Friday, June 14, 2024

ಸತ್ಯ | ನ್ಯಾಯ |ಧರ್ಮ

ಪಕ್ಷಪಾತಿ ನಿರೂಪಕರಿಂದ ದೂರ; ಇಂಡಿಯಾ ಒಕ್ಕೂಟದ ನಿರ್ಧಾರ

ಗೋದಿ ಮೀಡಿಯಾಗಳ ಯಾವುದೇ ಪ್ಯಾನಲ್ ಚರ್ಚೆಗಳನ್ನು ನೋಡಿದರೂ ಏಕಪಕ್ಷೀಯವಾಗಿರುವುದನ್ನು ಗಮನಿಸಬಹುದು. ಅಂತಹ ಸುದ್ದಿ ವಾಹಿನಿಗಳ ಸಂಪಾದಕರುಗಳು, ನಿರೂಪಕರು ಚರ್ಚೆಯ ನೆಪದಲ್ಲಿ ತಮ್ಮ ಮಾಲೀಕರಿಗೆ ಇಷ್ಟವಾಗುವಂತೆ ನಿಷ್ಟೆ ತೋರಿಸುತ್ತಾ ಚರ್ಚೆಯ ದಿಕ್ಕನ್ನು ಸಂಘ ಪರಿವಾರದ ಪರವಾಗಿ ತಿರುಗಿಸುವ ಚಾಣಾಕ್ಷತೆ ಹೊಂದಿರುವವರು. ವಾಸ್ತವ ಹೀಗಿರುವಾಗ ಯಾಕೆ ಇಂಡಿಯಾ ಒಕ್ಕೂಟದ ಪಕ್ಷಗಳ ವಕ್ತಾರರು ಕರೆದಾಗ ಈ ಪೀತಪೀಡಿತ ನಿರೂಪಕರ ಜೊತೆ ಚರ್ಚೆಯಲ್ಲಿ ಭಾಗವಹಿಸಬೇಕು?- ಶಶಿಕಾಂತ ಯಡಹಳ್ಳಿ

“ಇಂಡಿಯಾ ಒಕ್ಕೂಟವು ಕೆಲವು ಟಿವಿ ಪತ್ರಕರ್ತರನ್ನು ಬಹಿಷ್ಕರಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುತ್ತಿದೆ, ಇದು ಸಂವಿಧಾನ ವಿರೋಧಿ ಕೃತ್ಯ. ಇದನ್ನು ಖಂಡಿಸಲೇ ಬೇಕು” ಎಂದು ಪ್ರಧಾನಿಗಳಿಂದ ಹಿಡಿದು ಸಂಘ ಪರಿವಾರದ ಅಂಗಗಳು ಅವಲತ್ತುಕೊಳ್ಳುತ್ತಿವೆ. “ತಪ್ಪು ಹೀಗೆಲ್ಲಾ ಮಾಧ್ಯಮದವರ ವಿರುದ್ಧ ನಿರ್ಣಯ ತೆಗೆದುಕೊಳ್ಳಬಾರದು” ಎಂದು ಬಿಜೆಪಿಯ ಸಮರ್ಥಕರೂ ಜಾಲತಾಣದಲ್ಲಿ ಜಾಗಟೆ ಹೊಡೆಯುತ್ತಿದ್ದಾರೆ.

