Saturday, August 3, 2024

ಸತ್ಯ | ನ್ಯಾಯ |ಧರ್ಮ

ವಯನಾಡ್ ದುರಂತ : ಸದನದ ದಾರಿ ತಪ್ಪಿಸಿದ ಅಮಿತ್ ಶಾ ವಿರುದ್ಧ ಹಕ್ಕುಚ್ಯುತಿ ನೋಟೀಸ್

ವಯನಾಡ್ ಭೂಕುಸಿತದ ಕುರಿತು ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಮಾಡಿದ ಭಾಷಣವು ಸದನದ ದಾರಿ ತಪ್ಪಿಸಿದ್ದಾಗಿದೆ ಎಂದು ಉಲ್ಲೇಖಿಸಿದ ಕಾಂಗ್ರೆಸ್, ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜ್ಯಸಭೆಯಲ್ಲಿ ವಿಶೇಷ ಹಕ್ಕುಚ್ಯುತಿ ಮಂಡನೆ ಮಾಡಿದೆ.

ಈ ವಿಚಾರವಾಗಿ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಅಮಿತ್ ಶಾ ನೀಡಿರುವ ಹೇಳಿಕೆಯನ್ನು ವಿಪಕ್ಷಗಳು ವಿಸ್ಕೃತವಾಗಿ ಪರಿಶೀಲಿಸಿವೆ. ಅವರು ರಾಜ್ಯಸಭೆಯಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಸದನವನ್ನು ಹಾದಿ ತಪ್ಪಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಕಳೆದ ಬುಧವಾರ ವಯನಾಡ್ ಭೂಕುಸಿತದ ಕುರಿತು ರಾಜ್ಯಸಭೆಯಲ್ಲಿ ನಡೆದ ಗಂಭೀರ ಚರ್ಚೆಯ ವೇಳೆ ಮಧ್ಯಪ್ರವೇಶಿಸಿದ ಅಮಿತ್ ಶಾ ಜುಲೈ 23, 24, 25 ಮತ್ತು 26ರಂದು ತೀವ್ರ ಮಳೆಯಾಗುವ ಬಗ್ಗೆ ಕೇಂದ್ರ ಸರ್ಕಾರ ನೀಡಿದ್ದ ನಿರ್ದೇಶನವನ್ನು ಕೇರಳ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ನಮ್ಮ ನಿರ್ದೇಶನವನ್ನು ಪಾಲಿಸಿದ್ದರೆ ಒಂದಷ್ಟು ಜೀವಗಳನ್ನು ರಕ್ಷಿಸಬಹುದಿತ್ತು ಎಂದು ಅಮಿತ್ ಶಾ ಹೇಳಿದ್ದರು.

ಆದರೆ ಇದು ಸಂಪೂರ್ಣ ಸತ್ಯಕ್ಕೆ ದೂರವಾದ ಮಾತು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ. ’48 ಗಂಟೆಗಳಲ್ಲಿ 572 ಮಿಮೀ ದಾಖಲೆ ಮಳೆಯಾಗಿದೆ. ಆದರೆ, ನಮಗೆ ಎರಡು ದಿನಗಳಲ್ಲಿ 115 ಮಿಮೀ ನಿಂದ 204 ಮಿಮೀ ಮಳೆಯಾಗುವ ಎಚ್ಚರಿಕೆ ನೀಡಲಾಗಿತ್ತು. ಇದು ಆರೆಂಜ್ ಅಲರ್ಟ್ ಅಡಿಯಲ್ಲಿ ಬರುವ ಮಳೆಯ ಪ್ರಮಾಣವಾಗಿದೆ. ಜುಲೈ 30 ಬೆಳಗಿನ ಜಾವದವರೆಗೆ ಭೂಕುಸಿತ ಸಂಭವಿಸಿದ ಪ್ರದೇಶಕ್ಕೆ ಐಎಂಡಿ (India Meteorological Department) ಆರೆಂಜ್ ಅಲರ್ಟ್ ನೀಡಿತ್ತು ಎಂದಿದ್ದಾರೆ. ದುರಂತ ಸಂಭವಿಸಿದ ನಂತರವೇ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯೂ ತಿಳಿಸಿದೆ.

ಈ ಸಂಬಂಧ ರಾಜ್ಯಸಭೆಯ ಕಾಂಗ್ರೆಸ್ ಉಪನಾಯಕ ಪ್ರಮೋದ್ ತಿವಾರಿ ಮತ್ತು ಹಿರಿಯ ಸಂಸದ ದಿಗ್ವಿಜಯ ಸಿಂಗ್ ಸಹಿ ಮಾಡಿರುವ ಹಕ್ಕುಚ್ಯುತಿ ಪತ್ರದಲ್ಲಿ, ಗೃಹಸಚಿವ ಅಮಿತ್ ಶಾ ಸದನದ ದಿಕ್ಕು ತಪ್ಪಿಸಿರುವುದು ಸ್ಪಷ್ಟ ಮತ್ತು ಸದನಕ್ಕೆ ಮಾಡುವ ಅವಮಾನವಾಗಿದೆ ಎಂದು ಹೇಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page