Friday, June 14, 2024

ಸತ್ಯ | ನ್ಯಾಯ |ಧರ್ಮ

ವಿದೇಶಗಳಲ್ಲಿ ನಿಷೇಧಕ್ಕೊಳಗಾದ ಕಳೆನಾಶಕ ನಮ್ಮಲ್ಲಿ ಯಾಕೆ? DRFO ಸಾವಿನ ನಂತರವಾದರೂ ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?

ಕಳೆದ ವಾರ ದಾಂಡೇಲಿ ತಾಲ್ಲೂಕಿನ ಕುಳಗಿ ವಲಯ ಅರಣ್ಯ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಯೋಗೇಶ್ ನಾಯ್ಕ ಅವರ ಅನಿರೀಕ್ಷಿತ ಮತ್ತು ಆಘಾತಕಾರಿ ಸಾವು ಎಲ್ಲರನ್ನೂ ಕಂಗೆಡಿಸಿತ್ತು. ಅರಣ್ಯ ಇಲಾಖೆ ಮಾತ್ರವಲ್ಲದೆ, ಸ್ಥಳೀಯ ಸಾರ್ವಜನಿಕ ಮಟ್ಟದಲ್ಲೂ ಒಳ್ಳೆಯ ಹೆಸರು ಉಳಿಸಿಕೊಂಡಿದ್ದ ಯೋಗೇಶ್ ನಾಯ್ಕ ಸ್ನೇಹಪರ ವ್ಯಕ್ತಿ ಎಂದೇ ಎಲ್ಲರ ಕಡೆಯಲ್ಲೂ ಹೆಸರು ಪಡೆದವರಾಗಿದ್ದರು. ಸಧ್ಯ ಇವರ ಅಗಲಿಕೆ ಯೋಗೇಶ್ ಅವರ ಕುಟುಂಬ ಮಾತ್ರವಲ್ಲದೆ ಅರಣ್ಯ ಇಲಾಖೆ, ಸುತ್ತಮುತ್ತಲಿನ ಜನರಲ್ಲೂ ಗಾಢ ಮೌನ ಎದುರಾಗಿದೆ.

ಎರಡು ವಾರಗಳ ಹಿಂದೆ ಕುಳಗಿ ಶಾಖೆಯಲ್ಲಿ ಅತ್ಯಂತ ವಿಷಕಾರಿ ಕಳೆನಾಶಕ ಸಿಂಪಡನೆ ಮಾಡಲು ಹೋಗಿ ಆನಂತರ ಸರಿಯಾಗಿ ಕೈ ತೊಳೆಯದೇ, ನೀರು ಆಹಾರ ಸೇವಿಸಿದ ಪರಿಣಾಮ ಯೋಗೇಶ್ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ದಾಂಡೇಲಿಯ ಖಾಸಗಿ ಕ್ಲಿನಿಕ್ ಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ ಆರೋಗ್ಯ ಮತ್ತೆ ಹದಗೆಡಲು ಶುರುವಾಗಿದೆ.

ಆ ನಂತರ ತಾನೇ ತನ್ನ ಕಾರನ್ನು ಚಲಾಯಿ‌ಸಿಕೊಂಡು ತನ್ನ ಪತ್ನಿ ಮತ್ತು ಮಗುವಿನ ಜೊತೆಯಲ್ಲಿ ಧಾರವಾಡದ ಎಸ್.ಜಿ.ಎಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಎರಡ್ಮೂರು ದಿನಗಳ ಕಾಲ ಚಿಕಿತ್ಸೆ ಪಡೆದರೂ ಅನಾರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ನಂತರ ಹುಬ್ಬಳ್ಳಿಯ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿಯೂ ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿ ದಿನ ಕಳೆದರೂ ಅನಾರೋಗ್ಯ ಉಲ್ಬಣಿಸಿದೆಯೇ ಹೊರತು, ಯಾವುದೇ ಚೇತರಿಕೆ ಕಂಡುಬಂದಿಲ್ಲ.

ಈ ನಡುವೆ ಯೋಗೇಶ್ ನಾಯ್ಕರ ಸಹೋದ್ಯೋಗಿಗಳು ಮತ್ತು ಅರಣ್ಯಾಧಿಕಾರಿಗಳ ತಂಡ ಆಸ್ಪತ್ರೆ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಯೋಗೇಶ್ ಅವರ ಚಿಕಿತ್ಸೆಗೆ ಎಷ್ಟು ಖರ್ಚಾದರೂ ಸರಿಯೇ… ನಾವು ಭರಿಸುತ್ತೇವೆ. ಏನಾದರೂ ಮಾಡಿ ಅವರನ್ನು ಉಳಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ಜೊತೆಗೆ ಯೋಗೇಶ್ ಬದುಕಿಸಲು ಸಾಧ್ಯ ಎನ್ನುವುದಾದರೆ ಹೆಲಿಕಾಪ್ಟರ್ ಮೂಲಕವಾದರೂ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಿ ಅವರಿಗೆ ಚಿಕಿತ್ಸೆ ಕೊಡಿಸುತ್ತೇವೆ ಎಂದು, ಆಸ್ಪತ್ರೆ ಮೇಲೆ ಹೆಲಿಪ್ಯಾಡ್ ಇರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ.

ಆದರೆ ಯೋಗೇಶ್ ನಾಯ್ಕ ಬದುಕುವ ಸಾಧ್ಯತೆ ತೀರಾ ಎಂದರೆ ತೀರಾ ಕಡಿಮೆ ಇದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಯಾಕೆಂದರೆ ಯೋಗೇಶ್ ದೇಹದ ಒಳಗೆ ಹೋದ ಕಳೆನಾಶಕದ ವಿಷ ಅತ್ಯಂತ ಅಪಾಯಕಾರಿಯಾದದ್ದು. ಈಗಾಗಲೇ ಅದು ದೇಹದ ನರನಾಡಿಗೇ ವಿಸ್ತರಿಸಿಯಾಗಿದೆ. ಅದೂ ಅಲ್ಲದೆ ಅವರ ದೇಹದ ಒಳಕ್ಕೆ ಹೋದ Paraquat Dichloride ಗೆ ಇಲ್ಲಿಯವರೆಗೆ Antidote ಔಷಧಿ ಈ ವರೆಗೂ ಬಂದಿಲ್ಲ. ಆ ಕಾರಣಕ್ಕಾಗಿ ಅವರನ್ನು ಉಳಿಸುವ ಸಾಧ್ಯತೆ ಬಗ್ಗೆ ಯಾವುದೇ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅರಣ್ಯ ಇಲಾಖೆ, ಸರ್ಕಾರ, ಅಪಾರ ಪ್ರಮಾಣದ ಹಿತೈಷಿಗಳು ಎಷ್ಟೇ ಜನರು ಎಲ್ಲಾ ರೀತಿಯ ಸಹಕಾರ ನೀಡಿದರೂ ಬದುಕಿಸಲು ಸಾಧ್ಯವೇ ಇಲ್ಲ ಎನ್ನುವುದಾದರೆ ಎಂತಹ ಸಹಾಯವೂ ವ್ಯರ್ಥ ಎನ್ನಿಸಿದೆ. ಪ್ರೀತಿಸಿ ಮದುವೆಯಾದ ಪತ್ನಿ, ಎರಡು ವರ್ಷದ ಮಗು ಎಲ್ಲರನ್ನೂ ಯೋಗೇಶ್ ನಾಯ್ಕ ತೊರೆದಿದ್ದಾರೆ. ಒಂದು ಸಣ್ಣ ಅಜಾಗರೂಕತೆ ಒಂದು ಅಮೂಲ್ಯ ಜೀವವನ್ನು ಬಲಿ ಪಡೆದುಕೊಂಡಿದೆ ಎಂಬುದಷ್ಟೇ ಈಗ ಉಳಿದಿರುವ ಸತ್ಯ.

