Tuesday, July 15, 2025

ಸತ್ಯ | ನ್ಯಾಯ |ಧರ್ಮ

ದಲಿತ ಪ್ರಾಧ್ಯಾಪಕರಿಗೆ ತಾರತಮ್ಯ, ಬೆಂವಿ.ವಿ ಕುಲಪತಿಯನ್ನು ಹಿಂತೆಗೆದುಕೊಳ್ಳಲು ಆಗ್ರಹ – ಚಂದ್ರು ಪೆರಿಯಾರ್


ಬೆಂಗಳೂರ : ವಿಶ್ವವಿದ್ಯಾನಿಲಯಗಳ ಕಾಯ್ದೆಯ ನಿಯಮಾನುಸಾರವಾಗಿ ಭಡ್ತಿಯಲ್ಲಿ ದಲಿತ ಸಮುದಾಯದ ಪ್ರಾಧ್ಯಾಪಕರಿಗೆ ವಂಚನೆಯಾಗುತ್ತಿದ್ದರೂ, ಬೆಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಜಯಕರ ಎಸ್.ಎಂ ಜಾತಿ ತಾರತಮ್ಯವನ್ನು ನಿರಾಕರಿಸುತ್ತಿರುವುದು ಖಂಡನೀಯ. ಸರಕಾರ ಈ ಕೂಡಲೇ ಅವರನ್ನು ಕುಲಪತಿ ಜವಬ್ದಾರಿಯಿಂದ ಹಿಂತೆಗೆದುಕೊಳ್ಳಬೇಕು ಎಂದು ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳ ಒಕ್ಕೂಟದ ವಿದ್ಯಾರ್ಥಿ ನಾಯಕ ಚಂದ್ರು ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಸ್ಟರ್ ನಿಯಮಗಳ ವಿರುದ್ಧವಾಗಿ ದಲಿತ ಸಮುದಾಯದ ಪ್ರತಿಭಾವಂತರನ್ನು ಕೈಬಿಟ್ಟು ಹೊರಗಡೆಯಿಂದ 5 ಜನ ಬಲಾಢ್ಯ ಜಾತಿಗೆ ಸೇರಿದ ಪ್ರಾಧ್ಯಾಪಕರನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಬೆಂವಿವಿ ಆರಂಭದಿಂದಲೂ ಒಬ್ಬೇ ಒಬ್ಬ ದಲಿತನೂ ಕುಲಪತಿಯಾಗಿಲ್ಲ. ಇದು ದಲಿತರ ಮೇಲಿನ ಅಸಹನೆಗೆ ಹಿಡಿದ ಕನ್ನಡಿ ಎಂದು ಬೇಸರ ವ್ಯಕ್ತಪಡಿಸಿದರು.


ಕುಲಪತಿ ರಜೆಯಲ್ಲಿರುವಾಗ ಜವಬ್ದಾರಿಯನ್ನು ಹಿರಿಯ ಡೀನ್‌ಗೆ ಕೊಡಬೇಕೆನ್ನುವ ನಿಯಮ. ಆದರೆ, ಇಲ್ಲಿ ಇರುವ ಎಲ್ಲ ಹಿರಿಯ ಡೀನ್‌ಗಳು ದಲಿತ ಸಮುದಾಯಕ್ಕೆ ಸೇರಿದ್ದಾರೆನ್ನುವ ಕಾರಣಕ್ಕಾಗಿ ಅವರಿಗೆ ಉಸ್ತುವಾರಿ ನೀಡದೆ, ಕುಲಸಚಿವರಿಗೆ ನೀಡಿದ್ದಾರೆ. ಇದು ಕಾನೂನು ಬಾಹಿರವಷ್ಟೇ ಅಲ್ಲದೇ, ಕುಲಪತಿಗೆ ದಲಿತರ ಮೇಲಿರುವ ಅಸಹನೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ದಲಿತ ವಿತ್ತಾಧಿಕಾರಿಗಳ ಅಧಿಕಾರವನ್ನು ಕಟ್ಟಡ ನವೀರಕಣದ ನೆಪವೊಡ್ಡಿ ಸುಮಾರು ಒಂದು ವರ್ಷಗಳ ಕಾಲ ‘ಒಂದೇ ಸೂರಿನ ತತ್ವ’ ಅನುಸರಿಸಿ ಕುಲಸಚಿವರಿಗೆ ನೀಡಿದ್ದಾರೆ. ದಲಿತ ಅತಿಥಿ ಉಪನ್ಯಾಸಕರನ್ನು ವಿನಾ ಕಾರಣ ಕೆಲಸದಿಂದ ತೆಗೆದು, ವರ್ಷಾನುಗಟ್ಟಲೆ ಸಂಬಳ ನೀಡದೆ ವಂಚಿಸಲಾಗಿದೆ. ಜೀವನ ಭದ್ರತೆ ಇಲ್ಲದೆ ಕೆಲವರು ಮಾನಸಿಕವಾಗಿ ಕುಗ್ಗಿ ಆಸ್ಪತ್ರೆ ಸೇರಿದ್ದಾರೆ. ಇಷ್ಟೆಲ್ಲ ಆದಮೇಲೆ ಕುಲಪತಿ ಅವರಿಂದ ನ್ಯಾಯ ಸಿಗಲಿದೆ ಎಂದು ಕಾಯುವುದರಲ್ಲಿ ಅರ್ಥವಿಲ್ಲ. ಕುಲಪತಿಯವರು ಸ್ವಯಂ ಪ್ರೇರಿತವಾಗಿ ರಾಜಿನಾಮೆ ನೀಡಬೇಕೆಂದು ಚಂದ್ರು ಪೆರಿಯಾರ್ ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯ ಸರಕಾರಿ ಎಸ್‌ಸಿ-ಎಸ್‌ಟಿ ನೌಕರ ಸಮಿತಿಯ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಎಚ್.ನರಸಿಂಹಯ್ಯ, ಜಿ.ಎಸ್. ಶಿವರುದ್ರಪ್ಪ, ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ ಅವರಂತ ಮಹನೀಯರು ಕೆಲಸ ಮಾಡಿದ ವಿವಿಯಲ್ಲಿ ವೈಜ್ಞಾನಿಕತೆ, ವೈಚಾರಿಕತೆ, ಸಮಾಜಮುಖಿ ಚಿಂತನೆಗಳು ಬಿತ್ತರವಾಗುತ್ತಿದ್ದವು. ಆದರೆ ಈಗ ಜಾತಿಯತೆ, ಕೋಮುವಾದ ಬಿತ್ತುವ ಸಂಸ್ಥೆಯಾಗಿ ಮಾರ್ಪಾಡಾಗಿದೆ. ೬೭ ಪ್ರಾಧ್ಯಪಕರು ಜಾತಿ ತಾರತಮ್ಯ ಆಗುತ್ತಿದೆ ಎಂದು ಸಹಿ ಮಾಡಿದರು, ಕುಲಪತಿ ಅಸಡ್ಡೆ ತೋರುತ್ತಿರುವುದು ದರುಂತ. ವಿಶ್ವವಿದ್ಯಾನಿಲಯದ ಅವ್ಯವಸ್ಥೆ ಮತ್ತು ಜಾತಿ ತಾರತಮ್ಯದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಟ ಚೇತನ್ ಅಹಿಂಸಾ, ದಲಿತ ಹಕ್ಕುಗಳ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಜ್ಞಾನೇಶ್ವರ್ ಉಪಸ್ಥಿತರಿದ್ದರು.

>

Related Articles

ಇತ್ತೀಚಿನ ಸುದ್ದಿಗಳು

You cannot copy content of this page