Wednesday, June 25, 2025

ಸತ್ಯ | ನ್ಯಾಯ |ಧರ್ಮ

ಹೃದಯ ಒಪ್ಪಿದಾಗ ಎಲ್ಲವೂ ಮುಕ್ತ

೨೦೦೫ ಕ್ಕೆ ನನಗೆ ೬ ವರ್ಷ ತುಂಬಿತ್ತು. ಅಮ್ಮನ ಮನೆಪಾಠದ ಕೆಲಸ ಬೆಂಗಳೂರಿನಿಂದ ತಿಪಟೂರಿಗೆ ಬಂದ ನಂತರ ನಿಂತು ಹೋಗಿತ್ತು. ಅದರ ಬದಲಿಗೆ ಅಮ್ಮ ಮನೆಯ ಮುಂದಣ ಹಿತ್ತಲಲ್ಲಿ ಪಪ್ಪಾಯ ಹಣ್ಣು – ಕುಂಬಳಕಾಯಿ, ದಾಸವಾಳದ ಹೂವು , ಬಣ್ಣದ ಗುಲಾಬಿಗಳು, ಹಸಿರು ಮೆಣಸಿನಕಾಯಿ ‌ಎಲ್ಲಕ್ಕಿಂತ ಹೆಚ್ಚಾಗಿ ಬ್ರಹ್ಮ ಕಮಲ ಹೂವಿನಂತಹ ಎಲ್ಲಾ ಬಗೆಯ ಗಿಡಗಳನ್ನು ಪೋಷಿಸಿ ಬೆಳೆಸುತ್ತಿದ್ದರು. ನನಗೆ ಊರು ಹೊಸತಾಗಿತ್ತು ಜನರೂ ಕೂಡ. ಶಾಲಾ ಪ್ರವೇಶದ ನಿಯಮದ ಪ್ರಕಾರ ಆಗ ಐದು ವರ್ಷ ತುಂಬುವ ವರೆಗೆ ಶಾಲೆಗಳಲ್ಲಿ ತರಗತಿಗಳಿಗೆ ಪ್ರವೇಶ ಪಡೆದುಕೊಳ್ಳುವಂತಿರಲಿಲ್ಲ. ಈ ಪ್ರವೇಶಾತಿ ವೇಳೆ ಆದ ಸಮಸ್ಯೆ ಎಂದರೆ ಆಗ ಈಗಿನಂತೆ ಅಪ್ಪ- ಅಮ್ಮನಿಗೂ ಯಾವುದೇ ರೀತಿಯ ಕಾಮನ್ ಪರೀಕ್ಷೆ ಇರುತ್ತಿರಲಿಲ್ಲ. ಇದದ್ದು ಒಂದೇ ಮಗುವಿನ ಎಬಿಲಿಟಿ ಯನ್ನು ವರ್ಣಮಾಲೆಯ ಸ್ವರಗಳ ಉಚ್ಚಾರಣೆ ಯಿಂದ ಮಾಪನ ಮಾಡುವುದಾಗಿತ್ತು.