Paraquat Dichloride ಕಳೆನಾಶಕ ಅದೆಷ್ಟು ಘೋರ ವಿಷ ಗೊತ್ತ?”
ದಾಂಡೇಲಿ ತಾಲ್ಲೂಕಿನ ಕುಳಗಿ ವಲಯ ಅರಣ್ಯ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಯೋಗೇಶ್ ನಾಯ್ಕ ಅವರನ್ನು ಬಲಿ ಪಡೆದ Paraquat Dichloride ಕಳೆನಾಶಕದ ಬಗ್ಗೆ ಈಗ ಹೆಚ್ಚು ಚರ್ಚೆ ಶುರುವಾಗಿದೆ. ಯಾಕೆಂದರೆ ಯೋಗೇಶ್ ನಾಯ್ಕ ಅವರ ದೇಹದ ಒಳಗೆ ಸೇರಿದ್ದ ವಿಷಕ್ಕೆ Antidote ಔಷಧಿ ಯಾವುದೂ ಇಲ್ಲವೇ ಇಲ್ಲ ಎಂದರೆ ಆ ಕಳೆನಾಶಕ ಅದೆಷ್ಟು ದುಷ್ಪರಿಣಾಮಕಾರಿ ವಿಷ ಎಂಬುದು ಯೋಚಿಸುವಂತದ್ದು. ಮಾಹಿತಿಯ ಪ್ರಕಾರ ಇದುವರೆಗೂ ಈ ವಿಷಕ್ಕೆ  ಔಷಧಿಯನ್ನೆ ಕಂಡು ಹಿಡಿಯಲಾಗಿಲ್ಲ!!!  Paraquat Dichloride ಎಂಬ ರಸಾಯನಿಕ ಸಂಯೋಜನೆಯಿಂದ ಕೂಡಿದ ಈ ಕಳೆನಾಶಕವನ್ನು ಈಗಾಗಲೇ ಅನೇಕ ದೇಶಗಳು ನಿಷೇಧಿಸಿವೆ ಎಂಬುದು ಇನ್ನೊಂದು ಆಘಾತಕಾರಿ ವಿಚಾರ.

Gramoxone, Firestorm, Helmquat,  Parazone Uniquat  All clear Milquat Sabaa Kapiq  ಇತ್ಯಾದಿ ಬ್ರಾಂಡ್ ಹೆಸರಿನಿಂದ ಹತ್ತಾರು ಕಂಪನಿಗಳು ಈ ಉಗ್ರವಿಷವನ್ನು ನಮ್ಮ ದೇಶದಲ್ಲಿ ಉತ್ಪಾದಿಸುತ್ತಿವೆ. ಇದೊಂದು ಸಂಪರ್ಕ ಕಳೆನಾಶಕ (Contact Herbicide) ಅಂದರೆ, ಕಳೆನಾಶಕ ಸಿಂಪಡಿಸಿದ ಸಸ್ಯದ ಭಾಗಗಳಿಗೆ ಮಾತ್ರ ಪರಿಣಾಮ ಬೀರುತ್ತದೆ, ಬೇರೆ ಭಾಗಗಳಿಗೆ ಪರಿಣಾಮ ಬೀರುವುದಿಲ್ಲ. ಆದರೆ ಮನುಷ್ಯನ ದೇಹ ಹೊಕ್ಕರೆ ಎಲ್ಲಾ ಅಂಗಗಳಿಗೂ ವ್ಯಾಪಿಸಿ ಸಾವು ತರುತ್ತದೆ. 

ಬಹಳ ಆತಂಕದ ಸಂಗತಿ ಎಂದರೆ ಈ ಘನಘೋರ ವಿಷಕ್ಕೆ ಇದುವರೆಗೂ  ಪ್ರತ್ಯೌಷಧ(Antidote) ಲಭ್ಯವಿಲ್ಲ! ಕೇವಲ ಒಂದೆರಡು ಮಿಲಿ ಕಳೆನಾಶಕ ದೇಹ ಸೇರಿದರೂ ಸಾವು ಖಚಿತ. ಅಂದರೆ ಅದೆಷ್ಟು ಕಾರ್ಕೋಟಕ ವಿಷ ಈ ಕಳೆನಾಶಕದಲ್ಲಿ ಇರಬೇಕು. ಇಂತಹ ಕಳೆನಾಶಕ ವಿಷವನ್ನು ಶುಂಠಿ ಬೆಳೆಯಿಂದ ಹಿಡಿದು ಅನೇಕ ಬೆಳೆಗಳಲ್ಲಿ ಕಳೆಗಳನ್ನು ಕೊಲ್ಲಲು ವ್ಯಾಪಕವಾಗಿ ಇದನ್ನು ಬಳಸುತ್ತಾರೆ, ಒಂದೆರಡು ಹನಿ ವಿಷ ದೇಹ ಸೇರಿದರೂ ಬಹು ಅಂಗಾಂಗಗಳು ವೈಫಲ್ಯ ಉಂಟಾಗಿ ಸಾವು ಸಂಭವಿಸಬಹುದು, ಪಾರ್ಕಿನ್ಸನ್ ನಂತಹ ಅಪಾಯಕಾರಿ ಕಾಯಿಲೆಗಳಿಗೂ ಆಹ್ವಾನ ನೀಡಬಹುದು.

