Home ವಿಶೇಷ ದಶಪಥ ಹೆದ್ದಾರಿಯೆಂಬ ʼಭೋಗ ಕುಣಿಕೆʼ

ದಶಪಥ ಹೆದ್ದಾರಿಯೆಂಬ ʼಭೋಗ ಕುಣಿಕೆʼ

0

[ಹುಷಾರಾಗಿರಿ. ಹೈವೇ ಹಿಪ್ನಾಸಿಸ್‌ ಬಗ್ಗೆ ಗೊತ್ತಿರಲಿ. ಸೂಪರ್‌ ಫಾಸ್ಟ್‌ ಮಾರ್ಗದಲ್ಲಿ ಶರವೇಗದಲ್ಲಿ ಸಾಗುತ್ತ ಕೊನೆಗೆ ಗಾಲಿಕುರ್ಚಿಯನ್ನೊ ಕೃತಕ ಕಾಲುಗಳನ್ನೊ ಅವಲಂಬಿಸುವಂತಾಗಬಾರದು.]‌

*
“ನೀವು ಟ್ರೇನ್ನಲ್ಲಿ ಬಂದ್ರಾ, ಯಾಕೆ? ಕಾರಲ್ಲಿ ಹೊಸ ಎಕ್ಸ್‌ಪ್ರೆಸ್‌ವೇಲಿ ಬಂದಿದ್ರೆ ಕೇವಲ ಒಂದೂವರೆ ಗಂಟೆ! ಜಸ್ಟ್‌ 90 ಮಿನಿಟ್ಸ್‌…”

-ಮೈಸೂರಿನ ಸಾಹಿತ್ಯ ಸಂಭ್ರಮದಲ್ಲಿ ಭೇಟಿಯಾದ ಗಣ್ಯ ಮಹಿಳೆ ಕಣ್ಣರಳಿಸಿ ನನ್ನನ್ನು ಕೇಳಿದರು. ಬೆಂಗಳೂರಿನಿಂದ ತಾನು ಅದೆಷ್ಟು ಫಾಸ್ಟಾಗಿ ಒಬ್ಬಳೇ ಡ್ರೈವ್‌ ಮಾಡಿಕೊಂಡು ಬಂದೆ ಎಂದು ಆಕೆ ಹೆಮ್ಮೆಯಿಂದ ಹೇಳುತ್ತಿದ್ದರು. ಮೂರು ಗಂಟೆಯ ಪಯಣ ಈಗ ಒಂದೂವರೆ ಗಂಟೆಗೆ ಇಳಿದಿದೆ. ಥ್ರಿಲ್‌!

ʻಸರಿ ಒಂದೂವರೆ ಗಂಟೆಯ ಸಮಯವನ್ನು ಉಳಿಸಿದಿರಿ. ಹಾಗೆ ಉಳಿಸಿದ ಸಮಯವನ್ನು ಯಾತಕ್ಕೆ ಉಪಯೋಗಿಸಿದಿರಿ?ʼ ಕೇಳೋಣ ಅಂತಿದ್ದೆ. ಕೇಳಲಿಲ್ಲ. ಆಕೆಯೇ ಮುಂದುವರೆಸಿದರು:

“ಆದರೆ ಚನ್ನ್‌ಪಟ್ಣ, ಮದ್ದೂರು, ಮಂಡ್ಯ ಇವನ್ನೆಲ್ಲ ದಾಟಿದ್ದೇ ಗೊತ್ತಾಗೋದಿಲ್ಲ. ಪೆಟ್ರೋಲ್‌ ಮುಗಿದರಂತೂ ಎಂಡ್ಲೆಸ್‌ ಪ್ರಾಬ್ಲಮ್‌” ಎಂದು ಗದ್ಗದಿತ ಮುಖಭಾವದಲ್ಲಿ ಹೇಳಿದರು.

ಇಂಥದ್ದೊಂದು ಲಕ್ಷುರಿ ರಸ್ತೆಯನ್ನು ನಿರ್ಮಿಸಲೆಂದು 20 ವರ್ಷಗಳ ಹಿಂದೆ ನೈಸ್‌ ಕಂಪನಿ ಸಿದ್ಧತೆ ನಡೆಸಿತ್ತು. ಅದರ ವಿರುದ್ಧ ರೈತರು ಚಳವಳಿ ನಡೆಸುತ್ತಿದ್ದರು. ಆಗ ನಾನು ಇಂಥ ಸೂಪರ್‌ ಹೈವೇಗಳ ಲಾಭ-ನಷ್ಟಗಳ ತುಲನೆ ಮಾಡಿದ್ದೆ.

ಯಾರ್ಯಾರಿಗೆ ಲಾಭ? ಸಿಮೆಂಟ್‌, ಉಕ್ಕು, ಮರಳು, ಜಲ್ಲಿಕಲ್ಲುಗಳ ಗುತ್ತಿಗೆದಾರರಿಗೆ ಆರಂಭದ ಲಾಭ. ನಂತರ ವಾಹನ ಬಿಡಿಭಾಗಗಳ, ಟಯರ್‌ ಕಂಪನಿಗಳ ಡೀಲರ್‌ಗಳಿಗೆ ಲಾಭ. ತೈಲಕಂಪನಿಗಳಿಗೆ, ವಿಮಾ ಕಂಪನಿಗಳಿಗೆ ಲಾಭ. ಆಸ್ಪತ್ರೆಗಳಿಗೆ, ಔಷಧ-ಬ್ಯಾಂಡೇಜ್‌ ತಯಾರಕರಿಗೆ ಲಾಭ….

ಯಾರ್ಯಾರಿಗೆ ನಷ್ಟ? ಇಡ್ಲಿ, ಚಾ/ಕಾಫಿ ಹೊಟೆಲ್‌ಗಳಿಗೆ ನಷ್ಟ. ಎಳನೀರು ಮಾರುವ ಶ್ರಮಿಕರಿಗೆ, ಬೊಂಬೆ ತಯಾರಿಸುವ ಕುಶಲಕರ್ಮಿಗಳಿಗೆ, ಸೊಪ್ಪು-ಫಲಪುಷ್ಪ ಬೆಳೆದವರಿಗೆ ನಷ್ಟ.

ಕಳೆದ ಮಾರ್ಚ್‌ನಲ್ಲಿ ಈ ಹೈವೇ ಪಯಣಕ್ಕೆ ಹಸಿರು ನಿಶಾನೆ ಸಿಕ್ಕ ಎರಡು ವಾರಗಳ ನಂತರ ನಾನು ನನ್ನ ಪತ್ರಿಕೋದ್ಯಮ ವಿದ್ಯಾರ್ಥಿನಿಯರನ್ನು ಸಮೀಕ್ಷೆಗೆ ಕಳಿಸಿದ್ದೆ. ರಾಮನಗರ, ಬಿಡದಿ, ಕುಂಬಳಗೋಡು ಪಟ್ಟಣಗಳಲ್ಲಿ ನಷ್ಟಕ್ಕೀಡಾದವರ ನಾನಾ ಬಗೆಯ ಚಿತ್ರ ವರದಿಗಳನ್ನು ಅವರು ತಂದಿದ್ದರು.

ಮೂಲ ಪ್ರಶ್ನೆ ಏನೆಂದರೆ, ಹಾಗೆ ಫಾಸ್ಟಾಗಿ ಹೋಗಿ 90 ನಿಮಿಷಗಳನ್ನು ಉಳಿಸಿದವರು ಆ ಸಮಯವನ್ನು ಹೇಗೆ ವಿನಿಯೋಗಿಸುತ್ತಾರೆ? ಅಂಥ ಸಮೀಕ್ಷೆಯನ್ನು ಯಾರೂ ನಡೆಸಲಿಲ್ಲ. ಎಳೆನೀರಿನಿಂದ ವಂಚಿತರಾದ ಅವರು ಪೆಪ್ಸಿಯನ್ನೊ ಕಾಪುಚಿನಾವನ್ನೋ ಹೀರುತ್ತ, ಮೊಬೈಲನ್ನು ಉಜ್ಜುತ್ತ ಕೂರಬಹುದು.

