ಮಂಗಳೂರು : ಧರ್ಮಸ್ಥಳದಲ್ಲಿ (Dharmasthala) ಶವಗಳನ್ನು ಹೂತಿಟ್ಟ ಆರೋಪಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಜನಾರ್ದನ ಪೂಜಾರಿ (Janardhana Poojary) ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು (ಆ.10) ತೊಕ್ಕೊಟ್ಟು ಮುದ್ದುಕೃಷ್ಣ ಸಮಾರಂಭದಲ್ಲಿ ಮಾತನಾಡಿದ ಜನಾರ್ದನ ಪೂಜಾರಿ, ಸುಳ್ಳು ಆರೋಪಗಳ ಮೂಲಕ ಧರ್ಮಸ್ಥಳದ ಹೆಸರು ಹಾಳು ಮಾಡಲಾಗುತ್ತಿದೆ ಎಂದು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಧರ್ಮಸ್ಥಳದಲ್ಲಿ ಎಸ್.ಐ.ಟಿ ನಡೆಸುತ್ತಿರುವ ತನಿಖೆಯ ಬಗ್ಗೆ ಕಿಡಿಕಾರಿದ ಅವರು, ಮಸೀದಿ ಹಾಗೂ ಚರ್ಚ್ಗಳಲ್ಲಿ ಶವ ಹೂತಿಡಲಿಲ್ವಾ? ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ ಎಂದು ಪ್ರಶ್ನೆ ಮಾಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಜೊತೆ ನಾವಿದ್ದೇವೆ..ಮಾತ್ರವಲ್ಲ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಜೊತೆ ಇಡೀ ಜಗತ್ತು ನಿಲ್ಲುತ್ತದೆ ಎಂದು ಹೇಳಿದ್ದಾರೆ. ನಮ್ಮ ಸಂಪೂರ್ಣ ಕುದ್ರೋಳಿ ದೇವಸ್ಥಾನ ನಿಮ್ಮೊಂದಿಗಿದೆ..ಹೀಗಾಗಿ ಹೆದರಬೇಡಿ ಎಂದು ಧೈರ್ಯ ತುಂಬಿದ್ದಾರೆ.ಕಳೆದ 12 ದಿನಗಳಿಂದ ಎಸ್ಐಟಿ ಧರ್ಮಸ್ಥಳದಲ್ಲಿ ಬಹಳಷ್ಟು ಕಡೆಗಳಲ್ಲಿ ಉತ್ಖನನ ನಡೆಸಿ ಕಳೇಬರಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದ್ರೆ ಎಷ್ಟು ಅಗೆದರೂ ಇದುವರೆಗೂ ಏನು ಪತ್ತೆಯಾಗಿಲ್ಲ ಎಂದು ಕಿಡಿಕಾಡಿದ್ದಾರೆ. ಮನುಷ್ಯ ಮೃತಪಟ್ಟ ನಂತರ ದೇವಸ್ಥಾನದ ವಠಾರದಲ್ಲಿ ಹೂತು ಹಾಕೋದು ಒಂದು ಪದ್ಧತಿ. ಧರ್ಮಸ್ಥಳದಂತಹ ದೇವಸ್ಥಾನ ನಡೆಸೋದು ಎಷ್ಟು ಕಷ್ಟ ಎಂದು ನನಗೆ ಗೊತ್ತು. ಧರ್ಮಸ್ಥಳದ ವಠಾರವನ್ನ ಎಸ್ಐಟಿಯವರು ಅಗೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ಇಷ್ಟೆಲ್ಲಾ ನಡೆಯುತ್ತಿದೆ. ಎಸ್.ಐ.ಟಿ ಹುಡುಕಾಡಿದರೂ ಏನೂ ಪತ್ತೆಯಾಗುತ್ತಿಲ್ಲ. ಮುಖ್ಯಮಂತ್ರಿಯವರೇ ಏನು ಮಾಡುತ್ತಿದ್ದೀರಿ ನೀವು. ಈ ಆರೋಪಗಳು ಮತ್ತು ತನಿಖೆಯಿಂದ ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ. ಆದ್ರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ.ಇಂದು ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿಯವರಿಗೆ ಧೈರ್ಯವಿದ್ದರೆ
,ತಾಕತ್ತಿದ್ದರೆ ಧರ್ಮಸ್ಥಳಕ್ಕೆ ಹೋಗಿ ಭಾಷಣ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.