ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ನೀಡಲಾಗಿದ್ದ ವೈದ್ಯಕೀಯ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ಸೋಮವಾರ ಹೆಚ್ಚುವರಿ ಐದು ವಾರಗಳವರೆಗೆ ವಿಸ್ತರಿಸಿದೆ.
ಸಂಕ್ಷಿಪ್ತ ವಿಚಾರಣೆಯ ಸಂದರ್ಭದಲ್ಲಿ, ಸತ್ಯೇಂದ್ರ ಜೈನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸತ್ಯೇಂದ್ರ ಜೈನ್ ಅವರ ಅನಾರೋಗ್ಯದ ವಿಚಾರವಾಗಿ ವಾದ ಮಂಡಿಸಿದ್ದಾರೆ. ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠಕ್ಕೆ ಜುಲೈ 21 ರಂದು ಜೈನ್ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಅಭಿಷೇಕ್ ಸಿಂಘ್ವಿ ತಿಳಿಸಿದ್ದಾರೆ.
ಹೆಚ್ಚುವರಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸತ್ಯೇಂದ್ರ ಜೈನ್ ಅವರಿಗೆ ಈಗ ವಿಶ್ರಾಂತಿಯ ಅವಶ್ಯಕತೆ ಇದೆ. ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರೇ ಸೂಚಿಸಿದಂತೆ ಇದೀಗ ಅವರ ಕುತ್ತಿಗೆಯ ಭಾಗಕ್ಕೂ ಶಸ್ತ್ರಚಿಕಿತ್ಸೆ ಆಗಿದ್ದು ಸರಿಯಾಗಿ ತಿರುಗಲು ಸಹ ಸಾಧ್ಯವಿಲ್ಲ ಎಂದು ಸಿಂಘ್ವಿ ನ್ಯಾಯಪೀಠಕ್ಕೆ ಒತ್ತಿ ಹೇಳಿದರು.
ಇಡಿಯನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ವಿ ರಾಜು ಅವರು ಮಧ್ಯಂತರ ಜಾಮೀನು ವಿಸ್ತರಣೆಯನ್ನು ತಾನು ವಿರೋಧಿಸುತ್ತಿಲ್ಲ ಆದರೆ ಜೈನ್ ಅವರ ಆರೋಗ್ಯ ಸ್ಥಿತಿಯ ಸ್ವತಂತ್ರ ಮೌಲ್ಯಮಾಪನವನ್ನು ತಾವು ಬಯಸುವುದಾಗಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಸತ್ಯೇಂದ್ರ ಜೈನ್ ಈಗಷ್ಟೇ (ಜುಲೈ 21) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಯಾವುದೇ ಸ್ವತಂತ್ರ ಮೌಲ್ಯಮಾಪನವು ಕೂಡಾ ಅವರು ಕೆಟ್ಟ ಸ್ಥಿತಿಯಲ್ಲಿದ್ದಾರೆ ಎಂದು ಹೇಳುತ್ತದೆ. ನಾಲ್ಕು ವಾರಗಳ ನಂತರ, ಅವರು ಚೇತರಿಸಿಕೊಂಡ ನಂತರ ಸ್ವತಂತ್ರ ಮೌಲ್ಯಮಾಪನವು ಸ್ವಲ್ಪ ಅರ್ಥವನ್ನು ನೀಡುತ್ತದೆ.” ಎಂದು ಎಸ್ವಿ ರಾಜು ಅವರಿಗೆ ಸ್ಪಷ್ಟನೆ ನೀಡಿದೆ.
ಆ ನಂತರ ಸುಪ್ರೀಂ ಕೋರ್ಟ್ ನ ಎ.ಎಸ್.ಬೋಪಣ್ಣ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ಸತ್ಯೇಂದ್ರ ಜೈನ್ಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿತು. ಆದರೆ ಮಾಧ್ಯಮಗಳೊಂದಿಗೆ ಮಾತನಾಡಬಾರದು ಮತ್ತು ಅನುಮತಿಯಿಲ್ಲದೆ ದೆಹಲಿಯಿಂದ ಹೊರಹೋಗಬಾರದು ಸೇರಿದಂತೆ ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದೆ.