Sunday, June 22, 2025

ಸತ್ಯ | ನ್ಯಾಯ |ಧರ್ಮ

ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರಕಾರದ ವೈಫಲ್ಯಗಳು

ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರಕಾರದ ವೈಫಲ್ಯಗಳತ್ತ ಒಮ್ಮೆ ಕಣ್ಣು ಹಾಯಿಸಿ. ಆರ್‍ಎಸ್‍ಎಸ್‍ನ ಆರ್ಯನ್-ಬ್ರಾಹ್ಮಣಶಾಹಿ ಸಿದ್ಧಾಂತವನ್ನು ಜಾರಿಗೊಳಿಸಲು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿಗಾಗಿ ಮಾತ್ರ ಬಿಜೆಪಿ ಸರಕಾರ ಬದ್ಧವಾಗಿದೆ. ಇವರು ಮತ್ತೆ ಅಧಿಕಾರಕ್ಕೆ ಬಂದರೆ ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಕುಲಗೆಡಿಸುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಬಿಜೆಪಿಯನ್ನು ಸೋಲಿಸಿ, ಶಿಕ್ಷಣವನ್ನು ಉಳಿಸಿ – ಬಿ. ಶ್ರೀಪಾದ ಭಟ್

1 ಕೋವಿಡ್ ಕಾಯಿಲೆಯಿಂದಾಗಿ ಶಾಲೆಗಳು ಮುಚ್ಚಲ್ಪಟ್ಟ ಕಾರಣದಿಂದ ಮಕ್ಕಳಲ್ಲಿ ಕಲಿಕಾ ಅಂತರ ಉಂಟಾಯಿತು. ಇದು ಕಲಿಕಾ ನಷ್ಟಕ್ಕೆ ಕಾರಣವಾಯಿತು. ಆದರೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಮತ್ತು ಪ್ರಾಥಮಿಕ, ಪ್ರೌಢ ಶಿಕ್ಷಣ ಮಂತ್ರಿಗಳಾಗಿದ್ದ ಸುರೇಶ್ ಕುಮಾರ್ ಮತ್ತು ಬಿ.ಸಿ.ನಾಗೇಶ್ ಅವರಿಗೆ ಇದರ ಅಂದಾಜು, ಪ್ರತಿಕೂಲ ಪರಿಣಾಮಗಳು ಸಹ ಅರಿವಾಗಲಿಲ್ಲ. ಅವರ ಗ್ರಹಿಕೆಗೂ ಬರಲಿಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಮಕ್ಕಳ ವ್ಯಾಸಂಗವನ್ನು ಉತ್ತಮಗೊಳಿಸಲು ಯಾವುದೇ ಕಾರ್ಯ ಯೋಜನೆಗಳನ್ನು ರೂಪಿಸಲಿಲ್ಲ. 2019ರಲ್ಲಿ (ಕೋವಿಡ್ ಪೂರ್ವ) ಶೇ.19.3ರಷ್ಟಿದ್ದ ಕಲಿಕೆಯ ಮಟ್ಟವು 2022ರಲ್ಲಿ (ಕೋವಿಡ್ ನಂತರ) ಅದು ಶೇ. 8.6ಕ್ಕೆ ಕುಸಿಯಿತು. ಈ ಕಲಿಕೆಯ ಅಂತರ ಮತ್ತು ಕಲಿಕೆಯ ನಷ್ಟವನ್ನು ಸರಿಪಡಿಸುವ ಯಾವುದೇ ವಿಚಾರಕ್ಕೂ ಹೋಗದ ಈ ಶಿಕ್ಷಣ ಮಂತ್ರಿಗಳು ಸುಳ್ಳುಗಳನ್ನು ಹೇಳುತ್ತಾ ಕಾಲಕ್ಷೇಪ ಮಾಡಿದರು.