ಹೌದು..ಯಾರು ಹೇಳಿದ್ದು ಪತ್ರಕರ್ತರಿಗೆ ಬಹಿಷ್ಕಾರ ಹಾಕಲಾಗಿದೆ ಎಂದು. ಯಾವ ಗೋದಿ ಮಾಧ್ಯಮಗಳ ನಿರೂಪಕರು ಏಕಪಕ್ಷೀಯವಾಗಿ ಪಕ್ಷಪಾತ ಧೋರಣೆ ತೋರುತ್ತಿದ್ದಾರೋ, ಯಾವ ಮಾರಿಕೊಂಡ ಮಾಧ್ಯಮಗಳು ಮೋದಿಯವರ ಬಟ್ಟಂಗಿಗಳಂತೆ ವರ್ತಿಸುತ್ತಿದ್ದಾರೋ, ಯಾವ ಚಮಚಾಗಿರಿ ಚಾನೆಲ್ ಗ ಳು ಬಿಜೆಪಿ ಪಕ್ಷದ ಮುಖವಾಣಿಯಾಗಿ ಪ್ರತಿಪಕ್ಷದವರ ವಿರುದ್ಧ ನಕಾರಾತ್ಮಕ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸುತ್ತಿವೆಯೋ ಅಂತಹ ಕೋಮುವ್ಯಾಧಿ ಪೀಡಿತ ಮಾಧ್ಯಮಗಳು ಆಯೋಜಿಸುವ ಚರ್ಚಾ ಕಾರ್ಯಕ್ರಮಗಳಿಗೆ ಇಂಡಿಯಾ ಒಕ್ಕೂಟದ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸುವುದಿಲ್ಲ ಎಂದು ಇಂಡಿಯಾ ಸಮನ್ವಯ ಸಮಿತಿಯ ಮಾಧ್ಯಮ ವಿಭಾಗವು ನಿರ್ಧರಿಸಿದೆ. ಗೋದಿ ಮೀಡಿಯಾ ಸುದ್ದಿ ಸಂಸ್ಥೆಗಳ ಪತ್ರಕರ್ತರು, ಸಂಪಾದಕರು, ನಿರೂಪಕರು ನಡೆಸಿಕೊಡುವ ಯಾವುದೇ ಕಾರ್ಯಕ್ರಮಗಳಿಗೆ ತಮ್ಮ ಪಕ್ಷಗಳ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲವೆಂದು ಘೋಷಿಸಲಾಗಿದೆ ಹಾಗೂ ಅಂತಹ ಪೀತ ಪತ್ರಿಕೋದ್ಯಮದ ಮತಾಂಧ ಪತ್ರಕರ್ತರ ಪಟ್ಟಿಯನ್ನು ಬಿಡುಗಡೆ ಗೊಳಿಸಲಾಗಿದೆ.