ಇದು ಸೂಪರ್‌ ಫಾಸ್ಟ್‌ ಯುಗ. ಚಲನೆಯೂ ಅತಿ ವೇಗದ್ದಾಗಿರಬೇಕು; ಮಾಹಿತಿಯೂ ಸೂಪರ್‌ ಫಾಸ್ಟಾಗಿ ಬೇಕು. ಆದರೆ ಹಾಗೆ ಉಳಿಸಿದ ಸಮಯ ಮತ್ತು ಗಳಿಸಿದ ಮಾಹಿತಿಗಳು ಜ್ಞಾನವಾಗಿ, ಅರಿವಿನ ರೂಪದಲ್ಲಿ ಅಂತರ್ಗತ ಆದೀತೆ? (ʼಹಿಂದೆಲ್ಲ ಋಷಿಮುನಿಗಳು ಈ ಧಾವಂತದ ಲೋಕದ ಗೊಡವೆ ಬಿಟ್ಟು ಏಕಾಂತಕ್ಕೆ ಹೋಗುತ್ತಿದ್ದುದು ಏಕೆ?ʼ ಎಂದು ಆಗ ಕೇಳಿದ್ದೆ. ಈಗ ಇದನ್ನು ಕೇಳುವುದಿಲ್ಲ).

ನಾನು ಆಗ ಊಹಿಸಿರದಿದ್ದ ಹೊಸ ಆಯಾಮವೊಂದು ಈಗ ಎದ್ದು ಕಾಣುತ್ತಿದೆ. ನಿನ್ನೆಯವರೆಗೆ 132 ಜನರು ಸಾವಪ್ಪಿದ್ದಾರೆ. 296 ಅಪಘಾತಗಳು ಸಂಭವಿಸಿವೆ. 200ಕ್ಕೂ ಹೆಚ್ಚು ಜನರು ಅಂಗವಿಕಲರಾಗಿದ್ದಾರೆ. ಸೂಪರ್‌ ಫಾಸ್ಟ್‌ ಚಲನೆಯ ಥ್ರಿಲ್‌ ಅನುಭವಿಸಲು ಹೊರಟವರು ಈಗ ವ್ಹೀಲ್‌ಚೇರ್‌ ಮತ್ತು ಕೃತಕ ಕಾಲುಗಳ ಆಸರೆ ಪಡೆಯುವಂತಾಗಿದೆ.

“ಮೈಮೇಲೆ ಗಣ ಬಂದಂತೆ ಕಾರನ್ನು ಓಡಿಸಿದರೆ ಎಕ್ಸಿಡೆಂಟ್‌ ಆಗದೇ ಇನ್ನೇನಾಗುತ್ತೆ?” ಅಂತ ಮೊನ್ನೆ ಸಾಂಸದ ಪ್ರತಾಪ್‌ ಸಿಂಹ ಹೇಳುತ್ತಿದ್ದರು. ಪ್ರಾಯಶಃ ಅವರ ಒತ್ತಾಯದಿಂದಲೋ ಏನೊ ವೇಗಕ್ಕೆ ಮಿತಿ ಹಾಕುವ ಯತ್ನ ಆರಂಭವಾದಂತಿದೆ. ಗಂಟೆಗೆ 110 ಕಿ.ಮೀ.ಗಿಂತ ಜಾಸ್ತಿ ವೇಗದಲ್ಲಿ ಓಡಿಸಿದರೆ ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ ಎಂದು ಹೈವೇ ಪ್ರಾಧಿಕಾರ ಇಂದು ಘೋಷಿಸಿದೆ. ಅದರ ಜಾರಿಗೆಂದು ಇನ್ನು ಎಂತೆಂಥ ಹೈಟೆಕ್‌ ಸಾಧನಗಳು ಬರುತ್ತವೊ?

ವ್ಯಂಗ್ಯ ಏನು ಗೊತ್ತಾ? ಡ್ರೈವರ್‌ ಕೈಗೆ ಮೊಬೈಲ್‌ನಂಥ ಹೈಟೆಕ್‌ ಸಾಧನ ಬಂದಿದ್ದೇ ಅಪಘಾತಗಳಿಗೆ ಕಾರಣವಾಗುತ್ತಿರಬಹುದು. ಚಾಲನೆ ಮಾಡುವಾಗ ಮೊಬೈಲ್‌ ಬಳಸದಂತೆ ತಡೆಯಲು ಹೈವೇ ಪ್ರಾಧಿಕಾರ ಇನ್ನಷ್ಟು ಹೈಟೆಕ್‌ ಸಾಧನಗಳನ್ನು ತಂದೀತೆ? ಈ ಬಗೆಯ ಟೆಕ್‌ ರೇಸ್‌ಗೆ ಕೊನೆ ಎಲ್ಲಿ?

ಇಂಥ ಅಪಘಾತಗಳಿಗೆ ಅತಿವೇಗವೂ ಕಾರಣವಾಗಬೇಕಿಲ್ಲ. ಪದೇಪದೇ ಮೊಬೈಲ್‌ ಉಜ್ಜುವ ಚಟವೂ ಕಾರಣವಾಗಬೇಕಿಲ್ಲ. ಸಾಮಾನ್ಯ 80 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದರೂ ಏಕತಾನತೆಯ ಚಲನೆಯಿಂದಾಗಿ ಮೈಮನಕ್ಕೆ ಜೊಂಪು ಹತ್ತಿದಂತಾಗಿ ʼಹೈವೇ ಹಿಪ್ನಾಟಿಸಂʼ ಉಂಟಾಗುತ್ತದೆ. ಅದು ನಿದ್ದೆಯಲ್ಲ; ತೂಕಡಿಕೆಯೂ ಅಲ್ಲ; ದೇಹಕ್ಕೂ ಮನಸ್ಸಿಗೂ ಇರುವ ಬಂಧ ಸಡಿಲವಾಗತ್ತದೆ. ದೇಹ ಆಟೊಪೈಲಟ್‌ ಆಗಿಬಿಡುತ್ತದೆ. ಧ್ಯಾನಸ್ಥ ಸ್ಥಿತಿಯಲ್ಲಿ ತಲೆದೋರುವ ಒಂದು ಬಗೆಯ ಗುಂಗು.

ಮುಂಬೈ- ನಾಗಪುರ ಎಕ್ಸ್ ಪ್ರೆಸ್‌ ವೇಯಲ್ಲಿ ( ಅದರ ಹೆಸರು ʼಸಮೃದ್ಧಿ ಮಹಾಮಾರ್ಗʼ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯನ್ನು ಉದ್ಘಾಟಿಸಿದವರೇ ಇದನ್ನೂ ಉದ್ಘಾಟಿಸಿದ್ದು) ದಿನಕ್ಕೆ ಸರಾಸರಿ ಮೂರು ಅಪಘಾತ ಸಂಭವಿಸುತ್ತಿದೆ. ಕಳೆದ ಶನಿವಾರ ನಸುಕಿನಲ್ಲಿ ಸ್ಲೀಪರ್‌ ಬಸ್‌ ಒಂದು ಕಂಬಕ್ಕೆ ಗುದ್ದಿ ಪಲ್ಟಿ ಹೊಡೆದು ಬೆಂಕಿ ಹೊತ್ತಿಕೊಂಡು 25 ಜನರ ಆಹುತಿ ಆದರಲ್ಲ? ಚಾಲಕನಿಗೆ ಜೊಂಪು ಹತ್ತಿ ಐದೇ ಸೆಕೆಂಡ್‌ ಕಣ್ಣೆವೆ ಮುಚ್ಚಿದರೂ ಸಾಕು ಇಂಥ ಅನಾಹುತ ಆಗುತ್ತದೆ.

ಅಲ್ಲಿನ ಹೈವೇ ಕೂಡಾ ಉದ್ಘಾಟನೆಯಾದ ಆರು ತಿಂಗಳಲ್ಲಿ 88 ಜನರ ಜೀವ ತೆಗೆದಿದೆ. 660 ಜನ ಆಸ್ಪತ್ರೆ ಸೇರಿ ಬದುಕಿದ್ದಾರೆ. ಹೆಚ್ಚಿನವೆಲ್ಲಕ್ಕೂ ಹೈವೇ ಹಿಪ್ನಾಸಿಸ್‌ ಕಾರಣವೆಂದು ಹೇಳಲಾಗಿದೆ. ಅಲ್ಲಿ ಹೆಚ್ಚಿನ ಅಪಘಾತಗಳೆಲ್ಲ ಹಾಡೇ ಹಗಲು ಆಗಿವೆ.

