Home ರಾಜಕೀಯ ದೇಶದ ಪರಿಸ್ಥಿತಿಯ ಕುರಿತು ಚರ್ಚೆಗೆ ಕರೆದ ಹಿರಿಯರು.. ಬರುವರೇ ಮೋದಿ ಮತ್ತು ರಾಹುಲ್?‌

ದೇಶದ ಪರಿಸ್ಥಿತಿಯ ಕುರಿತು ಚರ್ಚೆಗೆ ಕರೆದ ಹಿರಿಯರು.. ಬರುವರೇ ಮೋದಿ ಮತ್ತು ರಾಹುಲ್?‌

0

ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮದನ್ ಬಿ ಲೋಕೂರ್, ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಪಿ ಶಾ ಮತ್ತು ಹಿರಿಯ ಪತ್ರಕರ್ತ ಎನ್ ರಾಮ್ ಅವರನ್ನು ಒಳಗೊಂಡ ತಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರನ್ನೂ ಲೋಕಸಭೆ ಚುನಾವಣೆ 2024 ಕುರಿತು ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿದ್ದಾರೆ.

ಪಕ್ಷಾತೀತ ಮತ್ತು ಯಾವುದೇ ಮಾಧ್ಯಮ ಸಂಸ್ಥೆಗಳ ವೇದಿಕೆಯ ಹೊರತಾಗಿ ಸಿದ್ಧಪಡಿಸಿಕೊಂಡ ಈ ವೇದಿಕೆ ಮೂಲಕ ನಡೆಯುವ ಈ ಚರ್ಚೆ ದೇಶದ ಜನತೆಗೆ ಹೆಚ್ಚು ಉಪಯುಕ್ತ ಆಗಲಿದೆ ಎಂದು ಹಿರಿಯ ಪತ್ರಕರ್ತ ಎನ್.ರಾಮ್ ಅವರು ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ “X”ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ರಾಜಕೀಯ ಮುಖಂಡರಿಂದ ಕೇಳುವ ಪ್ರಶ್ನೆಗಳು ದೇಶದ ಪ್ರಜೆಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಅವರು ಅಭಿಪ್ರಾಯ  ವ್ಯಕ್ತಪಡಿಸಿದರು. “ಈ ರೀತಿಯ ಸಾರ್ವಜನಿಕ ಚರ್ಚೆಯು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡುವುದು ಮಾತ್ರವಲ್ಲದೆ ಆರೋಗ್ಯಕರ ಮತ್ತು ಪ್ರಜಾಪ್ರಭುತ್ವದ ನೈಜ ಚಿತ್ರಣವನ್ನು ಪ್ರದರ್ಶಿಸುವಲ್ಲಿ ಉತ್ತಮ ಪೂರ್ವನಿದರ್ಶನವನ್ನು ಕೊಡಲಿದೆ” ಎಂದು ರಾಮ್ ಅವರು ತಮ್ಮ ‘X’ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ಪತ್ರದಲ್ಲಿ ತಿಳಿಸಿದ್ದಾರೆ.

18ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆ ಈಗಾಗಲೇ ಮಧ್ಯಂತರ ಹಂತ ತಲುಪಿದೆ. ರ್ಯಾಲಿಗಳು ಮತ್ತು ಸಾರ್ವಜನಿಕ ಭಾಷಣಗಳ ಸಮಯದಲ್ಲಿ, ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರಧಾನ ವಿರೋಧ ಪಕ್ಷವಾದ ಕಾಂಗ್ರೆಸ್ ಎರಡೂ ಸದಸ್ಯರು ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಮೌಲ್ಯಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ. ಮೀಸಲಾತಿ, 370 ನೇ ವಿಧಿ ಮತ್ತು ಸಂಪತ್ತಿನ ಮರುಹಂಚಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ಗೆ ಸಾರ್ವಜನಿಕವಾಗಿ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಂವಿಧಾನ, ಎಲೆಕ್ಟೋರಲ್ ಬಾಂಡ್ ಯೋಜನೆ ಮತ್ತು ಚೀನಾಕ್ಕೆ ಸರ್ಕಾರದ ಪ್ರತಿಕ್ರಿಯೆಯ ಸಾಧ್ಯತೆಯ ಬಗ್ಗೆ ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ ಮತ್ತು ಸಾರ್ವಜನಿಕ ಚರ್ಚೆಗೆ ಸಹ ಸವಾಲು ಹಾಕಿದ್ದಾರೆ. ಎರಡೂ ಕಡೆಯವರು ತಮ್ಮ ತಮ್ಮ ಪ್ರಣಾಳಿಕೆಗಳ ಬಗ್ಗೆ ಹಾಗೂ ಸಾಂವಿಧಾನಿಕವಾಗಿ ಸಂರಕ್ಷಿತ ಸಾಮಾಜಿಕ ನ್ಯಾಯದ ಯೋಜನೆಯ ಬಗ್ಗೆ ತಮ್ಮ ನಿಲುವಿನ ಬಗ್ಗೆ ಪರಸ್ಪರ ಪ್ರಶ್ನೆಗಳನ್ನು ಕೇಳಿಕೊಂಡಿದ್ದಾರೆ.

ಸಾರ್ವಜನಿಕರಾದ ನಾವು ಎರಡೂ ಕಡೆಯಿಂದ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾತ್ರ ಕೇಳಿದ್ದೇವೆ ಯಾವುದೇ ಅರ್ಥಪೂರ್ಣ ಪ್ರತಿಕ್ರಿಯೆಗಳನ್ನು ಈವರೆಗೆ ಕೇಳಿಲ್ಲ ಎಂದು ಕಳವಳ ವ್ಯಕ್ತಪಡಿಸುತ್ತೇವೆ. ನಮಗೆ ತಿಳಿದಿರುವಂತೆ, ಇಂದಿನ ಡಿಜಿಟಲ್ ಪ್ರಪಂಚವು ಅದರೊಂದಿಗೆ ತಪ್ಪು ಮಾಹಿತಿ, ತಪ್ಪು ನಿರೂಪಣೆಯಿಂದ ಪ್ರತಿಯೊಂದು ಹಂತದಲ್ಲೂ ದಾರಿ ತಪ್ಪುವಂತಾಗಿದೆ. ಈ ಹಂತದಲ್ಲಿ ಸಾರ್ವಜನಿಕರು ಚರ್ಚೆಯ ಎಲ್ಲಾ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು ಜನತೆಯ ಮೂಲಭೂತ ಹಕ್ಕಾಗಿದೆ. ಇದರಿಂದಾಗಿ ದೇಶದ ಪ್ರಜೆಗಳು ತಮ್ಮ ಮತದಾನದ ಮೂಲಕ ತಿಳುವಳಿಕೆಯುಳ್ಳ ಆಯ್ಕೆಯನ್ನು ಮಾಡಬಹುದು, ಇದು ನಮ್ಮ ಚುನಾವಣಾ ಹಂತದಲ್ಲಿ ಅತ್ಯವಶ್ಯಕ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಷ್ಟೇ ಅಲ್ಲದೇ “ಈ ಪ್ರಕ್ರಿಯೆಯು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಗಾಧವಾಗಿ ಬಲಪಡಿಸಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ನಾವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಮತ್ತು ಇಡೀ ಜಗತ್ತು ನಮ್ಮ ಚುನಾವಣೆಗಳನ್ನು ಕುತೂಹಲದಿಂದ ನೋಡುತ್ತಿರುವ ಕಾರಣ ಇದು ಹೆಚ್ಚು ಪ್ರಸ್ತುತವಾಗಿದೆ” ಎಂದು ಪತ್ರದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಹೀಗಿರುವಾಗ ಯಾವುದೇ ರಾಜಕೀಯ ವೇದಿಕೆ ಅಲ್ಲದ ಪಕ್ಷಾತೀತ ವೇದಿಕೆಯಲ್ಲಿ ತಮ್ಮ ನಿಲುವು ವ್ಯಕ್ತಪಡಿಸುವುದು ಇವತ್ತಿನ ಅತ್ಯವಶ್ಯಕ. ಈ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಬ್ಬರೂ ಮುಕ್ತವಾಗಿ ಸ್ವೀಕರಿಸಿ ಚರ್ಚೆಗೆ ಬರಬೇಕು ಎಂದು ಉಲ್ಲೇಖಿಸಲಾಗಿದೆ. ನಮ್ಮ ಮನವಿಯನ್ನು ಇಬ್ಬರೂ ಮುಖಂಡರು ಸಕಾರಾತ್ಮಕವಾಗಿ ಸ್ಪಂದಿಸುವಿರೆಂದು ಭಾವಿಸುತ್ತೇವೆ ಎಂದು ಉಲ್ಲೇಖಿಸಲಾಗಿದೆ.

ಸಧ್ಯ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮದನ್ ಬಿ ಲೋಕೂರ್, ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಪಿ ಶಾ ಮತ್ತು ಹಿರಿಯ ಪತ್ರಕರ್ತ ಎನ್ ರಾಮ್ ಅವರನ್ನು ಒಳಗೊಂಡ ತಂಡ ವಿನಂತಿಸಿಕೊಂಡಿರುವ ಈ ಪತ್ರ ಎರಡೂ ಪಕ್ಷದ ನಾಯಕರನ್ನು ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದನ್ನು ಹೇಗೆ ಸ್ವೀಕರಿಸಲಿದ್ದಾರೆ ಮತ್ತು ಆಹ್ವಾನವನ್ನು ಒಪ್ಪುವರೇ ಎಂಬುದು ಮುಖ್ಯ ಅಂಶವಾಗಿದೆ.

You cannot copy content of this page

Exit mobile version