Friday, February 27, 2026

ಸತ್ಯ | ನ್ಯಾಯ |ಧರ್ಮ

ನಾಯಕತ್ವ ಚರ್ಚೆ ಮಧ್ಯೆ ಡಿಕೆಶಿ ಬಣದ ಶಾಸಕರ ಸಮಾಗಮ: ಮಾಗಡಿ ಬಾಲಕೃಷ್ಣ ಹುಟ್ಟುಹಬ್ಬ, ರಾಜಕೀಯ ಕುತೂಹಲಕ್ಕೆ ಕಾರಣ

ಬೆಂಗಳೂರು: ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಗರಿಗೆದರಿರುವ ಹೊತ್ತಲ್ಲೇ ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರ ಹುಟ್ಟುಹಬ್ಬದ ನೆಪದಲ್ಲಿ ನಡೆದ ಶಾಸಕರ ಸಮಾಗಮ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣಕ್ಕೆ ಸೇರಿದವರೇ ಬಹುಪಾಲು ಭಾಗಿಯಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಕಾರ್ಯಕ್ರಮದಲ್ಲಿ ಸಚಿವ ಡಿ. ಸುಧಾಕರ್, ಶಾಸಕರಾದ ಶಿವಗಂಗಾ ಬಸವರಾಜು, ಕುಣಿಗಲ್ ಶಾಸಕ ಡಾ. ರಂಗನಾಥ್, ಸಿ.ಪಿ. ಯೋಗೇಶ್ವರ್, ನಯನಾ ಮೋಟಮ್ಮ, ಆನೇಕಲ್ ಶಾಸಕ ಶಿವಣ್ಣ ಸೇರಿದಂತೆ ಒಟ್ಟು 18 ಮಂದಿ ಶಾಸಕರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಈ ಸಂದರ್ಭದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಭೆಗೆ ರಾಜಕೀಯ ಅರ್ಥ ಕಲ್ಪಿಸುವ ಪ್ರಯತ್ನಗಳು ಕೂಡ ನಡೆಯುತ್ತಿವೆ.

ಸೂತ್ರಗಳ ಪ್ರಕಾರ, ಇದು ಕೇವಲ ಹುಟ್ಟುಹಬ್ಬದ ಆಚರಣೆ ಮಾತ್ರವಲ್ಲದೆ, ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತ ಅನೌಪಚಾರಿಕ ಚರ್ಚೆಗೆ ವೇದಿಕೆಯಾಯಿತೇ ಎಂಬ ಪ್ರಶ್ನೆಗಳು ಎದ್ದಿವೆ. ಕಾಂಗ್ರೆಸ್ ಒಳರಾಜಕೀಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಕೂಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ.

ಆದರೆ, ಸಭೆಗೆ ರಾಜಕೀಯ ಬಣ್ಣ ಹಚ್ಚಬಾರದು ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಸ್ಪಷ್ಟಪಡಿಸಿದ್ದಾರೆ. “ಬಾಲಕೃಷ್ಣ ಅವರ ಆಹ್ವಾನಕ್ಕೆ ಸ್ಪಂದಿಸಿ ಊಟಕ್ಕೆ ಹಾಜರಾಯಿತು. ಸುಮಾರು 40 ಮಂದಿ ಶಾಸಕರು ಇದ್ದರು. ಇದು ಸೌಹಾರ್ದ ಕೂಟ ಮಾತ್ರ,” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಹೀಗಿದ್ದರೂ, ನಾಯಕತ್ವ ಬದಲಾವಣೆ ಕುರಿತ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ ಡಿಕೆಶಿ ಬಣದ ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಸಮೀಕರಣಗಳ ಸೂಚನೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಮುಂದುವರಿದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page