Saturday, January 24, 2026

ಸತ್ಯ | ನ್ಯಾಯ |ಧರ್ಮ

ಬಳ್ಳಾರಿಯಲ್ಲಿ ರಾಜಕೀಯ ಉದ್ವಿಗ್ನತೆ: ಜಿ ಸ್ಕೈರ್ ಲೇಔಟ್‌ನ ಮಾಡೆಲ್ ಹೌಸ್‌ಗೆ ಬೆಂಕಿ

ಬಳ್ಳಾರಿಯಲ್ಲಿ ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಸೇರಿದ ಜಿ ಸ್ಕೈರ್ ಲೇಔಟ್‌ನ ಮಾಡೆಲ್ ಹೌಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಗರದಲ್ಲಿ ಮತ್ತೆ ರಾಜಕೀಯ ಉದ್ವಿಗ್ನತೆಗೆ ಕಾರಣವಾಗಿದೆ.

ಸಂಜೆ ಸುಮಾರು 6:30ರ ವೇಳೆಗೆ ಈ ಅಗ್ನಿ ಅವಘಡ ಸಂಭವಿಸಿದ್ದು, ನೋಡನೋಡುತ್ತಿದ್ದಂತೆ ಮನೆ ಬಹುತೇಕ ಸುಟ್ಟು ಭಸ್ಮವಾಗಿದೆ. ಘಟನೆಯ ಬಳಿಕ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಈ ಘಟನೆ ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆಯ ಮುಂದುವರಿದ ಭಾಗ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಯವರ ಸಹೋದರ ಹಾಗೂ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ. “ಇದು ಆಕಸ್ಮಿಕ ಘಟನೆ ಅಲ್ಲ. ಕಾಂಗ್ರೆಸ್ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆಸಿದ್ದಾರೆ” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

100 ಎಕರೆ ವಸತಿ ಯೋಜನೆ
ಜಿ ಸ್ಕೈರ್ ಲೇಔಟ್ ಸುಮಾರು 100 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿರುವ ದೊಡ್ಡ ವಸತಿ ಯೋಜನೆ. ನಿವೇಶನ ಖರೀದಿದಾರರಿಗೆ ಮಾದರಿಯಾಗಿ ತೋರಿಸಲು ಸುಸಜ್ಜಿತ ಮಾಡೆಲ್ ಹೌಸ್ ನಿರ್ಮಿಸಲಾಗಿತ್ತು. ಬೆಂಕಿಯಿಂದಾಗಿ ಆಸ್ತಿಪಾಸ್ತಿಗೆ ಭಾರೀ ನಷ್ಟ ಸಂಭವಿಸಿದೆ.

ಬ್ಯಾನರ್ ಗಲಾಟೆಯ ಹಿನ್ನೆಲೆ
ಇತ್ತೀಚೆಗೆ ಬಳ್ಳಾರಿ ನಗರದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಹಾಕುವ ವಿಚಾರವಾಗಿ ಎರಡು ರಾಜಕೀಯ ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಗುಂಡಿನ ಸದ್ದು ಕೇಳಿಬಂದಿದ್ದು, ಕಾಂಗ್ರೆಸ್ ಮುಖಂಡನೊಬ್ಬ ಗುಂಡೇಟಿಗೆ ಬಲಿಯಾಗಿದ್ದ. ಈ ಪ್ರಕರಣ ಸಂಬಂಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

27 ಮಂದಿ ಬಂಧನ
ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಗನ್‌ಮ್ಯಾನ್ ಸೇರಿ ಒಟ್ಟು 27 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳದಿಂದ ಬುಲೆಟ್‌ಗಳು ಮತ್ತು ಗಾಜಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್‌ಪಿಯನ್ನು ಅಮಾನತು ಮಾಡಲಾಗಿದೆ.

ಬಿಜೆಪಿಜೆಡಿಎಸ್ ಪಾದಯಾತ್ರೆ ಘೋಷಣೆ
ಈ ಘಟನೆಗಳನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಜನವರಿ 17ರಂದು ಜಂಟಿ ಸಮಾವೇಶ ಹಮ್ಮಿಕೊಂಡಿವೆ. ನಂತರ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭವಾಗಲಿದ್ದು, ಫೆಬ್ರವರಿ 5ರಂದು ಅರಮನೆ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page