Sunday, June 16, 2024

ಸತ್ಯ | ನ್ಯಾಯ |ಧರ್ಮ

ಪ್ರತಿಯೊಬ್ಬರೂ ಪ್ರಕೃತಿಯನ್ನು ಪ್ರೀತಿಸಿ, ಗೌರವಿಸಿ ಸಂರಕ್ಷಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು ಜೂನ್ 15 : ಪ್ರತಿಯೊಬ್ಬರೂ ಪ್ರಕೃತಿಯನ್ನು ಪ್ರೀತಿಸಿ, ಗೌರವಿಸಿ ಸಂರಕ್ಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ರಾಜೀವ್ ಸ್ನೇಹ ಬಳಗ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಲಕ್ಷ ವೃಕ್ಷ ಯೋಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾನವ ಪ್ರಕೃತಿಯ ಒಂದು ಭಾಗ
ಸಸ್ಯಗಳನ್ನು ಬೆಳೆಸುವುದು ನಡೆವುದು ಉತ್ತಮ ಕೆಲಸ. ಪ್ರಕೃತಿ ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಆದರೆ ನಮ್ಮ ದುರಾಸೆಗಳನ್ನು ಪೂರೈಸುವುದಿಲ್ಲ ಎಂದು ಮಾಹಾತ್ಮಾ ಗಾಂಧಿ ಹೇಳಿದ್ದರು. ನಮ್ಮ ದುರಾಸೆಗಳಿಂದ ಕಾಡು ನಶಿಸಿಹೋಗುತ್ತಿದೆ. ಕಾಡು ಕನಿಷ್ಠ 30% ಇರಬೇಕು. ನಮ್ಮಲ್ಲಿ ಶೇ 19 ರಿಂದ 20 ರಷ್ಟಿರಬಹುದು. ಶೇ 30% ಕಾಡು ಇದ್ದರೆ ಮಳೆ, ಬೆಳೆ ಚೆನ್ನಾಗಿ ಆಗಲು ಸಾಧ್ಯವಾಗುತ್ತದೆ. ಗಾಳಿ, ನೀರು, ಭೂಮಿ, ಆಕಾಶ ಇವೆಲ್ಲ ಸ್ವಚ್ಛವಾಗಿದ್ದರೆ, ಗಿಡ ಮರಗಳೆಲ್ಲಾ ಚೆನ್ನಾಗಿ ಬೆಳೆದಿದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ನಾವೆಲ್ಲರೂ ಪ್ರಕೃತಿಯ ಒಂದು ಭಾಗ. ಪ್ರಕೃತಿ ನಮಗಾಗಿ ಇಲ್ಲ. ನಾವು ಅದರ ಭಾಗ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡರೆ ಪ್ರಕೃತಿ ಬಗ್ಗೆ ಪ್ರೀತಿ ಬೆಳೆಯುತ್ತದೆ ಎಂದರು.

ತಾಪಮಾನ ಏರಿಕೆ
ಜನಸಂಖ್ಯೆ ಬೆಳೆದಂತೆಲ್ಲಾ ಕಾಡು ನಶಿಸಿ ಹೋಗಿದೆ. ಪ್ರಕೃತಿಯಲ್ಲಿ ಸಮತೋಲನವಿದ್ದಾಗ ಜನಜೀವನ ಕೂಡ ಸಮತೋಲತದಲ್ಲಿರುತ್ತದೆ. ಈ ಬಾರಿ ತಾಪಮಾನ ಅತ್ಯಂತ ಹೆಚ್ಚಾಗಿದೆ. ಮರಗಿಡಗಳು ಕಡಿಮೆಯಾಗಿರುವುದರಿಂದ ಮಳೆ ಕಡಿಮೆಯಾಗಲು ಕಾರಣ. ಕರ್ನಾಟಕದಲ್ಲಿಯೂ ಈ ಬಾರಿ 47-48 ರವರೆಗೆ ತಾಪಮಾನ ಹೆಚ್ಚಾಗಿತ್ತು ಎಂದರು.
ರಾಜೀವ್ ಮತ್ತು ಅವರ ಸಂಗಡಿಗರು ಸ್ನೇಹ ಬಳಗ ಸ್ಥಾಪಿಸಿ ಗಿಡ ಬೆಳೆಸಿ ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿವರೆಗೆ 1 ಲಕ್ಷ ಇಡಗಳನ್ನು ನೆಟ್ಟಿದ್ದಾರೆ. ರಾಜೀವ್ ಅವರು ಗಿಡಗಳನ್ನು ಬೆಳೆಸು ಉಚಿತವಾಗಿ ವಿತರಣೆ ಮಾಡಿದ್ದಾರೆ. ಇದಕ್ಕೆ ನಾವು ಬೆಂಬಲಿಸುವುದಲ್ಲದೇ ಎಲ್ಲರೂ ಗಿಡ ಬೆಳಸಬೇಕು ಎಂದರು.