2. ಇಂತಹ ಬಿಕ್ಕಟ್ಟಿನಲ್ಲಿ ಪಠ್ಯಪುಸ್ತಕ ರಹಿತ ‘ಕಲಿಕಾ ಚೇತರಿಕೆ’ ಎನ್ನುವ ದಿಕ್ಕು ದೆಸೆಯಿಲ್ಲದ ಕಾರ್ಯಕ್ರಮ ಜಾರಿಗೆ ತಂದರು. ಇದರ ಉದ್ದೇಶವೇನು ಎನ್ನುವುದರ ಕುರಿತು ಶಿಕ್ಷಣ ಇಲಾಖೆಗೆ, ಶಿಕ್ಷಕರಿಗೆ ಸ್ಪಷ್ಟತೆ ಇರಲಿಲ್ಲ. ಈ ಕಲಿಕಾ ಚೇತರಿಕೆಯ ಭಾಗವಾಗಿ ಸರಕಾರಿ ಶಾಲೆಗಳಿಗೆ ಒದಗಿಸಬೇಕಾಗಿದ್ದ ಕಲಿಕಾ ಉಪಕರಣಗಳನ್ನು ಪೂರೈಸಲು ವಿಫಲರಾದರು. ಬಹುತೇಕ ಶಾಲೆಗಳಲ್ಲಿ ಬೋಧನೆಗೆ ಅಗತ್ಯವಾದ ಪಠ್ಯಗಳು ಲಭ್ಯವಿರಲಿಲ್ಲ. ಅತ್ತ ಪಠ್ಯಪುಸ್ತಕಗಳಿಲ್ಲದೆ, ಇತ್ತ ಕಲಿಕಾ ಚೇತರಿಕೆಯ ಉಪಕರಣಗಳಿಲ್ಲದೆ ಮಕ್ಕಳು ಕಲಿಕೆಯಿಂದ ವಂಚಿತರಾದರು.

3. ಕೋವಿಡ್ ಸಂದರ್ಭದಲ್ಲಿ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗಿದೆ. ಆದರೆ ಇದರ ಪ್ರಮಾಣ ಮತ್ತು ಅಂಕಿಅಂಶಗಳು ಶಿಕ್ಷಣ ಇಲಾಖೆಯ ಬಳಿ ಲಭ್ಯವಿಲ್ಲ.

4. ಕೋವಿಡ್ ಸಂದರ್ಭದಲ್ಲಿ ಮಧ್ಯಾಹ್ನದ ಬಿಸಿಯೂಟ ಪೂರೈಕೆ ನಿಲ್ಲಿಸಲಾಯಿತು. ಆದರೆ ಇದಕ್ಕೆ ಪರ್ಯಾಯ ಮಾರ್ಗಗಳನ್ನು ರೂಪಿಸಲಿಲ್ಲ. ಕಡೆಗೂ ಎಚ್ಚೆತ್ತುಕೊಂಡು ಅಕ್ಕಿ, ಬೇಳೆಯನ್ನು ಮಕ್ಕಳ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ಕೊಟ್ಟರು. ಆದರೆ ಆಡಳಿತಾತ್ಮಕ ಅದಕ್ಷತೆ ಮತ್ತು ಬ್ರಷ್ಟಾಚಾರದ ಕಾರಣದಿಂದ ಈ ಯೋಜನೆಯೂ ಸಮರ್ಪಕವಾಗಿ ಜಾರಿಗೊಳ್ಳಲಿಲ್ಲ. ಕಡೆಗೂ ಮಕ್ಕಳು ಬಿಸಿಯೂಟದಿಂದ ವಂಚಿತರಾದರು.

5. ಇಂತಹ ಬಿಕ್ಕಟ್ಟಿನಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ಬಿ.ಸಿ.ನಾಗೇಶ್ ಅವರು ಯಾವುದೇ ಸೂಕ್ತ ಕಾರಣಗಳಿಲ್ಲದೆ ಪಠ್ಯಪುಸ್ತಕಗಳ ಪರಿಷ್ಕರಣೆಯ ನೆಪದಲ್ಲಿ ಶಿಕ್ಷಣದ ಬ್ರಾಹ್ಮಣೀಕರಣಕ್ಕೆ ಮುಂದಾದರು. ಯಾವುದೇ ಶೈಕ್ಷಣಿಕ ಅರ್ಹತೆಗಳಿಲ್ಲದ, ಶಿಕ್ಷಣ ತಜ್ಞನಲ್ಲದ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿಕೊಂಡಿದ್ದ, ಜಾತಿವಾದಿ ರೋಹಿತ್ ಚಕ್ರತೀರ್ಥನನ್ನು ಪರಿಷ್ಕರಣೆ ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸಿದರು. ಈ ಸಮಿತಿಯು ಶೂದ್ರ, ದಲಿತ, ಮುಸ್ಲಿಂ ಲೇಖಕ, ಲೇಖಕಿಯರ ಪಠ್ಯಗಳನ್ನು ತೆಗೆದು ಹಾಕಿ ಬ್ರಾಹ್ಮಣ ಲೇಖಕರ ಪಠ್ಯಗಳನ್ನು ಸೇರಿಸಿದರು. ಕುವೆಂಪು, ಅಂಬೇಡ್ಕರ್, ಬಸವ, ಅಕ್ಕಮಹಾದೇವಿ, ಕನಕರಂತಹ ವಿಮೋಚಕರಿಗೆ ಅವಮಾನ ಮಾಡುವಂತಹ ಪಠ್ಯಗಳನ್ನು ಸೇರಿಸಿದರು. ಇತಿಹಾಸವನ್ನು ತಿರುಚಲು ಪ್ರಯತ್ನಿಸಿದರು.

6. ಮಠಗಳ ಸ್ವಾಮಿಗಳು ಮತ್ತು ಅರ್‍ಎಸ್‍ಎಸ್ ಬೆಂಬಲಿಗರೊಂದಿಗೆ ಶಿಕ್ಷಣದಲ್ಲಿ ನೀತಿಯ ಬೋಧನೆಯ ಕುರಿತು ಸಮಾಲೋಚನೆ ನಡೆಸಿದರು. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಶಿಕ್ಷಣದ ಭಾಗೀದಾರರು, ಶಿಕ್ಷಣ ತಜ್ಞರು, ಪೌಷ್ಠಿಕ ತಜ್ಞರ ಅಧ್ಯಯನಗಳು ಮತ್ತು ಶಿಫಾರಸ್ಸುಗಳನ್ನು ನಿರ್ಲಕ್ಷಿಸಿ ‘ಸಾತ್ವಿಕ ಆಹಾರ’ದ ಪ್ರಚಾರ ಮಾಡಿದರು.

7. ಮಧ್ಯಾಹ್ನದ ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಸಪ್ಪೆ ಆಹಾರ ಕೊಡುವುದನ್ನು ಕರ್ನಾಟಕ ಆಹಾರ ಆಯೋಗವು ವಿರೋಧಿಸಿದರೂ ಲೆಕ್ಕಿಸದೆ ‘ಅಕ್ಷಯ ಪಾತ್ರ ಫೌಂಡೇಶನ್’ (ಎಪಿಎಫ್) ಮೂಲಕ ಅಪೌಷ್ಠಿಕ ಆಹಾರವನ್ನು ಪೂರೈಸಲು ಅನುಮತಿ ಕೊಡಲಾಗಿದೆ. 

8. ಮಕ್ಕಳಿಗೆ ಮೊಟ್ಟೆ ಕೊಡುವುದರ ವಿಚಾರದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸಲಾಯಿತು. ನಂತರ ಎಚ್ಚೆತ್ತುಕೊಂಡು ಮೊಟ್ಟೆ ವಿತರಣೆಗೆ ಅನುಮತಿ ಕೊಡಲಾಯಿತು. ಆದರೆ ಮಧ್ಯಾಹ್ನದ ಬಿಸಿಯೂಟಕ್ಕೆ ಎಪಿಎಫ್ ಗುತ್ತಿಗೆ ತೆಗೆದುಕೊಂಡ ಶಾಲೆಗಳ ಮಕ್ಕಳು ಈ ಮೊಟ್ಟೆ ಆಹಾರದಿಂದ ವಂಚಿತರಾಗಿದ್ದಾರೆ. ಇದು ತಾರತಮ್ಯ ನೀತಿಯಾಗಿದೆ.