ಇಂಥ ರಸ್ತೆಗಳ ಪಕ್ಕದಲ್ಲಿ ಎಚ್ಚರಿಕೆ ಫಲಕ ಹಾಕಿ ಪ್ರಯೋಜನ ಇಲ್ಲ. ವಾಹನದಲ್ಲೇ, ಚಾಲಕನ ಸ್ಟೀರಿಂಗ್‌ ಚಕ್ರದ ಎದುರಲ್ಲೇ ಎಚ್ಚರಿಕೆಯ ವ್ಯವಸ್ಥೆ ಇರಬೇಕು. ಅದಕ್ಕೂ ಯಾಂತ್ರಿಕ ಬುದ್ಧಿಮತ್ತೆಯ (ʼಯಾಂಬುʼ) ಸಾಧನ ಬಂದಿದೆ. ಚಾಲಕನ ಮುಖವನ್ನೇ ಸದಾ ನೋಡುವ ಕ್ಯಾಮರಾ ಬಂದಿದೆ. ಡ್ರೈವರ್‌ನ ಕಣ್ಣೆವೆಗಳು ಅರ್ಧ ಸೆಕೆಂಡ್‌ಗಿಂತ ಜಾಸ್ತಿ ಮುಚ್ಚಿದ್ದರೆ ಆತ ನಿದ್ದೆಗೆ ಜಾರುತ್ತಿದ್ದಾನೆ ಎಂದು ಗೊತ್ತಾಗಿ ಆ ಕ್ಯಾಮರಾದಿಂದ ಫ್ಲ್ಯಾಶ್‌ ಬೆಳಕು ಬೀಳುತ್ತದೆ. ಆತನನ್ನು ಹಾಗೂ ಸಹಪಯಣಿಗರನ್ನು ʼಯಾಂಬುʼ ಎಚ್ಚರಿಸುತ್ತದೆ.

ಮಿಂಚಿನಂಥ ಫ್ಲ್ಯಾಶ್‌ ಪ್ರಭೆಗೆ ದಿಗಿಲುಬಿದ್ದು ಧಿಗ್ಗನೆದ್ದು ಚಾಲಕ ಇನ್ನೇನಾದರೂ ಭಾನಗಡಿ ಮಾಡಿಕೊಳ್ಳದ ಹಾಗೆ ಬೇರೇನಾದರೂ ಸುರಕ್ಷಾ ವ್ಯವಸ್ಥೆ ಇದ್ದಂತಿಲ್ಲ. ಇರುವುದು ಒಳ್ಳೆಯದು.

ಅಮೆರಿಕದಲ್ಲಿ ಮಾದಕ ವಸ್ತು ಸೇವನೆ ಮಾಡಿ ವಾಹನ ಓಡಿಸುವವರ ಮೇಲೆ ಕಣ್ಣಿಡಲು ಅಂಥ ಯಾಂಬು ಕ್ಯಾಮರಾ ಬಂದಿದೆ. ಅದು ಚಾಲಕ ದೇಹಭಾಷೆ, ಕಣ್ಣಿನ ಪಾಪೆಯ ಚಲನೆ ಇತ್ಯಾದಿ ಹದಿನಾರು ಲಕ್ಷಣಗಳನ್ನು ನೋಡುತ್ತದೆ. ಆತ ಮಾದಕದ್ರವ್ಯ ಸೇವನೆ ಮಾಡಿದ್ದರೆ ಗಾಡಿ ಚಾಲೂ ಆಗುವುದೇ ಇಲ್ಲ. ಎರಡು ವರ್ಷಗಳ ಹಿಂದೆ ಪ್ರಕಟವಾದ ನನ್ನ ʼಆನಂದಾಮೈಡ್‌ʼ ಪುಸ್ತಕದಲ್ಲಿ ಅದರ ಬಗ್ಗೆ ಬರೆದಿದ್ದೆ.

ಈ ಬಗೆಯ ಕಂಪ್ಯೂಟರ್‌ ಚಾಲಿತ ಸಾಧನಕ್ಕೆ ಯಾಂತ್ರಿಕ ಬುದ್ಧಿಮತ್ತೆ (ಯಾಂಬು) ಅಲ್ಲ, ಯಾತ್ರಿಕ ಬುದ್ಧಿಮತ್ತೆ (ಯಾಬು) ಎನ್ನೋಣವೆ? ಯಾತ್ರಿಗಳ ಜೀವ ಉಳಿಸುವ ಸಾಧನ ತಾನೆ?

