Home ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಅಗ್ನಿಶಾಮಕ ದಳ ಮುಂದಾಳತ್ವ ವಹಿಸಬೇಕು: ಸಚಿವ ಕೃಷ್ಣ ಬೈರೇಗೌಡ

ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಅಗ್ನಿಶಾಮಕ ದಳ ಮುಂದಾಳತ್ವ ವಹಿಸಬೇಕು: ಸಚಿವ ಕೃಷ್ಣ ಬೈರೇಗೌಡ

0

ಬೆಂಗಳೂರು : ಮಳೆಯ ಹಿನ್ನೆಲೆಯಲ್ಲಿ ಎಂತಹುದೇ ಪ್ರವಾಹ, ಸೇರಿದಂತೆ ಪ್ರಾಕೃತಿಕ ವಿಕೋಪಗಳಿಂದ ರಾಜ್ಯದ ಯಾವ ಮೂಲೆಯಲ್ಲಿ ಅನಾಹುತ ಸಂಭವಿಸಿದರೂ, ಅಗ್ನಿಶಾಮಕ ದಳ ತುರ್ತಾಗಿ ಜನ ರಕ್ಷಣೆಗೆ ಮುಂದಾಗಬೇಕು‌. ವಿಕೋಪದ ಸ್ಥಳಕ್ಕೆ NDRF ತಂಡ ಬರುವ ವರೆಗೂ ಕಾಯಬಾರದು ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ತಮ್ಮ ಕಚೇರಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳ ಜೊತೆಗೆ ಸಭೆ ನಡೆಸಿ ಮಹತ್ವದ ಸೂಚನೆ ನೀಡಿದ ಸಚಿವರು, “ರಾಜ್ಯದಲ್ಲಿ ಮಳೆ ದಿನದಿಂದ‌ ದಿನಕ್ಕೆ ಚುರುಗಾಗುತ್ತಿದೆ.‌ ಕೆಲವೆಡೆ ಮನೆ ಹಾಗೂ ಕೃಷಿ ಭೂಮಿಗಳಿಗೆ ನೀರು ನುಗ್ಗಿದೆ. ಇನ್ನೂ ಕೆಲವೆಡೆ ಜನವಸತಿ ಪ್ರದೇಶಗಳ ಸಂಪರ್ಕ ರಸ್ತೆ ಕಡಿತವಾಗಿದೆ. ಇದರ ಹೊರತಾಗಿ ತೀರಾ ದೊಡ್ಡ ಅನಾಹುತಗಳು ಇನ್ನೂ ಸಂಭವಿಸಿಲ್ಲ.

ದುರದೃಷ್ಟವಶಾತ್ ಅಂಚಹ ಅನಾಹುತಗಳು ಏನೇ ಘಟಿಸಿದ ಸಂದರ್ಭದಲ್ಲಿ ಎನ್ ಡಿಆರ್ ಎಫ್ ತುಕಡಿಗೆ ಕಾಯುವ ಮುನ್ನ ಅಗ್ನಿಶಾಮಕ ದಳ ತುರ್ತಾಗಿ ಜನ ರಕ್ಷಣೆಗೆ ಮುಂದಾಗಬೇಕು” ಎಂದು ಸಿಬ್ಬಂದಿಗೆ ಮತ್ತು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡರು ಸೂಚನೆ ನೀಡಿದ್ದಾರೆ.

“ಪ್ರಕೃತಿ ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನೂ ಬಳಸಿಕೊಳ್ಳುವ ನಿಟ್ಟಿನಲ್ಲಿ ಆಪ್ತಮಿತ್ರ ಯೋಜನೆ ಜಾರಿಗೆ ತರಲಾಗಿದೆ. ಅಗ್ನಿಶಾಮಕ ದಳ ಈವರೆಗೆ ತನ್ನ ಸಿಬ್ಬಂದಿಗಳ ಜೊತೆಗೆ ಸಾವಿರಾರು ಸಾರ್ವಜನಿಕರಿಗೆ, ವಾಲೆಂಟರಿಗಳಿಗೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ತರಬೇತಿ ನೀಡಿದೆ. ಅಗತ್ಯವಿದ್ದರೆ ಮತ್ತಷ್ಟು ವಾಲೆಂಟರಿಗಳಿಗೆ ತರಬೇತಿ ನೀಡಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು” ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು.

“ಹೊಸ ಉಪಕರಣ ಖರೀದಿಗೆ ಹಣದ ಅಗತ್ಯ ಇದ್ದರೆ ಅದನ್ನು ಪೂರೈಸಲು ಸರ್ಕಾರ ಬದ್ದವಾಗಿದೆ. ಆದರೆ, ಜನರ ಹಣ ಪೋಲಾಗದಂತೆ ಪ್ರಾಕೃತಿಕ ವಿಕೋಪಗಳ ನಿರ್ವಹಣೆಗೆ ಅಗ್ನಿಶಾಮಕ ದಳ ಪರಿಣಾಮಕಾರಿ ತಂಡ ರಚಿಸಬೇಕು. ರಾಜ್ಯ ಮೀಸಲು ಪಡೆಯನ್ನೂ ಈ ಕೆಲಸಕ್ಕೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸಲಹೆ ನೀಡಿದರು.

ಇನ್ನು ರಾಜ್ಯದ ಕೆಲವೆಡೆ ತೀವ್ರ ಮಳೆ ಮತ್ತು ಪ್ರವಾಹದಿಂದಾಗಿ ಜನ ಮ‌ನೆ ಕಳೆದುಕೊಂಡಿದ್ದಾರೆ. ಹೀಗೆ ಪ್ರವಾಹದಿಂದ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಮನೆ ಮರು ನಿರ್ಮಾಣ ಮಾಡಿಕೊಡುವಲ್ಲಿ ನಮ್ಮ ಸರ್ಕಾರ ಬದ್ದವಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದಾರೆ.

ಕಳೆದ ಕೆಲ ವರ್ಷಗಳಲ್ಲಿ ಎಷ್ಟು ಜನ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಈ ಪುನರ್ವಸತಿಗಳ ಗುಣಮಟ್ಟ ಏನು? ಮನೆ ನೀಡುವುದು ಅಥವಾ ಮನೆ ಪುನರ್ನಿರ್ಮಾಣಕ್ಕೆ ಫಲಾನುಭವಿಗಳಿಗೆ ನೇರ ಹಣ ನೀಡುವ ನಿಯಮಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ, ಪುನರ್ವಸತಿ ಕೆಲಸಗಳು ಯುದ್ದೋಪಾದಿಯಲ್ಲಿ ಜರುಗಬೇಕು. ಹಣ ಪೋಲಾಗದಂತೆಯೂ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಹಾಗೂ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

You cannot copy content of this page

Exit mobile version