Friday, June 14, 2024

ಸತ್ಯ | ನ್ಯಾಯ |ಧರ್ಮ

BBMP ಯಿಂದ ಬೀದಿ ಬದಿಯ ಅಂಗಡಿಗಳ ತೆರವು, ಸಂಘಟನೆಗಳ ಖಂಡನೆ

ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, BBMP ಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ. ಬಿಬಿಎಂಪಿ ಗೆ ಸೇರಿದ ಕಾಂಪ್ಲೆಕ್ಸ್ ಹಾಗೂ ಬಸ್ ನಿಲ್ದಾಣದ ಆವರಣ ಹಾಗೂ ಫುಟ್ ಪಾತ್ ಗಳಲ್ಲಿ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಇಳಿದಿದೆ.

ನಗರದ ಜಯನಗರ ಬಿಡಿಎ ಕಾಂಪ್ಲೆಕ್ಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಇದ್ದ ಬೀದಿ ಬದಿಯ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಇಂದು ನಡೆದಿದೆ. ಬಿಬಿಎಂಪಿ ಮಾರ್ಷಲ್ ಗಳು ಜಯನಗರದ ಬಿಡಿಎ ಕಾಂಪ್ಲೆಕ್ಸ್ ಪ್ರದೇಶದಿಂದ 400 ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದಾರೆ.

ದಶಕಗಳಿಂದಲೂ ಈ ಜಾಗದಲ್ಲಿ ಬೀದಿ ಬದಿಯ ವ್ಯಾಪಾರಿಗಳು ವ್ಯಾಪಾರ ನಡೆಸಿಕೊಂಡು ಬಂದಿದ್ದರೂ ಇಲ್ಲಿಯವರೆಗೆ ಈ ರೀತಿಯ ತೆರವು ಕಾರ್ಯ ನಡೆದಿರಲಿಲ್ಲ. ಅಷ್ಟೆ ಅಲ್ಲದೆ ಬಿಬಿಎಂಪಿ ಕಡೆಯಿಂದ ಈ ವ್ಯಾಪಾರಿಗಳು ಪರವಾನಗಿ ಕೂಡ ಪಡೆದವರಾಗಿದ್ದಾರೆ. ಆದರೆ ಬಿಬಿಎಂಪಿ ಏಕಾಏಕಿ ಇಂತಹ ನಿರ್ಧಾರ ತಗೆದುಕೊಂಡಿದ್ದು ಬೀದಿ ಬದಿಯ ವ್ಯಾಪಾರಿಗಳಿಗೆ ಆತಂಕಕ್ಕೆ ಕಾರಣವಾಗಿದೆ.

ಇಲ್ಲಿ ಬಿಬಿಎಂಪಿ ಪ್ರಕಾರ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸಲು ಪರವಾನಗಿ ಹೊಂದಿದ್ದರೂ ಸಹ ಈ ಪ್ರದೇಶದಲ್ಲಿ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಲು ಅನುಮತಿ ಇಲ್ಲ. ಮೂರು ತಿಂಗಳ ಹಿಂದೆ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ನೋಟಿಸ್ ಕೂಡಾ ನೀಡಿತ್ತು.

ಬಿಬಿಎಂಪಿ ಮಾರ್ಷಲ್ಗಳು ಇತ್ತೀಚೆಗೆ ಮಾರಾಟಗಾರರಿಗೆ ಸ್ಥಳದಿಂದ ತೆರವುಗೊಳಿಸುವಂತೆ ಮಾಹಿತಿ ನೀಡಿದರು. ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ವ್ಯವಹಾರವನ್ನು ನಡೆಸಲು ಯಾವುದೇ ಪರ್ಯಾಯ ಪ್ರದೇಶಗಳನ್ನು ನಿಗದಿಪಡಿಸಲಾಗಿಲ್ಲ.

ಸಧ್ಯ ಜಯನಗರ ಪ್ರದೇಶದಲ್ಲಿ ನಡೆದ ಈ ತೆರವು ಕಾರ್ಯಾಚರಣೆಗೆ ಅನೇಕ ಕಾರ್ಮಿಕ ಸಂಘಟನೆಗಳು, ಬೀದಿಬದಿ ವ್ಯಾಪಾರಿಗಳ ಒಕ್ಕೂಟಗಳು ಖಂಡನೆ ವ್ಯಕ್ತಪಡಿಸಿದೆ. ಬೀದಿ ಬದಿ ವ್ಯಾಪಾರಿ ಕಾಯ್ದೆಯ ಪ್ರಕಾರ, ವ್ಯಾಪಾರ ನಡೆಸಲು ಪರ್ಯಾಯ ಸ್ಥಳಗಳಿಗೆ ಹಂಚಿಕೆ ಮಾಡದೆ ನಾಗರಿಕ ಸಂಸ್ಥೆ ಬೀದಿ ಬದಿ ವ್ಯಾಪಾರಿಗಳನ್ನು ಹೊರಹಾಕಲು ಸಾಧ್ಯವಿಲ್ಲ ಎಂದು ಎಐಸಿಸಿಟಿಯು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು