Saturday, March 15, 2025

ಸತ್ಯ | ನ್ಯಾಯ |ಧರ್ಮ

ಶಿವಮೊಗ್ಗದಲ್ಲಿ ಫೇಕ್ ನ್ಯೂಸ್ ಹಾವಳಿ: ಎಸ್ ಪಿ ಖಡಕ್ ಎಚ್ಚರಿಕೆ

ಶಿವಮೊಗ್ಗದಲ್ಲಿ ಗಣಪತಿ ಮೆರವಣಿಗೆ ಮತ್ತು ಈದ್ ಮಿಲಾದ್ ಹಬ್ಬದ ನಂತರ ಹೊತ್ತಿಕೊಂಡ ಕೋಮು ಗಲಭೆ ಮತ್ತು ಗಲಭೆಯ ನಂತರ ಶುರುವಾದ ಕೆಲವು ಸುಳ್ಳು ಸುದ್ದಿಗಳ ವಿಚಾರವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಶಿವಮೊಗ್ಗದ ರಾಗಿಗುಡ್ಡದಲ್ಲಿ ಗಲಭೆ ಹಿನ್ನೆಲೆಯಲ್ಲಿ ದಿನಕ್ಕೊಂದು ಬೆಳವಣಿಗೆ ಸಧ್ಯ ಪೊಲೀಸರ ನಿದ್ದೆಗೆಡಿಸಿದೆ. ಸ್ಥಳೀಯ ಶಾಂತಿಪ್ರಿಯ ಮನಸ್ಸುಗಳಿಗೂ ಇದೆಲ್ಲಾ ಕೊನೆಯಾಗುವುದು ಯಾವಾಗ ಎಂಬ ದೊಡ್ಡ ತಲೆನೋವು ಶುರುವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗುತ್ತಿರುವ ದಿನಕ್ಕೊಂದು ಸುಳ್ಳು ಸುದ್ದಿಗಳು ಗಲಭೆ ಹೆಚ್ಚುವಂತೆ ಮಾಡುತ್ತಿದೆ. ಇದರ ಜೊತೆಗೆ ಶಿವಮೊಗ್ಗದ ಆಚೆಗೂ ಸಮುದಾಯಗಳ ನಡುವೆ ಕಂದಕ ಹೆಚ್ಚುವಂತೆ ಮಾಡುತ್ತಿದೆ.

ಸಧ್ಯ ಎರಡೂ ಗುಂಪಿನಲ್ಲಿ ಬರುವ ಮೂಲಭೂತವಾದಿ ನಿಲುವಿನ ಜನರು ಗಲಭೆ ತಣ್ಣಗಾಗಲು ಪ್ರಯತ್ನಿಸದೇ ಬೆಂಕಿಗೆ ತುಪ್ಪ ಸುರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದರ ಜೊತೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿಂದಲೋ ತಂದ ಸುದ್ದಿಗಳನ್ನು ಇದು ಶಿವಮೊಗ್ಗದ್ದೇ ಎಂದು ಬಿಂಬಿಸುವ ಕೆಲಸಕ್ಕೆ ಮುಂದಾದವರಿಗೆ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಐದು ದಿನಗಳ ಹಿಂದೆಯೇ ಅಕ್ಟೋಬರ್ 3 ಕ್ಕೆ ಈ ಒಂದು ಎಚ್ಚರಿಕೆ ಸಂದೇಶ ರವಾನಿಸಿದ್ದ ಶಿವಮೊಗ್ಗ ಎಸ್ಪಿ, ಮತ್ತೊಂದು ಸುಳ್ಳು ಸುದ್ದಿ ವಾಟ್ಸಾಪ್ ಮತ್ತು ಫೇಸ್ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಆ ವಿಡಿಯೋ ಸ್ಪಷ್ಟವಾಗಿ ಸುಳ್ಳು ಸುದ್ದಿ, ಇದನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದು ಫೋಟೊ ಹಂಚಿಕೊಳ್ಳುವ ಮೂಲಕ ಈ ವಿಡಿಯೋ ಸಹ ಸುಳ್ಳು ಸುದ್ದಿಯಾಗಿದ್ದು, ಅದೂ ಸಹ ಶಿವಮೊಗ್ಗಕ್ಕೆ ಸಂಬಂಧಿಸಿದ್ದಾಗಿರದೇ, ದಿಃ 3-9-2023ರಂದು ಚಿಕ್ಕಮಗಳೂರಿನ ಗೌರಿಕಾಲುವೆ ಬಡಾವಣೆಯಲ್ಲಿ ಕ್ರಿಕೇಟ್ ಆಡುವಾಗ ನಡೆದ ಘಟನೆಯಾಗಿದ್ದು ಈ ಬಗ್ಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದರ ಜೊತೆಗೆ ಪೂರ್ವಾಗ್ರಹ ಪೀಡಿತ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವ ಖಡಕ್ ಎಚ್ಚರಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page