಲಿ ಸಂಗ್ರಹಗೊಳ್ಳುತ್ತದೆ. ಬ್ಯಾಂಕುಗಳು ಬಯಸಿದಾಗ ಅದರಿಂದ ನಮ್ಮ ಮಾಹಿತಿಯನ್ನು ತೆಗೆದುಕೊಳ್ಳಬಹುದು. ನಾವು ಮನೆ ಕಟ್ಟಲೆಂದೋ, ಗಾಡಿಯೊಂದನ್ನೋ ಕೊಂಡೊಕೊಳ್ಳಲು ಬ್ಯಾಂಕಿಗೆ ಲೋನಿಗೆಂದು ಹೋದಾಗ ನಮ್ಮ ಮೇಲೆ ಹೇಳಿದಂತಹ ಆರ್ಥಿಕ ಅಶಿಸ್ತು ನಮ್ಮ ಲೋನಿಗೆ ಅಡ್ಡಗಾಲು ಹಾಕುತ್ತದೆ. ಮತ್ತು ಬ್ಯಾಂಕ್‌ ಲೋನ್‌ ಕೊಡಲು ನಿರಾಕರಿಸುತ್ತದೆ.

ಹೀಗಾಗಿ ಅನಿವಾರ್ಯವಲ್ಲದ ಹೊರತು ಇರುವ ಬ್ಯಾಂಕುಗಳಲ್ಲೆಲ್ಲ ಅಕೌಂಟ್‌ ಮಾಡುತ್ತಾ ಹೋಗಬೇಡಿ. ನಿಮಗೆ ಈಗಿರುವ ಉಳಿತಾಯ ಖಾತೆಯ ಹಣ ಡ್ರಾ ಮಾಡುವ ಮಿತಿ ಕಡಿಮೆಯೆನ್ನಿಸಿದರೆ ಬ್ಯಾಂಕಿಗೆ ಹೋಗಿ. ಅದರ ಮಿತಿ ಹೆಚ್ಚಿರುವ ಕಾರ್ಡನ್ನು ಬ್ಯಾಂಕ್‌ ನೀಡುತ್ತದೆ.

ಇನ್ನಷ್ಟು ಇಂತಹ ಆರ್ಥಿಕ ಸಂಬಂಧಿ ಲೇಖನಗಳಿಗಾಗಿ ಆಗಾಗ ನಮ್ಮ ಪೀಪಲ್‌ಮೀಡಿಯಾ.ಕಾಮ್‌ಗೆ ಭೇಟಿ ನೀಡುತ್ತಿರಿ.

Related Articles

ಇತ್ತೀಚಿನ ಸುದ್ದಿಗಳು