Sunday, June 22, 2025

ಸತ್ಯ | ನ್ಯಾಯ |ಧರ್ಮ

ಹಳ್ಳಿಗಳಲ್ಲಿ ಕುಗ್ಗುತ್ತಿರುವ ಖರೀದಿ ಶಕ್ತಿ, ಕಂಗಾಲಾಗುತ್ತಿರುವ FMGC ಕಂಪನಿಗಳು

ದೆಹಲಿ: ಕೇಂದ್ರ ಸರ್ಕಾರ ದೇಶದ ಆರ್ಥಿಕ ಸ್ಥಿತಿಯ ಕುರಿತು ಬಡಾಯಿ ಕೊಚ್ಚುತ್ತಿರುವ ಹೊತ್ತಿನಲ್ಲೇ ದೇಶದ ಗ್ರಾಮಾಂತರ ಪ್ರದೇಶಗಳಲ್ಲಿನ ಜನರ ಖರೀದಿ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತಿರುವುದನ್ನು FMGC ಕಂಪನಿಗಳ ಮಾರಾಟ ವರದಿಗಳು ತೋರಿಸುತ್ತಿವೆ.

ಕೊರೋನಾ ನಂತರದ ದಿನಗಳಲ್ಲಿ ದೇಶದ ಆರ್ಥಿಕ ಸ್ಥಿತಿ ತೀವ್ರ ಮಟ್ಟದಲ್ಲಿ ಕುಸಿದಿದ್ದು, ಈ ಕುರಿತು ಕ್ರಮ ಕೈಗೊಳ್ಳುವುದಕ್ಕಿಂತಲೂ ಹೆಚ್ಚಾಗಿ ಕೇಂದ್ರ ಸರಕಾರ ತನ್ನ ಇಮೇಜ್‌ ಕಾಪಾಡಿಕೊ‍ಳ್ಳುವುದನ್ನೇ ಪ್ರತಿಷ್ಟೆಯಾಗಿ ಮಾಡಿಕೊಂಡಂತಿದೆ. ಅದು ಪದೇ ಪದೇ ಆರ್ಥಿಕ ದೇಶ ಇನ್ನು ಐದು ವರ್ಷಗಳಲ್ಲಿ ಅಷ್ಟನೇ ಸ್ಥಾನದಲ್ಲಿರಲಿದೆ, ಇಷ್ಟನೇ ಸ್ಥಾನದಲ್ಲಿರಲಿದೆ ಎಂದು ಹೇಳಿಕೊಳ್ಳುತ್ತಿದೆಯೇ ಹೊರತು ಪ್ರಸ್ತುತ ಸ್ಥಿತಿಯ ಕುರಿತು ಅದು ಉಸಿರನ್ನೇ ಬಿಡುತ್ತಿಲ್ಲ. ಪ್ರಸ್ತುತ ಬೆಲೆಯೇರಿಕೆಯಿಂದ ಜನರು ನರಳುತ್ತಿದ್ದು ಸರ್ಕಾರದ ಬಳಿ ಈ ಕುರಿತು ಯಾವುದೇ ಯೋಜನೆಗಳು ಕಾಣುತ್ತಿಲ್ಲ.

ಇತ್ತೀಚಿನ ದಿನಗಳಲ್ಲಿ ಸಣ್ಣ ಪೊಟ್ಟಣಗಳಲ್ಲಿ ಸಿಗುವ ಸಾಬೂನು ಮತ್ತು ಶಾಂಪೂಗಳಂತಹ ಉತ್ಪನ್ನಗಳ ಮಾರಾಟದಲ್ಲಿ ಗಣನೀಯ ಕುಸಿತ ಕಂಡುಬಂದಿದೆ ಎಂದು ಎಫ್‌ಎಂಸಿಜಿ ಕಂಪನಿಗಳು ಹೇಳುತ್ತಿವೆ. ‘ಎಫ್‌ಎಂಸಿಜಿ ವಲಯಕ್ಕೆ ಸಂಬಂಧಿಸಿದಂತೆ, ಹಳ್ಳಿಗಳಲ್ಲಿ ನಿಧಾನಗತಿಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ವ್ಯವಹಾರ ವಿಸ್ತರಿಸಿ ಹೆಚ್ಚು ಹಳ್ಳಿಗಳನ್ನು ತಲುಪಿದ್ದರೂ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮಾರಾಟ ಹೆಚ್ಚಿಲ್ಲ.ʼ

ಬ್ರಿಟಾನಿಯಾದ ಉಪಾಧ್ಯಕ್ಷ ವರುಣ್ ಬೆರ್ರಿ ಮಾತನಾಡಿ, ನಮ್ಮಂತಹ ಕಂಪನಿಗಳು ಗ್ರಾಮೀಣ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡಲು ಸಾಧ್ಯವಿಲ್ಲ. ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಕಂಪನಿಯ ವ್ಯಾಪಾರದಲ್ಲಿ ಕುಸಿತ ಕಾಣುತ್ತಿದೆ ಎಂದಿದ್ದಾರೆ. ಪ್ಯಾರಾಚೂಟ್‌ ಕಂಪನಿಯೂ ತನ್ನ ಗ್ರಾಮೀಣ ಪ್ರದೇಶದ ವ್ಯವಹಾರದಲ್ಲಿ ಕುಸಿತ ಕಂಡುಬಂದಿದೆ ಎಂದು ಹೇಳಿಕೊಂಡಿದೆ.

