ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚುನಾವಣಾ ಬಾಂಡ್ ಗಳು ಮತ್ತೆ ಜಾರಿಗೆ ಬರಬಹುದು ಎಂಬ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್ ಕೂಡಾ ಇದೊಂದು ಕಾನೂನು ಬಾಹಿರ ಯೋಜನೆ ಎಂಬ ಅಭಿಪ್ರಾಯ ನೀಡಿ, ಚುನಾವಣಾ ಬಾಂಡ್ ರದ್ದು ಮಾಡಿದ್ದರೂ ಬಿಜೆಪಿ ಮತ್ತೆ ಅದನ್ನು ಜಾರಿಗೆ ತರುವ ಅಭಿಪ್ರಾಯ ಹೊಂದಿದೆ ಎಂಬುದು ಸ್ಪಷ್ಟವಾಗಿದೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ಪಕ್ಷ ಆಡಳಿತಕ್ಕೆ ಬಂದರೃ ಭ್ರಷ್ಟಾಚಾರವನ್ನು ಮತ್ತೊಮ್ಮೆ ಕಾನೂನುಬದ್ಧಗೊಳಿಸಲು ಮುಂದಾಗಲಿದೆ. ಈಗಾಗಲೇ ಸುಪ್ರೀಂಕೋರ್ಟ್ ಈ ಯೋಜನೆ ರದ್ದು ಮಾಡಿದ್ದರೂ ಮತ್ತೆ ಅದನ್ನೇ ಜಾರಿಗೊಳಿಸುವ ಹಿಂದೆ ಬಿಜೆಪಿ ಲಜ್ಜೆ ಬಿಟ್ಟು ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದೆ.
ನಿರ್ಮಲಾ ಸೀತಾರಾಮನ್ ಅವರ ಸಂದರ್ಶನದ ವರದಿಯನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅದು ಚುನಾವಣಾ ಬಾಂಡ್ಗಳನ್ನು ಮರಳಿ ತರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅದು ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ ಘೋಷಿಸಿದೆ, ಅವುಗಳನ್ನು ಅಸಂವಿಧಾನಿಕ ಎಂದು ಕರೆಯಲಾಗುತ್ತಿದೆ.
ಪೇಪಿಎಂ ಹಗರಣದಲ್ಲಿ ಬಿಜೆಪಿ ಸಾರ್ವಜನಿಕರಿಂದ ಸುಮಾರು 4 ಲಕ್ಷ ಕೋಟಿ ರೂ. ಹಣವನ್ನು ಬಿಜೆಪಿ ಲೂಟಿ ಮಾಡಿರುವುದು ನಮಗೆ ತಿಳಿದಿದೆ. ಈಗ ಮತ್ತೆ ಲೂಟಿ ಮುಂದುವರೆಸಲು ಬಿಜೆಪಿ ಬಯಸುತ್ತಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ಚುನಾವಣಾ ಬಾಂಡ್ಗಳನ್ನು ಮರಳಿ ತರಲು ಬಿಜೆಪಿ ಉದ್ದೇಶಿಸಿದೆ ಎಂದು ಸೀತಾರಾಮನ್ ಖಾಸಗಿ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.