ಪರಸ್ಪರ ಒಪ್ಪಿತ ಸಂಬಂಧ ಹಳಸುವುದು ಅಥವಾ ಸಂಗಾತಿಗಳು ಬೇರ್ಪಡುವುದು ಹಾಗೂ ವಿವಾಹದ ಬಗ್ಗೆ ಸುಳ್ಳು ಭರವಸೆಯ ಮೇರೆಗೆ ಪುರುಷನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಲು ಯೋಗ್ಯ ಕಾರಣವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ, ಇಂತಹ ಪ್ರಕರಣಗಳು ನ್ಯಾಯಾಲಯಗಳ ಮೇಲೆ ಹೊರೆಯಾಗುವುದಲ್ಲದೆ, ಇಂತಹ ಘೋರ ಅಪರಾಧದ ಆರೋಪಿ ವ್ಯಕ್ತಿಗೆ ಅಪಖ್ಯಾತಿ ತರುತ್ತದೆ ಎಂದು ಹೇಳಿದೆ.
ಮದುವೆಯಾಗುವುದಾಗಿ ಭರವಸೆ ನೀಡುವ ಪ್ರತಿಯೊಂದು ಉಲ್ಲಂಘನೆಯನ್ನು ಸುಳ್ಳು ಭರವಸೆ ಎಂದು ಪರಿಗಣಿಸಿ, ನಂತರ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಮೊಕದ್ದಮೆ ಹೂಡುವ ನ್ಯಾಯಾಲಯಗಳ ಪ್ರವೃತ್ತಿಯ ಬಗ್ಗೆ ಈ ನ್ಯಾಯಾಲಯವು ಪದೇ ಪದೇ ಕಳವಳ ವ್ಯಕ್ತಪಡಿಸಿದೆ ಎಂದು ನ್ಯಾಯಾಲಯವು ತನ್ನ ಹೇಳಿಕೆಯಲ್ಲಿ ಸೇರಿಸಿದೆ.
ಅತ್ಯಾಚಾರ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿದ್ದ 23 ವರ್ಷದ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಜಾಮೀನು ನೀಡಿದೆ. ಈ ಯುವಕನ ಮೇಲೆ 40 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪವಿದೆ. ಯುವಕ ಒಂಬತ್ತು ತಿಂಗಳಿನಿಂದ ಜೈಲಿನಲ್ಲಿದ್ದಾನೆ, ಆದರೆ ಅವರ ವಿರುದ್ಧ ಇನ್ನೂ ಆರೋಪಗಳನ್ನು ಹೊರಿಸಲಾಗಿಲ್ಲ. ಅದಕ್ಕಾಗಿಯೇ ಅವರಿಗೆ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಅಷ್ಟೇ ಅಲ್ಲದೆ ಪ್ರಕರಣದಲ್ಲಿ ದೆಹಲಿ ಪೊಲೀಸರ ವಿರುದ್ಧ ಕಟುವಾದ ಟೀಕೆಗಳನ್ನು ಮಾಡಿತು. ಮಹಿಳೆ ತನ್ನ ಸ್ವಂತ ಇಚ್ಛೆಯಿಂದ ಯುವಕನೊಂದಿಗೆ ಹೋದಾಗ, ಪೊಲೀಸರು ಅತ್ಯಾಚಾರ ಪ್ರಕರಣವನ್ನು ಹೇಗೆ ದಾಖಲಿಸಿದರು ಎಂದು ನ್ಯಾಯಾಲಯ ಕೇಳಿತು. ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ಆ ಮಹಿಳೆ ಮಗುವಲ್ಲ, 40 ವರ್ಷ ವಯಸ್ಸು.
ಹೀಗಿರುವಾಗ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ರ ಅಡಿಯಲ್ಲಿ ನೀವು ಯಾವ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದೀರಿ? ಎಂದು ಪೀಠ ಪ್ರಶ್ನಿಸಿದೆ.