ಮೈಮೇಲೆ ʼಗಣ ಬಂದಂತೆʼ ಹುಚ್ಚು ಹುಮ್ಮಸಿನಿಂದ ಗಾಡಿಯನ್ನು ಓಡಿಸುವುದು ಯಾವಾಗ ಗೊತ್ತೆ? ನಿಧಾನ ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೆ ಸೆಕೆಂಡ್‌ ಗಿಯರ್‌ನಲ್ಲಿ ಚಲಿಸಿದ ನಂತರ ಹಠಾತ್ತಾಗಿ ವಿಶಾಲ, ಸಪಾಟು ರಸ್ತೆ ಸಿಕ್ಕಾಗ ಹಾಗೆ ಆಗುತ್ತದೆ. ಕೆಂಗೇರಿ ದಾಟಿ ಕುಂಬಳಗೋಡಿನ ಹೆದ್ದಾರಿಯನ್ನು ಪ್ರವೇಶಿಸಿದ ಮೊದಲ ಹತ್ತು-15 ನಿಮಿಷಗಳಲ್ಲಿ ಹಾಗಾಗುತ್ತದೆ.

(ಹೈವೇಯಲ್ಲಿ ಹೊರಟ ಮೂರೇ ನಿಮಿಷಗಳಲ್ಲಿ ನೈಸ್‌ ಕಂಬಕ್ಕೆ ಗುದ್ದಿ, ಕಾರಿನಲ್ಲಿದ್ದ ಆರೂ ಯುವಕರು ಪ್ರಾಣ ಬಿಟ್ಟಿದ್ದು ನನಗೆ ಗೊತ್ತು. ಆಗ ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಆಗಿರಲಿಲ್ಲ; ಟೋಲ್‌ ಕೂಡ ಇರಲಿಲ್ಲ.)

ದೂರದ ಚನ್ನಪಟ್ಣ ಮತ್ತು ಮಂಡ್ಯದ ನಡುವೆ ಅಪಘಾತ-ಅಪಮೃತ್ಯು ಸಂಭವಿಸಿದರೆ ಅದಕ್ಕೆ ʼಹೈವೈ ಹಿಪ್ನಾಟಿಸಂʼ (ಹೆದ್ದಾರಿ ವಶೀಕರಣವೇ) ಬಹುತೇಕ ಕಾರಣವಾಗಿದ್ದೀತು. ದಂಡ ಹಾಕಿ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ.

ಅಂದಹಾಗೆ ʼಟೋಲ್‌ʼ ಎಂಬ ಪದಕ್ಕೆ ʼಶುಲ್ಕ ಸಂಗ್ರಹʼ ಎಂಬ ಅರ್ಥವೂ ಇದೆ; ಡೆತ್‌ ಟೋಲ್‌ ಎಂದಾಗ ʼಸಾವಿನ ಸಂಖ್ಯೆʼ ಎಂಬ ಅರ್ಥವೂ ಇದೆ. ಈ ಮಹಾಮಾರ್ಗದಲ್ಲಿ ಎರಡೂ ಏರಿಕೆ ಆಗುತ್ತಿದೆ.
*
ನಾವೊಂದು ವಿಲಕ್ಷಣ ʼಭೋಗಕುಣಿಕೆʼಯಲ್ಲಿ ಸಿಕ್ಕಿ ಬೀಳುತ್ತಿದ್ದೇವೆ. ಇದನ್ನು Luxury Trap ಎಂದು ಹೆಸರಿಸಿದ್ದಾನೆ, ಯುವಾಲ್‌ ನೋವಾ ಹರಾರೆ. ಇಂದಿನ ಕಾಲ ಎಂಥದ್ದೆಂದರೆ ಯುದ್ಧಗಳಲ್ಲಿ ಸಾಯುವ ಜನರಿಗಿಂತ ಟ್ರಾಫಿಕ್‌ ಅಪಘಾತಗಳಲ್ಲಿ ಹೆಚ್ಚು ಜನ ಸಾಯುತ್ತಾರೆ. ಹಸಿವೆ ಅರೆಹೊಟ್ಟೆಯಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಿನ ಜನರು ಅತಿಭಕ್ಷಣದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವೆರಡರ ಜಂಟಿ ಸಂಕೇತವಾಗಿ ನಮ್ಮ ಹೆಮ್ಮೆಯ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇ ಮಿಂಚುತ್ತಿದೆ.

You cannot copy content of this page

Exit mobile version