Home ಬೆಂಗಳೂರು ಮತದಾರರ ಪಟ್ಟಿಯಲ್ಲಿ ಹೆಸರು ವ್ಯತ್ಯಾಸ: ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್‌ ಅವರಿಗೆ ನೋಟಿಸ್ ನೀಡಿಲ್ಲ...

ಮತದಾರರ ಪಟ್ಟಿಯಲ್ಲಿ ಹೆಸರು ವ್ಯತ್ಯಾಸ: ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್‌ ಅವರಿಗೆ ನೋಟಿಸ್ ನೀಡಿಲ್ಲ ಎಂದ ಚುನಾವಣಾ ಆಯೋಗ

0

ಭಾರತ ರತ್ನ ಪುರಸ್ಕೃತ, ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಮತದಾರರ ಪಟ್ಟಿಯಲ್ಲಿನ ಹೆಸರು ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಮುಖ್ಯ ಚುನಾವಣಾಧಿಕಾರಿಗಳ (ಸಿಇಒ) ಕಚೇರಿ ಸ್ಪಷ್ಟವಾಗಿ ತಳ್ಳಿಹಾಕಿದೆ.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದ “ವಿಶೇಷ ಮಾಹಿತಿ ಪರಿಷ್ಕರಣೆ (SIR): ಹೆಸರು ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಭಾರತ ರತ್ನ ಸಿ.ಎನ್.ಆರ್. ರಾವ್‌ಗೆ ನೋಟಿಸ್ ಜಾರಿ” ಎಂಬ ಶೀರ್ಷಿಕೆಯ ವರದಿಯಿಂದ ವಿವಾದ ಸೃಷ್ಟಿಯಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ಚುನಾವಣಾ ಅಧಿಕಾರಿಗಳು, ಆ ವರದಿಯು ಸತ್ಯಕ್ಕೆ ದೂರವಾಗಿದ್ದು, ಪ್ರೊ. ಸಿ.ಎನ್.ಆರ್. ರಾವ್ ಅವರಿಗಾಗಲಿ ಅಥವಾ ಅವರ ಕುಟುಂಬಕ್ಕಾಗಲಿ ಯಾವುದೇ ನೋಟಿಸ್ ಜಾರಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಧಿಕೃತ ಪ್ರಕಟಣೆಯ ಪ್ರಕಾರ, ಪ್ರೊ. ಸಿ.ಎನ್.ಆರ್. ರಾವ್ ಅವರು 157-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 59ರಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ವಿಶೇಷ ಮಾಹಿತಿ ಪರಿಷ್ಕರಣೆ (SIR) ಪ್ರಕ್ರಿಯೆಯ ಪರಿಶೀಲನೆ ವೇಳೆ, ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿ “ಪ್ರೊ. ಸಿ.ಎನ್.ಆರ್. ರಾವ್, ತಂದೆ: ನಾಗೇಶ್ ರಾವ್ ಹೆಚ್.” ಎಂದಿದ್ದು, 2002ರ ಮತದಾರರ ಪಟ್ಟಿಯಲ್ಲಿ “ರಾಮ, ತಂದೆ: ಹೆಚ್. ನಾಗೇಶ್” ಎಂದು ನಮೂದಾಗಿರುವುದು ಕಂಡುಬಂದಿತ್ತು.

ದೇಶಕ್ಕೆ ಅವರ ಅಗಾಧ ಕೊಡುಗೆ ಮತ್ತು ಗಣ್ಯ ಸ್ಥಾನಮಾನವನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ನೋಟಿಸ್ ನೀಡುವ ಬದಲು ರಾಜ್ಯ ಸ್ವೀಪ್ (SVEEP) ನೋಡಲ್ ಅಧಿಕಾರಿ, ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರು, ಮಲ್ಲೇಶ್ವರಂ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ಹಾಗೂ ಸ್ಥಳೀಯ ಬಿಎಲ್‌ಒ ಖುದ್ದಾಗಿ ಅವರ ನಿವಾಸಕ್ಕೆ ತೆರಳಿ ನಮೂನೆಯನ್ನು ನೀಡಿದ್ದರು.

ಪ್ರೊ. ರಾವ್ ಅವರ ಮೇಲಿನ ಅಪಾರ ಗೌರವದಿಂದಾಗಿ ಯಾವುದೇ ಔಪಚಾರಿಕ ನೋಟಿಸ್ ನೀಡದೆ, ದಾಖಲೆಯನ್ನು ನೇರವಾಗಿ ಹೆಚ್ಚುವರಿ ಚುನಾವಣಾ ನೋಂದಣಿ ಅಧಿಕಾರಿಗೆ (ಎಇಆರ್‌ಒ) ಅನುಮೋದನೆಗಾಗಿ ಕಳುಹಿಸಲಾಗಿತ್ತು. ಎಇಆರ್‌ಒ ಅವರು ಸೆಪ್ಟೆಂಬರ್ 8, 2026 ರಂದು ಅಂತಿಮ ಮತದಾರರ ಪಟ್ಟಿಗೆ ಅವರ ಹೆಸರನ್ನು ಅನುಮೋದಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ಕುರಿತಂತೆ ಹರಿದಾಡುತ್ತಿರುವ ತಪ್ಪು ವರದಿಗಳಿಗೆ ತೆರೆ ಎಳೆಯಲು ಮಲ್ಲೇಶ್ವರಂ ಇಆರ್‌ಒ ಅವರ ಅಧಿಕೃತ ಹೇಳಿಕೆ ಮತ್ತು ಸ್ಥಳೀಯ ಬಿಎಲ್‌ಒ ಅವರ ವಿಡಿಯೋ ದಾಖಲಾತಿಯನ್ನು ಚುನಾವಣಾ ಕಚೇರಿ ಬಿಡುಗಡೆ ಮಾಡಿದೆ.

You cannot copy content of this page

Exit mobile version