Sunday, June 22, 2025

ಸತ್ಯ | ನ್ಯಾಯ |ಧರ್ಮ

‘ಆಪರೇಷನ್ ಹಸ್ತ’: ಕಾಂಗ್ರೆಸ್ ಸೇರಲು ಬಯಸುವ ನಾಯಕರನ್ನು ತಡೆಯದಂತೆ ಹೈಕಮಾಂಡ್‌ ಸೂಚನೆ

ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸೇರಲು ಬಯಸುವ ಪಕ್ಷದ ನಾಯಕರನ್ನು ತಡೆಯದಂತೆ ಬಿಜೆಪಿ ಕರ್ನಾಟಕ ಘಟಕಕ್ಕೆ ಸೂಚಿಸಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸೇರಲು ಬಯಸುವ ಪಕ್ಷದ ನಾಯಕರನ್ನು ತಡೆಯದಂತೆ ಬಿಜೆಪಿ ಕರ್ನಾಟಕ ಘಟಕಕ್ಕೆ ಸೂಚನೆ ನೀಡಲಾಗಿದೆ.

ಇತ್ತ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯ 10ರಿಂದ 15 ಮಂದಿ ‘ಆಪರೇಷನ್ ಹಸ್ತ’ ಮೂಲಕ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದಾರೆ.

ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಮತ್ತು ನಿವೃತ್ತ ಸಚಿವ ಹಾಗೂ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವ ಸೋಮಶೇಖರ್ ಅವರ ದೊಡ್ಡ ಸಂಖ್ಯೆಯ ಬೆಂಬಲಿಗರು, ಸೋಮಶೇಖರ್ ಅವರು ಕಾಂಗ್ರೆಸ್‌ಗೆ ಔಪಚಾರಿಕವಾಗಿ ಸೇರುವುದಷ್ಟೇ ಬಾಕಿಯುಳಿದಿದೆ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕತ್ವದ ವಿರುದ್ಧ ಹೆಬ್ಬಾರ್ ಅಸಮಾಧಾನಗೊಂಡಿದ್ದು, ಶೀಘ್ರದಲ್ಲೇ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 2019ರಲ್ಲಿ ಕಾಂಗ್ರೆಸ್‌ನಿಂದ ಆಪರೇಷನ್ ಕಮಲದ ಮೂಲಕ ಈ ಇಬ್ಬರೂ ನಾಯಕರು ಬಿಜೆಪಿ ಸೇರಿದ್ದರು.

ವರುಣಾ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಹಾಗೂ ಚಾಮರಾಜನಗರ ಕ್ಷೇತ್ರದಿಂದ ಪುಟ್ಟರಂಗ ಶೆಟ್ಟಿಯವರೆದುರು ಸೋತಿದ್ದ ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್‌ಗೆ ಮರಳುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸೋಮಣ್ಣ ಅವರು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ನಿಟ್ಟಿನಲ್ಲಿ ಪಕ್ಷ ತೀರ್ಮಾನಿಸಿದ ನಂತರ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಸೋಮವಾರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಹಿರಿಯ ಮುಖಂಡರಿದ್ದ ಕೋರ್ ಕಮಿಟಿ ಸಭೆಯಲ್ಲಿ ಕೇಸರಿ ಪಕ್ಷ ತೊರೆಯಲು ಬಯಸುವ ನಾಯಕರನ್ನು ತಡೆಯದಿರಲು ನಿರ್ಧರಿಸಲಾಯಿತು.

ಒಮ್ಮೆ ಒಬ್ಬರನ್ನು ಪಕ್ಷದ ನಾಯಕ ಎಂದು ಘೋಷಿಸಿದರೆ ಪಕ್ಷದಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಮುಖಂಡರು ಹೇಳಿದ್ದಾರೆ. ಬಿಜೆಪಿಯು ಕೇಡರ್ ಆಧಾರಿತ ಪಕ್ಷವಾಗಿದ್ದು, ನಾಯಕರು ತೊರೆಯಲು ನಿರ್ಧರಿಸಿದರೆ ಭಯಪಡುವ ಅಗತ್ಯವಿಲ್ಲವೆನ್ನುವುದು ಮೇಲಿನ ಹಂತದ ನಾಯಕ ತೀರ್ಮಾನವಾಗಿದೆ.

ವಿರೋಧ ಪಕ್ಷದ ನಾಯಕರ ನೇಮಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಹೈಕಮಾಂಡ್‌ಗೆ ಮನವಿ ಸಲ್ಲಿಸಲು ಮುಖಂಡರು ನಿರ್ಧರಿಸಿದ್ದಾರೆ.

ಯಡಿಯೂರಪ್ಪನವರು ಪಕ್ಷದಲ್ಲಿ ಮತ್ತೆ ರಂಗಕ್ಕೆ ಬರುತ್ತಿದ್ದು, ಇದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸನ್ನು ತುಂಬಲಿದೆ ಎನ್ನಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page