BHU Professor Assault Case: ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ದಲಿತ ಸಹಾಯಕ ಪ್ರಾಧ್ಯಾಪಕರ ದೂರಿನ ಮೇರೆಗೆ ವಾರಣಾಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇಬ್ಬರು ಸಹ ಪ್ರಾಧ್ಯಾಪಕರು ಮತ್ತು ಇಬ್ಬರು ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪ್ರಾಧ್ಯಾಪಕರು ಆರೋಪಿಸಿದ್ದಾರೆ.
ಇಬ್ಬರು ಪ್ರಾಧ್ಯಾಪಕರು ಆಕೆಯ ಬಟ್ಟೆ ಹರಿದು ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ್ದಾರೆ ಎಂದು ಆರೋಪದಲ್ಲಿ ಹೇಳಲಾಗಿದೆ. ಸಂತ್ರಸ್ತೆಗೆ ಒದ್ದು ಗುದ್ದಿದ್ದಾರೆ. ಅಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ. ಮಹಿಳಾ ಪ್ರಾಧ್ಯಾಪಕಿ ಸೇರಿದಂತೆ 4 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘಟನೆ ಮೇ 22ರಂದು ನಡೆದಿದ್ದು, ಆಗಸ್ಟ್ 27ರವರೆಗೆ ಎಫ್ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಪ್ರಾಥಮಿಕ ತನಿಖೆಯ ನಂತರ ಇಬ್ಬರು ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸಹ ಪ್ರಾಧ್ಯಾಪಕರು ತನ್ನನ್ನು ವಿವಸ್ತ್ರಗೊಳಿಸಿ ವಿಶ್ವವಿದ್ಯಾನಿಲಯದ ಸುತ್ತ ಓಡಿಸುವ ಬಗ್ಗೆ ನಿಯಮಿತವಾಗಿ ಮಾತನಾಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ದೂರಿನ ಪ್ರಕಾರ, ಮೇ 22ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರಲ್ಲಿ ಒಬ್ಬರು ಪ್ರಾಧ್ಯಾಪಕರ ಚೇಂಬರ್ಗೆ ಬಂದು ಅವರನ್ನು ಹುದ್ದೆಯಿಂದ ಇಳಿಯುವಂತೆ ಬೆದರಿಕೆ ಹಾಕಿದ್ದಾರೆ.
ಅಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಸಂತ್ರಸ್ತೆ ತನ್ನ ಕೊಠಡಿಯಿಂದ ಹೊರಬಂದ ತಕ್ಷಣ, ಇತರ ಆರೋಪಿಗಳು ಇಲಾಖೆಯ ಬಾಗಿಲು ಮುಚ್ಚಿದರು. ಪ್ರೊಫೆಸರ್ ಒಬ್ಬರು ನನ್ನನ್ನು ಹಿಡಿದು ನನ್ನ ಬಟ್ಟೆಗಳನ್ನು ಹರಿದು ನನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದರು. ಹಾಗೂ ಉಳಿದವರು ನನಗೆ ಒದ್ದು ಗುದ್ದಿದರು. ಮತ್ತೊಬ್ಬರು ಅದರ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂದು ಸಂತ್ರಸ್ಥೆ ಹೇಳಿದ್ದಾರೆ.
ಸಂತ್ರಸ್ತೆ ಕಿರುಚಿದಾಗ ಕೆಲವರು ಆಕೆಯನ್ನು ರಕ್ಷಿಸಿದ್ದಾರೆ. ವರದಿಯ ಪ್ರಕಾರ, ನಾನು ದಲಿತಳು ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ. ಸಿಆರ್ಪಿಸಿ ನಿಬಂಧನೆಗಳ ಪ್ರಕಾರ ಪ್ರಾಥಮಿಕ ತನಿಖೆಯ ನಂತರ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಪ್ರವೀಣ್ ಕುಮಾರ್ ಸಿಂಗ್ ಹೇಳಿದ್ದಾರೆ.
ವಿಷಯದ ಕುರಿತು ತನಿಖೆ ನಡೆಸಲಾಗುತ್ತಿದೆ. “ನಾಲ್ವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯವನ್ನುಂಟುಮಾಡುವುದು), 342 (ತಪ್ಪಾದ ಬಂಧನ), 354-ಬಿ (ವಿವಸ್ತ್ರಗೊಳಿಸುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲವನ್ನು ಬಳಸುವುದು), 504 ( ಪ್ರಚೋದನೆ ನೀಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ), 506 (ಕ್ರಿಮಿನಲ್ ಬೆದರಿಕೆ) ಮತ್ತು ಎಫ್ಐಆರ್ ಅನ್ನು ಎಸ್ಸಿ/ಎಸ್ಟಿ ಕಾಯ್ದೆಯಡಿ ದಾಖಲಿಸಲಾಗಿದೆ.
ಆರೋಪಿ ಪ್ರೊಫೆಸರ್ ಆರೋಪಗಳನ್ನು ಆಧಾರ ರಹಿತ ಎಂದು ಹೇಳಿದ್ದು, ಆರೋಪಗಳು ಕಪೋಲಕಲ್ಪಿತವಾಗಿವೆ ಎಂದು ಹೇಳಿದ್ದಾರೆ. ಅವರು ಇದೇ ರೀತಿಯ ದೂರುಗಳನ್ನು ದಾಖಲಿಸಿದ್ದಾರೆ. ಆಕೆಗೆ ತನ್ನದೇ ಆದ ವೈಯಕ್ತಿಕ ಉದ್ದೇಶಗಳಿವೆ ಮತ್ತು ಅದು ಆಕೆ ಯಾಕೆ ಹೀಗೆ ಮಾಡುತ್ತಿದ್ದಾಳೆ ಎನ್ನುವುದು ನಮಗೆ ತಿಳಿದಿಲ್ಲ, ಎಫ್ಐಆರ್ ದಾಖಲಿಸುವ ಮುನ್ನ ಸೂಕ್ತ ತನಿಖೆ ನಡೆಸಿದ್ದರೆ ಪ್ರಕರಣ ಈ ಹಂತಕ್ಕೆ ತಲುಪುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.