Friday, June 20, 2025

ಸತ್ಯ | ನ್ಯಾಯ |ಧರ್ಮ

ಭಗತ್‌ ಸಿಂಗ್‌, ಆಜಾದ್‌ ಒಡನಾಡಿ ದುರ್ಗಾವತಿ ದೇವಿ

‘ಭಾರತದ ಅಗ್ನಿ’ ಎಂದೇ ಖ್ಯಾತಿಯಾಗಿದ್ದ ದುರ್ಗಾವತಿ ದೇವಿ/ದುರ್ಗಾ ಭಾಭಿ ಅವರು ಬ್ರಿಟಿಷ್ ಪೊಲೀಸರನ್ನೇ ಬೆದರಿಸಿದ ದಿಟ್ಟ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಭಗತ್ ಸಿಂಗ್, ಅಶಫಖುಲ್ಲಾ ಮತ್ತು ಚಂದ್ರಶೇಖರ್ ಆಜಾದ್ ರಂತಹ ಕ್ರಾಂತಿಕಾರಿಗಳ ಮೇಲೂ ಅಪಾರ ಪ್ರಭಾವ ಬೀರಿದ ದಿಟ್ಟ ಹೆಣ್ಣು ದುರ್ಗಾದೇವಿ. ಈಕೆ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (HSRA) ಸದಸ್ಯರ ಮೇಲೆ ಕೂಡ ಬಲವಾದ ಪ್ರಭಾವವನ್ನು ಬೀರಿದ್ದರು.  ಬೆಂಗಾಲದವರಾಗಿದ್ದ ದುರ್ಗಾದೇವಿ, ತಮ್ಮ 11 ನೇ ವಯಸ್ಸಿನಲ್ಲಿ ಪ್ರೊಫೆಸರ್ ಭಗವತಿ ಚರಣ್ ವೋಹ್ರಾ ಅವರನ್ನು ವಿವಾಹವಾದರು (ಭಗತ್ ಸಿಂಗ್‌ ನನ್ನು ಬಿಡುಗಡೆ ಮಾಡಲು ಜೈಲಿನ ಮೇಲೆ ಬಾಂಬ್ ದಾಳಿ ಮಾಡಲು ಯೋಜಿಸಿದ್ದ ಎಚ್ಎಸ್ಆರ್ʼಎ ಸಂಘಟನೆಯ ಸದಸ್ಯ.  ಆದರೆ ಲಾಹೋರ್ ಬಳಿಯ ರಾವಿ ನದಿಯ ದಡದಲ್ಲಿ ಬಾಂಬ್ ಪರೀಕ್ಷೆ ಮಾಡುವಾಗ ಸಾವನ್ನಪ್ಪಿದರು).

ದುರ್ಗಾವತಿ ದೇವಿಯು ನೌಜವಾನ್ ಭಾರತ್ ಸಭಾದ ಸಕ್ರಿಯ ಸದಸ್ಯೆಯಾಗಿದ್ದರು, ಮತ್ತು ಸೌಂದರ್ಸ್ ಹತ್ಯೆಯ ನಂತರ (1928) ಲಾಹೋರಿನಿಂದ ಭಗತ್ ಸಿಂಗ್ ತಪ್ಪಿಸಿಕೊಳ್ಳುವಲ್ಲಿ, ಆತನ ಸಹಾಯಕ್ಕೆ ನಿಂತಿದ್ದರು. ದುರ್ಗಾವತಿ ಮತ್ತು ಭಗತ್ ಸಿಂಗ್ ದಂಪತಿಗಳೆಂದು, ರಾಜಗುರು ಅವರ ಸೇವಕರೆಂದು ಸುಳ್ಳು ಹೇಳಿ ಕಲ್ಕತ್ತಾಗೆ ಪಲಾಯನ ಮಾಡಿದ್ದರು. ದುರ್ಗಾ, ಭಗತ್ ಸಿಂಗ್ ಜೊತೆಗೆ ಹಲವಾರು ಕ್ರಾಂತಿಕಾರಿಗಳನ್ನು ಭೇಟಿಯಾದರು ಮತ್ತು ಬಾಂಬ್ ತಯಾರಿಕೆಯನ್ನು ಕಲಿತರು. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುರವರಿಗೆ ನೀಡಲಾದ ಶಿಕ್ಷೆಯನ್ನು ಅವರು ಬಹಿರಂಗವಾಗಿ ಪ್ರತಿರೋಧಿಸಿದರು. ಭಗತ್ ಸಿಂಗ್ ಮತ್ತು ಅವರ ಒಡನಾಡಿಗಳನ್ನು ರಕ್ಷಿಸುವ ಸಲುವಾಗಿ 3,000 ಮೌಲ್ಯದ ಆಭರಣಗಳನ್ನೂ ಮಾರಾಟ ಮಾಡಿದ್ದರು. ಅವರ ನೇಣಿಗೆ ಪ್ರತೀಕಾರವಾಗಿ, ಕ್ರಾಂತಿಕಾರಿಗಳ ವೈರಿಯಾಗಿದ್ದ ಪಂಜಾಬಿನ ಮಾಜಿ ಗವರ್ನರ್‌, ಲಾರ್ಡ್ ಹೈಲಿಯನ್ನು  ಕೊಲ್ಲಲು ದುರ್ಗಾ ನಿರ್ಧರಿಸಿದ್ದರು. ಈ ಧಾಳಿಯಲ್ಲಿ ರಾಜ್ಯಪಾಲರು ತಪ್ಪಿಸಿಕೊಂಡರೂ, ಅವರ ಸಹಾಯಕರು ಗಾಯಗೊಂಡಿದ್ದರು. ಈಕೆಯನ್ನು ಬಂಧಿಸಿ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page