ಇದರಲ್ಲಿ ಬಹಿಷ್ಕಾರದ ಮಾತೆಲ್ಲಿ? ನಿಷೇಧದ ನಡೆಯೆಲ್ಲಿ? ಯಾರು ತಮ್ಮ ವಿರುದ್ಧ ನಿರಂತರ ವಾಗ್ದಾಳಿ ನಡೆಸಿ ಒಂದು ಪಕ್ಷ ಹಾಗೂ ಒಬ್ಬ ವ್ಯಕ್ತಿಪರ ಸುದ್ದಿಗಳನ್ನು ತಿರುಚಿ, ನಿರಂತರವಾಗಿ ಸುಳ್ಳುಗಳನ್ನು ವೈಭವೀಕರಿಸುತ್ತಿದ್ದಾರೋ ಅಂತವರ ಜೊತೆ ಚರ್ಚಿಸಿ ಏನೂ ಪ್ರಯೋಜನವಿಲ್ಲವಾದ್ದರಿಂದ ಭಾಗವಹಿಸುವುದನ್ನು ನಿಲ್ಲಿಸುತ್ತೇವೆ ಎಂದು ಹೇಳುವುದು ಅದು ಹೇಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ? ಇಷ್ಟಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಪತ್ರಿಕೋದ್ಯಮದ ವೃತ್ತಿಪರತೆಯನ್ನು ಸಂಘ ಪರಿವಾರಕ್ಕೆ ಅಡವಿಟ್ಟ ಗೋದಿ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಗೋದಿ ಮೀಡಿಯಾಗಳ ಯಾವುದೇ ಪ್ಯಾನಲ್ ಚರ್ಚೆಗಳನ್ನು ನೋಡಿದರೂ ಏಕಪಕ್ಷೀಯವಾಗಿರುವುದನ್ನು ಗಮನಿಸಬಹುದು. ಅಂತಹ ಸುದ್ದಿ ವಾಹಿನಿಗಳ ಸಂಪಾದಕರುಗಳು ನಿರೂಪಕರು ಚರ್ಚೆಯ ನೆಪದಲ್ಲಿ ತಮ್ಮ ಮಾಲೀಕರಿಗೆ ಇಷ್ಟವಾಗುವಂತೆ ನಿಷ್ಟೆ ತೋರಿಸುತ್ತಾ ಚರ್ಚೆಯ ದಿಕ್ಕನ್ನು ಸಂಘ ಪರಿವಾರದ ಪರವಾಗಿ ತಿರುಗಿಸುವ ಚಾಣಾಕ್ಷತೆ ಹೊಂದಿರುವವರು. ವಾಸ್ತವ ಹೀಗಿರುವಾಗ ಯಾಕೆ ಇಂಡಿಯಾ ಒಕ್ಕೂಟದ ಪಕ್ಷಗಳ ವಕ್ತಾರರು ಕರೆದಾಗ ಈ ಪೀತಪೀಡಿತ ನಿರೂಪಕರ ಜೊತೆ ಚರ್ಚೆಯಲ್ಲಿ ಭಾಗವಹಿಸಬೇಕು? ಪೂರ್ವನಿರ್ಧಾರಿತ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಫಲಿತಾಂಶ ಮ್ಯಾನುಪಲೇಟ್ ಮಾಡುವವರು ಇದೇ ಕೂಗುಮಾರಿ ನಿರೂಪಕರೇ ಅಲ್ಲವೇ? ತಮ್ಮ ಮೋದಿ ಪರ ನಿಲುವಿನ ವಿರುದ್ದ ಯಾರಾದರೂ ತಕರಾರು ಎತ್ತಿದರೆ ಜೋರಾಗಿ ಕೂಗಾಡಿ, ಗದ್ದಲ ಎಬ್ಬಿಸಿ ಚರ್ಚೆಯ ದಿಕ್ಕನ್ನೇ ಬದಲಾಯಿಸುವ, ಏಕಪಕ್ಷೀಯ ವಾದದಿಂದ ಭಿನ್ನ ಧ್ವನಿಗಳ ತೀವ್ರತೆಯನ್ನು ಅಡಗಿಸುವ ಸುದ್ದಿ ವಾಹಿನಿಗಳ ಚರ್ಚೆಯಲ್ಲಿ ಪ್ರತಿರೋಧ ತೋರುವವರು ಯಾಕೆ ಭಾಗವಹಿಸಬೇಕು? ಭಾಗವಹಿಸಿದರೂ ಅದರ ಪ್ರಯೋಜನವನ್ನು ಈ ಕೂಗುಮಾರಿ ನಿರೂಪಕರು ಹಾಗೂ ಅವರು ಪ್ರತಿನಿಧಿಸುವ ಸಿದ್ದಾಂತಗಳು ಪಡೆಯುವುದೇ ದಿಟವಾದಾಗ ಅಂತಲ್ಲಿ ಹೋಗಿ ಉಪಯೋಗವೇನು? ಆದ್ದರಿಂದ ‘ನಾವು ನಮ್ಮ ಪಕ್ಷಗಳ ವಕ್ತಾರರನ್ನು ಇಂತಹ ಪೂರ್ವಗ್ರಹಪೀಡಿತ ನಿರೂಪಕರು ನಡೆಸುವ ಕಾರ್ಯಕ್ರಮಗಳಿಗೆ ಕಳುಹಿಸುವುದಿಲ್ಲ’ ಎಂದು ಇಂಡಿಯಾ ಒಕ್ಕೂಟವು ನಿರ್ಧರಿಸಿದ್ದು ಸೂಕ್ತವೂ ಹಾಗೂ ಸಕಾಲಿಕವೂ ಆಗಿದೆ ಹಾಗೂ ವಿರೋಧ ಪಕ್ಷಗಳ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನವೂ ಆಗಿದೆ. ಕೇವಲ ರಾಷ್ಟ್ರೀಯ ಸುದ್ದಿ ವಾಹಿನಿಗಳ ಪಕ್ಷಪಾತಿ ನಿರೂಪಕರನ್ನು ಮಾತ್ರವಲ್ಲ ಪ್ರಾದೇಶಿಕ ಭಾಷಾ ಚಾನೆಲ್ ಗಳಲ್ಲಿರುವ ಕೋಮುವ್ಯಾಧಿ ನಿರೂಪಕರ ಕಾರ್ಯಕ್ರಮಗಳಿಗೂ ತಮ್ಮ ವಕ್ತಾರರನ್ನು ಕಳುಹಿಸಿಕೊಡುವುದಿಲ್ಲ ಎಂಬ ನಿರ್ಧಾರವನ್ನೂ ತೆಗೆದುಕೊಳ್ಳುವುದು ಬಾಕಿ ಇದೆ.

ಯಾವುದೇ ಚರ್ಚೆಯಾಗಲಿ ಅದು ಎಂದೂ ಏಕಪಕ್ಷೀಯವಾಗಿರಬಾರದು ಹಾಗೂ ಪೂರ್ವಯೋಜಿತವೂ, ಪೂರ್ವಗ್ರಹಪೀಡಿತವೂ ಆಗಿರಲೇಬಾರದು. ಹಾಗೇನಾದರೂ ಆದರೆ ಅದು ಚರ್ಚೆಯೂ ಅಲ್ಲಾ ಅಲ್ಲಿ ನಡೆಯುವುದು ಸಂವಾದವೂ ಅಲ್ಲಾ. ಯಾವುದೋ ಒಂದು ವಿಷಯದ ಬಗ್ಗೆ ನಡೆಯುವ ಸಂವಾದ ಆಲೋಚನೆಗೆ ಪ್ರಚೋದಿಸಬೇಕು. ಚರ್ಚೆ ದಾರಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾತ್ರ ನಿರೂಪಕನದ್ದಾಗಿರಬೇಕು. ಆದರೆ ಈ ಗೋದಿ ಮಾಧ್ಯಮಗಳ ನಿರೂಪಕರು ಚರ್ಚೆಗೆ ಆಹ್ವಾನಿತರಾದವರಿಗಿಂತಾ ತಾವೇ ಹೆಚ್ಚು ಮಾತನಾಡುತ್ತಾರೆ, ವಾದಿಸುತ್ತಾರೆ ಮತ್ತು ತಮ್ಮದೇ ತೀರ್ಮಾನಗಳನ್ನೂ ಘೋಷಿಸುತ್ತಾರೆ. ನಿರ್ವಹಣೆ ಮಾಡಬೇಕಾದವರು ನಿರ್ದೇಶನ ಮಾಡುವುದು, ನಿಯಂತ್ರಣ ಮಾಡಬೇಕಾದವರು ನ್ಯಾಯಾಧೀಶರಂತೆ ಆದೇಶಿಸುವುದು ಅಕ್ಷಮ್ಯ. ಇದನ್ನು ವಿರೋಧಿಸಿ ಚರ್ಚೆಯಲ್ಲಿ ನಮ್ಮ ವಾದವನ್ನು ಆಲಿಸದೇ ಇದ್ದರೆ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಾದರೆ ಅಂತಹ ಕಾರ್ಯಕ್ರಮಗಳಿಗೆ ನಾವು ಬರುವುದಿಲ್ಲ ಎನ್ನುವ ನಿರ್ಧಾರ ಅದು ಹೇಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ. ಸಂವಿಧಾನದ ವಿರೋಧಿಯಾಗುತ್ತದೆ?

ಪತ್ರಿಕೋದ್ಯಮ ಎನ್ನುವುದು ತನ್ನ ಇತಿಮಿತಿಗಳನ್ನೂ ಮೀರಿ ಮೆರೆಯುತ್ತಿದೆ. ಭಾರತದ ಬಹುತೇಕ ಖಾಸಗಿ ವಾಹಿನಿಗಳು ಹಣಕ್ಕಾಗಿಯೋ, ಸರ್ವಾಧಿಕಾರಿ ಪ್ರಭುತ್ವದ ಭಯದಿಂದಲೂ ಗೋದಿ ಮಾಧ್ಯಮಗಳಾಗಿ ಬದಲಾಗಿವೆ. ಕಾರ್ಪೊರೇಟ್ ಬಂಡವಾಳಿಗರ ಮಾಲಿಕತ್ವದಲ್ಲಿರುವ ಮಾಧ್ಯಮಗಳು ತಮ್ಮ ಆಶೋತ್ತರಗಳನ್ನು ಈಡೇರಿಸುವ ಪ್ರಭುತ್ವದ ಪರವಾಗಿ ಜನಾಭಿಪ್ರಾಯ ಮೂಡಿಸಲು ಬದ್ಧವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಸುದ್ದಿ ವಾಹಿನಿಗಳ ಸಂಪಾದಕರು ಹಾಗೂ ನಿರೂಪಕರಿಂದ ನೈತಿಕತೆ, ವೃತ್ತಿಪರತೆ ಹಾಗೂ ನಿರಪೇಕ್ಷತೆ ಬಯಸುವುದೇ ಅಸಾಧ್ಯ. ಪರಿಸ್ಥಿತಿ ಹೀಗಿರುವಾಗ ಪ್ರಭುತ್ವ ಪ್ರಾಯೋಜಿತ ಸುದ್ದಿ ವಾಹಿನಿಗಳ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುವುದಿಲ್ಲ ಎನ್ನುವ ಪ್ರತಿಭಟನಾತ್ಮಕ ನಿರ್ಧಾರ ಸದ್ಯದ ಅಗತ್ಯವಾಗಿದೆ. ಈ ಗೋದಿ ಮಾಧ್ಯಮಗಳ ಪಕ್ಷಪಾತಿ ಧೋರಣೆಯನ್ನು ಜನರ ಮುಂದೆ ಬೆತ್ತಲಾಗಿಸಲು ಇದಕ್ಕಿಂತ ಬೇರೆ ದಾರಿ ಪ್ರತಿಪಕ್ಷಗಳಿಗೂ ಕಾಣದಾಗಿದೆ.

ಇದನ್ನೂ ಓದಿ : ನ್ಯೂಸ್ ಆಂಕರ್ ಗಳಿಗೆ ಬಹಿಷ್ಕಾರ | ಅಹಿಂಸಾತ್ಮಕ ‘ಶಾಕ್ ಟ್ರೀಟ್ ಮೆಂಟ್’