5 ಕೋಟಿ ಗಿಡಗಳನ್ನು ಬೆಳೆಸಲಾಗುವುದು
ಸರ್ಕಾರ ಈ ವರ್ಷ 5 ಕೋಟಿ ಗಿಡಗಳನ್ನು ಬೆಳೆಸಲು ಸರ್ಕಾರ ತೀರ್ಮಾನಿಸಿದೆ. ನಮ್ಮ ರಾಜ್ಯದಲ್ಲಿ ಹಸಿರು ಬೆಳೆಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಕಲಬುರಗಿ ಭಾಗದಲ್ಲಿ ಶೇ 5 ರಷ್ಟು ಮಾತ್ರ ಕಾಡು ಭಾಗ ಇದೆ. ಹೆಚ್ಚಿನ ಆಸಕ್ತಿ ವಹಿಸಿ ಅರಣ್ಯ ಸಚಿವರು ರಾಜ್ಯದ ಹಸುರೀಕರಣ ಮಾಡಲಿರುವ ನಂಬಿಕೆ ಇದೆ. ಸರ್ಕಾರದೊಂದಿದೆ ಸಾರ್ವಜನಿಕರೂ ಕೈ ಜೋಡಿಸಿದಾಗ ಮಾತ್ರ ಯೋಜನೆಗಳು ಯಶಸ್ವಿಯಾಗುತ್ತದೆ ಎಂದರು.

ಒಂದು ಮರ ಕಡಿದರೆ ಮತ್ತೊಂದು ನೆಡಬೇಕು
ಹಿಂದೆ ನಮ್ಮ ಪೂರ್ವಿಕರು ಒಂದು ಮರ ಕಡಿದರೆ ಮತ್ತೊಂದನ್ನು ನೆಡುತ್ತಿದ್ದರು. ಇದನ್ನು ನಾವೆಲ್ಲರೂ ಮಾಡಬೇಕು. ಸರ್ಕಾರ ಕಾಡು ಬೆಳೆಸಲು ಎಲ್ಲಾ ಪ್ರಯತ್ನ ಮಾಡುತ್ತದೆ. ಇತರರು ಒಳ್ಳೆ ಕೆಲಸ ಮಾಡಿದರೆ ಅದಕ್ಕೆ ಬೆಂಬಲ ನೀಡಬೇಕು ಎಂದರು. ಕಾಡು ಬೆಳೆದರೆ ನಾಡು ಬೆಳೆಯುತ್ತದೆ ಎಂದು ತಿಳಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಮುಡಾ ಅಧ್ಯಕ್ಷ ರಾಜೀವ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್.ಸಿ ಮಹದೇವಪ್ಪ, ಸಚಿವ ವೆಂಕಟೇಶ್, ಈಶ್ವರ ಖಂಡ್ರೆ, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಹಿರಿಯ ಪತ್ರಕರ್ತ ಪ್ರಸನ್ನ ಮೊದಲಾದವರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು