ಧಾರವಾಡ, ಮಾ.26: ಧಾರವಾಡ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಯಲ್ಲಿ ನಿನ್ನೆ (ಮಾ. 25) ರಂದು ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ ದೊಡ್ಡಮನಿ ಅವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ವಿಶ್ವ ಜಲ ದಿನಾಚರಣೆಯ ಉದ್ದೇಶ ಜಲದ ಮಹತ್ವ, ನೈಸರ್ಗಿಸ ಸಂಪನ್ಮೂಲಗಳ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ ಕುರಿತು ಜಾಗೃತಿಯನ್ನು ಮೂಡಿಸುವುದಾಗಿದೆ. ನಮ್ಮ ದೇಶದಲ್ಲಿ ಭೂಮಿ, ಮಣ್ಣು, ಕಲ್ಲು, ನೀರು, ಗಿಡ ಪ್ರತಿಯೊಂದು ಪ್ರಕೃತಿ ಸಂಪತ್ತನ್ನು ಪೂಜಿಸಲಾಗುತ್ತದೆ. ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯ ಬದಲಾಗಿ ವೈಜ್ಞಾನಿಕ ಚಿಂತನೆ ಮೂಲಕ ಕಡಿಮೆ ನೀರಿನ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು, ಸಾವಯವ ಕೃಷಿ ಮೂಲಕ ಮಣ್ಣಿನ ಜೈವಿಕ ಗುಣಧರ್ಮವನ್ನು ಉಳಿಸಿಕೊಳ್ಳಬೇಕು ಎಂದರು.
ವಾಲ್ಮಿ ಸಂಸ್ಥೆಯ ಅಧಿಕಾರಿ ಮತ್ತು ತಂಡದ ಪರಿಸರ ಕಾಳಜಿ ಮತ್ತು ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿ ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಕೈಜೋಡಿಸುವುದೆಂದರು. ರೈತರು ಗ್ರಾಹಕ ರಕ್ಷಣಾ ಆಯೋಗದ ಪ್ರಯೋಜನ ಪಡೆದುಕೊಳ್ಳಬೇಕು. ಬೀಜ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಉತ್ಪಾದಕರು ಮತ್ತು ಮಾರಾಟಗಾರರಿಂದ ಯಾವುದೇ ನಷ್ಟವಾಗಿದ್ದಲ್ಲಿ ಕಾನೂನು ನೆರವು ಪಡೆದುಕೊಳ್ಳಬಹುದು ಎಂದರು.
ಧಾರವಾಡ ನೇಚರ್ ಫಸ್ಟ್ ಇಕೋ ವಿಲೇಜ್ನ ಪಿ.ವಿ. ಹಿರೇಮಠ ಅವರು ಹವಾಮಾನ ವೈಪರಿತ್ಯದ ಕಾರಣದಿಂದ ಇಂದು ಭೂಮಿಯ ತಾಪಮಾನ ಏರಿಕೆಯಾಗುತ್ತಿದೆ. ಅರಣ್ಯ ಸಂಪನ್ಮೂಲದ ನಾಶದಿಂದಾಗಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ನೈಸರ್ಗಿಕ ಸಂಪನ್ಮೂಲ ಕೇವಲ ಮಾನವರಿಗೆ ಮಾತ್ರವಲ್ಲದೇ ಸಕಲ ಜೀವ ರಾಶಿಗಳಿಗೂ ಸಂಬಂಧಿಸಿದ್ದಾಗಿದೆ. ಇಂದು ಮಾನವ ನಿರ್ಮಿತ ಕಾರಣಗಳಿಂದಾಗಿ ಜೀವ ವೈವಿದ್ಯ ವಿನಾಶದ ಅಂಚಿಕೆ ತಲುಪುತ್ತಿದೆ. ನಮ್ಮ ದೇಶದಲ್ಲಿನ ಸಮೃದ್ಧವಾದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವು ಇಂದಿನ ಅವಶ್ಯಕತೆಯಾಗಿದೆ ಎಂದರು.
ಧಾರವಾಡ ವಾಲ್ಮಿ ನಿರ್ದೇಶಕರ ಬಿ.ವೈ. ಬಂಡಿವಡ್ಡರ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ವಿಶ್ವ ಜಲ ದಿನಾಚರಣೆ-2025 ರ ಘೋಷವಾಕ್ಯ ಹಿಮನದಿಗಳ ಸಂರಕ್ಷಣೆಯಾಗಿದೆ. ಭೂಮಂಡಲದ ಉತ್ತರ ಮತ್ತು ದಕ್ಷಿಣ ಭಾಗವು ಸಂಪೂರ್ಣವಾಗಿ ಮಂಜಿನಿಂದ ಆವೃತ್ತವಾಗಿದೆ. ಭಾರತಕ್ಕೆ ಕಿರೀಟದಂತಿರುವ ಹಿಮಾಲಯ ಪರ್ವತ ಶ್ರೇಣಿಗಳು ಶುದ್ಧ ನೀರಿನ ಮೂಲಗಳಾಗಿದೆ. ಜಾಗತಿಕ ಹವಾಮಾನ ವೈಪರಿತ್ಯದ ಪರಿಣಾಮವಾಗಿ ಹಿಮಾಲಯ ಪರ್ವತ ಪ್ರದೇಶದಾದ್ಯಂತ ತಾಪಮಾನವು ಹೆಚ್ಚಾಗುತ್ತಿದೆ. ಹಿಮದ ಕರಗುವಿಕೆಗೂ ಮತ್ತು ನಮಗೂ ಏನೂ ಸಂಬಂಧವಿಲ್ಲವೆಂದು ಭಾವಿಸುವಂತಿಲ್ಲ. ಪ್ರಸ್ತುತ ಜಲ ಮೂಲಗಳ ಒತ್ತುವರಿ, ಅರಣ್ಯ ನಾಶ, ಕೈಗಾರೀಕರಣ, ನಗರೀಕರಣ, ತ್ಯಾಜ್ಯದ ನಿರ್ವಹಣೆ ಸಮಸ್ಯೆ, ಪ್ಲಾಸಿಕ್ ಬಳಕೆ, ರಾಸಾಯನಿಕ ಗೊಬ್ಬರ ಬಳಕೆ ಇವೆಲ್ಲವೂ ಮಣ್ಣಿನಲ್ಲಿ ನೀರನ್ನು ಹಿಡಿದಿಡುವ ಸಾಮಥ್ರ್ಯವನ್ನು ಕಡಿಮೆ ಮಾಡುತ್ತಿವೆ. ಜಾಗತಿಕವಾಗಿ ಇಂಗಾಲದ ಪ್ರಮಾಣದ ಏರಿಕೆಯಿಂದ ಹಿಮದ ಕರಗುವಿಕೆ ಹೆಚ್ಚಾಗುತ್ತಿದೆ. ಇದರಿಂದ ಪ್ರವಾಹಗಳು, ಅಂತರ್ಜಲ ಕುಸಿತ, ಸಮುದ್ರದ ಮಟ್ಟದ ಏರಿಕೆಯಂಥಹ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಜಮಖಂಡಿಯ ಪ್ರಗತಿಪರ ರೈತ ಪುಲಕೇಶಿ ಸುರೇಂದ್ರ ನಾಂದ್ರೇಕರ, ದಾವಣಗೆರೆಯ ಎಚ್. ಬಿ. ಸತೀಶ, ಡಿ. ನಿಂಗಪ್ಪ, ಕೋಡಿ ಬಸವೇಶ್ವರ ಅವರನ್ನು ಸನ್ಮಾನಿಸಲಾಯಿತು.
ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತು ರೈತ ಮಹಿಳೆಯರೂ ಸೇರಿದಂತೆ, ಹಳಿಯಾಳ ಕೆ.ಎಲ್.ಎಸ್.ವಿ.ಟಿ.ಐ.ಟಿ, ಕಾಲೇಜು ವಿದ್ಯಾರ್ಥಿಗಳು, ಕರ್ನಾಟಕ ನೀರಾವರಿ ನಿಗಮ ಅಧಿಕಾರಿ, ಸಿಬ್ಬಂದಿಗಳು ಮತ್ತು ವಾಲ್ಮಿ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.