9. ವಿಲೀನದ ನೆಪದಲ್ಲಿ 13,000 ಸರಕಾರಿ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದರು..

೧೦. ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ 1.48 ಲಕ್ಷ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿಲ್ಲ. ಇಲ್ಲಿ ಶೇ.57.3ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದು ದೇಶದಲ್ಲಿಯೇ ಅತ್ಯಧಿಕವಾಗಿದೆ.

11. 13,000 ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟ ರೂಪ್ಸವು ‘ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಶಿಕ್ಷಣ ಕ್ಷೇತ್ರದಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರದಲ್ಲಿ ತೊಡಗಿದೆ’ ಎಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

12. ಮತೀಯವಾದಿಕರಣದ ಭಾಗವಾಗಿ ಹಿಜಾಬ್ ವಿವಾದವನ್ನು ಸೃಷ್ಟಿಸಿ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುವುದಕ್ಕೆ ಕಾರಣರಾದರು.

13. ಪ.ಜಾತಿ, ಪ.ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‍ನ್ನು ಕೊಡುವುದರಲ್ಲಿ ವಿಳಂಬ ನೀತಿ ಅನುಸರಿಸಿದರು. ಮುಸ್ಲಿಂ ವಿದ್ಯಾರ್ಥಿಗಳ ಮೀಸಲಾತಿಯನ್ನು ತೆಗೆದು ಹಾಕಿದರು.

14. ಪ.ಜಾತಿ, ಪ.ಪಂಗಡ ಮತ್ತು ಹಿಂದುಳಿದ ವರ್ಗಗಳ ಹಾಸ್ಟೆಲ್ ನಿರ್ವಹಣೆ ಅತ್ಯಂತ ಕಳಪೆ ಮಟ್ಟದ್ದಾಗಿದೆ.

15. ಶೇ.23ರಷ್ಟು ಸರಕಾರಿ ಶಾಲೆಗಳು ಮಾತ್ರ ಶಿಕ್ಷಣ ಹಕ್ಕು ಕಾಯಿದೆ (ಆರ್‍ಟಿಇ) ಮಾನದಂಡಗಳ ಅನುಸಾರ ಕಡ್ಡಾಯಗೊಳಿಸಲಾದ ಮೂಲಭೂತ ಸೌಕರ್ಯಗಳನ್ನು ಹೊಂದಿವೆ.

16. ಬೊಮ್ಮಾಯಿ ಸರಕಾರವು RTE ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಲು ವಿಫಲವಾಗಿದೆ

17. ಈ ನಿರ್ಣಯಕ್ಕೆ ಶಿಕ್ಷಣ ತಜ್ಞರ ಶಿಫಾರಸ್ಸುಗಳಿಲ್ಲದೆ, ಯಾವುದೇ ತೌಲನಿಕ ಅಧ್ಯಯನಗಳಿಲ್ಲದೆ, ಸೂಕ್ತ ಮಾನದಂಡಗಳಿಲ್ಲದೆ 5 ಮತ್ತು 8ನೆ ತರಗತಿಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವಂತಹ ಅವೈಜ್ಞಾನಿಕ, ಸಂವಿಧಾನ ವಿರೋಧಿ ನಿರ್ಧಾರ ತೆಗೆದುಕೊಂಡರು. ಇದು ಗ್ರಾಮೀಣ ಭಾಗದ ತಳ ಸಮುದಾಯದ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ.

