Monday, August 4, 2025

ಸತ್ಯ | ನ್ಯಾಯ |ಧರ್ಮ

ಡಿವೈಎಫ್‌ಐ ಆಗ್ರಹಕ್ಕೆ ಮಣಿದು ಬೋಳಿಯಾರು ಶಾಲೆಯ ಅವ್ಯವಸ್ಥೆ ಪರಿಶೀಲನೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ

ಬೋಳಿಯಾರು ಗ್ರಾಮದ ಮೊತ್ತ ಮೊದಲ ಶಾಲೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಡಿವೈಎಫ್‌ಐ ಆಗ್ರಹಕ್ಕೆ ಮಣಿದು ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಅವರು ಸೋಮವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಲೆಯ ಆವರಣ ಗೋಡೆ, ಕೇವಲ ಹದಿನೈದು ವರ್ಷಗಳ ಹಿಂದೆ ಕಟ್ಟಲಾಗಿದ ಶಾಲಾ ಕಟ್ಟಡ, ಅಕ್ಷರ ದಾಸೋಹ ಕಟ್ಟಡ ಹಾಗೂ ಶಾಲೆಯ ಬಳಿಯಲ್ಲೆ ಇರುವ ಅಂಗನವಾಡಿಯ ಕಟ್ಟಡ ಕೂಡಾ ಬಿರುಕು ಬಿಟ್ಟಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಬಗ್ಗೆ ಹಲವಾರು ವರ್ಷಗಳಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಈ ಬಗ್ಗೆ ಗಮನಸೆಳೆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.

ವಿಶೇಷವಾಗಿ ರಾಜ್ಯ ವಿಧಾನಸಭೆ ಸ್ಪೀಕರ್, ಸ್ಥಳೀಯ ಶಾಸಕ ಯುಟಿ ಖಾದರ್ ಅವರ ಮನೆಯ ಪಕ್ಕವೇ ಇರುವ ಶಾಲೆ ಇದಾಗಿದ್ದು, ”ಶಾಸಕರು ಇದನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ” ಎಂದು ಕೂಡಾ ಆರೋಪ ವ್ಯಕ್ತವಾಗಿದೆ.

ಶನಿವಾರವಷ್ಟೆ ಶಾಲೆಗೆ ಭೇಟಿ ನೀಡಿದ್ದ ಡಿವೈಎಫ್‌ಐ ನಿಯೋಗ ಶಾಲೆಯ ಅವ್ಯವಸ್ಥೆಯನ್ನು ಗಮನಿಸಿ, ಅದನ್ನು ಸರಿಪಡಿಸುವಂತೆ ಗ್ರಾಮ ಪಂಚಾಯತ್‌ಗೆ ಮನವಿ ನೀಡಿತ್ತು. ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಯ ಗಮನಕ್ಕೆ ತಂದಿತ್ತು.

ಸೋಮವಾರ ಭೇಟಿ ನೀಡಿದ ಶಿಕ್ಷಣಾಧಿಕಾರಿ ಈಶ್ವರ್ ಅವರು, ಶಾಲೆಯ ಅವ್ಯವಸ್ಥೆಯನ್ನು ಸರಿಪಡಿಸಲು ಇಂದೇ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬೋಳಿಯಾರ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾರಾಣಿ ಕೂಡಾ ಇದ್ದು ಶಾಲೆ ಹಾಗೂ ಅಂಗನವಾಡಿಯ ಅವ್ಯವಸ್ಥೆಯನ್ನು ಪರಿಶೀಲಿಸಿದರು.

ಕೇವಲ ಹತ್ತು ಹದಿನೈದು ವರ್ಷಗಳ ಹಿಂದೆಯಷ್ಟೆ ನಿರ್ಮಾಣವಾದ ಶಾಲೆ ಮತ್ತು ಅಂಗನವಾಡಿ ಕಟ್ಟಡವು ಬಿರುಕುಬಿಟ್ಟಿದ್ದು, ಭ್ರಷ್ಟಾಚಾರದ ಕಾರಣಕ್ಕಾಗಿ ಆಗಿದೆ. ಈ ಬಗ್ಗೆ ಕೂಡಾ ಇಲಾಖೆ ತನಿಖೆ ನಡೆಸಬೇಕು ಎಂದು ಡಿವೈಎಫ್‌ಐ ಸಂಘಟನೆಯು ಶಿಕ್ಷಣಾಧಿಕಾರಿಗೆ ಆಗ್ರಹಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಕೂಡಾ ಕೇಳಿಕೊಂಡಿದೆ.

ಈ ವೇಳೆ ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ, ಉಪಾಧ್ಯಕ್ಷರಾದ ರಝಾಕ್ ಮುಡಿಪು, ಸಂಘಟನೆಯ ನಾಯಕರಾದ ರಫೀಕ್ ಹರೇಕಳ, ಇಬ್ರಾಹಿಂ ಮದಕ, ಅಬೂಬಕರ್ ಜಲ್ಲಿ, ಸ್ಥಳೀಯ ಸಾಮಾಜಿಕ ಹೋರಾಟಗಾರ ಶಮೀರ್ ಒ.ಕೆ. , ಸ್ಥಳೀಯರಾದ ರಿಯಾಝ್ ಕೆ.ಬಿ., ಸಿದ್ದೀಕ್ ಕೆ.ಕೆ., ಶಂಶೀರ್ ಒ.ಕೆ. , ನಿಯಾಝ್ ಜಾರದಗುಡ್ಡೆ, ಮಿಸ್ಬಾಹ್ ಜಾರದಗುಡ್ಡೆ, ಮರ್ಷಾದ್ ಜಾರದಗುಡ್ಡೆ ಇದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page