Friday, January 30, 2026

ಸತ್ಯ | ನ್ಯಾಯ |ಧರ್ಮ

‘ಡಿ.ಕೆ. ಶಿವಕುಮಾರ್‌ ಕರ್ನಾಟಕದ ಸಿಎಂ ಆಗಲು ಅವಕಾಶ ನೀಡಬೇಡಿ’: ಮುಖ್ಯಮಂತ್ರಿಗೆ ಜನಾರ್ದನ ರೆಡ್ಡಿ ಒತ್ತಾಯ

ಬೆಂಗಳೂರು: ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು “ಅಧಿಕಾರದಲ್ಲಿ ಮುಂದುವರೆಯುವಂತೆ” ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿಯಾಗಲು ಬಿಡಬಾರದು ಎಂದು ಒತ್ತಾಯಿಸಿದರು. ಬಳ್ಳಾರಿ ಹಿಂಸಾಚಾರದ ನಂತರ ಡಿಕೆ ಶಿವಕುಮಾರ್ ನಡೆದುಕೊಂಡ ರೀತಿಯನ್ನು ರೆಡ್ಡಿ ತೀವ್ರವಾಗಿ ಟೀಕಿಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ರೆಡ್ಡಿ, “ನನಗೆ ಮುಖ್ಯಮಂತ್ರಿಯವರ ಬಗ್ಗೆ ಗೌರವವಿದೆ. ನೀವು ಇನ್ನೂ ಎರಡೂವರೆ ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಬೇಕು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು,” ಎಂದು ಹೇಳಿದರು.

“ಗುಂಪುಗೂಡಿ ನನ್ನ ಮನೆಯ ಮೇಲೆ ದಾಳಿ ಮಾಡಿದ ತಮ್ಮ ಪಕ್ಷದ ಶಾಸಕನ ಪರವಾಗಿ ನಿಲ್ಲುವುದಾಗಿ ಶಿವಕುಮಾರ್ ಹೇಳಿದ್ದರು,” ಎಂದು ರೆಡ್ಡಿ ಸ್ಮರಿಸಿದರು. “ನಾನು ರಕ್ಷಣೆ ಕೋರಿದ್ದೇನೆ ಎಂದು ವರದಿಗಾರರು ಡಿಸಿಎಂಗೆ ಹೇಳಿದಾಗ, ಅವರು ನಾನು ಇರಾನ್ ಅಥವಾ ಅಮೆರಿಕಕ್ಕೆ ಹೋಗಲಿ ಅಥವಾ ರಕ್ಷಣೆಗಾಗಿ ಬಿಜೆಪಿ ಕಾರ್ಯಕರ್ತರನ್ನು ನಿಯೋಜಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು. ಅಲ್ಲದೆ, ನನ್ನ ತಲೆಗೆ ಅಥವಾ ಎದೆಗೆ ಗುಂಡೇಟು ಬಿದ್ದಿದೆಯೇ ಎಂದು ಪ್ರಶ್ನಿಸಿದರು.”

ಡಿಸಿಎಂ ಹುದ್ದೆಯಲ್ಲಿರುವ ವ್ಯಕ್ತಿಗೆ ಇಂತಹ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ರೆಡ್ಡಿ ಹೇಳಿದರು.

ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡದಂತೆ ರೆಡ್ಡಿ ಸಿಎಂ ಅವರನ್ನು ಒತ್ತಾಯಿಸಿದರು. “ನೀವೇ ಮುಂದುವರಿಯಬೇಕು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು,” ಎಂದರು.

ಬಳ್ಳಾರಿಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಸಿಎಂಗೆ ಸಿಬಿಐ ಮೇಲೆ ನಂಬಿಕೆ ಇಲ್ಲದಿದ್ದರೆ, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ರೆಡ್ಡಿ ಒತ್ತಾಯಿಸಿದರು.

“ಒಳ್ಳೆಯ ಐಪಿಎಸ್ ಅಧಿಕಾರಿಗಳನ್ನು ನೇಮಿಸಿ. ಬಳ್ಳಾರಿಗೆ ಶಾಂತಿ ಮತ್ತು ಅಭಿವೃದ್ಧಿಯ ಅಗತ್ಯವಿದೆ,” ಎಂದು ಅವರು ಮನವಿ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page