ಮನೆಯಲ್ಲೇ ಕನ್ನಡ- ಇಂಗ್ಲಿಷ್ – ಹಿಂದಿ ಭಾಷೆಗಳ ವರ್ಣಮಾಲೆಯನ್ನು ಕಲಿತ್ತಿದ್ದ ಕಾರಣ ನನ್ನನ್ನು ನೇರವಾಗಿ ಅಪ್ಪರ್ ಕಿಂಡರ್ ಗಾರ್ಡನ್ ಅಂದ್ರೆ ಯು.ಕೆ.ಜಿಗೆ ಸೇರಿಸಲಾಯಿತು. ಕಾನ್ವೆಂಟ್ ಗೆ ಹೋದಾಗ ಎಲ್ಲಾ ಜಾತಿ – ಧರ್ಮ – ಪಂಗಡಗಳ ಸಹಪಾಠಿ ಗಳು ನನ್ನೊಂದಿಗಿರುತ್ತಿದ್ದರು‌. ನಾವೆಲ್ಲರೂ ಒಟ್ಟಿಗೆ ಓದುತ್ತಿದ್ದೆವು – ಆಡುತಿದ್ದೆವು. ತಿಳಿದು ತಿಳಿಯದಂತೆ ಕಾಲ ಚಕ್ರ ಸವೆಯಿತು. ನಡುವೆ ಬಿರುಕುಗಳು ನಿಧಾನವಾಗಿ ಶುರುವಾಯಿತು. ಲಂಚ್ ಬ್ರೇಕ್ ಎಂದರೆ ಮನೆಯಿಂದ ಅಮ್ಮಂದಿರು ತುಂಬಿಸಿ ಕೊಡುತ್ತಿದ್ದ ಬುತ್ತಿಯನ್ನು , ಅದರೊಳಗಿನ ತಿನಿಸನ್ನು ತಿನ್ನಲು ಕಾತುರದಿಂದ ಕಾಯುವ ಮಕ್ಕಳೇ ಹೆಚ್ಚು. ಇದರೊಂದಿಗೆ , ಹಾಜರಾತಿ ಪುಸ್ತಕದ ಪ್ರಕಾರ ವಿಭಜಿತವಾದ, ತರಗತಿಗಳ – ಸ್ನೇಹಿತರನ್ನು ಮಾತನಾಡಿಸುವ ತವಕವೂ ನಮಗಿರುತ್ತಿತ್ತು.

ತಮಾಷೆ ಎಂದರೆ ನಾವೆಲ್ಲರೂ ಹೆಚ್ಚಾಗಿ ಮಧ್ಯಾಹ್ನದ ಊಟದ ಸಮಯವನ್ನೇ ಬಯಸುತ್ತಿದ್ದೆವು. ಹಾಗೂ ನಾವೆಲ್ಲರೂ ಊಟವನ್ನು ಹಂಚಿ ತಿನ್ನುತ್ತಿದ್ದೆವು‌. ನಾಲ್ಕು – ಗೋಡೆಗಳಿಂದಾಚೆ ಅಂದರೆ , ಶಾಲಾ ಕಟ್ಟಡದ ಒಳಗಿದ್ದ ಆವರಣದಲ್ಲಿ ಸುಮಾರು ಒಂದು ಗಂಟೆಯ ಕಾಲ ಊಟದ ನೆಪದಲ್ಲಿ ನಾವೆಲ್ಲರೂ ಸೇರುತ್ತಿದ್ದೆವು. ಇದು ಒಂದು ತರಹ ಕೂಟದಂತಿರುತ್ತಿತ್ತು. ವಿಶೇಷ ಅಂದ್ರೆ ಆಗ್ಯಾರು ಈಗಿನಂತೆ ನಮ್ಮ ಊಟದ ಡಬ್ಬಿ ಪರಿಶೀಲನೆ ಮಾಡ್ತಾ ಇರಲಿಲ್ಲ. ನಮ್ಮ ಡಬ್ಬಿಗಳು ಪುಳಿಯೊಗ್ಗರೆ, ಮೊಸರು ಅನ್ನ, ಇಡ್ಲಿ ಸಾರು, ಜೋಳದ ರೊಟ್ಟಿ, ರಾಗಿ ರೊಟ್ಟಿ, ಮಂಡಕ್ಕಿ ಗಳಿಂದ ಮಾತ್ರವಲ್ಲದೆ ಕೋಳಿ ಸಾರು, ಶಾಖಾಹಾರ ಮತ್ತು ಮೊಟ್ಟೆಗಳನ್ನು ಒಳಗೊಂಡಿರುತ್ತಿತ್ತು.

ಹೀಗೆ ಒಂದು ದಿನ ನಮ್ಮ ನಡುವೆ ಬೀಟ್ರೂಟ್ ಪಲ್ಯದ ಜೊತೆ ಅಕ್ಕಿ ರೊಟ್ಟಿಯ ಡಬ್ಬಿ ತಂದಿದ್ದ ಗುಂಪು ಕಣ್ಣಿಗೆ ಬಿತ್ತು. ನಮ್ಮಲ್ಲಿ ಕೆಲವರಿಗೆ ಈ ಪದಾರ್ಥ ಅಚ್ಚುಮೆಚ್ಚಿದ್ದ ಕಾರಣ ನಾವೆಲ್ಲರೂ ಆ ಗುಂಪಿನತ್ತ ಓಡಿದೆವು. ಸಹಜವಾಗಿ ಅದನ್ನು ತಿನ್ನುವ ಆಸೆಯಿಂದ ಕೇಳಿದಾಗ ದಿಢೀರ್ ಎಂದು ನಮ್ಮ ನಡುವೆ “ಅಯ್ಯೋ ರಕ್ತ ! ಅಯ್ಯೋ ರಕ್ತ ! ಯಾರು ಮುಟ್ಟಬೇಡಿ” ಎಂದು ಸಣ್ಣ ದನಿಯಲ್ಲೇ ಪರಿಣಾಮಕಾರಿ ಯಾಗಿ ವ್ಯಂಗ್ಯ ಮಾಡುತ್ತಾ ನಮ್ಮತ್ತ ಒಮ್ಮೆ ತಿರುಗಿ ನೋಡಿ ಓಡಿಹೋದರು . ಅದು ಕೆಲವರಿಗೆ ತಮಾಷೆಯಾದರೆ ಮತ್ತೆ ಕೆಲವರಿಗೆ ಗಂಭೀರವಾಗಿ, ಕೆಣಕುವಂತಹ ವಿಷಯವಾಗಿ ಉಳಿಯಿತು.

ಕೆಲವು ದಿನಗಳ ನಂತರ ಪೋಷಕರ ಥಾಟ್ಸ್ ಫೀಡಿಂಗ್ ನಿಂದ ಪ್ರಭಾವಿತರಾದ ಗೆಳೆಯರು ಮೆಲ್ಲ ಮೆಲ್ಲನೆ ನೀವು ಮಾಂಸಾಹಾರಿಯಾ ಅಥವಾ ಸಸ್ಯಾಹಾರಿಯಾ ಎಂಬ ಮೈನ್ಯೂಟ್ ಪ್ರಶ್ನೆ ಗಳನ್ನು ಕೇಳಿದ್ದು ಉಂಟು. ಒಂದು ಒಂದು ಸಲ ಇದರ ಸಲುವಾಗಿ ಮಾಂಸಾಹಾರ ತಿನ್ನುತ್ತಿದ್ದವರೊಟ್ಟಿಗೆ ಮಾತನಾಡಿದರೆ,
ಸಸ್ಯಹಾರಿಗಳ ಗುಂಪು ಕೆಂಡಕಾರುತ್ತಿದ್ದವು. ಈ ಗುಂಪುಗಾರಿಕೆಯ ಬೀಜ ಬಿತ್ತುತ್ತಿದ್ದವರು ನಮ್ಮ ನಡುವೆ ಇದ್ದರು. ಸಮಸ್ಯೆ ಗಳು ಎದುರಾಗಿ ಮೇಷ್ಟ್ರು ವಿಚಾರಣೆ ನಡೆಸುವಾಗ ಸಿಕ್ಕಿ ಬೀಳುತ್ತಿದ್ದವರು ಸಸ್ಯ- ಮಾಂಸ ಎರಡರ ಬೇಧ ವಿಲ್ಲದವರು.

ನಮಗಾಗ ತಿಳಿದದ್ದು ಒಂದೇ ಉತ್ತರ ಯಾರಾದರೂ ನೀವು ಯಾವ ಜನ ಎಂದು ಸಾವಿರ ಬಾರಿ ಕೇಳಿದರೂ “ ನಾವು ಮನುಷ್ಯರು” ಎಂದು ಉತ್ತರಿಸುತ್ತಿದ್ದೆ‌ವು‌ . ನಾನೂ ಕೆಲವೊಮ್ಮೆ ಪಠ್ಯ ಪುಸ್ತಕದಲ್ಲಿ ರಾಮಕೃಷ್ಣ ಪರಮಹಂಸರು ಮತ್ತು ಶಾರದ ದೇವಿ ಯ ರ ಚಿತ್ರ ಕಂಡಾಗ ನನ್ನಜ್ಜ – ಅಜ್ಜಿಯೆಂದು ಹೇಳುತ್ತಿದ್ದೆ. ಒಮ್ಮೆ ಶಾಲೆಯಲ್ಲಿ ಬಿತ್ತರಿಸಿದ್ದ ಜೀಸಸ್ ನ ಪಟ ಹಿಡಿದು ಎದೆ ಬಡಿಯುತ್ತಾ “ ಅಯ್ಯೋ ನನ್ನ ಏಸು” ಎಂದು ಅಳುತ್ತಾ , ಹಾಡು ಹಾಡೆಂದರೆ ಶರೀಫ್ ಅಜ್ಜನ ತಂಬೂರಿ ಮೀಟಿದವ , ದಾಸರ ಅಂಬಿಗ ನಾನಿನ್ನ ನಂಬಿದೆ , ಲೋಕದ ಕಣ್ಣಿಗೆ ರಾಧೆಯು ಕೂಡ, ಬುದ್ದಂ ಸರಣಂ ಗಚ್ಛಾಮಿ, ಬಸವಣ್ಣನವರ ವಚನಗಳನ್ನು, ಹೆಜ್ಜೆ ಹಾಕು ಎಂದರೆ ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು, ಹೀಗೆ ಎಲ್ಲವನ್ನೂ ಒಳಗೊಳ್ಳುತ್ತಿದ್ದೆ.

ಆಗ ನನ್ನ ಸ್ನೇಹಿತರಿಗೆ ಇದೆಲ್ಲವೂ ವಿಚಿತ್ರ ಎನಿಸಿ ಗೆಳೆತನದ ಹಾದಿಯೇ ಕ್ರಮೇಣವಾಗಿ ಗುಂಪುಗಾರಿಕೆಯ ಮಾರ್ಗವನ್ನು ಸೇರುತ್ತಿತ್ತು. ಮೊದಲನೇಯ ಕ್ಲಾಸ್ ಇಂಗ್ಲಿಷ್ ಆದ್ರೆ ಒಬ್ಬರ ಪಕ್ಕ, ಕನ್ನಡ ಆದ್ರೆ ಮತ್ತೊಬ್ಬರ , ಹಿಂದಿ ಆದ್ರೆ ಇನ್ನೊಬ್ಬರ ಜೊತೆ ಹೀಗೆ ನಾವು ಕೂರುತ್ತಿದ್ದ ಜಾಗಗಳು ಆಯಾ ವಿಷಯಗಳು ಮತ್ತು ಶಿಕ್ಷಕರ ಮೇಲೆ ಅವಲಂಬಿತವಾಗಿತ್ತು. ಆದರೂ ಇಂದಿಗೂ ಮಕ್ಕಳು ದಿನವೂ ಪ್ರಾರ್ಥನೆಯ ವೇಳೆ ಹಾಡುವುದು ಕುವೆಂಪುರವರ ರಚನೆಯ ನಮ್ಮ ಕನ್ನಡ ನಾಡ ಗೀತೆಯಾದ ಸರ್ವ ಜನಾಂಗದ ಶಾಂತಿಯ ತೋಟ.. ಮತ್ತು ಟಾಗೋರ್‌ ರ ರಾಷ್ಟ್ರ ಗೀತೆ , ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ.

~ ಸಂಘಮಿತ್ರೆ ನಾಗರಘಟ್ಟ

Related Articles

ಇತ್ತೀಚಿನ ಸುದ್ದಿಗಳು

You cannot copy content of this page