ರೈತರು ಇದನ್ನು ಉಪಯೋಗಿಸುವಾಗ  ಸುರಕ್ಷಿತ ವಿಧಾನ ಅನುಸರಿಸಿ ಬಳಸಬೇಕು. ಸಿಂಪಡಿಸುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಆಹಾರ ನೀರನ್ನು ಸೇವಿಸಬಾರದು. ದೇಹಗಳಲ್ಲಿ ಗಾಯಗಳಿದ್ದರೆ ಕಳೆನಾಶಕದ ಸಂಪರ್ಕಕ್ಕೆ ಬರಲೇಬಾರದು. ಔಷಧಿಯೇ ಇಲ್ಲದ ಈ ವಿಷ ನಮ್ಮ ಜೀವಜಾಲದಲ್ಲಿ ಕಬಂಧ ಬಾಹುಗಳನ್ನು ಚಾಚುತ್ತಲೇ ಇದೆ.  (Paraquat Dichloride ಬಗೆಗಿನ ವಿವರ ನಾಗರಾಜ್ ಬೆಳ್ಳೂರು ಅವರ ಬರಹದ ಮೂಲ)

ಯೋಗೇಶ್ ನಾಯ್ಕ ಸಾವಿನ ಹಿಂದೆ ಉದ್ಭವಿಸುವ ಪ್ರಶ್ನೆಗಳು :

ಈ ಪ್ರಕರಣದ ಅಡಿಯಲ್ಲಿ ಗಂಭೀರವಾಗಿ ಒಂದಷ್ಟು ಪ್ರಶ್ನೆಗಳು ಉದ್ಭವಿಸಿವೆ. ಅರಣ್ಯ ಇಲಾಖೆ ಉಪಯೋಗಿಸುವ Herbicides ಗಳು ಇಷ್ಟು ವಿಷಕಾರಿ ಎಂಬುದರ ಅರಿವು ಇಲಾಖಾ ಅಧಿಕಾರಿಗಳಿಗೆ ಇರಲಿಲ್ಲವೆ? Herbicides ಗಳಾಗಲಿ, ಔಷಧಿಗಳಾಗಲಿ ಅಥವಾ ಇನ್ನಾವುದೇ ಪದಾರ್ಥಗಳನ್ನು ಬಳಸುವುದಾದರೆ, ಅವುಗಳ ಹಿನ್ನೆಲೆ ಅರಿತು ಬಳಸುವುದು ಸಾಮಾನ್ಯ. ವಿಶೇಷವಾಗಿ ಅವುಗಳ ದುಷ್ಪರಿಣಾಮಗಳು ಅಲ್ಲಿ ಗಣನೆಗೆ ಬರಬೇಕು. ಆದರೆ ಈ Herbicides ಗಳ ಉಪಯೋಗದ ಹಿಂದೆ ಅರಣ್ಯ ಇಲಾಖೆ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಒಬ್ಬ ಅಮಾಯಕ ಅಧಿಕಾರಿಯ ಸಾವಿಗೆ ಕಾರಣವಾಗಿದೆ. ಹಾಗಾಗಿ ಯೋಗೇಶ್ ನಾಯ್ಕ ಅವರ ಸಾವಿನ ಸಂಪೂರ್ಣ ಹೊಣೆಯನ್ನು ಅರಣ್ಯ ಇಲಾಖೆಯೇ ಹೊರಬೇಕು. ಅಷ್ಟೆ ಅಲ್ಲದೆ ಇಡೀ ವಲಯ ವ್ಯಾಪ್ತಿಯಲ್ಲೇ ಈ Herbicides ಬಳಸುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಟೆಂಡರ್ ಲಾಭಿ ಕೂಡಾ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಕರೆದ ಟೆಂಡರ್ ಗಳಲ್ಲಿ ನಾ ಮುಂದು ತಾ ಮುಂದು ಎಂದು ಬರುವ ಇಂತಹ ವಿಷ ಹಂಚುವ ಕಂಪನಿಗಳು ಉನ್ನತ ಅಧಿಕಾರಿಗಳ ಕಡೆಯಿಂದ ಲಾಭಿ ನಡೆಸುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿ ಯೋಗೇಶ್ ನಾಯ್ಕ ಅವರ ಸಾವಿನ ಪ್ರಕರಣವನ್ನು ಅಪಘಾತ ಅಥವಾ ಅಜಾಗರೂಕತೆ ಅಡಿಯಲ್ಲಿ ಆದ ಸಾವು ಎಂದಷ್ಟೇ ಪರಿಗಣಿಸದೆ ಇದರ ಹಿಂದೆ ಎಂತಹ ಲಾಭಿ ನಡೆದಿರಬಹುದು ಎಂಬ ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ. ಪ್ರತ್ಯೌಷಧವೇ ಇಲ್ಲದ ಇಂತಹ Herbicides ಗಳು ಈ ನೆಲಕ್ಕೆ ಅಷ್ಟು ಅಗತ್ಯವಾದರೂ ಏನಿತ್ತು.? ಒಬ್ಬ ಮನುಷ್ಯನ ಸಾವಿಗೇ ಈ ಕಳೆನಾಶಕಗಳು ಇಷ್ಟು ಪರಿಣಾಮಕಾರಿಯಾಗಿ ದುಷ್ಪರಿಣಾಮ ಬೀರಬೇಕಾದರೆ, ನೆಲದ ಮೇಲೆ ಇನ್ನೆಂತಹ ದುಷ್ಪರಿಣಾಮ ಬೀರಬಹುದು. ಒಟ್ಟಾರೆ ಕಳೆನಾಶಕಗಳ ಬಗ್ಗೆ ಪರಿಸರ ಪ್ರೇಮಿಗಳ ದೊಡ್ಡ ವಿರೋಧ ಇದ್ದರೂ, ಕಾಡು, ಪರಿಸರ ಉಳಿಸುವ ಅರಣ್ಯ ಇಲಾಖೆಯೇ ಬಳಸುವುದು ಸ್ಪಷ್ಟವಾಗಿ ಪರಿಸರ ನಾಶಕ್ಕೆ ದಾರಿ ಮಾಡಿದಂತೆ ಅಲ್ಲವೆ? ಜೊತೆಗೆ ಇಂತಹ ವಿಷಕಾರಿ ಕಳೆನಾಶಕ ಭಾರತದಲ್ಲಿ ಉತ್ಪಾದನೆ ಆಗುತ್ತಿರುವುದು ಯಾಕೆ.? ಪ್ರತ್ಯೌಷಧ (Antidote) ಇಲ್ಲದ ಇಂತಹ ಕಳೆನಾಶಕಗಳು ಇಂತಹ ಅದೆಷ್ಟು ಜೀವಗಳ ಬಲಿ ಪಡೆಯಬಹುದು ಎಂಬುದು ನಿಜಕ್ಕೂ ಆತಂಕಕಾರಿಯೇ ಸರಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಪ್ರಕರಣವನ್ನಾದರೂ ಗಂಭೀರವಾಗಿ ಪರಿಗಣಿಸಿ ಸ್ವಯಂ ದೂರು ದಾಖಲಿಸಿ ತನಿಖೆಗೆ ಮುಂದಾಗಬೇಕು. ಇಂತಹ ಕಳೆನಾಶಕಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದರ ಜೊತೆಗೆ ಯೋಗೇಶ್ ನಾಯ್ಕ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು. ಅವರ ಸಾವಿನ ಪ್ರಕರಣ ಕೂಡಾ ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು ಎಂಬುದು ಸಾರ್ವಜನಿಕ ವಲಯದ ಕಳಕಳಿಯ ಬೇಡಿಕೆಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು