Monday, May 12, 2025

ಸತ್ಯ | ನ್ಯಾಯ |ಧರ್ಮ

ಏಳು ವರ್ಷಗಳು, ಶಿಕ್ಷೆ ಮತ್ತು ಖುಲಾಸೆ: ಮಧ್ಯಪ್ರದೇಶದ ಸುಳ್ಳು ಮತಾಂತರದ ವಿರುದ್ಧ ಹೋರಾಟ

ಮೂವರ ವಿರುದ್ಧದ ಸಾಕ್ಷಿಗಳು ವಿಶ್ವಾಸಾರ್ಹವಲ್ಲ ಮತ್ತು ಪ್ರಾಸಿಕ್ಯೂಷನ್ ಕಥೆ ಅನುಮಾನಾಸ್ಪದವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡುತ್ತದೆ.ನೀಡಿತ್ತು. ಆದರೆ ಆರೋಪಿಗಳನ್ನು ಖುಲಾಸೆಗೊಳಿಸಿದ ನಂತರವೂ ಹಿಂದೂ ಬಲಪಂಥೀಯ ಕಾರ್ಯಕರ್ತರ ಕಿರುಕುಳ ಹಾಗೆಯೇ ಮುಂದುವರೆದಿದೆ, ಮುಂದುವರೆಯುತ್ತಲೇ ಇದೆ.

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಸುಳ್ಳು ಆರೋಪ ಹೊರಿಸಲ್ಪಟ್ಟು, ಕಾನೂನು ಹೋರಾಟಗಳಲ್ಲಿ ಗೆದ್ದು ಬಂದವರ ಸರಣಿ ವರದಿಗಳಲ್ಲಿ ಏಳನೇ ಲೇಖನ… ಒಮರ್ ರಾಶೀದ್ ಬರಹದ ಅನುವಾದ

ಭಾಗ 1 | ಭಾಗ 2 | ಭಾಗ 3 | ಭಾಗ 4 | ಭಾಗ 5 | ಭಾಗ 6

ನವದೆಹಲಿ: “ಸತ್ಯ ಪರೆಶಾನ್ ಹೋ ಸಕ್ತಾ ಹೈ, ಲೇಕಿನ್ ಪರಾಜಿತ್ ನಹಿ.” ಸತ್ಯವನ್ನು ಕಷ್ಟಕರವಾಗಿರಬಹುದು, ಆದರೆ ಅದನ್ನು ಸೋಲಿಸಲು ಸಾಧ್ಯವಿಲ್ಲ. ಸತ್ಯವು ಕಷ್ಟಕರವಾಗಿರಬಹುದು, ಆದರೆ ಅದನ್ನು ಸೋಲಿಸಲು ಸಾಧ್ಯವಿಲ್ಲ.

ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಜೈಲಿನಜೈಲಿನಲ್ಲಿ ಯಾವುದೋ ಗೋಡೆಯೊಂದರಲ್ಲಿ ಕೆತ್ತಿದ್ದ ಈ ಸ್ಪೂರ್ತಿದಾಯಕ ಮಾತುಗಳು ಜೈಲಿನಲ್ಲಿದ್ದ ಅಜಯ್ ಸಿಂಗ್‌ಗೆ* ಸಾಂತ್ವನ ಹೇಳುತ್ತವೆ ಮತ್ತುನೀಡಿದ್ದವು. ಅವರ ನ್ಯಾಯದ ಭರವಸೆಯನ್ನು ಜೀವಂತವಾಗಿರಿಸುತ್ತವೆ ನಿರೀಕ್ಷೆಯನ್ನು ಜೀವಂತವಾಗಿರಿಸಿದ್ದವು.

“ಪರಮೇಶ್ವರ (ಸರ್ವಶಕ್ತ) ಈ ಅಗ್ನಿಪರೀಕ್ಷೆಯಿಂದ ನಮ್ಮನ್ನು ಪಾರು ಮಾಡುತ್ತಾನೆ ಎಂದು ನಾವು ನಂಬಿದ್ದೆವು. ನಾವು ಚಿಂತಿತರಾಗಿದ್ದೆವು. ಆದರೆ ಇಂದಲ್ಲ ನಾಳೆ ಸತ್ಯ ಮೇಲುಗೈ ಸಾಧಿಸುತ್ತದೆ ಎಂದು ನಾವು ನಿಜವಾಗಿಯೂ ನಂಬಿದ್ದೆವು” ಎಂದು ಅವರು ಹೇಳುತ್ತಾರೆ.

ಬುಡಕಟ್ಟು ವ್ಯಕ್ತಿಯನ್ನು ತಾನು ಅಕ್ರಮವಾಗಿ ಮತಾಂತರಿಸಿಲ್ಲ ಎಂಬುದು ಅಜಯ್‌ ಸಿಂಗ್ ಅವರ ಪಾಲಿನ ‘ಸತ್ಯ’. ಅವರು ಯೇಸು ಕ್ರಿಸ್ತನ ಪ್ರಾರ್ಥನೆಗಳನ್ನು ಮಾತ್ರ ನಡೆಸುತ್ತಿದ್ದರು.

ಇಷ್ಟನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಅಜಯ್‌ ಸಿಂಗ್‌ ಮತ್ತು ಉಳಿದ ಇಬ್ಬರಿಗೆ ಬರೋಬ್ಬರಿ ಏಳು ವರ್ಷಗಳಿಗಿಂತ ಹೆಚ್ಚು ಕಾಲ ಬೇಕಾಗಿ ಬಂತು. ಅಜಯ್‌ ಸಿಂಗ್ (30), ಸಂತೋಷ್ (30) ಮತ್ತು ಹುಕುಮ್ (28) ಅವರ ಮೇಲೆ 2017ರಲ್ಲಿ ಮಧ್ಯಪ್ರದೇಶದ ಅಕ್ರಮ ಮತಾಂತರ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಮೂವರೂ ಕೂಡ ಬರೇಲಾ ಬುಡಕಟ್ಟು ಸಮುದಾಯಕ್ಕೆ ಸೇರಿದವರು.

ದೀರ್ಘ ಕಾನೂನು ಹೋರಾಟದ ನಂತರವೂ ಅವರಿಗೆ ಹಿನ್ನಡೆಯಾಗಿ ಶಿಕ್ಷೆ ವಿಧಿಸಲ್ಪಟ್ಟಿತ್ತು. ಆದರೆ, ಕಳೆದ ವರ್ಷ ಜುಲೈನಲ್ಲಿ ಖಾಂಡ್ವಾ ಜಿಲ್ಲೆಯ ನ್ಯಾಯಾಲಯವು ಈ ಮೂವರನ್ನೂ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ದಕ್ಷಿಣ ಮಧ್ಯಪ್ರದೇಶ ಜಿಲ್ಲೆಗಳ ಜನಸಂಖ್ಯೆಯಲ್ಲಿ ಸುಮಾರು 35%ರಷ್ಟು ಜನರು ಬುಡಕಟ್ಟು ಸಮುದಾಯಗಳಿಗೆ ಸೇರಿದವರು.

ಸದರಿ ಪ್ರಕರಣವು ವಿಶ್ವಾಸಾರ್ಹವಲ್ಲ ಮತ್ತು ತಾಂತ್ರಿಕವಾಗಿ ದೋಷಪೂರಿತವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಪ್ರಕರಣವು ಸಂಪೂರ್ಣವಾಗಿ ಕಟ್ಟುಕಥೆಯೆಂದೂ ಎಫ್‌ಐಆರ್ ದಾಖಲಾಗುವವರೆಗೂ ದೂರುದಾರ ರಾಜು ಭಿಲಾಲಾ ಅವರ ಬಗ್ಗೆ ತನಗೆ ತಿಳಿದೇ ಇರಲಿಲ್ಲವೆಂದೂ ಅಜಯ್‌ ಸಿಂಗ್ ಹೇಳುತ್ತಾರೆ.

ಯೇಸುಕ್ರಿಸ್ತನ ಹೆಸರಿನಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದ ಅಜಯ್, ಸಂತೋಷ್ ಮತ್ತು ಹುಕುಮ್ ವಿರುದ್ಧ ಏಪ್ರಿಲ್ 9, 2017ರಂದು ಪ್ರಕರಣ ದಾಖಲಾಗಿತ್ತು. ಪಕ್ಕದ ಹಳ್ಳಿಯಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದ ವ್ಯಕ್ತಿ ರಾಜು ಭಿಲಾಲ, ಆತ ಒಮ್ಮೆ ಅನಾರೋಗ್ಯ ಪೀಡಿತನಾಗಿದ್ದಾಗ ಆತನ ಗ್ರಾಹಕರಲ್ಲಿ ಒಬ್ಬರಾದ ಅಜಯ್‌ ಸಿಂಗ್‌ ಸೀತಾಬೇಡಿ ಗ್ರಾಮದಲ್ಲಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು. ಅಜಯ್‌ ಸಿಂಗ್ ತನ್ನ ಅನಾರೋಗ್ಯವನ್ನು ಗುಣಪಡಿಸುವ ನೆಪದಲ್ಲಿ ತನ್ನ ಗ್ರಾಮಕ್ಕೆ ಕರೆದೊಯ್ದಿದ್ದರು ಎಂಬುದು ಭಿಲಾಲ ಮಾಡಿದ್ದ ಆರೋಪ. ಬೆಳಿಗ್ಗೆ 11:30ರ ಸುಮಾರಿಗೆ ಗ್ರಾಮವನ್ನು ತಲುಪಿದಾಗ, ಮನೆಯೊಂದರ ಬಳಿ ಪೆಂಡಾಲ್ ಹಾಕಿದ್ದರು. ಅಲ್ಲಿ ಸುಮಾರು 40-50 ಜನರು ಹಾಜರಿದ್ದರು. ಮೂವರು ಗಂಡಸರು ಕುರ್ಚಿಯಲ್ಲಿ ಕುಳಿತುಕೊಂಡಿದ್ದರು. ಬೈಬಲ್ ಹಿಡಿದಿದ್ದ ಮಹಿಳೆಯೊಬ್ಬರು ನೆಲದ ಮೇಲೆ ಕುಳಿತಿದ್ದರು. ಅಜಯ್‌ ಸಿಂಗ್ ತನಗೆ ಯೇಸು ಮತ್ತು ಶಿಲುಬೆ ಇರುವ ಲಾಕೆಟ್ ಒಂದನ್ನು ನೀಡಿದ್ದರು ಎಂದು ಭಿಲಾಲ ಆರೋಪಿಸುತ್ತಾರೆ. ಆ ಮೂವರು ಗಂಡಸರು ‘ಭಗವಾನ್ ಎಂಬುದು ಇಲ್ಲ’ ಎಂದೂ ಹಿಂದೂ ದೇವರುಗಳು ಬರಿಯ ‘ಜೇಡಿಮಣ್ಣು’ ಎಂದೂ ಹೇಳುತ್ತಿದ್ದರು ಎಂದು ಭಿಲಾಲ ಆರೋಪಿಸುತ್ತಾರೆ. ಹಿಂದೂ ಧರ್ಮವನ್ನು ತೊರೆದು ಕ್ರಿಶ್ಚಿಯನ್ ಧರ್ಮವನ್ನು ಸೇರಿಕೊಳ್ಳುವಂತೆ ಅವರು ಕೇಳಿಕೊಂಡರು. ಯೇಸುವಿನ ಮೇಲೆ ನಂಬಿಕೆಯಿಟ್ಟರೆ, ತನ್ನ ಎಲ್ಲಾ ‘ದುಃಖ, ನೋವುಗಳು ಮತ್ತು ಕಾಯಿಲೆಗಳು’ ದೂರವಾಗುತ್ತವೆ ಎಂದು ಅವರು ಹೇಳಿದರೆಂದು ಭಿಲಾಲ ಸೇರಿಸುತ್ತಾರೆ. ಅವರು ಆತನಿಗೆ ‘ಗೌರವ’ವನ್ನೂ ಮತ್ತು ಕುಟುಂಬಕ್ಕೆ ವಿದೇಶದಲ್ಲಿ ಉತ್ತಮ ಶಿಕ್ಷಣದ ಭರವಸೆಯನ್ನೂ ನೀಡಿದರು ಎಂದು ಭಿಲಾಲ ಆರೋಪಿಸುತ್ತಾರೆ. ಈ ಘಟನೆಯ ಬಗ್ಗೆ ಭಿಲಾಲ ತಮ್ಮ ಕೆಲವು ಗೆಳೆಯರಿಗೆ ಮಾಹಿತಿ ನೀಡಿದರೆಂದೂ ಆ ಪ್ರಕಾರ ಅವರು ಘಟನಾ ಸ್ಥಳಕ್ಕೆ ಬಂದರೆಂದೂ ಭಿಲಾಲ ಸೇರಿಸುತ್ತಾರೆ. ಇದರ ನಂತರ, ಅಜಯ್‌ ಸಿಂಗ್ ಮತ್ತು ಇನ್ನಿಬ್ಬರನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.

ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 1968ರ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ. ಬಲಪ್ರಯೋಗ, ಆಮಿಷ ಅಥವಾ ವಂಚನೆಯ ಮೂಲಕ ಒಬ್ಬ ವ್ಯಕ್ತಿಯನ್ನು ಮತಾಂತರಿಸುವುದನ್ನು ಮತ್ತು ನೇರವಾಗಿ ಅಥವಾ ಪರೋಕ್ಷವಾಗಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಿಸುವ ಪ್ರಯತ್ನವನ್ನು ಈ ಕಾನೂನು ನಿಷೇಧಿಸುತ್ತದೆ.

ಏಪ್ರಿಲ್ 18, 2022ರಂದು, ಪ್ರಕರಣ ದಾಖಲಾಗಿ ಐದು ವರ್ಷಗಳ ನಂತರ, ಖಾಂಡ್ವಾದ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಡಿವಿಷನ್‌ 1 ನ್ಯಾಯಾಧೀಶ ಮನೀಶ್ ರಘುವಂಶಿ ಈ ಮೂವರನ್ನೂ ಅಪರಾಧಿಗಳೆಂದು ಪರಿಗಣಿಸಿ ತಲಾ ಒಂದು ವರ್ಷದ ಜೈಲುಶಿಕ್ಷೆಯನ್ನು ಘೋಷಿಸುತ್ತಾರೆ. ಇದಕ್ಕಾಗಿ ಬಲಪಂಥೀಯ ಸಂಘಟನೆಯಾದ ಬಜರಂಗದಳಕ್ಕೆ ಸೇರಿದ ಭಿಲಾಲ ಮತ್ತು ಆತನ ಸಹಚರರ ಸಾಕ್ಷ್ಯಗಳನ್ನು ನ್ಯಾಯಾಲಯವು ಪರಿಗಣಿಸಿತ್ತು.

ಯೇಸುವಿನ ಮೇಲೆ ನಂಬಿಕೆ ಇರಿಸಿದ್ದರೂ ಕೂಡ, ಅವರು ದಾಖಲೆಗಳ ಪ್ರಕಾರ ಹಿಂದೂ ಆಗಿಯೇ ಉಳಿದಿದ್ದರು. ಹಾಗಾಗಿಯೇ ಭಿಲಾಲಾ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ತನಗೆ ಸಾಧ್ಯವಿಲ್ಲ ಎಂದು ಅಜಯ್‌ ಸಿಂಗ್ ನ್ಯಾಯಾಲಯದಲ್ಲಿ ವಾದಿಸುತ್ತಾರೆ. ಆದರೆ, ಒಬ್ಬ ವ್ಯಕ್ತಿಯನ್ನು ಮತಾಂತರಿಸುವಾತನು ಅಕ್ರಮವಾಗಿ ಮತಾಂತರಗೊಳಿಸುತ್ತಿರುವ ಧರ್ಮಕ್ಕೇ ಸೇರಿದವನು ಆಗಿರಬೇಕೆಂಬುದು ಕಡ್ಡಾಯವಲ್ಲ ಎಂದು ನ್ಯಾಯಾಲಯ ಹೇಳುತ್ತದೆ. ಸಾಕ್ಷಿಗಳು ಭಜರಂಗದಳದ ಸದಸ್ಯರಾಗಿರುವುದರಿಂದ, ಅವರ ಹೇಳಿಕೆಗಳು ಪಕ್ಷಪಾತಿ ಧೋರಣೆ ಮತ್ತು ಮತಾಂಧತೆಯಿಂದ ಕೂಡಿವೆ ಎಂಬ ವಾದಕ್ಕೆ ನ್ಯಾಯಾಲಯವು ಪ್ರಾಮುಖ್ಯತೆಯನ್ನು ನೀಡುವುದಿಲ್ಲ.

ಈ ತೀರ್ಪಿನಿಂದ ತಾವು ಕುಸಿದು ಹೋದೆವು ಎಂದು ಅಜಯ್‌ ಸಿಂಗ್ ಹೇಳುತ್ತಾರೆ. “ನಾವು ನಿರಾಶೆಗೊಂಡಿದ್ದೆವು. ಆದರೆ ಪರಮೇಶ್ವರನು ನಮಗೆ ಹೋರಾಡಲು ಆತ್ಮವಿಶ್ವಾಸ ನೀಡಿದನು. ಇದು ಆತನ ಯೋಜನೆಯಾಗಿತ್ತು. ಪ್ರಾರ್ಥನೆ ಮತ್ತು ನಂಬಿಕೆ ಮಾತ್ರ ನಮ್ಮ ಕೈಯಲ್ಲಿರುವುದು” ಎಂದು ಸಿಂಗ್ ಹೇಳುತ್ತಾರೆ.

ಈ ಮೂವರು ಕೂಡ ತಮ್ಮ ಶಿಕ್ಷೆಯ ವಿರುದ್ಧ ಕ್ರಿಮಿನಲ್ ಮೇಲ್ಮನವಿ ಸಲ್ಲಿಸುತ್ತಾರೆ. ಇದು ಈಗಾಗಲೇ ಸ್ಥಾಪಿತವಾಗಿರುವ ಕಾನೂನಿಗೆ ವಿರುದ್ಧವಾಗಿದೆ ಎಂದು ವಾದಿಸುತ್ತಾರೆ. ಸದರಿ ಘಟನೆಯ ಕುರಿತು ಅಜಯ್‌ ಸಿಂಗ್ ಹೇಳುವ ಸಂಗತಿಯು ದೂರುದಾರರ ಕಥೆಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಬುರ್ಹಾನ್‌ಪುರ ಮೂಲದ ಅಜಯ್‌ ಸಿಂಗ್, 2014ರಿಂದ ನೆರೆಯ ಖಾಂಡ್ವಾದ ಹಳ್ಳಿಗಳಿಗೆ ‘ಸೇವಕೈ’, ಅಂದರೆ ಯೇಸುವಿನ ಸೇವೆಯನ್ನು ಮಾಡಲು ಮತ್ತು ಪ್ರಾರ್ಥನೆಗಳನ್ನು ನಡೆಸಲು ಭೇಟಿ ನೀಡುತ್ತಿದ್ದರು. ಅವರು ಒಬ್ಬ ರೈತರಾಗಿದ್ದರು. ಜೊತೆಗೆ ಸಾಮಾಜಿಕ ಕಾರ್ಯಕರ್ತ ಕೂಡ ಹೌದು. 2017ರಲ್ಲಿ ಘಟನೆ ನಡೆಯಿತೆಂದು ಹೇಳಲಾದ ಭಾನುವಾರದಂದು, ಸ್ಥಳೀಯ ನಿವಾಸಿಯೊಬ್ಬರ ಪತ್ನಿ ಅಸ್ವಸ್ಥರಾಗಿದ್ದಕ್ಕಾಗಿ “ಚಂಗಾಯಿ ಪ್ರಾರ್ಥನೆ” ಅಥವಾ ಚಿಕಿತ್ಸಕ ಪ್ರಾರ್ಥನೆಯನ್ನು ನಡೆಸಲು ತಮ್ಮನ್ನು ಆಹ್ವಾನಿಸಿದ್ದರು ಎಂದು ಅಜಯ್‌ ಸಿಂಗ್ ಹೇಳುತ್ತಾರೆ. “ಅದೊಂದು ಸಣ್ಣ ಖಾಸಗಿ ಕಾರ್ಯಕ್ರಮವಾಗಿತ್ತು” ಎಂದು ಅಜಯ್‌ ಸಿಂಗ್ ನೆನಪಿಸಿಕೊಳ್ಳುತ್ತಾರೆ. ಅವರು ಒಂದು ಪೆಂಡಾಲ್ ಹಾಕಿ ಸುತ್ತಲೂ ಸೆಣಬಿನ ಚೀಲಗಳಿಂದ ಮುಚ್ಚಿದ್ದರು. ಆ ಕುಟುಂಬದ ಸಂಬಂಧಿಕರು ಸಹಿತ ಸುತ್ತಮುತ್ತಲಿಂದ ಸುಮಾರು 40 ಜನರನ್ನು ಆಹ್ವಾನಿಸಲಾಗಿತ್ತು. ಊಟವನ್ನೂ ನೀಡಲಾಗಿತ್ತು.

ಪರಿಚಿತ ಜನರನ್ನು ಹೊರತುಪಡಿಸಿ ಬೇರೆ ಯಾರನ್ನೂ ಆಹ್ವಾನಿಸಿರಲಿಲ್ಲ ಎಂದು ಅಜಯ್‌ ಸಿಂಗ್ ಹೇಳುತ್ತಾರೆ. ಭಿಲಾಲರನ್ನು ಕೂಡ ಆಹ್ವಾನಿಸಿರಲಿಲ್ಲ. “ನನಗೆ ಅವರ ಪರಿಚಯವೂ ಇರಲಿಲ್ಲ. ಅವರು ನಮ್ಮ ಸಭೆಗೆ ಬಂದು ವೀಡಿಯೊ ರೆಕಾರ್ಡ್ ಮಾಡಲು ಪ್ರಾರಂಭಿಸಿದರು. ಅವರು ಅದನ್ನು ವರದಿ ಮಾಡಿ ದೂರು ದಾಖಲಿಸಿದ ನಂತರವೇ ಅವರು ಯಾರೆಂದು ನನಗೆ ತಿಳಿಯುವುದು” ಎಂದು, ಭಿಲಾಲ ಎಫ್‌ಐಆರ್‌ನಲ್ಲಿ ಮಾಡಿದ್ದ ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಾ ಅಜಯ್‌ ಸಿಂಗ್ ಹೇಳುತ್ತಾರೆ.

ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರು ದುರುದ್ದೇಶದಿಂದಲೇ ಬಂದಿದ್ದರು. ಸುಮಾರು 20-25 ಜನರು ಅಲ್ಲಿಗೆ ನುಗ್ಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದವರನ್ನು ಬೆದರಿಸಲು ಪ್ರಾರಂಭಿಸಿದರು. “ಅವರು ನಮಗೆ ಬೇರೆ ಏನನ್ನೂ ಹೇಳಲಿಲ್ಲ. ಅವರು ನೇರವಾಗಿ ನಮ್ಮ ಮೇಲೆ ಮತಾಂತರದ ಆರೋಪ ಹೊರಿಸಿದರು” ಎಂದು ಅಜಯ್‌ ಸಿಂಗ್ ಹೇಳುತ್ತಾರೆ. “ನಾವು ಅಂತಹ ಸಭೆಗಳನ್ನು ನಡೆಸದಂತೆ ನೋಡಿಕೊಳ್ಳುವುದು ಅವರ ಉದ್ಧೇಶವಾಗಿತ್ತು. ಕ್ರಿಸ್ತನಲ್ಲಿ ನಂಬಿಕೆ ಇಡುವ ನಮ್ಮಂತಹ ಜನರು ಈ ಪ್ರದೇಶಕ್ಕೆ ಬರದಂತೆ ತಡೆಯಲು ಅವರು ಒಂದು ನೆಪ ಹುಡುಕುತ್ತಿದ್ದರು. ಕ್ರಿಸ್ತನಲ್ಲಿ ನಂಬಿಕೆ ಇಡುವ ಜನರನ್ನು ಬೆದರಿಸಿ ಅವರನ್ನು ಕ್ರಿಸ್ತನ ಮೇಲಿನ ವಿಶ್ವಾಸದಿಂದ ದೂರವಿಡುವಂತೆ ಮಾಡುವುದು ಅವರ ಉದ್ಧೇಶವಾಗಿತ್ತು.”

ತನ್ನ ಮೇಲಿನ ಆರೋಪಗಳನ್ನು ನಿರಾಕರಿಸುತ್ತಾ, ಅಂತಹ ಸಭೆಗಳಿಗೆ ಹಾಜರಾಗುವವರು ತಮ್ಮ “ದುಃಖ ಮತ್ತು ನೋವನ್ನು” ಹಂಚಿಕೊಳ್ಳಲೆಂದು ಸ್ವಇಚ್ಛೆಯಿಂದ ಬರುತ್ತಾರೆ ಎಂದು ಅಜಯ್‌ ಸಿಂಗ್ ಹೇಳುತ್ತಾರೆ. “ನಾವಾಗಿ ಯಾರನ್ನೂ ಕೂಡ ಆಹ್ವಾನಿಸುವುದಿಲ್ಲ. ಜನರು ನಮ್ಮನ್ನು ತಮ್ಮ ಮನೆಗಳಿಗೆ ಕರೆಸಿಕೊಳ್ಳುತ್ತಾರೆ” ಎಂದು ಸಿಂಗ್ ಸೇರಿಸುತ್ತಾರೆ.

ಖಂಡ್ವಾದ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕಮಲೇಶ್ ಕುಮಾರ್ ಕೋಲ್ ಅವರ ಮುಂದೆ ಮೇಲ್ಮನವಿ ಸಲ್ಲಿಸುವಾಗ, ಪ್ರಾಸಿಕ್ಯೂಷನ್ ಹೆಣೆದ ಕತೆಯ ಎಲ್ಲಾ ಪೊಳ್ಳುತನಗಳೂ ಹೊರಬರುತ್ತವೆ. ಹಾಗಾಗಿ, ಜುಲೈ 4, 2024ರಂದು ನ್ಯಾಯಾಧೀಶ ಕೋಲ್ ಅವರು ಅಜಯ್‌ ಸಿಂಗ್ ಸಂತೋಷ್ ಮತ್ತು ಹುಕುಮ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸುತ್ತಾರೆ. ಅವರ ವಿರುದ್ಧದ ಸಾಕ್ಷಿಗಳು ವಿಶ್ವಾಸಾರ್ಹವಲ್ಲ ಮತ್ತು ಪ್ರಾಸಿಕ್ಯೂಷನ್ ಕಥೆ ಅನುಮಾನಾಸ್ಪದವಾಗಿದೆ ಎಂದು ತೀರ್ಪು ನೀಡುತ್ತಾರೆ.

ಸಂತ್ರಸ್ತ ಮತ್ತು ಮುಖ್ಯ ಸಾಕ್ಷಿಯೂ ಆಗಿದ್ದ ಭಿಲಾಲರ ಸಾಕ್ಷ್ಯವು ವಿಶ್ವಾಸಾರ್ಹತೆಯ ಪರೀಕ್ಷೆಯಲ್ಲಿ ಸೋತಿತ್ತು ಮತ್ತು ಅವರ ಹೇಳಿಕೆಯು ದ್ವಂದ್ವದಿಂದ ಕೂಡಿತ್ತು. ಪಾಟಿಸವಾಲಿನ ಸಮಯದಲ್ಲಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲು ಅವರಿಗೆ ಆಮಿಷವನ್ನು ಒಡ್ಡಲಾಗಿತ್ತು ಎಂಬುದನ್ನು ಸಾಬೀತು ಪಡಿಸಲು ಅವರಿಂದ ಸಾಧ್ಯವಾಗುವುದಿಲ್ಲ. ಹಿಂದೂ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ ಎಂದು ಸಾಬೀತು ಪಡಿಸಲು ಕೂಡ ಅವರು ವಿಫಲರಾಗುತ್ತಾರೆ. 1968ರ ಕಾನೂನಿನ ಸೆಕ್ಷನ್ 2 ಪ್ರಕಾರ ಆಮಿಷ ಎಂದರೆ “ಒಬ್ಬ ವ್ಯಕ್ತಿಯನ್ನು ತೃಪ್ತಿಪಡಿಸಲೆಂದು ಯಾವುದೇ ರೀತಿಯ ಉಡುಗೊರೆ ಅಥವಾ ಪ್ರಲೋಭನೆಯನ್ನು ನಗದು, ವಸ್ತು ಅಥವಾ ಯಾವುದೇ ಇತರ ಭೌತಿಕ ಕಾಣಿಕೆಗಳ ಮೂಲಕ ನೀಡುವುದು.” ಕಾನೂನು “ಮತಾಂತರ” ಎಂಬುದನ್ನು “ಒಂದು ಧರ್ಮವನ್ನು ತ್ಯಜಿಸಿ ಇನ್ನೊಂದು ಧರ್ಮವನ್ನು ಸ್ವೀಕರಿಸುವುದು” ಎಂದು ವ್ಯಾಖ್ಯಾನಿಸುತ್ತದೆ.