ಯಾವುದೇ ಪತ್ರಕರ್ತ ವೈಯಕ್ತಿಕವಾಗಿ ಯಾವುದೇ ಸಿದ್ದಾಂತಕ್ಕೆ ಬದ್ದನಾಗಿರಲಿ ಅದು ಅವನ ಖಾಸಗಿ ಹಕ್ಕು. ಆದರೆ ಸುದ್ದಿ ವಾಹಿನಿಯಲ್ಲಿ ಚರ್ಚಾ ಕಾರ್ಯಕ್ರಮದ ನಿರೂಪಕರಾದವರು ತಮ್ಮ ಎಡ ಬಲ ಸಿದ್ದಾಂತಗಳನ್ನು ಪಕ್ಕಕ್ಕಿಟ್ಟು ನಡುವೆ ನಿಂತು ಪಕ್ಷಪಾತ ತೋರದೇ ಕಾರ್ಯಕ್ರಮವನ್ನು ನಿರೂಪಿಸಬೇಕು. ಭಿನ್ನಮತಗಳಿದ್ದರೂ ಎಲ್ಲಾ ವಾದಗಳಿಗೂ ತಮ್ಮ ಅನಿಸಿಕೆ ಅಭಿವ್ಯಕ್ತಿಸಲು ಮುಕ್ತ ಅವಕಾಶ ಮಾಡಿಕೊಡಬೇಕು. ಒಂದು ರೀತಿಯಲ್ಲಿ ನಿರೂಪಕನಾದವನು ಅಲಿಪ್ತನಾಗಿದ್ದು ಚರ್ಚೆಯಲ್ಲಿ ವಿಷಯಾಂತರವೋ ಅತಿರೇಕವೋ ಆಗದಂತೆ ನೋಡಿಕೊಳ್ಳಬೇಕು. ಆದರೆ ಬಹುತೇಕ ಸುದ್ದಿ ವಾಹಿನಿಗಳ ಚರ್ಚೆಯಲ್ಲಿ ಆಗುತ್ತಿರುವುದೇ ಬೇರೆ. ಆ ವಾಹಿನಿಯ ಮಾಲೀಕರ ಹಿತಾಸಕ್ತಿಗೆ ಅನುಗುಣವಾಗಿ, ಸಂಪಾದಕರ ಧೋರಣೆಗೆ ಪೂರಕವಾಗಿ ಚರ್ಚೆಯನ್ನು ನಡೆಸುವ ನಿರೂಪಕ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿಯಾಗಿರುತ್ತಾನೆ. ಹೊಟ್ಟೆಪಾಡಿಗಾಗಿ ನಿರೂಪಕರಾಗಿ ಮಾಲೀಕರ ಅಣತಿಯನ್ನು ಪಾಲಿಸುವುದು ಅನೇಕ‌ ಪರ್ತಕರ್ತರ ಅನಿವಾರ್ಯತೆಯೂ ಆಗಿದೆ. ಆದರೆ ಈಗ ಇಂಡಿಯಾ ಒಕ್ಕೂಟ ಘೋಷಿಸಿದ ಪಟ್ಟಿಯಲ್ಲಿರುವ ಅರ್ನಬ್ ಗೋಸ್ವಾಮಿ, ಅದಿತಿ ತ್ಯಾಗಿ, ಸುಧೀರ ಚೌಧರಿ, ಪ್ರಾಚಿ, ಸುಶಾಂತ ಸೇರಿದಂತೆ ಒಟ್ಟು 14 ಕೋಮುವ್ಯಾಧಿ ಪೀಡಿತ ಪತ್ರಕರ್ತರು ಹೊಟ್ಟೆಪಾಡಿಗಾಗಿ ಪತ್ರಿಕೋದ್ಯಮಕ್ಕೆ ಬಂದವರಲ್ಲ. ಇವರೆಲ್ಲಾ ಮತೀಯವಾದಿ ಸಿದ್ದಾಂತದ ಪ್ರತಿಪಾದಕರು. ಪ್ರಭುತ್ವದ ಗುಲಾಮರು ಹಾಗೂ ಇವರ ಸುದ್ದಿ ವಾಹಿನಿಗಳೋ ಮಾರಿಕೊಂಡ ಮಾಧ್ಯಮಗಳು.

ಹೀಗಾಗಿ ಇಂತವರ ಕಾರ್ಯಕ್ರಮಗಳಿಗೆ ನಾವು ಭಾಗವಹಿಸುವುದಿಲ್ಲ ಎಂದು ಇಂಡಿಯಾ ಒಕ್ಕೂಟ ಘೋಷಿಸಿದೆ. ಈ ಮೂಲಕ ಈ ಕೂಗುಮಾರಿಗಳ ಕೆನ್ನೆಗೆ ಪರೋಕ್ಷವಾಗಿ ಬಾರಿಸಿದೆ. ‘ನೀವು ಏಕಪಕ್ಷೀಯವಾಗಿ ಏನಾದರೂ ಯಾರಪರವಾದರೂ ಬಾಯಿ ಬಡಿದುಕೊಳ್ಳಿ, ನಾವು ಅಂತಹುದರಲ್ಲಿ ಪಾಲುದಾರರಾಗುವುದಿಲ್ಲ’ ಎಂಬ ಸಂದೇಶವನ್ನು ಮುಟ್ಟಿಸಬೇಕಾದವರಿಗೆ ಮುಟ್ಟಿಸಿಯಾಗಿದೆ. ಇದನ್ನು ಬಿಟ್ಟು ಈ ಪೀತಪತ್ರಿಕೋದ್ಯಮಿಗಳ ನಿಯಂತ್ರಣಕ್ಕೆ ಬೇರೆ ದಾರಿ ಏನಿದೆ?

  • ಶಶಿಕಾಂತ ಯಡಹಳ್ಳಿ, ಪತ್ರಕರ್ತರು

Related Articles

ಇತ್ತೀಚಿನ ಸುದ್ದಿಗಳು