ಮೊನ್ನೆ ಉಡುಪಿಯಲ್ಲಿ ಮಹಿಳಾ ಸಮಾವೇಶದಲ್ಲಿ ಸಿಕ್ಕ “ನಡು ಬಗ್ಗಿಸದ ಎದೆಯದನಿ”- ಮಹೇಂದ್ರ ಕುಮಾರ್ ಅವರ ಅನುಭವ ಕಥನ ಓದಿ ಮುಗಿಸಿದೆ. ನಮ್ಮ ಇಂದಿನ ಸಾಮಾಜಿಕ ಬದುಕಿನ ಫಾಲ್ಟ್ಲೈನ್ ಅದು ತನಗೆ ಗೊತ್ತಿಲ್ಲದಂತೆ ತೆರೆದಿಟ್ಟಿದೆ ಅನ್ನಿಸಿತು.
ಹಿಂದೂತ್ವವಾದದ ಹೆಸರಿನಲ್ಲಿ ಅಮಾಯಕರನ್ನು ಬಲಿಕೊಡುತ್ತಿದೆ ಎಂದು ಬಿಚ್ಚಿಡುವ ಆಶಯದ ಈ ಪುಸ್ತಕದೊಳಗೆ ಮತ್ತೊಂದು ಪದರ ಬಿಚ್ಚಿದರೆ ಅದು ಭಯಾನಕ ಭಯಾನಕವಾಗಿದೆ.
ಸಮಾಜವೊಂದು ಸ್ವಸ್ಥವಾಗಿರುವುದಕ್ಕೆ ಸಿದ್ಧಾಂತಗಳ ಅಗತ್ಯ ಇರಬಹುದು. ಆದರೆ ಒಂದು ಸಿದ್ಧಾಂತಕ್ಕಾಗಿ ಸಮಾಜ ಬದುಕಬೇಕೆಂಬ ಹಠ ಅಮಾನುಷ. ಇದಕ್ಕೆ ಯಾರೂ (ಸಿದ್ಧಾಂತಗಳೂ) ಹೊರತಲ್ಲ. ಈ ಕಾರಣಕ್ಕಾಗಿಯೇ ಇಂದು ನಾಯಕರುಗಳು ಮೇಲಿನಿಂದ ಉದುರುತ್ತಾರೆ ಮತ್ತು ತಾವು ನಿಮ್ಮ (ಜನರ) ಪ್ರತಿನಿಧಿಗಳೆಂದು ಒತ್ತಾಯಪೂರ್ವಕ ತಮ್ಮನ್ನು ಸಮಾಜದ ಮೇಲೆ ಹೇರಿಕೊಳ್ಳುತ್ತಾರೆ. ಅದಕ್ಕಾಗಿ ಧರ್ಮದ ಅಮಲು, ಜಾತಿಯ ಘಮಲು, ದುಡ್ಡಿನ ತೆವಲು… ಎಲ್ಲವೂ ಯಥೇಚ್ಛ ಬಳಕೆ ಆಗುತ್ತವೆ ಮತ್ತು ಸಾಮಾಜಿಕ ಬದುಕು ಸಂಪೂರ್ಣವಾಗಿ ಕ್ರಿಮಿನಲೈಸ್ ಆಗಿಬಿಡುತ್ತದೆ.
ಮಹೇಂದ್ರ ಕುಮಾರ್ ಕಥನದ ಮೂಲಕ ಬಿಚ್ಚಿಟ್ಟಿರುವ ಈ ಚಿತ್ರಣ ಕೇವಲ ಬಲಪಂಥೀಯ ಆಟಾಟೋಪಗಳ ಚಿತ್ರಣ ಮಾತ್ರವಲ್ಲ; ರಾಜಕೀಯ ಎಂದರೆ ಕುಟಿಲತೆ ಎಂದು ಅರ್ಥಮಾಡಿಕೊಂಡಿರುವ ಎಲ್ಲರ ಕಥೆ. ಈ ಕಾರಣಕ್ಕಾಗಿ ನಮ್ಮ ಸಾಮಾಜಿಕ ನಾಯಕತ್ವಗಳ ಮರುಪರಿಶೀಲನೆ ತುರ್ತಾಗಿ ಅಗತ್ಯವಿದೆ.
ಕರಾವಳಿಯ ರಾಜಕೀಯದ ಚಿನ್ನದ ಚೂರಿಗಳು ಈ ಪುಸ್ತಕದಲ್ಲಿ ಸಾಕಷ್ಟು ವಿವರವಾಗಿಯೇ ಓದಿಗೆ ದಕ್ಕುತ್ತವೆ. ಸುದ್ದಿಮನೆಗೆ ನಾಲ್ಕುಬುಟ್ಟಿ ಮಣ್ಣು ನಾನೂ ಹೊತ್ತಿರುವುದರಿಂದ ನನಗೆ ಇದು “ಸಖೇದಾಶ್ಚರ್ಯ” ತರಲಿಲ್ಲ. ಆದರೆ ಇಲ್ಲಿನ ಪ್ರಯೋಗಾಲಯ ರಾಜಕೀಯವನ್ನು ಹೊಸದಾಗಿ ಅರ್ಥಮಾಡಿಕೊಳ್ಳಬಯಸುವವರಿಗೆ “ಶಾಕಿಂಗ್” ಆಗಬಲ್ಲ ಕಂಟೆಂಟ್ಗಳು ಈ ಪುಸ್ತಕದಲ್ಲಿವೆ.
ಇಲ್ಲಿ ಬರುವ ಬಾಬಾ ಬುಡಾನ್ಗಿರಿಯ ಗದ್ದಲ, ದತ್ತ ಪಾದುಕೆ, ಚರ್ಚ್ ದಾಳಿ ಇತ್ಯಾದಿಗಳಲ್ಲಿ ನಮ್ಮ ರಾಜಕೀಯ ವ್ಯವಸ್ಥೆ, ಪೊಲೀಸಿಂಗ್ ವ್ಯವಸ್ಥೆಗಳ ಪಾಲು, ಪಾತ್ರಗಳು ಕರ್ನಾಟಕದ ಈ ಭಾಗದಲ್ಲಿ ಬಹುತೇಕ ಎಲ್ಲರಿಗೂ ಚೂರುಪಾರಾದರೂ ಕೇಳಿ-ಓದಿ ಗೊತ್ತಿರುವಂತಹದೇ. ಇವೆಲ್ಲ ನಮ್ಮ ಸಾಮಾಜಿಕ ಬದುಕಿನ ಮೇಲೆ ಮಾಡಿರುವ ಗೀರುಗಾಯಗಳು, ಆಳ ಜಖಂಗಳು, ಕೊಳೆಯುತ್ತಿರುವ ಹುಣ್ಣುಗಳು ಇನ್ನೂ ಮಾಸಿಲ್ಲ. ಆಗಾಗ ಅದರ ಮೇಲೆ ಅವರವರ ಅಗತ್ಯಗಳಿಗೆ ತಕ್ಕಂತೆ ಉಪ್ಪು-ಖಾರ ಇನ್ನೂ ಸಿಂಪಡಿಸಲಾಗುತ್ತಿದೆ, ಗಾಯಗಳು ಗುಣವಾಗದಂತೆ ಕಾಪಾಡಿಕೊಳ್ಳಲಾಗುತ್ತಿದೆ.
ನವೀನ್ ಸೂರಿಂಜೆ (ನವೀನ್ ಸೂರಿಂಜೆ) ಅವರ ಈ ಪುಸ್ತಕವು ಕೇವಲ ಅಮಾಯಕರ “ಜ್ಞಾನ” ಹೆಚ್ಚಿಸುವ ಮೂಲಕ ಅವರನ್ನು ಮತೀಯ ಮೂಲಭೂತವಾದಗಳಿಂದ ರಕ್ಷಿಸುವ ಕೆಲಸಕ್ಕೆ ಸೀಮಿತವಾಗದ ಬದಲು, ಇಂತಹ ಕುಟಿಲ, ಕ್ರಿಮಿನಲ್ ಚಟುವಟಿಕೆಗಳು ನಮ್ಮ ಸಾಮಾಜಿಕ ಬದುಕಿಗೆ ಅರ್ಥವಾಗದ ಇಂದಿನ ರಾಜಕೀಯಕ್ಕೆ ಅನಿವಾರ್ಯ ಎಂಬ ಮೂಢನಂಬಿಕೆಯನ್ನು ಕಳೆದುಕೊಳ್ಳುವ ಹಾದಿಯನ್ನು ತೆರೆಯುವುದು ಉತ್ತಮ ಬೆಳವಣಿಗೆಯಾಗಿದೆ. ಅದಲ್ಲ ಎಂದಾದರೆ ಈ ಪುಸ್ತಕವನ್ನು ಗಂಭೀರವಾಗಿ ಪರಿಗಣಿಸುವ ಬದಲು, ಇದೊಂದು ಯುದ್ಧಕಾಲದ ಟೂಲ್ ಕಿಟ್ ಅನ್ನಿಸಿಕೊಂಡು, ಅದೇ ಕೆಸರು ರಾಡಿಯಲ್ಲಿ ಮುಳುಗಿಹೋಗುವ ಸಾಧ್ಯತೆಗಳೇ ಹೆಚ್ಚು ಎಂದು ನನಗನ್ನಿಸುತ್ತದೆ.
ನಮ್ಮ “ಇಂದು” ಹೇಗಿದೆ ಎಂದು ತಿಳಿಯಲು ಖಂಡಿತಾ ಓದಬೇಕಾದ ಪುಸ್ತಕ ಇದು. ಪುಸ್ತಕದ ಬಗ್ಗೆ ನನಗಿರುವ ಏಕೈಕ ದೂರು ಕರಡು ತಿದ್ದುವಿಕೆಯ ಬಗೆಗಿನದು. ಮುಂದಿನ ಆವೃತ್ತಿಯ ಹೊತ್ತಿಗೆ ಅದನ್ನು ಸರಿಪಡಿಸಿದರು ಎಂದುಕೊಳ್ಳುವೆ.