18. ಉನ್ನತ ಶಿಕ್ಷಣದಲ್ಲಿ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ, ರಾಜಕೀಯ ಹಿತಾಸಕ್ತಿಗಾಗಿ ಹೊಸ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೊಳಿಸಿದರು. ಈ ಶಿಕ್ಷಣ ನೀತಿಯನ್ನು ಸದನದಲ್ಲಿ ಚರ್ಚಿಸಲಿಲ್ಲ. ಶಿಕ್ಷಣದ ಭಾಗೀದಾರರೊಂದಿಗೂ ಸಮಾಲೋಚನೆ ನಡೆಸಲಿಲ್ಲ. ಬಿಜೆಪಿ ಸರಕಾರದ ಸ್ವಾರ್ಥ ರಾಜಕಾರಣದ ಫಲವಾಗಿ ಇಂದು ಇಲ್ಲಿನ ಉನ್ನತ ಶಿಕ್ಷಣ ವ್ಯವಸ್ಥೆಯು ಅರಾಜಕತೆಯ ಹಂತ ತಲುಪಿದೆ. ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

19. ಹಾಲಿ ವಿಶ್ವ ವಿದ್ಯಾಲಯಗಳಿಗೆ ಸೂಕ್ತ ಅನುದಾನ ನೀಡದೆ, ಮೂಲಭೂತ ಅವಶ್ಯಕತೆಗಳನ್ನು ಕಲ್ಪಿಸದೆ ಅವುಗಳನ್ನು ಹಂತಹಂತವಾಗಿ ಮುಚ್ಚುವ ಸ್ಥಿತಿಗೆ ತಂದ ಬೊಮ್ಮಾಯಿ ಸರಕಾರವು ಹೊಸದಾಗಿ ಏಳು ವಿವಿಗಳನ್ನು ಸ್ಥಾಪಿಸಿ ಆದೇಶ ಹೊರಡಿಸಿದೆ.

20. ಶಿಕ್ಷಣಕ್ಕೆ ಜಿಡಿಪಿಯ ಶೇ.6ರಷ್ಟು ಬಜೆಟ್ ವೆಚ್ಚದ ಶೇ.26ರಷ್ಟು ಅನುದಾನವನ್ನು ಹಂಚಿಕೆ ಮಾಡಬೇಕು ಎನ್ನುವ ನೀತಿಯನ್ನು ಜಾರಿಗೊಳಿಸಲು ವಿಫಲರಾಗಿದ್ದಾರೆ. ಬಜೆಟ್ ವೆಚ್ಚದ ಸರಾಸರಿ ಶೇ.11.12 ಮತ್ತು ಜಿಡಿಪಿಯ ಶೇ.2.12ರಷ್ಟು ಮಾತ್ರ ಶಿಕ್ಷಣಕ್ಕೆ ವೆಚ್ಚ ಮಾಡುತ್ತಿದ್ದಾರೆ. ಇದರ ಫಲವಾಗಿ ಮೂಲಭೂತ ಸೌಕರ್ಯಗಳಿಲ್ಲದೆ, ಶಿಕ್ಷಕರಿಲ್ಲದೆ, ಗ್ರಂಥಾಲಯಗಳಿಲ್ಲದೆ ಸರಕಾರಿ ಶಾಲೆಗಳು, ವಿಶ್ವವಿದ್ಯಾಲಯಗಳು ಮುಚ್ಚುವ ಹಂತಕ್ಕೆ ತಲುಪಿವೆ

ಈ ಪಟ್ಟಿ ಮುಗಿಯುವುದಿಲ್ಲ. ಆರ್‍ಎಸ್‍ಎಸ್‍ನ ಆರ್ಯನ್-ಬ್ರಾಹ್ಮಣಶಾಹಿ ಸಿದ್ಧಾಂತವನ್ನು ಜಾರಿಗೊಳಿಸಲು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿಗಾಗಿ ಮಾತ್ರ ಬಿಜೆಪಿ ಸರಕಾರ ಬದ್ಧವಾಗಿದೆ.

ಬಿ. ಶ್ರೀಪಾದ ಭಟ್

ಶಿಕ್ಷಣ ತಜ್ಞರು

ಇದನ್ನೂ ಓದಿ-https://peepalmedia.com/think-and-vote/ http://ಕನಸುಗಳಿಗೆ ಕಾವು ನೀಡಿ, ಯೋಚಿಸಿ ಮತನೀಡಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page