ಬರ ಮತ್ತು ಬೆಲೆಯೇರಿಕೆಯು ಜನರನ್ನು ಕಂಗಾಲಾಗಿಸಿದ್ದು, ಸರ್ಕಾರ ಜನರ ಸಹಾಯಕ್ಕೆ ಬಾರದೆ ಗ್ರಾಮೀಣ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಸಾಮಾನ್ಯವಾಗಿ ಹಳ್ಳಿಗಾಡಿನ ಜನತೆಗೆ ತಮ್ಮ ದೈನಂದಿನ ಆಹಾರದ ಭಾಗವಾದ ಧಾನ್ಯಗಳು, ಮಸಾಲೆ ಪದಾರ್ಥಗಳು ಮತ್ತು ಎಣ್ಣೆಯನ್ನು ಖರೀದಿಸುವುದು ಪ್ರಥಮ ಆದ್ಯತೆಯಾಗಿರುತ್ತದೆ. ಬಹುತೇಕ ಕೆಳವರ್ಗದ ಜನರಿಗೆ ಸೋಪು, ಶ್ಯಾಂಪೂ, ತಲೆಗೆ ಹಾಕುವ ಎಣ್ಣೆಗಳಂತಹ ದೈನಂದಿನ ಬಳಕೆಯ ವಸ್ತುಗಳು ಸಹ ಇಂದಿಗೂ ಲಕ್ಷುರಿಯಾಗಿಯೇ ಉಳಿದಿವೆ. ಇತ್ತೀಚಿನ ವಿಪರೀತ ಬೆಲೆಯೇರಿಕಯಿಂದಾಗಿ ಜನರಿಗೆ ಆಹಾರ ಧಾನ್ಯಗಳನ್ನು ಖರೀದಿಸುವುದನ್ನು ಹೊರತುಪಡಿಸಿದರೆ ಉಳಿದ ವಸ್ತುಗಳನ್ನು ಖರೀದಿಸುವುದು ಕಷ್ಟವಾಗುತ್ತಿದೆ.

ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಪರಿಚಯಿಸಿರುವ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯಂತಹ ಯೋಜನೆಗಳು ಅವರಿಗೆ ಒಂದಷ್ಟು ಉಸಿರಾಡಲು ಸಹಾಯ ಮಾಡುತ್ತಿವೆಯಾದರೂ, ಇಂತಹ ಯೋಜನೆಗಳು ಎಲ್ಲಾ ರಾಜ್ಯಗಳಲ್ಲೂ ಲಭ್ಯವಿಲ್ಲವೆನ್ನುವುದು ಗಮನಾರ್ಹ.

ಗ್ರಾಮೀಣ ಪ್ರದೇಶದ ಕೆಳ ಮಧ್ಯಮ ವರ್ಗಗಳು ಸಹ ಬೆಲೆಯೇರಿಕೆಯಿಂದ ತತ್ತರಿಸಿದ್ದು, ಹೆಚ್ಚಿನ ಕುಟುಂಬಗಳು ಗ್ಯಾಸ್‌ ಖರೀದಿಯನ್ನು ಕಡಿಮೆ ಮಾಡಿದ್ದು ಮತ್ತೆ ಉರುವಲು ಸೌದೆಯ ಮೊರೆ ಹೋಗಿವೆ. ಆದರೆ ಸರ್ಕಾರ ತಾನು ಉಜ್ವಲ ಯೋಜನೆಯ ಮೂಲಕ ಸಿಲಿಂಡರ್‌ ಕೊಟ್ಟಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಹೀಗೆ ಬಡಾಯಿ ಕೊಚ್ಚಿಕೊಳ್ಳುವ ಸರ್ಕಾರವು ಅಂತಹ ಯೋಜನೆಗಳ ಫಲಾನುಭವಿಗಳು ಎಷ್ಟು ಸಿಲಿಂಡರುಗಳನ್ನು ಖರೀದಿಸುತ್ತಿದ್ದಾರೆನ್ನುವ ವಿವರವನ್ನು ಹೇಳುತ್ತಿಲ್ಲ.

ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಮೋದಿ ಮುಂದಿನ ಐದು ವರ್ಷಗಳಿಗೆ ರೇಷನ್‌ ವಿತರಣೆಯನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನಿ ಅಕ್ಕಿ ವಿತರಣೆಯನ್ನು ವಿಸ್ತರಿಸುವುದಾಗಿ ಹೇಳಿರುವುದು ದೇಶದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎನ್ನುವುದಕ್ಕೆ ಪುರಾವೆಯಾಗಿದೆ ಎಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page