ತನ್ನ ಪಾಟಿಸವಾಲಿನಲ್ಲಿ, ಭಿಲಾಲ ಅವರು ತಾನು ಸ್ವಇಚ್ಛೆಯಿಂದ ಅಂದಿನ ಕಾರ್ಯಕ್ರಮಕ್ಕೆ ಹೋಗಿದ್ದೆನೆಂದು ಹೇಳುತ್ತಾರೆ. ತನಗೆ ಒಡ್ಡಿದ್ದ ಆಮಿಷವನ್ನು ವಿವರಿಸಲು ಅವರಿಂದ ಸಾಧ್ಯವಾಗುವುದಿಲ್ಲ. ಅಜಯ್‌ ಸಿಂಗ್ ಹೊರತುಪಡಿಸಿ ಉಳಿದಿಬ್ಬರು ಆರೋಪಿಗಳ ಪಾಲುದಾರಿಕೆಯ ಕುರಿತ ವಿವರವನ್ನೂ ಭಿಲಾಲ ನೀಡಲು ವಿಫಲರಾಗುತ್ತಾರೆ.

ಬಜರಂಗದಳದೊಂದಿಗೆ ಸಂಬಂಧ ಹೊಂದಿರುವ ನಂದ ಕಿಶೋರ್ ಮತ್ತು ಅನಿಲ್, ರಾಜು ಭಿಲಾಲ ಕರೆ ಮಾಡಿ ತಿಳಿಸಿದ ನಂತರವೇ ಅಲ್ಲಿಗೆ ತಲುಪಿದ್ದೆವು ಎಂದು ಹೇಳುತ್ತಾರೆ. ರಾಜು ಭಿಲಾಲ ತನ್ನ ಬಳಿ ಹೇಳಿಕೊಂಡಿದ್ದನ್ನು ಅನಿಲ್ ನ್ಯಾಯಾಲಯದಲ್ಲಿ ಪುನರಾವರ್ತಿಸುತ್ತಾರೆ. ಪ್ರಕರಣದ ತನಿಖಾಧಿಕಾರಿಯು ರಾಜು ಭಿಲಾಲ, ಅಜಯ್ ಸಿಂಗ್‌ ಮತ್ತು ಅನಿಲ್ ಅವರನ್ನು ಹೊರತುಪಡಿಸಿ, ಕಾರ್ಯಕ್ರಮದಲ್ಲಿ ನೆರೆದಿದ್ದ ಇತರ 40-50 ಜನರಲ್ಲಿ ಯಾರ ಸಾಕ್ಷ್ಯವನ್ನೂ ದಾಖಲಿಸಲಾಗಿಲ್ಲ ಎಂದು ತಿಳಿಸುತ್ತಾರೆ. ನ್ಯಾಯಾಧೀಶ ಕೋಲ್ ಇದನ್ನು ವಿಚಿತ್ರವಾಗಿ ಪರಿಗಣಿಸುತ್ತಾರೆ. ಏಕೆಂದರೆ “ಪ್ರಮುಖ ಸಾಕ್ಷಿಗಳು” ಎಂದು ಪರಿಗಣಿಸಬೇಕಾಗಿದ್ದದ್ದು ಅವರನ್ನೇ ಹೊರತು ಘಟನೆಯ ಸಂದರ್ಭ ಸ್ಥಳದಲ್ಲಿ ಹಾಜರಿರದಿದ್ದ ಅನಿಲ್ರನ್ನು ಅಲ್ಲ.

ಬಜರಂಗದಳದ ಮತ್ತೊಬ್ಬ ಕಾರ್ಯಕರ್ತ ಹರಿಶಂಕರ್ ಕೂಡ ಮತಾಂತರಕ್ಕೆ ಸಂಬಂಧಿಸಿದ ಸಾಕ್ಷಿಯನ್ನು ಒದಗಿಸಲು ಸೋಲುತ್ತಾರೆ. ರಾಜು ಭಿಲಾಲ ಹೇಳಿದ್ದನ್ನೇ ಪುನರಾವರ್ತಿಸುತ್ತಾರೆ. ಕಾರ್ಯಕ್ರಮದಲ್ಲಿ ನಡೆದ ಮಾತುಕತೆಯನ್ನು ನೇರವಾಗಿ ಕೇಳಿಸಿಕೊಳ್ಳದ ಕಾರಣ ಇವರುಗಳ ಸಾಕ್ಷಿನುಡಿಗಳು ವಿಶ್ವಾಸಾರ್ಹವಲ್ಲವೆಂದೂ ಇವರಿಬ್ಬರು ರಾಜು ಭಿಲಾಲ ಹೇಳಿದ ಮಾತುಗಳನ್ನೇ ಪುನರಾವರ್ತಿಸುತ್ತಿದ್ದಾರೆಂದೂ ನ್ಯಾಯಾಲಯ ಹೇಳುತ್ತದೆ.

ಅಲ್ಲದೆ, ಬೈಬಲ್ ಇಟ್ಟುಕೊಂಡಿದ್ದಾರೆ ಎಂಬುವುದು “ಮತಾಂತರ ನಡೆಯುತ್ತಿದೆ ಎಂದು ಸಾಬೀತು ಪಡಿಸಲು ಸಾಕಾಗುವುದಿಲ್ಲ” ಎಂದು ನ್ಯಾಯಾಧೀಶ ಕೋಲ್ ಹೇಳುತ್ತಾರೆ.

ಪ್ರಕರಣದ ವಿಚಾರಣೆಯ ಹಂತದಲ್ಲಿ ಪಾಲಿಸಲೇ ಬೇಕಾಗಿದ್ದ ಕಾನೂನಿನ ನಿಬಂಧನೆಯನ್ನು ಉಲ್ಲಂಘಿಸಲಾಗಿದೆ ಎಂದು ಕೂಡ ನ್ಯಾಯಾಲಯವು ಬೊಟ್ಟು ಮಾಡುತ್ತದೆ. 1968ರ ಕಾನೂನಿನ ಸೆಕ್ಷನ್ 7 ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿಯ ನಂತರವಷ್ಟೇ ಈ ಕಾನೂನಿನ ಅಡಿಯಲ್ಲಿ ಮೊಕದ್ದಮೆ ದಾಖಲಿಸಬೇಕು ಎಂದು ಹೇಳುತ್ತದೆ. ಆದರೆ ಅಂತಹ ಅನುಮತಿಯನ್ನು ಪಡೆಯಲಾಗಿದೆ ಎಂದು ತೋರಿಸಲು ಪ್ರಾಸಿಕ್ಯೂಷನ್ ವಿಫಲವಾಗುತ್ತದೆ.

ಇಷ್ಟೆಲ್ಲ ನಡೆದು ಆರೋಪ ಮುಕ್ತರಾದ ನಂತರ ಕೂಡ ಅಜಯ್‌ ಸಿಂಗ್ ಕಿರುಕುಳಕ್ಕೆ ಒಳಗಾಗುತ್ತಲೇ ಇದ್ದಾರೆ. ತನ್ನದೇ ಸಮುದಾಯದ, ಅಷ್ಟೇ ಸ್ನೇಹಪರ ವ್ಯಕ್ತಿಯೂ ಆಗಿದ್ದ ಅವರ ಮನೆ ಮಾಲೀಕರು ಕೂಡ ಬಲಪಂಥೀಯ ಕಾರ್ಯಕರ್ತರಿಂದ ಬಹಳವೇ ಕಿರುಕುಳಕ್ಕೊಳಗಾಗುತ್ತಾರೆ. ಕೊನೆಗೆ ಅಜಯ್‌ ಸಿಂಗ್ ತಾನು ಕೆಲಸ ಮಾಡುವ ಸ್ಥಳದಿಂದ 30 ಕಿ.ಮೀ. ದೂರದಲ್ಲಿ ಮನೆ ಮಾಡಿಕೊಳ್ಳಬೇಕಾಗಿ ಬರುತ್ತದೆ. “ನನ್ನ ಮನೆ ಖಾಲಿ ಮಾಡಿಸದಿದ್ದರೆ ಅವರ ಮನೆಯ ಮೇಲೆ ಬುಲ್ಡೋಜರ್ ಏರಿಸುವುದಾಗಿ ಮನೆ ಮಾಲೀಕರಿಗೆ ಬೆದರಿಕೆ ಹಾಕಿದರು. ಅವರಿಗೆ ಬೇರೆ ದಾರಿ ಇರಲಿಲ್ಲ” ಎಂದು ಸಿಂಗ್ ಹೇಳುತ್ತಾರೆ.

ತುಳಿತಕ್ಕೊಳಗಾಗುತ್ತಿರುವ ಹಿಂದೂ ಸಮುದಾಯಗಳು ಸುಧಾರಿಸುವುದನ್ನು ಮತ್ತು ತಮ್ಮ ಪ್ರಭಾವದಿಂದ ಕೈ ಮೀರಿ ಹೋಗುವುದನ್ನು ತಡೆಯುವುದು ಇಂತಹ ಬಲಪಂಥೀಯ ಕಾರ್ಯಕರ್ತರ ಮುಖ್ಯ ಉದ್ದೇಶ ಎಂದು ಅಜಯ್‌ ಸಿಂಗ್ ಹೇಳುತ್ತಾರೆ. “ನಮ್ಮ ಬದುಕಿನಲ್ಲಿ ಯಾವ ರೀತಿಯ ಬದಲಾವಣೆಯಾಗಲೀ, ನಮ್ಮ ಮನಸ್ಸಿನ ಬದಲಾವಣೆಯಾಗಲೀ ಅವರಿಗೆ ಬೇಕಾಗಿಲ್ಲ. ಹಾಗೆ ಬದಲಾಗದೆ, ಸದಾಕಾಲವು ಅವರ ಕಪಿಮುಷ್ಟಿಯಲ್ಲಿಯೇ ಇರಬೇಕು ಎಂಬುದು ಅವರ ಬಯಕೆ.”

*ಸಂತ್ರಸ್ತರ ಖಾಸಗಿತನವನ್ನು ರಕ್ಷಿಸಲು ಹೆಸರು ಬದಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page