ಹಾಸನ : ಸರ್ಕಾರವು ಕಂಪನಿಗಳ ಮೂಲಕ ರೈತರಿಗೆ ಕಳಪೆ ಗುಣಮಟ್ಟದ ಜೋಳದ ಬೀಜ ನೀಡಲಾಗಿದ್ದು, ಬೆಳೆಗೆ ಆಗಿರುವ ನಷ್ಟದ ಬಗ್ಗೆ ಪರಿಹಾರ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದಲ್ಲಿ ನಕಲಿ ಕಂಪನಿಗಳ ಪ್ರತಿಕೃತಿ ಧಹಿಸಿ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ನಕಲಿ ಕಂಪನಿಗಳ ಪ್ರತಿಕೃತಿಯನ್ನು ಹೆಗಲು ಮೇಲೆ ಹೊತ್ತುಕೊಂಡು ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತ, ಬಿ.ಎಂ. ರಸ್ತೆ ಮೂಲಕ ಸಂತೇಪೇಟೆ ವೃತ್ತಕ್ಕೆ ಬಂದ ಪ್ರತಿಭಟನಾ ಮೆರವಣಿಗೆಯು ಮಾನವ ಸರಪಳಿ ನಿರ್ಮಿಸಿ ಪ್ರತಿಕೃತಿಯನ್ನು ಸುಟ್ಟು ಹಾಕಿದರು. ಇದೆ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದ ನಾಯಕರಾದ ಗಂಗಾಧರ್ ಮಾತನಾಡಿ, ಉತ್ತಮ ಮಳೆಯಾಗಿ ಜೂನ್ ತಿಂಗಳಲ್ಲೆ ಜಲಾಶಯಗಳು ಭರ್ತಿಯಾಗಿದೆ. ರಾಜ್ಯದಲ್ಲಿ ಉತ್ತಮ ಬಿತ್ತನೆಯಾಗಿದೆ. ಆದರೇ ಕೃಷಿ ಮತ್ತು ತೋಟಗಾರಿಕ ಇಲಾಖೆ ಬೀಜ ಸಂಬಂಧಿತ ಕಾಯಿದೆ ಪರಿಪಾಲನೆ ಮಾಡುವಲ್ಲಿ ಸೋತಿದೆ. ಅಧಿಕೃತವಾಗಿ ಸರ್ಕಾರದ ಬಿಡ್ಡಿಗೆ ಮತ್ತು ಕೃಷಿ ಇಲಾಖೆಗೆ ಸರಬರಾಜು ಮಾಡದೆ ಇರುವ ಕಂಪನಿಗಳ ಜೊತೆ ಕೃಷಿ ನಿರ್ದೇಶಕರು ಶಾಮಿಲಾಗಿ ರೈತರಿಗೆ ಕಳಪೆ ಬೀಜ ನೀಡಿರುವ ಮತ್ತು ಕಂಪನಿಯವರು ರೈತರಿಗೆ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ನಷ್ಟವನ್ನು ತುಂಬಿಕೊಡಬೇಕು. ಸಾಮೂಹಿಕವಾಗಿ ರೈತರಿಗೆ ಜಿಲ್ಲಾಡಳಿತ ವತಿಯಿಂದ ಉಚಿತವಾಗಿ ಬೆಳೆ ವಿಮೆ ಮಾಡಿಕೊಡಬೇಕು ಎಂದರು.
ಕಳಪೆ ಬೀಜವನ್ನು ಕೃಷಿ ಇಲಾಖೆಯವರ ಹೆಸರು ಬಳಸಿಕೊಂಡು ಪ್ರಚಾರದಲ್ಲಿ ತೊಡಗಿರುವರ ವಿರುದ್ಧ ಮೊಕದ್ದಮೆ ದಾಖಲಿಸಿ ಮತ್ತು ಕೃಷಿ ಇಲಾಖೆಗೆ ಸರಬರಾಜು ಮಾಡದೆ ಇರುವ ಕಂಪನಿಯವರನ್ನು ಅಂಗಡಿ ಮುಖಾಂತರ ಮಾರುವುದನ್ನು ನಿರ್ಬಂಧಿಸಬೇಕು. ಬೆಳೆ ಸಮೀಕ್ಷೆಯನ್ನು ತಾಲ್ಲೂಕು ಆಡಳಿತ ಅಧಿಕಾರಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜೊತೆಗೂಡಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿ ಹಳ್ಳಿಗಳಲ್ಲಿಯೂ ಸಮೀಕ್ಷೆ ನಡೆಸಿ ವರದಿಯನ್ನು ಜಿಲ್ಲಾಡಳಿತಕ್ಕೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಬೆಳೆ ನಾಶವಾಗಿರುವ ರೈತರಿಗೆ ಕಂಪನಿಯವರಿಂದಲೆ ಕೃಷಿ ಇಲಾಖೆಯವರು ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರವನ್ನು ಕೊಡಿಸಕೊಡಬೇಕು ಹಾಗೂ ಹಾಸನ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಹೆಸರನ್ನು ಅವರ ಅನುಮತಿ ಇಲ್ಲದೆ ಬಳಸಿಕೊಂಡು ಕರಪತ್ರವನ್ನು ಮುದ್ರಿಸಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡಿರುವ ಬಿತ್ತನೆ ಬೀಜದ ಹೈಟೆಕ್ ಕಂಪನಿ ಮತ್ತು ಏಜೆನ್ಸಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದ ಅಧ್ಯಕ್ಷಿಯ ಮಂಡಳಿಯ ಸದಸ್ಯೆ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ತಿಪಟೂರು ಜಯಚಂದ್ರ ಶರ್ಮ, ಮೈಸೂರಿನ ಕಿರಣ್, ರೈತ ಸಂಘದ ಜಿಲ್ಲಾಧ್ಯಕ್ಷ ಮೂರ್ತಿ ಕಣಗಾಲ್, ಗ್ಯಾರಂಟಿ ರಾಮಣ್ಣ, ಮಂಜು ಬಿಟ್ಟಗೌಡನಹಳ್ಳಿ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮರ್ಕುಲಿ ಪ್ರಕಾಶ್, ಹಾಸನ ತಾಲೂಕು ಅಧ್ಯಕ್ಷ ಬಿಟ್ಟಗೌಡನಹಳ್ಳಿ ಮಂಜುನಾಥ್, ಪಾಲಾಕ್ಷ ಮಾರನಹಳ್ಳಿ, ಶಿವಕುಮಾರ್ ಹಳೇಬೀಡು, ಶೇಷಣ್ಣ, ಕಾಂತರಾಜು ಇತರರು ಉಪಸ್ಥಿತರಿದ್ದರು.